Saturday 17 December 2016

 ಹೋರಾಟಕೆ ಮಾದರಿಯಾದ
ದಿ. ಕಡ್ಲೆಕಾಯಿ ಮಂಜುನಾಥ



ಹೆಸರಿಗಾಗಿ ಹೋರಾಟ ಮಾಡುವವರಿದ್ದಾರೆ, ಹಣಗಳಿಸಲು ಹೋರಾಟ ಮಾಡುವವರಿದ್ದಾರೆ. ತೀಟೆಗಾಗಿ ಪ್ರತಿಭಟಿಸುವವರಿದ್ದಾರೆ. ಆದರೆ, ನಿಜಕ್ಕೂ ಸಮಸ್ಯೆಗಳಿಗೆ ಅಥವಾ ಜನಸಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಹೋರಾಡುವವರು ತೀರಾ ವಿರಳ. ಅಂತಹವರಲ್ಲಿ ಒಬ್ಬರಾಗಿದ್ದವರು ದಿವಂಗತ ಕಡ್ಲೆಕಾಯಿ ಮಂಜುನಾಥ.
ಕಡ್ಲೆಕಾಯಿ ಮಂಜುನಾಥ ಹೆಸರೇ ವಿಶಿಷ್ಟವಾದುದು. ಶಿವಮೊಗ್ಗದಲ್ಲಿ ಬಹುತೇಕ ಜನರಿಗೆ ಇವರು ಪರಿಚಿತರು. ಯಾರೇ ಎದುರು ಸಿಕ್ಕರೂ ಅಣ್ಣಾ, ಸಾರ್ ಎಂದು ಕೈ ಮುಗಿದೇ ಸಂಬೋಧಿಸುವ ಸೌಮ್ಯ ಸ್ವಭಾವದ, ನಿಸ್ವಾರ್ಥ ಮನೋಭಾವದ, ಯಾರೊಡನೆಯೂ ಜಗಳ ಮಾಡದ, ಸಮಸ್ಯೆ ಇರುವವರನ್ನು ಕಟ್ಟಿಕೊಂಡು ಕಚೇರಿಯಿಂದ ಕಚೇರಿಗೆ ಅಲೆದು ಅಧಿಕಾರಿಗಳಿಗೂ ಗೌರವ ಕೊಟ್ಟು ಕೆಲಸ ಮಾಡಿಸಿಕೊಡುವ ಮಂಜುನಾಥ ಕಾಲವಾಗಿದ್ದಾರೆ. ಮಾ 18ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಎಷ್ಟೋ ಜನರು ಮಂಜುನಾಥಗೆ ಈ ಸಾವು ಬರಬಾರದಿತ್ತು. ಇಂತಹ ಪ್ರಾಮಾಣಿಕ, ನಿಗರ್ವಿ, ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು ಎಂದು ಮರುಗಿದವರು ಬಹಳ ಜನ.
ಕೆಲವರು ಸತ್ತರೂ ಸುದ್ದಿಯಾಗುವುದಿಲ್ಲ, ಕೆಲವರು ಇದ್ದರೂ ಸುದ್ದಿಯಾಗುವುದಿಲ್ಲ. ಆದರೆ ಮಂಜುನಾಥ ಜೀವವಿದ್ದಾಗಲೂ, ಸತ್ತ ನಂತರವೂ ಜನರ ಪ್ರಶಂಸೆ, ಅಭಿಮಾನ ಪಡೆದವರು.
ಕಾಯಕವೇ ಕೈಲಾಸ ಎನ್ನುವುದ್ಕಕೆ ಉತ್ತಮ ಉದಾಹರಣೆ ಇವರು. ನಡೆದಾಡಿಕೊಂಡೇ ನಗರ ಸುತ್ತುತ್ತಿದ್ದರು. ದುರ್ಗಿಗುಡಿಯಲ್ಲಿ ರೂಮು ಮಾಡಿಕೊಂಡು ವಾಸವಾಗಿದ್ದ ಮಂಜುನಾಥ ಬಳಿ ಯಾರಾದರೂ ರೇಶನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ ಇನ್ನಿತರ ಸಮಸ್ಯೆ ಹೇಳಿಕೊಂಡು ಹೋದರೆ ಸಾಕು, ಅವರನ್ನು ಕರೆದುಕೊಂಡು ನೇರವಾಗಿ ಸಂಬಂಧಿತ ಅಧಿಕಾರಿಗಳ ಕಚೇರಿಗೆ ತೆರಳುತ್ತಿದ್ದರು. ಅಧಿಕಾರಿಗಳಿಗೂ ಕಡ್ಲೆಕಾಯ ಸ್ವಭಾವ ಗೊತ್ತಿದ್ದರಿಂದ ಸುಲಭದಲ್ಲಿ ಕೆಲಸವಾಗುತ್ತಿತ್ತು. ಕೆಲಸವಾದ ನಂತರ ಯಾರಿಂದಲೂ ಒಂದು ಪೈಸೆಯನ್ನೂ ಯಾಚಿಸದ ಕೈ ಅವರದ್ದಾಗಿತ್ತು. ಅಷ್ಟೊಂದು ಶುದ್ಧ ಕಚ್ಚೆ- ಕೈ- ಬಾಯಿ ಅವರದ್ದಾಗಿತ್ತು. ಅನ್ಯಾಯವನ್ನು ಸಹಿಸದ,ಸುಳ್ಳು ಹೇಳದ, ಹೆಸರಿಗಾಗಿ,  ಪಟ್ಟಕ್ಕಾಗಿ ಎಂದೂ ಹಂಬಲಿಸದ ಅಪರೂಪದ ವ್ಯಕ್ತಿ ಅವರಾಗಿದ್ದರು.
 ಕಲ್ಲೂರು ಮೇಘರಾಜ್ ಮುಖಂಡತ್ವದ ಶಾಂತವೇರಿ ಗೋಪಾಲಗೌಡ  ಸಮಿತಿಯ ಎಲ್ಲ ಹೋರಾಟಗಳಲ್ಲಿ ಕಡ್ಲೆಕಾಯಿ ಮುಂದು. ಮೇಘರಾಜ್ ಅವರ ಬಲಗೈ ಯಂತಿದ್ದರು. ಎಷ್ಟೋ ಜನ ಮೇಘರಾಜ್ ಜತೆ ಇದ್ದರೂ ನಂತರ ಕೈಬಿಟ್ಟು ಹೋದರು. ಆದರೆ ಕಡ್ಲೆಕಾಯಿ ಮಾತ್ರ ಎಂದೂ ಕೈಕೊಡಲಿಲ್ಲ. ಅಷ್ಟೊಂದು ವಿಶ್ವಾಸಿಗರಾಗಿದ್ದರು. ಯಾವುದೇ ಹೋರಾಟ, ಪತ್ರಿಕಾಗೋಷ್ಠಿ ಪ್ರತಿಭಟನೆ, ಧರಣಿ ಇರಲಿ, ಎಲ್ಲರಿಗಿಂತ ಮೊದಲೇ ಬಂದು ವ್ಯವಸ್ಥೆ ಮಾಡಿ ಪತ್ರಕರ್ತರನ್ನು  ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ದುರ್ಗಿಗುಡಿ ಕನ್ನಡ ಸಂಘದಲ್ಲಿ ಕೆಲಸ ಮಾಡಿದ ಮಂಜಣ್ಣ, ಮಹಾನ್ ದೈವಭಕ್ತರೂ ಆಗಿದ್ದರು. ಇಂತಹ ಮಂಜುನಾಥ ಈಗ ನೆನಪು ಮಾತ್ರ.
ಸದಾ ಕಿತ್ತು ತಿನ್ನುವ ಬಡತನವಿದ್ದರೂ, ಸದಾ ತನ್ನ ಅಳಲನ್ನು ಮರೆತು ನೊಂದವರಿಗೆ ಹೆಗಲು ಕೊಡುತ್ತಿದ್ದರು, ಅವರ ಪರ ಹೋರಾಡುತ್ತಿದ್ದರು. ಭ್ರಷ್ಟರ ಜಾತಕವನ್ನು ಆರ್‌ಟಿಐ ಮೂಲಕ ಪಡೆದು ಹೋರಾಟಕ್ಕೆ ನೆಲೆಗಟ್ಟು ಹಾಕುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಸಂಪಾದಿಸಬಹದಿತ್ತು. ಆದರೆ ಜನಪ್ರಿಯತೆ, ಗೆಳೆತನ ಸಂಪಾದಿಸಿದರು. ನಿಜವಾದ ಹೋರಾಟಗಾರನಿಗೆ ಇದಕ್ಕಿಂತ ಹೆಚ್ಚಿನ ಗೌರವ ಇನ್ನೇನು ಬೇಕು?      
ಮೂಲತಃ ಶಿವಮೊಗ್ಗದವರೇ ಅದ ಮಂಜುನಾಥ ತಂದೆ ಮುನಿಯಪ್ಪ ಗಾಂಧಿ ಪಾರ್ಕಿನಲ್ಲಿ ಕಡ್ಲೆಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಅಲ್ಲಿಂದ ಆ ಹೆಸರೇ ಅಂಟಿಕೊಂಡಿತು. ಮಂಜುನಾಥ ಸಹ ಇದೇ ಹೆಸರನ್ನು ಇಟ್ಟುಕೊಂಡರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆತ್ಮೀಯರಾಗಿದ್ದ ಮುನಿಯಪ್ಪ ‘ಶ್ರಮಜೀವಿ’ ಎಂಬ ಬಿರುದನ್ನು ಅವರಿಂದ ಪಡೆದು ಸನ್ಮಾನಿಸಲ್ಪಟ್ಟಿದ್ದರು. ಅಪ್ಪನಂತೆ ಮಗನೂ ಸಹ ಶ್ರಮಜೀವಿಯಾಗಿ, ಸ್ನೇಹಜೀವಿಯಾಗಿ, ಸಂಘಜೀವಿಯಾಗಿ, ಬಡವರಪರ ಜೀವಿಯಾಗಿ ದುಡಿದು ಅಳಿದಿದಿದ್ದಾರೆ. ಮಂಜಣ್ಣನ  ನೆನೆಪು ಸದಾ ಅಮರ.
Published on Marsch 19, 2016
................................
ಸಹಕಾರ ಕ್ಷೇತ್ರದ ದಿಟ್ಟೆ
ಪಿ. ವೀರಮ್ಮ

