Saturday 17 December 2016

ಭಾವನಾ ಡಿ. ರಾವ್ 


ನವಜೀವ ನವಭಾವ ನವರಸದ ಸತ್ವದಲಿ
ನಮ್ಮೆಲ್ಲ ಕಲೆಗಳೂ ತುಂಬಿ ನಿಲಬೇಕು
ಎಂಬ ಕವಿವಾಣಿಯಂತೆ ಕಲೆಯಲ್ಲಿ ಇರುವುದೇ ಸೌಂದರ್ಯ. ಇದು ಎಲ್ಲರನ್ನೂ ಸೆಳೆಯುವಂತಹುದು. ಕಲೆಯಲ್ಲಿ ಕೇವಲ ಬಾಹ್ಯ ಚೆಲುವಷ್ಟೇ ಅಲ್ಲ, ಆತ್ಮದ ಒಳ ಹಸಿರೂ ಸಹ ಇದೆ. ಅದನ್ನೇ ರಸ ಎನ್ನುತ್ತಾರೆ. ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ  ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ. ಇಂತಹ ಕಲೆಗಳಲ್ಲಿ ಭರತನಾಟ್ಯಕ್ಕೆ  ಮೊದಲ ಸ್ಥಾನ. ಶಿವಮೊಗ್ಗದಲ್ಲಿ ಭರತನಾಟ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ  ಯುವಪೀಳಿಗೆ ಇದನ್ನು ಅಪಾರವಾಗಿ ಗೌರವಿಸುತ್ತಿದೆ, ಬೆಳೆಸುತ್ತಿದೆ. ಈ ಕಲೆಯ ಮೂಲಕ ಯುವಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಹೊಮ್ಮುತ್ತಿದ್ದಾರೆ. ಅಂತಹವರಲ್ಲಿ ಭಾವನಾ ಡಿ. ರಾವ್