ಸಹಕಾರ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಮಹಿಳೆಯರು ತೀರಾ ವಿರಳ. ಶಿವಮೊಗ್ಗದ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷೆ ಪಿ. ವೀರಮ್ಮ ಈ ಖ್ಯಾತಿಗೆ ಭಾಜನರಾಗಿದ್ದಾರೆ. ಅದಕ್ಕೆ ಕಾರಣ ಅವರ ದಿಟ್ಟ ಹೆಜ್ಜೆ, ನಡೆ-ನುಡಿ. ಮಹಿಳಾ ಸಬಲೀಕರಣಕ್ಕೆ ನಿರಂತರ ಪ್ರಯತ್ನ ಮಾಡುತ್ತಿರುವ ಇವರು, 5ನೆಯ ಬಾರಿಗೆ ಈ ಬ್ಯಾಂಕಿನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ವೀರಮ್ಮ ನೇರ, ದಿಟ್ಟ, ನಿರಂತರ ಎಂಬ ತತ್ವದವರು. ಜೊತೆಗೆ ಖಂಡಿತವಾದಿ, ಇದರಿಂದಾಗಿಯೇ ಸೂಪರ್‌ಸೀಡ್ ಆಗಿ, ರಿಸರ್ವ್ ಬ್ಯಾಂಕ್ ಲೈಸೆನ್ಸನ್ನು ಹಿಂದೆಗೆದುಕೊಳ್ಳಬೇಕೆಂಬ ನಿರ್ಧಾರದಲ್ಲಿರುವಾಗ ಸಹ್ಯಾದ್ರಿ ಬ್ಯಾಂಕ್‌ನ  ಜವಾಬ್ದಾರಿ ಹೊತ್ತ ಇವರು, ಇಂದು ಬ್ಯಾಂಕನ್ನು ತಮ್ಮ ಸತತ ಪರಿಶ್ರಮದಿಂದ ಎ ಗ್ರೇಡ್‌ಗೆ ಏರಿಸಿದ್ದಾರೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇದ್ದರೆ ಮಾತ್ರ ಸಹಕಾರ ಕ್ಷೇತ್ರ ಬೆಳೆಯಬಲ್ಲುದು ಎನ್ನುವುದನ್ನು  ತೋರಿಸಿಕೊಟ್ಟಿದ್ದಾರೆ.  ಬ್ಯಾಂಕ್ ನಷ್ಟದಲ್ಲಿದ್ದುದನ್ನು ಕಂಡು ದಿನನಿತ್ಯ ಠೇವಣಿದಾರರು ತಮ್ಮ ಠೇವಣಿಯನ್ನು ವಾಪಸ್ ಪಡೆಯುತ್ತಿದ್ದ ವೇಳೆ ಹೇಗಾದರೂ ಮಾಡಿ ಮತ್ತೆ ಬ್ಯಾಂಕನ್ನು ಕಟ್ಟಿ ನಿಲ್ಲಿಸಲೇಬೇಕೆಂಬ ಛಲ ತೊಟ್ಟ ಈ ಧೀರೆ, ಅದನ್ನು ಎರಡೇ ವರ್ಷದಲ್ಲಿ ಸಾಧಿಸಿ ಲಾಭದ ಹಾದಿಯಲ್ಲಿ ತಂದು ನಿಲ್ಲಿಸಿದ ನೀರೆ. ಇಂದು ಬ್ಯಾಂಕ್ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುತ್ತಾ ಬೆಳೆದಿದೆ. ಸುಮಾರು 11 ಸಾವಿರ ಮಹಿಳಾ ಸದಸ್ಯರನ್ನು ಹೊಂದಿದೆ.
ವೀರಮ್ಮ ಮೂಲತಃ  ಚಳ್ಳಕೆರೆಯವರು. ಅಷ್ಟೇನೂ ಓದಿರದ ಇವರನ್ನು ಬುಕ್ಕಾಂಬುಧಿಯ ಪರಮೇಶ್ವರಪ್ಪ ಎನ್ನುವವರಿಗೆ ಮದುವೆ ಮಾಡಿಕೊಡಲಾಯಿತು. ನಂತರ ಶಿವಮೊಗ್ಗ ವಾಸಿಯಾದ ಇವರು 1994ರಲ್ಲಿ ಆರಂಭವಾದ ಈ ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದುಕೊಂಡರು. ಆದರೆ 2007ರವರೆಗೆ ಅವರು ಯಾವ ಅಧಿಕಾರದಲ್ಲೂ ಇರಲಿಲ್ಲ. ಅಲ್ಲಿಂದ ಅಧಿಕಾರ ಹಿಡಿದು, ಇಂದು ಈ ಬ್ಯಾಂಕ್ ರಾಜ್ಯದಲ್ಲಿರುವ 24 ಮಹಿಳಾ ಬ್ಯಾಂಕ್‌ಗಳಲ್ಲೇ  ಹೆಸರುವಾಸಿಯಾಗುವಂತೆ  ಮಾಡಿದ್ದಾರೆ. ಇದಕ್ಕಾಗಿ ಅವರು ಸುರಿಸಿದ ಬೆವರು ಅಷ್ಟಿಷ್ಟಲ್ಲ. ಬ್ಯಾಂಕನ್ನು ಹೇಗಾದರೂ ಮೇಲೆತ್ತಿ ಜಿಲ್ಲೆಯ ಮಹಿಳೆಯರ ಗೌರವ ಕಾಪಾಡಬೇಕು, ಒಮ್ಮೆ ಮುಳುಗಿದ ಬ್ಯಾಂಕ್ ಮೇಲೇಳದಿದ್ದರೆ ಅದು ಮಹಿಳೆಯರಿಗೂ, ಜಿಲ್ಲೆಗೂ ಅವಮಾನ ಎಂದರಿತು ಸಾಲ ತೆಗೆದುಕೊಂಡವರ ಮನೆಗೆ ಸ್ವತಃ ಹತ್ತಾರು ಬಾರಿ ತೆರಳಿ ಸಾಧ್ಯವಾದಷ್ಟು ಸಾಲ ವಸೂಲು ಮಾಡಿದರು. ನಂತರ ಸಾಕಷ್ಟು ಸದಸ್ಯತ್ವ ಪಡೆದರು. ಈ ಮೂಲಕ ನಿಧಾನವಾಗಿ ಮತ್ತೆ ಬ್ಯಾಂಕನ್ನು ಕಟ್ಟಿ ಬೆಳೆಸಿ ನಿಲ್ಲಿಸಿದ್ದಾರೆ.
ಈಗ ಬ್ಯಾಂಕಿಗೆ ಸ್ವಂತ ನಿವೇಶನ ಮಾಡಿಟ್ಟಿದ್ದಾರೆ. ಎರಡು ವಿಸ್ತರಣಾ ಶಾಖೆ ಮತ್ತು ಭದ್ರಾವತಿಯಲ್ಲಿ ಒಂದು ಶಾಖೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ನಯ-ವಿನಯತೆ, ಸೌಮ್ಯ ಸ್ವಭಾವ ಇದಕ್ಕೆಲ್ಲ ಕಾರಣ. ಯಾವತ್ತೂ, ಯಾರೊಂದಿಗೂ ವೈಮನಸ್ಸು ಕಟ್ಟಿಕೊಂಡವರಲ್ಲ. ಬ್ಯಾಂಕಿನ ಚುನಾವಣೆ ನಡೆದರೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದರಿತು ಅವಿರೋಧವಾಗಿಯೇ ಆಯ್ಕೆ ಮಾಡಲು ಪ್ರತಿ ಬಾರಿ ಯತ್ನಿಸಿ ಸಫಲರಾದ ವೀರಮ್ಮ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿಯೂ ಹೌದು. ಸರ್ಕಾರದ ಶೇರಿನಿಂದಲೇ 450 ಸದಸ್ಯರನ್ನು ಮಾಡಿಕೊಂಡು ವಚನಶ್ರೀ ಮಹಿಳಾ  ಸಹಕಾರ ಸಂಘವನ್ನು ಆರಂಭಿಸಿದ್ದಾರೆ. ಉತ್ತಮ ಮಹಿಳಾ ಸಹಕಾರಿ ಪ್ರಶಸ್ತಿ ಇವರ ಮುಡಿಗೇರಿದೆ. ಶಿವಮೊಗ್ಗ ನಗರಸಭೆಯು ಉತ್ತಮ ನಾಗರಿಕ ಎಂಬ ಬಿರುದು ನೀಡಿ ಸನ್ಮಾನಿಸಿದೆ. ದುಬೈನಲ್ಲಿ ಅಂತಾರಾಷ್ಟ್ರೀಯ ಗೋಲ್ಡನ್ ಸ್ಟಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ರಾಜೀವ್ ಗಾಂಧಿ ಪ್ರಶಸ್ತಿ ಸಹ ಇವರ ಕಿರೀಟಕ್ಕೆ ಸೇರಿಕೊಂಡಿದೆ.
ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚೆಚ್ಚು ಮುಂದೆ ಬರಬೇಕು. ಸಿಗುವ ಸವಲತ್ತನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಮಹಿಳೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎನ್ನುವ ಇವರು, ಪ್ರಾಮಾಣಿಕ ಪ್ರಯತ್ನ, ಸಾಧಿಸುವ ಛಲ, ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಕೆಲಸ ಮಾಡುವ ಮನೋಭಾವ ಇದ್ದರೆ ಪರಿಶ್ರಮಕ್ಕೆ ಫಲ ಇದ್ದೇ ಇದೆ ಎನ್ನುತ್ತಾರೆ.
Published on March, 12, 2016
ಸಾಹಿತ್ಯ,  ಕೃಷಿ ಬದುಕಿನ ಸಮನ್ವಯದ
 ಡಿ ಬಿ ಶಂಕರಪ್ಪ 


ಕೆಲವೊಂದು ಕಾರ್ಯಕ್ಷೇತ್ರದ  ಪ್ರವೇಶಕ್ಕೆ ಮೂಲಭೂತವಾದ ಅರ್ಹತೆ ಬೇಕಾಗುತ್ತದೆ. ಈ ಅರ್ಹತೆ ಹೆಚ್ಚುತ್ತ ಹೋಗುವುದು ನಮ್ಮ ಸಾಧನೆಯಿಂದ, ಶೋಧನೆಯಿಂದ. ಕಲಿತುದಕ್ಕಿಂತ ಕಲಿಯಬೇಕಾದುದು, ತಿಳಿಯಬೇಕಾದುದು ಹೆಚ್ಚು. ಮಾಡಿದ್ದಕ್ಕಿಂತ ಮಾಡಬೇಕಾದದ್ದು ಹೆಚ್ಚು. ಈ ಅರಿವು ಇದ್ದಾಗ ಮಾತ್ರ ಅವರವರ ಕಾರ್ಯಕ್ಷೇತ್ರದಲ್ಲಿ ಅವರವವರ ಅರ್ಹತೆ ಹೆಚ್ಚುತ್ತದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ನೂತನ ಸಾರಥಿಯ ಆಗಮನವಾಗಿದೆ. ಅವರೇ ಡಿ.ಬಿ. ಶಂಕರಪ್ಪ. ಶಂಕರಪ್ಪ ಸಾಹಿತಿ, ನಾಟಕಕಾರ, ನಿವೃತ್ತ ಅಧ್ಯಾಪಕ. ಜೊತೆಗೆ ಉತ್ತಮ ಕೃಷಿಕ.
ಶಂಕರಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರು. ನಾಟಕಕಾರಾಗಿ, ಕಾದಂಬರಿಕಾರರಾಗಿ, ಅಂಕಣ ಬರೆಹಗಾರರಾಗಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕಸಾಪದಲ್ಲೂ ಕೆಲಸ ಮಾಡಿದ ಅನುಭವ ಜೊತೆಗಿದೆ.
ಹೊನ್ನಾಳಿ ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ  ಶಾಲಾ ಶಿಕ್ಷಕ ಬಸಪ್ಪ- ವೀರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು, ತಂದೆಯಂತೆಯೇ ಶಿಕ್ಷಕ ವೃತ್ತಿಗೆ ಸೇರಿದರು. ನ್ಯಾಮತಿ, ಚನ್ನಗಿರಿಯಲ್ಲಿ ಓದು ಆರಂಭಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎ ಪದವಿ ಪಡೆದು, ನ್ಯಾಶನಲ್ ಕಾಲೇಜ್ ಆಫ್ ಎಜುಕೇಶನ್‌ನಲ್ಲಿ ಬಿಇಡಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ ಮುಗಿಸಿದ ಶಂಕರಪ್ಪ ನಂತರ ಹೈಸ್ಕೂಲು ಅಧ್ಯಾಪಕರಾಗಿ ಆನವಟ್ಟಿ, ಹಿತ್ತಲ, ಜಿನಹಳ್ಳಿ, ನ್ಯಾಮತಿಯಲ್ಲಿ ಕೆಲಸ ಮಾಡಿದರು. ವಿಷಯ ಪರೀಕ್ಷಕರಾಗಿ ಹೊನ್ನಾಳಿಯಲ್ಲಿ ಕೆಲಸ ಮಾಡಿದ ನಂತರ ಭಡ್ತಿ ಪಡೆದು ನ್ಯಾಮತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾದರು. ಇದೇ ವೇಳೆ ಕನ್ನಡ ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ. ನಾಟಕರ ಂಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಕುರುಕ್ಷೇತ್ರ ನಾಟಕದಲ್ಲಿ ಭೀಮ ಮತ್ತು ದೇವದಾಸಿ ನಾಟಕದಲ್ಲಿ ವಸಂತಶೇಖರ ಪಾತ್ರ ಮಾಡಿ ಜನಮನ ಗೆದ್ದಿದ್ದಾರೆ. ಉತ್ತಮ ಶಿಕ್ಷಕರೆಂದು ಗುರುತಿಸಲ್ಪಟ್ಟ ಇವರಿಗೆ 1992ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪಿ. ಲಂಕೇಶ್ ಶಿಷ್ಯರಾದ ಶಂಕರಪ್ಪ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರಾಗಿಯೂ ಕೆಲಸ ಮಾಡಿದ್ದಾರೆ. ಇದೇ ವೇಳೆ ‘ಗಿಡ್ಡಜ್ಜಿಯ ಬಯಲು’ ಕಾದಂಬರಿ ಬರೆದಿದ್ದಾರೆ. 2014ರ ಕನ್ನಡ ಸಾಹಿತ್ಯ ಪರಿಷತ್  ದತ್ತಿ ಪ್ರಶಸ್ತಿಯಿಂದ ಇದು ಪುರಸ್ಕೃತಗೊಂಡಿದೆ. ಹೊಸ ಕಾದಂಬರಿ ‘ಬೂದಿಬಸಪ್ಪ ನಾಯಕ’ ಬಿಡುಗಡೆಗೆ ಸಿದ್ಧಗೊಂಡಿದೆ. ‘ಬೆಳಗು ಹರಿಯುವ ಮುನ್ನ’ ಎನ್ನುವುದು ಇವರ ಇನ್ನೊಂದು ಕಾದಂಬರಿ. ಹೊನ್ನಾಳಿ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ, ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು 4 ತಾಲೂಕು ಸಮ್ಮೇಳನ ನಡೆಸಿದ್ದಾರೆ. ಗಾಜನೂರಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ್ದು ಇನ್ನೂ ಅಚ್ಚಳಿಯದೆ ಎಲ್ಲರ ನೆನಪಿನಲ್ಲಿದೆ.
ನಿವೃತ್ತಿ ನಂತರ ಹೊನ್ನಾಳಿಯಲ್ಲಿ ಕೃಷಿ ಜಮೀನಿನಲ್ಲಿ ತರಕಾರಿ ಬೆಳೆಯುವ ಮೂಲಕ ಅಲ್ಲಿಯೂ ಉತ್ತಮ ಸಾಧನೆ ಮಾಡಿ ಉತ್ತಮ ತರಕಾರಿ ಕೃಷಿಕ ಎಂಬ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸಾಹಿತ್ಯಿಕ, ಸಾಮಾಜಿಕ,  ಮತ್ತು ಕೃಷಿ ಬದುಕಿನ ಸಮನ್ವಯದ ಶಂಕರಪ್ಪ, ಜಿಲ್ಲೆಯ ಸದಭಿರುಚಿಯ ಸಾಂಸ್ಕೃತಿಕ ಮನಸ್ಸುಗಳು ಬೆಳೆಯುವ ಕೆಲಸ ಮಾಡಬೇಕಿದೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಸಾಗಿ ಬಂದಿರುವ ಇವರಿಗೆ ಲಂಕೇಶ್ ಆದರ್ಶಗಳೇ ಮಾದರಿಯಾಗಿದ್ದು, ಆ ಪ್ರಕಾರ ಸಾಹಿತ್ಯಿಕ ಕೆಲಸ ಮಾಡುವ ಇರಾದೆ ಹೊಂದಿದ್ದಾರೆ. ಇವರ ಸಹೋದರ ಡಿ.ಬಿ. ಗಂಗಪ್ಪ ಹೊನ್ನಾಳಿ ಶಾಸಕರಾಗಿ ಕೆಲಸ ಮಾಡಿದ್ದಾರೆ.  
 ಪರಿಷತ್ತಿನ ಕಾರ್ಯಕ್ರಮಗಳನ್ನು ಮನೆ-ಮನಗಳಿಗೆ ತಲುಪಿಸುವುದು, ಹಿಂದಿನ ಅಧ್ಯಕ್ಷರು ಜಾರಿಗೊಳಿಸಿದ್ದ ಜನಪ್ರಿಯ ಕಾರ್ಯಕ್ರಮ ತಿಂಗಳ ಸಾಹಿತ್ಯ ಹುಣ್ಣಿಮೆ ಮಾದರಿಯಾಗಿದೆ. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಆದ್ಯತೆ ಕೊಡಲಾಗುವುದು. .ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು, ಉತ್ತಮ ಬರಹಗಾರರಿಗೆ ಉತ್ತೇಜನ ನೀಡಲು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು. ಸಾಹಿತ್ಯ ಪರಿಷತ್ತಿನಲ್ಲಿ ಈಗಿರುವ ಸದಸ್ಯತ್ವವನ್ನು 12000ಕ್ಕೆ ಏರಿಸುವ ಗುರಿ ಹೊಂದಿರುವುದಾಗಿ ಅವರು ಹೇಳುತ್ತಾರೆ.
Published on 5 march, 2016
.................................
ವಾಮನಮೂರ್ತಿಯ ತ್ರಿವಿಕ್ರಮ ಸಾಧನೆ 
ಎಂ. ಕೆ. ಶ್ರೀಧರ ಶೆಟ್ಟಿ. 


ಸಂಗೀತ, ನೃತ್ಯ ಇಂದು ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಭಾಗವಾಗಿದೆ. ಬಹುತೇಕ ವಿದ್ಯಾರ್ಥಿಗಳು ತಮ್ಮ  ಪಠ್ಯದ ಜೊತೆ  ಈ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಕೆಲವೆಡೆ ಶಾಲೆಗಳಲ್ಲಿ ಇವುಗಳನ್ನು ಕಲಿಯುವ ಅವಕಾಶವಿದ್ದರೆ, ಇನ್ನು ಕೆಲವೆಡೆ ಖಾಸಗಿಯಾಗಿ ಹೇಳಿಕೊಡುತ್ತಿದ್ದಾರೆ. ನೃತ್ಯ ಎಂದಾಕ್ಷಣ ಕೇವಲ ಭರತನಾಟ್ಯ ಒಂದೇ ಅಲ್ಲ, ಇದರಲ್ಲಿ ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ ಸಹ ಸೇರುತ್ತದೆ. ಪಾಶ್ಚಾತ್ಯ ಡಾನ್ಸ್ ಅಥವಾ ರ‌್ಯಾಪ್ ಬೀಟ್ಸ್ ಹೇಳಿಕೊಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಶಿವಮೊಗ್ಗ ನಗರದಲ್ಲಿದ್ದಾರೆ. ಸುಮಾರು 27 ವರ್ಷಗಳಿಂದ ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಯ ಕೆಲವೆಡೆ ರ‌್ಯಾಪ್ ಡಾನ್ಸ್  ಮತ್ತು ಜಾನಪದ ಡಾನ್ಸ್ ಹೇಳಿಕೊಡುತ್ತ  ಸದ್ದಿಲ್ಲದೆ ಕಾಯಕನಿರತರಾಗಿ ತ್ರಿವಿಕ್ರಮ ಸಾಧನೆ ಮಾಡಿದ ಮಹನೀಯರೊಬ್ಬರಿದ್ದಾರೆ. ಅವರೇ ಎಂ. ಕೆ. ಶ್ರೀಧರ ಶೆಟ್ಟಿ.
’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತೊಂದಿದೆ. ಇದಕ್ಕೆ ಶ್ರೀಧರ್ ಶೆಟ್ಟಿ ಉತ್ತಮ  ಉದಾಹರಣೆಯಾಗಿ ನಿಲ್ಲುತ್ತಾರೆ. ಸುಮಾರು 50ರ ಹರೆಯದ ಇವರು, ವಿನಯವಂತ, ಸೌಜನ್ಯಶೀಲ ವ್ಯಕ್ತಿ. ಇವರದ್ದು ಮಾತು ಕಡಿಮೆ ಸಾಧನೆ ಹೆಚ್ಚು ಎಂಬ ವ್ಯಕ್ತಿತ್ವ. ಬೆಳಗ್ಗೆಯಿಂದ ಸಂಜೆಯವರೆಗೆ ಕೆಇಬಿ ಸರ್ಕಲ್‌ನಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುವ ಇವರು, ಸಂಜೆಯಾದೊಡನೆ ಮನೆಯಲ್ಲೇ ಡಾನ್ಸ್ ಕ್ಲಾಸ್ ನಡೆಸುತ್ತಾರೆ. ಅಂದ ಹಾಗೆ ಇವರಲ್ಲಿ ಹಾಲಿ ನೂರಕ್ಕೂ ಹೆಚ್ಚು  ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.  
ತಿಲಕ್‌ನಗರದ 4ನೆಯ ತಿರುವಿನಲ್ಲಿ ದೊಡ್ಡ ಬಾಡಿಗೆ  ಮನೆಯೊಂದನ್ನು ಪಡೆದು,  ಅಲ್ಲಿಯೇ ಪ್ರತಿದಿನ ಎರಡು ಗಂಟೆ ಕ್ಲಾಸ್ ನಡೆಸುತ್ತಿದ್ದಾರೆ. ತಮ್ಮ ಡಾನ್ಸ್ ಶಾಲೆಗೆ ಪ್ರತ್ಯಕ್ಷ  ಇನ್ಸ್‌ಟಿಟ್ಯೂಟ್ ಆಫ್ ಡಾನ್ಸ್ ಎಂದು ಹೆಸರಿಟ್ಟಿದ್ದಾರೆ. ಭಾನುವಾರ ಮಾತ್ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತರಗತಿ ಹೇಳಿಕೊಡುತ್ತಾರೆ. ಶ್ರೀಧರ್ ಶೆಟ್ಟಿ ಮೂಲತಃ ಕುಂದಾಪುರ ತಾಲೂಕು ಬೆಳ್ವೆ ಗ್ರಾಮದವರು. 7ನೆಯ ತರಗತಿಯವರೆಗೆ ಮಾತ್ರ ಓದಿರುವ ಇವರು, ಶಾಲೆ ಬಿಟ್ಟು ಮುಂಬೈಗೆ ತೆರಳಿ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಬಾಲಿವುಡ್ ಸಿನಿಮಾ ನೋಡುತ್ತಿದ್ದ ಅವರಿಗೆ ಖ್ಯಾತ ನಟರ ಡಾನ್ಸ್‌ಗಳು ಪ್ರೇರಣೆಯಾದವು. ನಟರಾದ ಮಿಥುನ್ ಚಕ್ರವರ್ತಿ, ಗೋವಿಂದ ಅವರ ಡಾನ್ಸ್‌ಗೆ ಮಾರುಹೋಗಿ ಅದೇ ರೀತಿ ಡಾನ್ಸ್ ಮಾಡಲಾರಂಭಿಸಿದ್ದರು. ಬರಬರುತ್ತ ಅದಕ್ಕೇ ಆದ್ಯತೆ ಕೊಟ್ಟು ಪರಿಣತಿ ಹೊಂದಿದರು. ಮುಂಬೈಯಿಂದ ಸುಮಾರು 35 ವರ್ಷಗಳ ಹಿಂದೆ  ಶಿವಮೊಗ್ಗಕ್ಕೆ ಬಂದಾಗ, ಇಲ್ಲಿಯೂ ಅದರ ಗುಂಗಿನಲ್ಲೇ ಕಾಲಕಳೆಯುತ್ತಿರುವಾಗ ಗಾಂಧಿಬಜಾರ್‌ನಲ್ಲಿ  ರವಿಕುಮಾರ್ ಎನ್ನುವವರು ರ‌್ಯಾಪ್ ಡಾನ್ಸ್ ಹೇಳಿಕೊಡುತ್ತಿರುವ ವಿಚಾರ ತಿಳಿಯಿತು. ಅವರಲ್ಲಿ ಮತ್ತೆ ಕಲಿಕೆಗೆ ತೊಡಗಿ ಸುಮಾರು 5 ವರ್ಷಗಳಲ್ಲಿ ಆ ಕಲೆಯನ್ನು ಸಿದ್ಧಿಸಿಕೊಂಡರು. ಇದಾದ ಬಳಿಕ ತಾವಿರುವ ಬಾಡಿಗೆ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಾ ಬೆಳೆದುಬಂದಿದ್ದಾರೆ.
 ವಿನೋಬನಗರದ ನೇತಾಜಿ ಶಾಲೆಯ ಮಕ್ಕಳಿಗೆ ಒಮ್ಮೆ ಡಾನ್ಸ್ ಕಲಿಸಲು ಹೋದಾಗ ಅಲ್ಲಿಯೇ ಕಲಿಕಾ ಕೇಂದ್ರ ತೆರೆಯಲು ಅವರು ಅನುಮತಿ ಕೊಟ್ಟಿದ್ದರಿಂದ ಸುಮಾರು 10 ವರ್ಷ ಅಲ್ಲಿಯೇ ಕ್ಲಾಸ್ ನಡೆಸಿದರು. ಅನಂತರ ರವೀಂದ್ರನಗರದ ಸರ್ಕಾರಿ ಶಾಲೆಯಲ್ಲಿ  ಡಾನ್ಸ್ ಶಾಲೆ ನಡೆಸಿದರು. ಇವರಡಿಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಶೆಟ್ಟಿ ಅವರೂ ಸಹ ಹಲವಾರು ರಾಜ್ಯ, ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿ, ಅಂತಾರಾಜ್ಯದಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಜಾನಪದ, ಕಂಸಾಳೆ ಡಾನ್ಸ್ ಹೇಳಿಕೊಡುವುದರಲ್ಲಿ ಶೆಟ್ಟಿ ಸಿದ್ದಹಸ್ತರು. ಕಳೆದ ವಾರ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ರ‌್ಯಾಪ್ ಬೀಟ್ಸ್ ಸ್ಪರ್ಧೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಂತಹ ಸ್ಪರ್ಧೆಯನ್ನು ಅವರು ನಡೆಸುವ ಮೂಲಕ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ; ಪ್ರೋತ್ಸಾಹಿಸುತ್ತಿದ್ದಾರೆ.
ಎರಡು ಧಾರಾವಾಹಿಯಲ್ಲಿ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಶೆಟ್ಟಿ ಅವರು ಕಲಾವಿದರಾಗಿಯೂ  ಮಿಂಚಿದ್ದಾರೆ.
Published on Feb 27, 2016
 .......................................
ಭಾವನಾ ಡಿ. ರಾವ್ 


ನವಜೀವ ನವಭಾವ ನವರಸದ ಸತ್ವದಲಿ
ನಮ್ಮೆಲ್ಲ ಕಲೆಗಳೂ ತುಂಬಿ ನಿಲಬೇಕು
ಎಂಬ ಕವಿವಾಣಿಯಂತೆ ಕಲೆಯಲ್ಲಿ ಇರುವುದೇ ಸೌಂದರ್ಯ. ಇದು ಎಲ್ಲರನ್ನೂ ಸೆಳೆಯುವಂತಹುದು. ಕಲೆಯಲ್ಲಿ ಕೇವಲ ಬಾಹ್ಯ ಚೆಲುವಷ್ಟೇ ಅಲ್ಲ, ಆತ್ಮದ ಒಳ ಹಸಿರೂ ಸಹ ಇದೆ. ಅದನ್ನೇ ರಸ ಎನ್ನುತ್ತಾರೆ. ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ  ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ. ಇಂತಹ ಕಲೆಗಳಲ್ಲಿ ಭರತನಾಟ್ಯಕ್ಕೆ  ಮೊದಲ ಸ್ಥಾನ. ಶಿವಮೊಗ್ಗದಲ್ಲಿ ಭರತನಾಟ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ  ಯುವಪೀಳಿಗೆ ಇದನ್ನು ಅಪಾರವಾಗಿ ಗೌರವಿಸುತ್ತಿದೆ, ಬೆಳೆಸುತ್ತಿದೆ. ಈ ಕಲೆಯ ಮೂಲಕ ಯುವಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಹೊಮ್ಮುತ್ತಿದ್ದಾರೆ. ಅಂತಹವರಲ್ಲಿ ಭಾವನಾ ಡಿ. ರಾವ್ ಒಬ್ಬರು.
ಭಾವನಾ ನಟನಂ ನೃತ್ಯ ಕೇಂದ್ರದ ಕೇಶವಕುಮಾರ್ ಪಿಳ್ಳೈ ಅವರ ಶಿಷ್ಯೆ. ವಿದ್ವತ್ ಮುಗಿಸಿ ಮೊನ್ನೆಯಷ್ಟೇ ರಂಗಪ್ರವೇಶ ಮಾಡಿದ್ದಾರೆ. ನಟನಂನಲ್ಲಿ ಹಲವು ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ. ತನ್ನ 8ನೆಯ ವಯಸ್ಸಿನಿಂದ ಕೇಶವಕುಮಾರ್ ಬಳಿ ಭರತನಾಟ್ಯ ಅಭ್ಯಾಸ ಮಾಡಿ ಜೂನಿಯರ್, ಸೀನಿಯರ್ ವಿದ್ವತ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಡಿವಿಎಸ್‌ನಲ್ಲಿ ಬಿಸಿಎ ಮುಗಿಸಿ ಜೆಎನ್‌ನ್‌ಸಿಇಯಲ್ಲಿ ಎಂಸಿ ಪದವಿ ಪಡೆದು ಕುವೆಂಪು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಮೈಸೂರಿನ ಅಲ್ಲಮಪ್ರಭು ವಿವಿಯಲ್ಲಿ ಎಂ. ಡಾನ್ಸ್ ಪದವಿಯನ್ನು ಪಡೆದಿದ್ದಾರೆ. ಇದರೊಟ್ಟಿಗೆ ಕರ್ನಾಟಕ ಸಂಗೀತ ಶಿಕ್ಷಣವನ್ನೂ ವಿದುಷಿ ಮಂಜುಳಾ ಅವರಲ್ಲಿ ಅಭ್ಯಸಿಸಿ, ಪ್ರಸ್ತುತ ಸೀನಿಯರ್ ಸಂಗೀತ ಶಿಕ್ಷಣವನ್ನು ವಿದುಷಿ ಪೂರ್ಣಿಮಾ ಅವರಲ್ಲಿ ಕಲಿಯುತ್ತಿದ್ದಾರೆ.
ಕಾಲೇಜು ದಿನದಲ್ಲೇ ಭರತನಾಟ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿರುವ ಭಾವನಾ, ಕುವೆಂಪು ವಿವಿಯ ಸಹ್ಯದ್ರಿ ಉತ್ಸವದಲ್ಲಿ ಸತತ ಮೂರು ವರ್ಷ ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಕರ್ನಾಟಕ ಪರಿಕ್ಷಾ ಮಂಡಳಿಯವರು ನಡೆಸುವ ಭರತನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ಸಹಿತ ಇತರೇ ರಾಜ್ಯಗಳಲ್ಲಿ ನೃತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಲ್ಲದೆ, ಸ್ವತಃ ಕಾರ್ಯಾಗಾರವನ್ನೂ ನಡೆಸಿಕೊಟ್ಟಿದ್ದಾರೆ. ಪಕ್ಕದ ಮನೆಯ ಗೆಳತಿ ನೃತ್ಯ ಕಲಿಯುವುದನ್ನು ಗಮನಿಸಿ ಪಾಲಕರಲ್ಲಿ ಹಠ ಮಾಡಿ ಕಲಿಕೆಗೆ ಹೆಜ್ಜೆ ಇಟ್ಟ ಭಾವನಾ, ಈಗ ಶಿವಮೊಗ್ಗಕ್ಕೆ ಹೆಸರು ತರುವ ಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ.
ಶಿವಮೊಗ್ಗದ ಸಹ್ಯಾದ್ರಿ ಉತ್ಸವ, ಕೊಡಚಾದ್ರಿ ಉತ್ಸವ, ದಸರಾ, 73ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಇಕ್ಕೇರಿ ಉತ್ಸವ, ಇತರೆ ಜಿಲ್ಲೆಗಳ ಹಾನಗಲ್ ಉತ್ಸವ, ಬಾಗಲಕೋಟೆ ಉತ್ಸವ, ದಾಸ ಸಾಹಿತ್ಯೋತ್ಸವ, ಕರ್ನಾಟಕ ಕಲಾ ವೈಭವ, ವಿಪ್ರ ಸಮಾವೇಶಗಳಲ್ಲಿ, ಕನ್ನಡ ವಾಹಿನಿಯೊಂದರ ಹೆಜ್ಜೆಗೊಂದು ಹೆಜ್ಜೆ ಕಾರ್ಯಕ್ರಮದಲ್ಲಿ, ಶಂಕರ ಮತ್ತು ಚಂದನ ವಾಹಿನಿಯಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಹೊರತಾಗಿ ದೆಹಲಿ, ಗೋವಾ, ಬೆಂಗಳೂರು, ಮೈಸೂರು  ಸಹಿತ ಕರ್ನಾಟಕದೆಲ್ಲೆಡೆ ಕಲೆ ಪ್ರದರ್ಶಿಸಿದ್ದಾರೆ. ತನ್ನೆಲ್ಲ ಸಾಧನೆಗಳಿಗೆ ತಂದೆ ದತ್ತರಾಜ್ ಮತ್ತು ತಾಯಿ ಕುಸುಮಾ, ಗುರು ವಿದ್ವಾನ್ ಕೇಶವಕುಮಾರ್ ಪಿಳ್ಳೈ ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಸದಾ ನೆನೆಯುವ ಭಾವನಾ. ಭರತನಾಟ್ಯ ವಿಷಯದಲ್ಲೇ ಪಿಎಚ್‌ಡಿ ಮಾಡಲು ತಯಾರಿ ನಡೆಸಿದ್ದಾರೆ. ಜೊತೆಗೆ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುವಂತಹ ಸಾಧನೆ ಮಾಡುವ ಇಚ್ಛೆಯನ್ನು ಅವರು ಹೊಂದಿದ್ದಾರೆ.
ಭಾವನಾ ನಡೆ-ನುಡಿಯಲ್ಲಿ ವಿನಯವಂತೆ. ಕಲಿಕಾ ಶೃದ್ಧೆ ಉಳ್ಳವಳು. ಆರಂಭದಿಂದಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾಳೆ. ಸತತ ಆಸಕ್ತಿ ಹೊಂದಿರುವುದರಿಂದ ಈಗ ವಿದ್ವತ್ ಪೂರೈಸಿ ರಂಗಪ್ರವೇಶ ಮಾಡಿದ್ದಾಳೆ. ನಟನಂನಲ್ಲಿ ನೂರಾರು ಮಕ್ಕಳಿಗೆ ಶಿಕ್ಷಕಿಯಾಗಿದ್ದಾಳೆ. ಭರತನಾಟ್ಯದಲ್ಲಿ ಇಷ್ಟೊಂದು ಸಾಧನೆ ಮಾಡುವ ಮೂಲಕ ತಮಗೂ, ತಮ್ಮ ಸಂಸ್ಥೆಗೂ ಕೀರ್ತಿ ತಂದಿದ್ದಾಳೆ ಎನ್ನುತ್ತಾರೆ ನಟನಂ ಕೇಂದ್ರದ ಗುರು ಕೇಶವಕುಮಾರ್ ಅವರು.
Published on Feb 20. 2016
.........................................
ಕೃಷಿ ಯಂತ್ರಗಳ ಯುವ ಸಂಶೋಧಕ
ನಿತಿನ್ ಹೇರಳೆ
..............................


ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ- ನೆಸೆಸಿಟಿ ಈಸ್ ದ ಮದರ್ ಆಫ್ ಇನ್ವೆನ್ಶನ್ ಎಂದು. ಮನುಷ್ಯನಿಗೆ ಯಾವುದರ ಅನಿವಾರ್ಯತೆ ಇರುತ್ತದೆಯೋ ಆ ವಸ್ತುವನ್ನು ಪಡೆಯಲು ಹೆಚ್ಚು ಗಮನ ಕೊಡುತ್ತಾನೆ. ಅದಕ್ಕಾಗಿ ಯೋಚಿಸುಸುತ್ತಾನೆ, ಯತ್ನಿಸುತ್ತಾನೆ, ಸಂಶೋಧಿಸುತ್ತಾನೆ.
 ಇಲ್ಲೊಬ್ಬ ಯುವಕನಿದ್ದಾನೆ. ವಯಸ್ಸು ಸುಮಾರು 24ರ ಆಸುಪಾಸು. ತನ್ನ ಅಡಿಕೆ ತೋಟದಲ್ಲಿ ಮರಗಳಿಗೆ  ಔಷಧಿ ಸಿಂಪಡಿಸಲು ಜನರು ಸಿಗದಿದ್ದಾಗ ಆತನೇ ಸ್ವತಃ ಮರ ಹತ್ತಿ ಇಳಿಯುವ ಮಾನವ ಚಾಲಿತ ಯಂತ್ರ (ಅರೆಕಾ ಟ್ರೀ ಕ್ಲೈಂಬರ್)ವೊಂದನ್ನು ಕಂಡುಹಿಡಿದ. ಇದಾದ ಬಳಿಕ ಹುಲ್ಲನ್ನು ಮತ್ತು ಬೇಡವಾದ ವಸ್ತುಗಳನ್ನು ಕತ್ತರಿಸಿ ಗೊಬ್ಬರಕ್ಕೆ ಹಾಕಲು ಚಾಪ್ ಕಟರ್ ಎನ್ನುವ ಇನ್ನೊಂದು ಯಂತ್ರ ತಯಾರಿಸಿದ. ಬಳಿಕ ಅಡಿಕೆ ಗೊನೆಯಿಂದ ಅಡಿಕೆಯನ್ನು ಬೇರ್ಪಡಿಸಲು ಮತ್ತೊಂದು ಯಂತ್ರ, ಇದಾದ ಮೇಲೆ ಚಾಲಿ ಸುಲಿದು, ಸಿಪ್ಪೆ ಮತ್ತು ಅಡಿಕೆ ಬೇರೆಯಾಗುವಂತಹ ಮತ್ತೊಂದು ಯಂತ್ರ ತಯಾರಿಸಿದ. ಹಾಗಂತ ಈತನೇನು ಇಂಜಿನಿಯರಿಂಗ್ ಓದಿದವನಲ್ಲ; ವಿಜ್ಞಾನವನ್ನೂ ಓದಿಲ್ಲ,  ಸೂಕ್ಷ್ಮಮತಿ ಮತ್ತು ಸಂಶೋಧನಾ ಬುದ್ಧಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಈತ ತೋರಿಸಿಕೊಟ್ಟಿದ್ದಾನೆ. ಈ ಯುವಕ ಬೇರಾರೂ ಅಲ್ಲ, ನಿತಿನ್ ಹೇರಳೆ.
ಸಿವಿಲ್ ಡಿಪ್ಲೋಮಾ ಓದಿರುವ ಈತ ಶಿವಮೊಗ್ಗ ಸಮೀಪದ ಗಾಜನೂರಿನವನು. ಈಗ ತನ್ನೆಲ್ಲ ಯಂತ್ರ ಮಾದರಿಗಳಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿದ್ದಾನೆ. ಹಲವೆಡೆ ಯಂತ್ರಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ನೀಡಿದ್ದಾನೆ. ತಾನೇ ಸ್ವತಃ ಯಂತ್ರವನ್ನು ತಯಾರಿಸುವ ಘಟಕವನ್ನು ಗಾಜನೂರಿನಲ್ಲಿ ಸ್ಥಾಪಿಸಿ ಸುಮಾರು 15 ಜನರಿಗೆ ಉದ್ಯೋಗ ಕಲ್ಪಿಸಿದ್ದಾನೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಕಾಸರಗೋಡು, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ತನ್ನ ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. ಜನರು ಇದನ್ನು ಖರೀದಿಸಿ, ಈತನ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಅಡಿಕೆ ಮರ ಏರುವವರು, ಅಡಿಕೆ ಸುಲಿಯುವವರು ಸಿಗದ ಕಾರಣ ಈ ಯಂತ್ರಗಳನ್ನು ಸಂಶೋಧಿಸಿದ ನಿತಿನ್, ಗ್ರಾಹಕರ ಕೈಗೆಟುಕುವ ಬೆಲೆಗೆ  ನೀಡುತ್ತಿದ್ದಾನೆ. ಗ್ರಾಹಕರಿಗೂ ಖರೀದಿ ಅನಿವಾರ್ಯ ಎನ್ನುವಂತಾಗಿರುವುದರಿದಂ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ, ತೆಂಗು, ಭತ್ತ ಮೊದಲಾದವುಗಳಿಗೆ ಸಂಬಂಧಿಸಿದ ಇನ್ನಷ್ಟು ಹೊಸ ಯಂತ್ರಗಳನ್ನು ತಯಾರಿಸುವ ಉತ್ಸಾಹದಲ್ಲಿದ್ದಾರೆ.
ಈಗ ತೆಂಗಿನಕಾಯಿ ತುರಿಯುವುದು, ಗೋಡಂಬಿ ಸಿಪ್ಪೆ ತೆಗೆಯುವುದು, ನಿಂಬೆ ರಸ ತೆಗೆಯುವುದು ಮೊದಲಾದ ಸಣ್ಣ ಪ್ರಮಾಣದ ಯಂತ್ರಗಳನ್ನು ತಯಾರಿಸುತ್ತಿದ್ದಾನೆ. ಶಿರಸಿಯ ತೋಟಗಾರ್ಸ್ ಕೊ- ಆಪರೇಟಿವ್ ಸೇಲ್ಸ್ ಸೊಸೈಟಿಯವರು ಇವರನ್ನು ಕರೆಯಿಸಿ ಪ್ರಾತ್ಯಕ್ಷಿಕೆ ಕೊಡಿಸಿ ಸನ್ಮಾನಿಸಿದ್ದಾರೆ. ಪುತ್ತೂರಿನಲ್ಲಿರುವ ಕ್ಯಾಂಪ್ಕೋದವರೂ ಸಹ ಕಳೆದ ವರ್ಷ ನಡೆಸಿದ ಯಂತ್ರೋಪಕರಣಗಳ ಮೇಳದಲ್ಲಿ ಈತನ ಸಂಶೋಧನೆಗಳನ್ನು ಪ್ರದರ್ಶಿಸಿ ಗೌರವಿಸಿದ್ದಾರೆ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯವರು ಪ್ರತಿ ವರ್ಷ ನಡೆಸುವ ಕೃಷಿ ಮೇಳಗಳಲ್ಲೂ ಈತನ ಸಂಶೋಧನೆ ಪ್ರದರ್ಶಿತವಾಗಿದೆ. ಇಲ್ಲಿಯೂ ಹಲವು ಸಂಶೋಧಕರು, ಕೃಷಿ ವಿಜ್ಞಾನಿಗಳು ಇದನ್ನು ಗಮನಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
  ನಿತಿನ್  ಸಂಶೋಧನೆಯನ್ನು ಮುಂದುವರೆಸಿ, ಅದರಲ್ಲಿ ಹೊಸತನವನ್ನು ಸಾಧಿಸುತ್ತಿದ್ದಾನೆ. ಈ ವರ್ಷದ ಜನವರಿಯಲ್ಲಿ ಮೈಸೂರಿನಲ್ಲಿ ಜರುಗಿದ 103ನೆಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಈತ ಪ್ರದರ್ಶಿಸಿದ ಮಾದರಿಗೆ ಬಹುಮಾನ ದಕ್ಕಿದೆ.
 ಡಿಪ್ಲೊಮಾ ಮಾಡಿದರೂ ಸಂಶೋಧನೆಗೆ  ನೆರವಿನ ದಾರಿಯೇ ಕಾಣುತ್ತಿಲ್ಲ. ಸರ್ಕಾರಗಳು ಬಜೆಟ್‌ನಲ್ಲಿ ಕೃಷಿ ಯಂತ್ರೋಪಕರಣಗಳ  ಸಂಶೋಧನೆಗೆ ನೂರಾರು ಕೋಟಿ ರೂ. ಮೀಸಲಿಡುತ್ತವೆಯಾದರೂ ಅದು ಯಾರಿಗೆ ತಲುಪುತ್ತದೆ, ಎಲ್ಲಿಗೆ ಹೋಗುತ್ತದೆ, ಅದನ್ನು ಪಡೆಯುವುದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾನೆ ನಿತಿನ್.
ಈಗ ಸ್ವತಃ ಕೃಷಿಕನಾಗಿ ಸಂಶೋಧನಾ ಪ್ರವೃತ್ತಿಯನ್ನು ಮುಂದುವರೆಸಿದ್ದರ ಫಲವಾಗಿ ಅನೇಕ ಉಪಯುಕ್ತ ಯಂತ್ರಗಳನ್ನು ಕಂಡುಹಿಡಿದಿರುವ ಈತ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಷಿನ ಯಶಸ್ಸು ಕಾಣಲಿ.
Published on Feb 13, 2016
..............................................
ದರ್ಪವಿಲ್ಲದ ದಕ್ಷ ಪೊಲೀಸ್ ಅಧಿಕಾರಿಯ ಮುಡಿಗೆ
ರಾಷ್ಟ್ರಪತಿ ಪ್ರಶಸ್ತಿ


ಬಳಿಗೆ ಬಾರದು ಕೋಪ: ಸುಳಿಯಲಾರದು ತಾಪ
ಸಿಗದು ಮೋಹ ಕಲಾಪ: ತಾಗದು ಆಸೆಯ ಲೇಪ
ಭಯ, ಭ್ರಾಂತಿ, ವಿದ್ವೇಷ ಲವಲೇಶವಿನಿತಿಲ್ಲ: ನೋಡಿದರೆ ಶಾಂತಚಿತ್ತ
ಈ ರೀತಿ ಗುಣ ಹೊಂದಿದವರು ಎಲ್ಲಿ ಕಾಣಸಿಗುತ್ತಾರೆ? ಉತ್ತಮ ಬದುಕು, ಪ್ರಾಮಾಣಿಕತೆ, ಸತ್ಸಂಗ, ಸದಾಚಾರ ಸಂಪನ್ನರಾಗಿರುವವರು ತೀರಾ ವಿರಳ. ಇಂದಿನ ದಿನಗಳಲ್ಲಿ ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇಂತಹ ವ್ಯಕ್ತಿಯೊಬ್ಬರು ಇದ್ದಾರೆನ್ನುವುದೇ ನಂಬಲಸಾಧ್ಯವಾದ ಸತ್ಯ. ಇಂತಹ ಸಿದ್ಧಿ-ಸಾಧನೆಯ ಫಲದಿಂದಾಗಿ ಇದೇ ಕಳೆದ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾದ ಅಪೂರ್ವ ಪೊಲೀಸ್ ಅಧಿಕಾರಿಯೊಬ್ಬರಿದ್ದಾರೆ. ಅವರೇ ತೀರ್ಥಹಳ್ಳಿಯ ಸಿಪಿಐ ಕಚೇರಿಯಲ್ಲಿ ಎಎಸ್‌ಐ ಆಗಿರುವ ಎಚ್. ಬಿ. ಜ್ಞಾನೇಂದ್ರ.
ಜ್ಞಾನೇಂದ್ರ ಎಂದ ಕೂಡಲೇ ನೆನೆಪಾಗುವುದು ಅವರ  ಸದಾಚಾರ, ಸಂಪನ್ನತೆಯ ವ್ಯಕ್ತಿತ್ವ.  ಆ ಇಲಾಖೆಯವರಷ್ಟೇ ಅಲ್ಲ, ಅವರ ಆತ್ಮಿಯರೂ ಸಹ ಇದನ್ನು ಹೇಳುತ್ತಾರೆ. 58ರ ಹರೆಯದ ಇವರು, ಪೊಲೀಸ್ ಇಲಾಖೆಗೇ ಮಾದರಿ ಎಂದರೆ ತಪ್ಪೇನಿಲ್ಲ. ಸದಾ ಕೆಲಸದ ಒತ್ತಡದಿಂದ ಬಳಲುತ್ತಿದ್ದರೂ, ಯಾವುದೇ ನೋವಿದ್ದರೂ ಅದನ್ನು ತೋರಗೊಡದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಜ್ಞಾನೇಂದ್ರ. ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್‌ಗಳಿಗೂ ಇವರನ್ನು ಕಂಡರೆ ವಿಶೇಷ ಪ್ರೀತಿ, ಮಮಕಾರ. ತಮ್ಮ ಕೆಳಗಿನ ನೌಕರರನ್ನು ಎಂದೂ ನೋಯಿಸಿದೆ, ಗೋಳುಹೊಯ್ದುಕೊಳ್ಳದೆ, ಗೌರವದಿಂದಲೇ ಕಾಣುವುದು ಇವರ ವಿಶೇಷ ಗುಣವೇ ಸರಿ.
ಮೂಲತಃ ಕೃಷಿಕ ಕುಟುಂಬದಿಂದ ಬಂದ ಇವರು, ತೀರ್ಥಹಳ್ಳಿ ತಾಲೂಕಿನ ಸಾಲೂರು-ಬಾಳಗೋಡು ಗ್ರಾಮದವರು. ಕೋಣಂದೂರಿನಲ್ಲಿ ಪಿಯುವರೆಗೆ ಶಿಕ್ಷಣ ಪಡೆದು  ಪೊಲೀಸ್ ಕೆಲಸವನ್ನು ಆಯ್ಕೆ ಮಾಡಿಕೊಂಡರು. ಚನ್ನಪಟ್ಟಣದಲ್ಲಿ ತರಬೇತಿಯನ್ನು ಪಡೆದು ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯಲ್ಲಿ 1979ರಲ್ಲಿ ಕೆಲಸಕ್ಕೆ ಪಾದಾರ್ಪಣೆ ಮಾಡಿದರು. ಅನಂತರ ನ್ಯಾಮತಿ, ಚನ್ನಗಿರಿ, ಹೊನ್ನಾಳಿ, ಮಾಳೂರು, ತೀರ್ಥಹಳ್ಳಿಯಲ್ಲಿ ಸೇವೆ.  ನಿವೃತ್ತಿ ಅಂಚಿನಲ್ಲಿರುವ ಇವರು, ಯಾವತ್ತೂ ತನ್ನ ವೃತ್ತಿಗೆ ಅಪಚಾರ ಮಾಡಿದವರಲ್ಲ; ಹೆಸರು ಕೆಡಿಸಿಕೊಂಡವರಲ್ಲ.
ಕಚೇರಿಯಲ್ಲೂ ಸಹ ಇವರದು ಶಿಸ್ತು-ಸಂಯಮದ ಕೆಲಸ. ಸಾರ್ವಜನಿಕರು ಬಂದರೆ ಗೌರವ ಕೊಟ್ಟು ಅವರ ಅಹವಾಲು ಕೇಳಿ ಅಷ್ಟೇ ವಿನಯದಿಂದ ಮಾತನಾಡಿಸುತ್ತಾರೆ. ಹಾಗಾಗಿಯೇ, ಇವರಿರುವ ಸಂದರ್ಭ ನೋಡಿಯೇ ಕಚೇರಿಗೆ ಸಾರ್ವಜನಿಕರು ಹೆಚ್ಚು ಪ್ರಮಾಣದಲ್ಲಿ ಬರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮದೇ ಆದ ಮಾರ್ಗೋಪಾಯಗಳನ್ನು ಇವರು ಅರಿತಿದ್ದಾರೆ. ವಿಶೇಷವಾಗಿ, ತನಿಖಾ ಕಾರ್ಯದಲ್ಲಿ ಪರಿಣತಿ ಹೊಂದಿರುವ ಜ್ಞಾನೇಂದ್ರ, ಹಲವಾರು ಮಹತ್ವದ ತನಿಖೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವಂತೆ ಮಾಡುವ ಮೂಲಕ ಹೆಸರು ಗಳಿಸಿದ್ದಾರೆ.  ತಮ್ಮ 37 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆಯನ್ನು ಇವರು ಹೊಂದಿಲ್ಲ. ಹಾಗಾಗಿಯೇ ಇವರನ್ನು ತೀರ್ಥಹಳ್ಳಿ ಸಿಪಿಐ ಕಚೇರಿಯಲ್ಲಿ ಪ್ರಕರಣಗಳ ವಿಶೇಷ ತನಿಖೆಗಾಗಿ ನೇಮಿಸಲಾಗಿದೆ. ಇವರ ವೃತ್ತಿಪರತೆ ಮತ್ತು ಕಾರ್ಯನಿಷ್ಠೆ ಪ್ರಶ್ನಾತೀತವಾದುದು. ಇದನ್ನೆಲ್ಲ ಗಮನಿಸಿಯೇ ಜಿಲ್ಲಾ ಪೊಲೀಸ್ ವರಿಷ್ಠರು ಇವರನ್ನು ರಾಷ್ಟ್ರಪತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದರು.
 ‘ಇಲಾಖೆ ತನ್ನನ್ನು ಬೆಳೆಸಿದೆ. ಪ್ರೋತ್ಸಾಹಿಸಿದೆ. ನಿಷ್ಠೆ, ಪ್ರಾಮಾಣಿಕತೆ ನಮ್ಮಲ್ಲಿದ್ದರೆ ಎಲ್ಲರೂ ಗುರುತಿಸುತ್ತಾರೆ. ಮೊದಲು ನಮ್ಮ ಬಗ್ಗೆ ನಾವು ಗೌರವ ಬೆಳೆಸಿಕೊಳ್ಳಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎನ್ನುವ ಇವರಿಗೆ ಇದೇ ಕಾರಣಕ್ಕೇ ರಾಷ್ಟ್ರಪತಿ ಪ್ರಶಸ್ತಿ  ಬಂದಿದೆ ಎಂದರೆ ತಪ್ಪಾಗಲಾರದು. ಇವರ ಮಗ-ಮಗಳು ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.  ದರ್ಪ, ಸಿಟ್ಟು, ಅಹಂಕಾರ ಇವರ ಬಳಿ ಎಂದೂ ಸುಳಿದಿಲ್ಲ. ಸದಾ ನಗುಮೊಗದ ಸೇವೆ, ಸಂಸ್ಕಾರಯುತ ಗುಣದ ಜೊತೆ ಉತ್ತಮ ಆರೋಗ್ಯವನ್ನು ಇವರು ಹೊಂದಿ, ಇಲಾಖೆಯಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಭಾಜನರಾಗಿದ್ದಾರೆ.
ಪೊಲೀಸರೆಂದರೆ ಸಾಕು-ಒಂದು ರೀತಿ ಸಂಶಯದಿಂದಲೇ ನೋಡುವ ಈ ಕಾಲದಲ್ಲಿ ಜ್ಙಾನೇಂದ್ರ ಅವರು ನಿಜಕ್ಕೂ ಅನುಕರಣೀಯರು; ಅನುಸರಣೀಯರು.
published on Feb, 9, 2016
..................................   

ಸ್ಕೇಟಿಂಗ್‌ನ ಚಿನ್ನದ ಹುಡುಗ 
ಆತೀಶ್



ಮನುಷ್ಯನಲ್ಲಿ ನಾನು ಇನ್ನೊಬ್ಬ ಸಾಧಕನಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಇರುತ್ತದೆ. ಆದರೆ, ನಾನು ನಾನಾಗಿ ಎದ್ದು ನಿಲ್ಲಬೇಕು, ಕಾಣಿಸಿಕೊಳ್ಳಬೇಕೆಂಬ  ಛಲ ಇರುವುದು ಕೆಲವರಲ್ಲಿ ಮಾತ್ರ. ಮಹತ್ವಾಕಾಂಕ್ಷೆ ಇಲ್ಲದೆ ಯಾರೂ ಏನನ್ನೂ ಸಾಧಿಸಲಾರರು ಎಂಬ ಮಾತಿದೆ. ಮಹತ್ತಾದುದನ್ನು ಸಾಧಿಸಲು ಯಾರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕಿಲ್ಲ. ಪ್ರಬಲ ಇಚ್ಛಾಶಕ್ತಿ, ಮನೋಬಲ ಮತ್ತು ಆತ್ಮವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು.
ಚುಮುಚುಮು ಬೆಳಕಿರುವಾಗಲೇ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ (ರೋಲರ್ ಸ್ಕೇಟಿಂಗ್)  ಯುವಕನೊಬ್ಬನನ್ನು  ನೀವು ಗಮನಿಸಿರಬಹುದು. ಕಾಲಿಗೆ ಕ್ವಾಡ್ ಅಥವಾ ಇನ್‌ಲೈನ್ ಧರಿಸಿ ರಸ್ತೆಯನ್ನೇ ಸ್ಕೇಟಿಂಗ್ ರಿಂಕ್ ಮಾಡಿಕೊಂಡು ಹೆಲಿಪ್ಯಾಡ್ ವೃತ್ತದಿಂದ ತ್ಯಾವರೆಕೊಪ್ಪದ ಹುಲಿ,ಸಿಂಹಧಾಮದವರೆಗೆ  ದಿನನಿತ್ಯ ಹೋಗಿಬರುತ್ತಾನೆ. ಇಷ್ಟೇ ಏಕೆ, ಭಾರತದ ಅತ್ಯಂತ ವೇಗದ ಸ್ಕೇಟರ್ ಎಂಬ ಪ್ರಸಿದ್ಧಿಯನ್ನು ಈತ ಪಡೆದಿದ್ದಾನೆ.
ಇಲ್ಲಿನ ನ್ಯಾಶನಲ್ ಜೂನಿಯರ್ ಕಾಲೇಜಿನಲ್ಲಿ ದ್ವಿತಿಯ ಪಿಯು ಓದುತ್ತಿರುವ ಆರ್. ಆತೀಶ್ ಈ ಯುವಕ. ಮೊದಲಿನಿಂದಲೂ ಸಾಹಸಿ ಬುದ್ಧಿಯನ್ನು ಹೊಂದಿರುವ ಈತ, ಒಮ್ಮೆ ಮೈಸೂರಿಗೆ ಹೋಗಿದ್ದ ವೇಳೆ ಅಲ್ಲಿ ಸ್ಕೇಟಿಂಗ್ ಮಾಡುತ್ತಿರುವವರನ್ನು ಕಂಡಿದ್ದೇ ತಡ, ಈತನಿಗೂ ಅದನ್ನು ಅಭ್ಯಾಸ ಮಾಡಬೇಕೆಂಬ ಬಯಕೆ ಹುಟ್ಟಿತು. ತಂದೆ-ತಾಯಿಯನ್ನು ಕಾಡಿ-ಬೇಡಿ ಸ್ಕೇಟಿಂಗ್ ಖರೀದಿಸಿ ತಾನೇ ಯತ್ನ ಆರಂಭಿಸಿದ. ನಂತರ ಮೈಸೂರಿಗೆ ಮತ್ತೆ ತೆರಳಿ ಸುಮಾರು 2 ವರ್ಷಗಳ ಕಾಲ ಸ್ಕೇಟಿಂಗ್‌ನಲ್ಲಿ ಏಕಲವ್ಯ ಪ್ರಶಸ್ತಿ ಪಡೆದಿರುವ ಶ್ರೀಕಾಂತ್‌ರಾವ್ ಎನ್ನುವವರಲ್ಲಿ ತರಬೇತಿ ಪಡೆದ. ಈತನಲ್ಲಿರುವ ಅಸಾಧಾರಣ ಸಾಧನೆಯ ಶಕ್ತಿಯನ್ನು ಗಮನಿಸಿದ ರಾವ್, ಸರಿಯಾಗಿ ತಿದ್ದಿ, ತೀಡಿ ಬೆಳೆಸಿದರು. ಪರಿಣಾಮವಾಗಿ, ಈತ ಈಗ 52ನೆಯ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ (16 ವರ್ಷ ಮೇಲ್ಪಟ್ಟವರ ವಿಭಾಗ) ದಲ್ಲಿ ಚಿನ್ನವನ್ನು ಗೆದ್ದುಕೊಂಡು ಬಂದಿದ್ದಾನೆ. ಜೊತೆಗೆ ರಿಂಕ್-2 ಎ ವಿಭಾಗದಲ್ಲಿ ಬೆಳ್ಳಿಯನ್ನೂ ತನ್ನದಾಗಿಸಿಕೊಂಡಿದ್ದಾನೆ.
2014ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಪದಕ, ಬಳ್ಳಾರಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನದ ಪದಕ, ರಿಂಕ್ -2 ಎ ವಿಭಾಗದಲ್ಲೂ ಚಿನ್ನದ ಪದಕ, ಬೆಂಗಳೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾನೆ. ಆತೀಶ್ ಇಲ್ಲಿನ ಎಎನ್‌ಕೆ ರಸ್ತೆ ವಾಸಿ ರವಿ ಅವರ ಪುತ್ರ. ರವಿ ತಿಲಕ್‌ನಗರದಲ್ಲಿ ಕಾರ್ ಬಿಡಿಭಾಗಗಳ ವ್ಯಾಪಾರ ನಡೆಸುತ್ತಿದ್ದಾರೆ. ಮಗನ ಎಲ್ಲ ಕನಸನ್ನು ಈಡೇರಿಸುವಲ್ಲಿ ತಂದೆ-ತಾಯಿ ತಮ್ಮ ಸಮಯ ವ್ಯಯಿಸುತ್ತಿದ್ದಾರೆ. ತನಗಂತೂ ಆಸೆ ಇದ್ದರೂ ಸ್ಕೇಟರ್ ಆಗಲು ಸಾಧ್ಯವಾಗಲಿಲ್ಲ. ಆದರೆ ಮಗನ ಮೂಲಕವಾದರೂ ಅದು ಈಡೇರುತ್ತಿದೆ ಎಂಬ ಸಂತಸ ಅವರಲ್ಲಿದೆ.
ಆತೀಶ್ ದಿನನಿತ್ಯ ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಸಂಜೆ ಒಂದುವರೆ ಗಂಟೆ  ಸುಮಾರು 40 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾನೆ. ಜೊತೆಗೆ ಬೇಸಿಗೆ ರಜೆಯಲ್ಲಿ ನೂರಾರು ಮಕ್ಕಳಿಗೆ ವಿಶೇಷ ತರಬೇತಿಯನ್ನು ಸ್ಕೇಟಿಂಗ್ ನಲ್ಲಿ ನೀಡುತ್ತಿದ್ದಾನೆ. 2014ರಲ್ಲಿ ಆಂದ್ರದ ಕಾಕಿನಾಡಿನ ಈಶ್ವರ್ ಅವರು ಸ್ಥಾಪಿಸಿದ್ದ ವೇಗದ ಸ್ಕೇಟಿಂಗ್  ದಾಖಲೆಯನ್ನು ಈತ ಅಳಿಸಿ ಹಾಕಿದ್ದಾನೆ. ಅವರಿಗಿಂತ 18 ಮೈಕ್ರೊ ಸೆಕೆಂಡ್ ಮುಂಚೆ  ಸ್ಕೇಟಿಂಗ್ ಮಾಡಿ ದಾಖಲೆ ಮಾಡಿದ್ದಾನೆ.
ನನಗಾಗಿ ತಂದೆ-ತಾಯಿ ಸಾವಿರಾರು ರೂ. ವ್ಯಯಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸ್ಕೇಟರ್ ಆಗಬೇಕೆಂಬ ಆಸೆ ಇದೆ ಎನ್ನುತ್ತಾನೆ ಆತೀಶ್. ಈತನ ಅಣ್ಣ ವಿಶ್ವಾಸ್ ಸಹ 2013ರಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದನು. ಏನೂ ಸೌಲಭ್ಯ ಇಲ್ಲದ ಶಿವಮೊಗ್ಗದಲ್ಲಿ ರೋಲರ್ ಸ್ಕೇಟಿಂಗ್‌ಗೆ ಸ್ಥಾನ ಸಿಗುವಂತೆ ಆತೀಶ್ ಮಾಡಿದ್ದಾನೆ.  ತನ್ನಂತೆ ನೂರಾರು ಸ್ಕೇಟರ್‌ಗಳನ್ನು ಬೆಳೆಸುತ್ತಿದ್ದಾನೆ.
.........................................

Thursday 15 December 2016

ರಸಪೂರ್ಣ ಕಲೆಯ ಉಪಾಸಕ
ರಾಕೇಶ್


ಈ ಸೃಷ್ಟಿಯೇ ಆನಂದಮಯ. ಅದನ್ನು ಕಾಣುವ ಕಣ್ಣು ಎಲ್ಲರಲ್ಲೂ ಇರುವುದಿಲ್ಲ, ಅನುಭವಿಸುವ ಹೃದಯ ಬೇಕು. ಆಗ ಅದು ಸುಂದರವಾಗಿ ಕಾಣುತ್ತದೆ. ಕಲೆಯನ್ನು ಉಪಾಸನೆಯ ಮಾಧ್ಯಮವನ್ನಾಗಿ ಸ್ವೀಕರಿಸಿ, ಅದರಲ್ಲಿ ಪಾವಿತ್ರ್ಯತೆಯನ್ನು ಕಂಡಾಗ ಚೆಲುವಷ್ಟೇ ಅಲ್ಲ, ಅದು ಆತ್ಮದ ಒಳಗಿನ ಹಸಿರು ಕಾಣುತ್ತದೆ. ಅದು ರಸಪೂರ್ಣವಾಗಿದ್ದಾಗ ಬಹುಕಾಲ ಮರೆಯದೆ ಉಳಿಯುತ್ತದೆ. ಇಂತಹ ರಸಪೂರ್ಣ ವಿದ್ಯಾರ್ಥಿ ಕಲಾವಿದನೊಬ್ಬ ನಗರದಲ್ಲಿ ಈಗ ಹೆಸರು ಮಾಡುತ್ತಿದ್ದಾನೆ.
ಸದಾ ಏನಾದರೊಂದನ್ನು ಮಾಡಬೇಕೆಂಬ ಹುಮ್ಮಸ್ಸು, ತುಡಿತ, ಛಲ ಇದ್ದರೆ ಸಾಧನೆ ಸಾಧ್ಯ. ಆರಂಭಿಸಿದ ಕೆಲಸವನ್ನು ಏಕಾಗ್ರತೆಯಿಂದ ಮುನ್ನಡೆಸಿಕೊಂಡು ಹೋದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ನಗರದ ವಿದ್ಯಾರ್ಥಿ ಕೆ. ರಾಕೇಶ್  ಉತ್ತಮ ಉದಾಹರಣೆ. ಈತ ಈ ವರ್ಷ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯವರು ನಡೆಸಿದ ರಾಜ್ಯಮಟ್ಟದ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಚಿತ್ರಕಲೆಯಲ್ಲಿ ಮೊದಲ ಸ್ಥಾನಿಯಾಗಿ ಜಿಲ್ಲೆಯ ಹೆಸರನ್ನು ಮೆರೆಸಿದ್ದಾನೆ.
ರಾಕೇಶ್ ನಗರದ ಪೇಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಾನೆ. ಎರಡನೆಯ ತರಗತಿಯಿಂದಲೇ ಚಿತ್ರಕಲೆ ಆರಂಭಿಸಿ ಇಂದಿಗೂ ಅದರಲ್ಲಿ ಮುಂದುವರೆದು ರಾಜ್ಯಮಟ್ಟದಲ್ಲಿ ಸಾಧನೆ ಮುಂದುವರೆಸಿದ್ದಾನೆ. ತನ್ನ ಅಕ್ಕಪಕ್ಕದ ಮನೆಯ ಹುಡುಗರು, ಗೆಳೆಯರು ಚಿತ್ರ ಬಿಡಿಸುತ್ತಿದ್ದುದನ್ನು ಗಮನಿಸಿ ತಾನೂ ಸಹ ಚಿತ್ರಕಲೆಯನ್ನು ಏಕೆ ಕಲಿಯಬಾರದೆಂದು ನಿರ್ಧರಿಸಿ, ಪಾಲಕರ  ಒಪ್ಪಿಗೆ ಪಡೆದು ನಗರದ ರವಿವರ್ಮ ಚಿತ್ರಕಲಾ ಸಂಸ್ಥೆಯಲ್ಲಿ ಕಲಿಕೆ ಆರಂಭಿಸಿ, 10 ವರ್ಷ ಪೂರೈಸಿದ್ದಾನೆ. ಈತ ಇಲ್ಲಿಯವರೆಗೆ ಪಡೆದಿರುವ ಪ್ರಶಸ್ತಿಗಳ ಸಂಖ್ಯೆ ಅಗಣಿತ. ಮನೆ ತುಂಬಾ ಪ್ರಶಸ್ತ್ತಿಗಳೇ ತುಂಬಿವೆ.
ಈತ ಭಾಗವಹಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಖಚಿತ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾನೆ. ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಸಂದಿವೆ. ಓದಿನಲ್ಲೂ ಮುಂದಿರುವ ಈತ ಮುಂದೆ ಇಂಜಿನೀಯರಿಂಗ್ ಮಾಡುವ ಬಯಕೆ ಹೊಂದಿದ್ದು, ಅದರಲ್ಲಿ ವಾಸ್ತುಶಿಲ್ಪವನ್ನು ಆಯ್ಕೆ ಮಾಡಿಕೊಂಡು ಚಿತ್ರಕಲೆಯ ಲಾಭ ಪಡೆಯಲು ಯೋಚಿಸಿದ್ದಾನೆ.
ರಾಜೇಂದ್ರನಗರದ  ವಾಸಿ ಕೆ.ಸಿ.ರವಿಕುಮಾರ್ ಮತ್ತು ಶೋಭಾ ಅವರ ಪುತ್ರನಾಗಿರುವ ರಾಕೇಶ್  ಸಾಧನೆಯಲ್ಲಿ ಪಾಲಕರ ಪಾತ್ರ ಎಷ್ಟಿದೆಯೋ ಅಷ್ಟೇ ಆತನ ಚಿತ್ರಕಲಾ ಶಾಲೆಯ ಗುರು ಶ್ರೀಧರ್ ಕಂಬಾರ್ ಪಾತ್ರವೂ ಇದೆ. ಸದಾ ಆತನನ್ನು ತಿದ್ದಿ, ತೀಡಿ, ಸಾಧನೆಗೆ ನೀರೆರೆದಿದ್ದಾರೆ. ರಾಕೇಶ್ ಸಾಧನೆ ಬಗ್ಗೆ ಅವರು ಅಪಾರ ಹೆಮ್ಮೆಪಡುತ್ತಾರೆ.
ಚಿತ್ರಕಲೆ ಹೊರತಾಗಿ ಈತ, 2006-07ರಲ್ಲಿ ರಾಜ್ಯ ಮಟ್ಟದ ನವೋದಯ ಸಮಾಜ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಮತ್ತು ಚಿನ್ನದ ಪದಕ ಗಳಿಸಿದ್ದಾನೆ. ಚಿತ್ರಕಲೆಯಲ್ಲಿ 2011ರಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಭಾ  ಪುರಸ್ಕಾರ ಮತ್ತು ಚಿನ್ನದ ಪದಕ, ಚಿತ್ರಕಲಾ ಅಕಾಡೆಮಿಯವರು ನಡೆಸಿದ ಸ್ಪರ್ಧೆಯಲ್ಲಿ 2010 ಮತ್ತು 11ರಲ್ಲಿ ಎರಡು ಬಾರಿ ಚಿನ್ನದ ಪದಕ, ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ಸ್‌ನವರು ನಡೆಸಿದ ಸ್ಪರ್ಧೆಯಲ್ಲಿ ಚಿನ್ನ, ತುಮಕೂರಿನ ಕಲರ್ಸ್ ಗ್ರೂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಇದರೊಟ್ಟಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ಇನ್ನೂ ಹಲವಾರು ಸ್ಪರ್ಧೆಗಳಲ್ಲಿ ಮೊದಲಿಗನಾಗಿ ಮೆರೆದಿದ್ದಾನೆ. ಘನತ್ಯಾಜ್ಯ ವಿಲೇವಾರಿ, ಪರಿಸರ ದಿನಾಚರಣೆ, ಇನಶೂರೆನ್ಸ್ ವೀಕ್, ವನ್ಯ ಜೀವಿ ಸಪ್ತಾಹ, ವಿಶ್ವ ಪರ್ಯಟನ ದಿನ ನಿಮಿತ್ತ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲೂ ಈತನಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.
 ಇಲ್ಲಿಯವರೆಗೆ ಆತ ಮಾಡಿದ ಸಾಧನೆಯ ಜೊತೆ ಇನ್ನೊಂದು ಬೃಹತ್ ಗರಿ ಈಗ ಮೂಡಿದಂತಾಗಿದೆ. ಚಿತ್ರಕಲೆಯಲ್ಲಿ ಸಾಧನೆ ಮಾಡಲು ಏಕಾಗ್ರತೆ ಮತ್ತು ತಾಳ್ಮೆ ಅವಶ್ಯ. ನಮ್ಮಲ್ಲಿರುವ ಪ್ರತಿಭೆ ಹೊರಬರಲು ಚಿತ್ರಕಲೆ ಪ್ರಮುಖ ವೇದಿಕೆಯಾಗಿದೆ. ಚಿತ್ರಕಲೆಯಿಂದಲೇ ತನಗೆ ಅಪಾರ ಗೌರವ ಲಭಿಸಿದೆ. ಇನ್ನು ಮುಂದೆಯೂ ಇದರಲ್ಲೇ ಸಾಧನೆ ಮಾಡುವ ವಿಚಾರವಿದೆ ಎನ್ನುತ್ತಾನೆ ರಾಕೇಶ್.

published on 23, 1, 2016

Wednesday 14 December 2016

ಕರಾಟೆವೀರ, ಪದಕಗಳ ಸರದಾರ
ಚಂದ್ರಕಾಂತ್ ಭಟ್



"ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದು ಒಂದು ಸುಭಾಷಿತ. ಕರಾಟೆ ಕಲಿಗಳ ಮಟ್ಟಿಗಂತೂ ಇದು ಹೆಚ್ಚು ಒಪ್ಪುವಂತಿದೆ. ಈಗಲೂ ನಮ್ಮಲ್ಲಿ ಅನೇಕರ ಮನಸ್ಸಿನಲ್ಲಿ ಕರಾಟೆಯೆಂದರೆ ಹೊಡೆದಾಟ-ಬಡಿದಾಟಗಳ ಕಲೆ ಎಂಬ ತಪ್ಪುಗ್ರಹಿಕೆಯೊಂದಿದೆ; ಶಕ್ತಿಪ್ರದರ್ಶನದ ಕಲೆ ಎನ್ನುವ ಭಾವನೆಯೂ ಇದೆ. ನಿಜವಾಗಿ ನೋಡಿದರೆ ಇದು ಆತ್ಮರಕ್ಷಣೆಯ ಸಾಹಸಕಲೆ; ದೈಹಿಕ ಕಸರತ್ತಿನ ಕಲೆ; ಮಾನಸಿಕ ದೃಢತೆಯನ್ನು ತಂದೀಯುವ ಕಲೆ; ಆರೋಗ್ಯವರ್ಧನೆಯ ಕಲೆ ಎಂದರೆ ತಪ್ಪಾಗಲಾರದು.
ಸಾಹಸ ಕಲೆಗಳು ಇತ್ತೀಚಿನ ವರ್ಷಗಳಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಕಾರಣ ಅವುಗಳನ್ನು ಕಲಿಸುವವರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯರಿರುವುದೇ ಇದಕ್ಕೆ ಕಾರಣ.  ಅಂತಹ ಸಾಹಸ ಕಲೆಗಳಲ್ಲಿ ಕರಾಟೆಯೂ ಒಂದು. ಶಿವಮೊಗ್ಗ ನಗರದಲ್ಲಿ ಕಳೆದ 24 ವರ್ಷಗಳಿಂದ  ಕರಾಟೆಯನ್ನು ಕಲಿಯುತ್ತ, ಕಳೆದ 17 ವರ್ಷಗಳಿಂದ ಕರಾಟೆ ತರಬೇತಿ ತರಗತಿಗಳನ್ನು ನಡೆಸುತ್ತಿರುವ ಚಂದ್ರಕಾಂತ್ ಭಟ್ ಬಹುತೇಕ ನಗರದ ಎಲ್ಲಜನತೆಗೂ ಚಿರಪರಿಚಿತರು. ಕಳೆದ ವಾರ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ ಅವರು ಚಿನ್ನದ ಪದಕ ಗಳಿಸಿ ಬರುವಂತೆ ಮಾಡಿದ್ದಾರೆ.
ಇಂಟರ್‌ನ್ಯಾಶನಲ್ ಶೊಟೊಕಾಯ್ ಕರಾಟೆ-ಡೊ ಫೆಡರೇಶನ್‌ನ ಶಿವಮೊಗ್ಗ ಜಿಲ್ಲಾ ಘಟಕದ ಮುಖ್ಯಸ್ಥರಾಗಿರುವ ಭಟ್,  ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಸ್ವತಃ ಭಾಗವಹಿಸಿ ಸಾಕಷ್ಟು ಪದಕಗಳ ಸರಮಾಲೆಯನ್ನೇ ಧರಿಸಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಟ್ ಶಿವಮೊಗ್ಗಕ್ಕೆ ಬಂದು ನೆಲೆನಿಂತವರು. ಇಲ್ಲಿಯೇ ಓದಿ ಎನ್‌ಇಎಸ್ ಸಂಸ್ಥೆಯ ಲಾ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದಾರೆ. ಅನಂತರ, ಮುಕ್ತ ವಿವಿಯಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಆದರೆ ವಕೀಲಿ ವೃತ್ತಿಗೆ ಮುಂದಾಗದೆ, ಕರಾಟೆಯಲ್ಲೇ ತಮ್ಮ ಜೀವನ ಮುಂದುವರೆಸಿದ್ದಾರೆ.
ಭಟ್ ಅವರು ಕರಾಟೆ ಕಲಿತದ್ದು ನಗರದ ಸತೀಶ್ ಎನ್ನುವವರಲ್ಲಿ. ನಂತರ ಪ್ರವೀಣ್ ರಾಂಕಾ, ಸುಜಯ್, ಪ್ರಸಾದ್, ಸುನಿಲ್‌ಕುಮಾರ್ ಅವರಲ್ಲೂ ತರಬೇತಿಯನ್ನು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪಡೆದಿದ್ದಾರೆ. ಜಪಾನ್‌ಗೆ ತೆರಳಿ ಅಂತಾರಾಷ್ಟ್ರೀಯ ಖ್ಯಾತರಲ್ಲೂ ವಿಶೇಷ ತರಬೇತಿ ಪಡೆದ ನಂತರ ನಗರದಲ್ಲಿ ಹಲವೆಡೆ ತರಬೇತಿ ನೀಡಲು ಪ್ರಾರಂಭಿಸಿದ್ದಾರೆ. ನಗರದ ವಿಪ್ರ ಟ್ರಸ್ಟ್ ಮತ್ತು ಜೆಸಿ ನಗರದ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ  ತರಗತಿಗಳನ್ನು ನಡೆಸುತ್ತಿದ್ದು, ಇಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕರಾಟೆ ಕಲಿಯುತ್ತಿದ್ದಾರೆ. ಆನವಟ್ಟಿಯ ಎವೆರಾನ್ ಸ್ಕೂಲ್‌ನಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ 400 ವಿದ್ಯಾರ್ಥಿಗಳಿಗೆ  ತಲಾ ಒಂದೂವರೆ ಗಂಟೆ  ಕರಾಟೆ ಕಲಿಸುತ್ತಿದ್ದಾರೆ. ಇದರೊಟ್ಟಿಗೆ ಸರ್ವ ಶಿಕ್ಷಾ ಅಭಿಯಾನದಡಿ ಜಿಲ್ಲೆಯ ಹಲವು ಹೈಸ್ಕೂಲ್‌ಗಳಲ್ಲಿ ವರ್ಷದಲ್ಲಿ 3 ತಿಂಗಳು ಕರಾಟೆ ಕಲಿಸುತ್ತಾರೆ.
 ಕರಾಟೆಯಿಂದ ಏಕಾಗ್ರತೆ, ಶಾಂತತೆ ಪಡೆಯಲು ಅನುಕೂಲ. ಶಿವಮೊಗ್ಗದಲ್ಲಿ ಇತ್ತೀಚೆಗೆ ಕರಾಟೆಗೆ ಅಪಾರ ಬೆಂಬಲ ಸಿಗುತ್ತಿದೆ. ಎಲ್ಲ ವಯಸ್ಸಿವರು ಇದನ್ನು ಕಲಿಯಲು ಮುಂದೆ ಬರುತ್ತಿದ್ದಾರೆ. ಒಟ್ಟಿನಲ್ಲಿ ಕಲಿಕೆಗೆ ಆಸಕ್ತಿ ಮುಖ್ಯ ಎನ್ನುತ್ತಾರೆ ಅವರು. 2004ರಲ್ಲಿ ಜಪಾನ್, 2005ರಲ್ಲಿ ದ. ಕೊರಿಯಾ, ಮೆಲ್ಬೋರ್ನ್, ಥೈಲ್ಯಾಂಡ್, ಸಿಂಗಪುರ್ ಮೊದಲಾದೆಡೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿರುವ ಇವರು, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗೆದ್ದ ಪದಕಗಳಿಗೆ ಲೆಕ್ಕವೇ ಇಲ್ಲ. ಇವರಿಂದ ತರಬೇತಿ ಪಡೆದ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪದಕ ಗೆದ್ದಿದ್ದಾರೆ, ಗೆಲ್ಲುತ್ತಿದ್ದಾರೆ.
2007ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಕ್ರೀಡಾ ವಿಭಾಗದಿಂದ ಭಟ್ ಅವರನ್ನು ವಿಶೇಷ ಸಾಧನೆಗಾಗಿ ಗೌರವಿಸಿದ್ದರು. ಕರಾಟೆಯಲ್ಲಿ ಅಪಾರ ಸಾಧನೆ ಮಾಡಿದ ಇವರನ್ನು ರಾಜ್ಯ ಸರಕಾರ ಅಥವಾ ಇನ್ನಿತರ ಸಂಘ-ಸಂಸ್ಥೆಗಳು ಇನ್ನಾದರೂ ಗುರುತಿಸಿ ಗೌರವಿಸಲಿ ಎನ್ನುವುದು ನಮ್ಮೆಲ್ಲರ ಆಶಯ.

Published on Jan 9, 2016
.....................................
.........................................
ಹಿಂದೂಸ್ಥಾನಿ ಸಂಗೀತದ ಧ್ರುವತಾರೆ
ನೌಷದ್ ಹರ್ಲಾಪುರ


’ತಾಯಿಯಂತೆ ಮಗಳು; ನೂಲಿನಂತೆ ಸೀರೆ’ ಎನ್ನುವುದು ಜನಜನಿತವಾದ ಮಾತು. ಆದರೆ ಇಲ್ಲಿ ಹಾಗಲ್ಲ. ’ತಂದೆಯಂತೆ ಮಗ’. ಏಕೆಂದರೆ ತಂದೆಯ ಕಲೆಯನ್ನು ಇನ್ನಷ್ಟು ಬೆಲೆಗೊಳ್ಳುವಂತೆ ಮಾಡಿದ ಕೀರ್ತಿ ಮಗನಿಗೆ ಸಲ್ಲಬೇಕು. ಅಪ್ಪನ ತೊಡೆಯೇರಿದ್ದೇ ತಪ್ಪಾಗಿ, ಐದರ ಹರೆಯದಲ್ಲೇ ಕಾಡಿಗೆ ತೆರಳಿ, ಭಗವಂತನನ್ನು ಒಲಿಸಿಕೊಂಡ ಧ್ರುವನ ಕಥೆ ನಮಗೆಲ್ಲ ಗೊತ್ತು.  ತನ್ನ ಐದರ ಹರೆಯದಲ್ಲೇ ಅಪ್ಪನ ತೊಡೆಯೇರಿದ್ದೇ ವರವಾಗಿ ಸಂಗೀತಾಭ್ಯಾಸಕ್ಕೆ ತೊಡಗಿದ ಈತನಿಗೆ ಸಂಗೀತ ಸರಸ್ವತಿ ಒಲಿದೇ ಬಿಟ್ಟಳು. ಇವನ ಕಂಠಸಿರಿಯಲ್ಲಿ ಸಂಗೀತ ಶಾರದೆ ಲೀಲಾಜಾಲವಾಗಿ ನರ್ತಿಸುತ್ತಾಳೆ. ಸಂಗೀತವೇ ಇವನ ಉಸಿರು; ಇದರ ಫಲಶ್ರುತಿಯೇ ’ವಾಯ್ಸ್ ಆಫ್ ಇಂಡಿಯಾ ’ ಪ್ರಶಸ್ತಿಯ ಗರಿ!
ಸಂಗೀತಕ್ಕೆ ಮಾರು ಹೋಗದವರಾರೂ ಇಲ್ಲ. ಎಂತಹ ಮನಸ್ಸನ್ನಾದರೂ ಅದು ಸೆಳೆಯುತ್ತದೆ, ರಂಜಿಸುತ್ತದೆ. ಕಲೆಯ ಗುಣವೇ ಅಂತಹುದು. ಕಲೆ ಒಂದು ಆನಂದದ ಅನುಭೂತಿಯನ್ನು ತಂದೀಯುತ್ತದೆ. ಆನಂದದಲ್ಲಿ ಹುಟ್ಟಿ, ಚಲಿಸಿ, ಅದರಲ್ಲೇ ಲೀನವಾಗಬೇಕೆಂಬ ಆತ್ಯಂತಿಕವಾದ ಹಂಬಲಕ್ಕ್ಕೂ ಕಾರಣವಾಗುತ್ತದೆ. ಅಂತಹ ಒಂದು ಆನಂದವನ್ನು  ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಮಗೆ ನೀಡುತ್ತದೆ.
ನೌಷದ್  ಖ್ಯಾತ ಹಿಂದುಸ್ಥಾನಿ ಗಾಯಕ ಹುಮಾಯೂನ್ ಹರ್ಲಾಪುರ ಅವರ ಹಿರಿಯ ಮಗ. ತನ್ನ ಏಳರ ಹರೆಯದಲ್ಲಿ ಮೊದಲ ಪ್ರದರ್ಶನವನ್ನು ನೀಡಿದ ಕೀರ್ತಿಗೆ ಭಾಜನನಾಗಿದ್ದಾನೆ. ಈಗ 23ರ ಹರೆಯದ ಈತ, ಮುಂಬೈ, ಬೆಂಗಳೂರು, ಭೋಪಾಲ್, ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸ್ವತಂತ್ರವಾಗಿ ಪ್ರದರ್ಶನ ನೀಡಿದ್ದಾನೆ. ತಂದೆಯ ಜೊತೆಗೂ ಸಾಕಷ್ಟು ಪ್ರದರ್ಶನ ನೀಡಿ ಜನರನ್ನು ರಂಜಿಸಿದ್ದಾನೆ. ಈತನಿಗೆ ತನ್ನ ತಂದೆಯೇ ಗುರು.  ನೌಷದ್ ಈಗ ಹಿಂದೂಸ್ಥಾನಿ ಸಂಗೀತದ ಮಾಂತ್ರಿಕ ಧಾರವಾಡದ ಪಂಡಿತ್ ಸೋಮನಾಥ್ ಮರಡೂರು ಅವರಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾನೆ.
ನೌಷದ್ ಪ್ರಾಥಮಿಕ ವಿದ್ಯಾಭ್ಯಾಸವನ್ನು  ನಗರದ ಗಾಯತ್ರಿ ವಿದ್ಯಾಲಯದಲ್ಲಿ, ಹೈಸ್ಕ್ಕೂಲನ್ನು ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ, ಪಿಯುವನ್ನು ಡಿವಿಎಸ್‌ನಲ್ಲಿ ಓದಿ, ನಂತರ ಗದುಗಿನ ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯಕ್ಕೆ ಸೇರ್ಪಡೆಗೊಂಡು ಸಂಗೀತದಲ್ಲೇ ಪದವಿ ಪೂರೈಸಿದ್ದಾನೆ. ಸದ್ಯ ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯದಲ್ಲಿ ಸಂಗೀತ ಎಂ.ಎ. ಓದುತ್ತಿದ್ದಾನೆ. ಅದರ ಮಧ್ಯೆ ತಂದೆ ಜೊತೆ ಸೇರಿ ಕೆಲವೊಮ್ಮೆ ಸ್ವತಂತ್ರವಾಗಿ ಕಾರ್ಯಕ್ರಮ ನೀಡುವುದನ್ನು ಮುಂದುವರೆಸಿದ್ದಾನೆ. ಈ ತರಬೇತಿಯೇ ಆತನನ್ನು ಸಂಗೀತದ ಆಳಕ್ಕೆ ಕೊಂಡೊಯ್ದಿದೆ.
2013-14, 14-15 ಮತ್ತು 15-16ನೆಯ ಸಾಲಿಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಪಡೆಯುತ್ತಿರುವ ನೌಷದ್‌ನದ್ದು ವಯಸ್ಸಿಗೆ ಮೀರಿದ ಹಾಡುಗಾರಿಕೆ. ಲಯ, ಸ್ವರ ಮತ್ತು ತಾಳದೊಂದಿಗೆ ರಾಗಬದ್ಧವಾಗಿ ಹಾಡಲು ಕುಳಿತನೆಂದರೆ ಎಂತಹವರೂ ಮಾರುಹೋಗಬೇಕು.. ತಂದೆಗೆ ಹಿನ್ನೆಲೆಯಾಗಿಯೂ ಹಾಡುತ್ತಿದ್ದಾನೆ. ಕೇವಲ ಹಿಂದುಸ್ಥಾನಿ ಗಾಯನವೊಂದೇ ಅಲ್ಲ, ವಚನ, ಭಕ್ತಿಗೀತೆ, ಭಾವಗೀತೆಯನ್ನೂ ರಾಗಬದ್ಧವಾಗಿ ಹಾಡುವುದರಲ್ಲಿ ಈತ ಎತ್ತಿದಕೈ. ಕೇಂದ್ರದ ಸಂಸ್ಕೃತಿ ಇಲಾಖೆಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಈತ, 2002ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಕಲಾಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಮತ್ತು ವಿದ್ಯಾರ್ಥಿದೆಸೆಯಲ್ಲಿರುವಾಗಲೇ ಅಂದರೆ 2008ರಲ್ಲಿ ಪ್ರತಿಭಾ ಕಾರಂಜಿಯಲ್ಲೂ ರಾಜ್ಯಕ್ಕೆ  ಹಿಂದೂಸ್ಥಾನಿ ಗಾಯನ ಮತ್ತು ಭಾವಗೀತೆಯಲ್ಲಿ ಮೊದಲ ಸ್ಥಾನ  ಗಳಿಸಿದ್ದಾನೆ. ಕಳೆದ ತಿಂಗಳು ಲಕ್ನೋದಲ್ಲಿ ನಡೆದ ’ಕ್ಲಾಸಿಕಲ್ ವಾಯ್ಸ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದು, ಅಲ್ಲಿನ  ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ ಸ್ವೀಕರಿಸಿದ್ದಾನೆ. ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗುತ್ತಿದ್ದಾನೆ.
ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಸಂಗೀತದಲ್ಲೇ ಪಿಎಚ್‌ಡಿ ಮಾಡುವ ಹಿರಿದಾಸೆ ಇವನದು. ತಂದೆಯ ಪ್ರೋತ್ಸಾಹದ ನೆರಳಿನಲ್ಲಿ ಮತ್ತು ಮರಡೂರು ಅವರ ಅಪಾರ ವಿದ್ವತ್ತಿನ ನೆರವಿನಿಂದ ಬೆಳೆಯುತ್ತಿರುವ ಈ ಪ್ರತಿಭೆ ನಾಡಿನೆಲ್ಲೆಡೆ ತನ್ನ ಸಂಗೀತದ ಕಂಪನ್ನು ಪಸರಿಸಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

published on Jan 2, 2016
...........................................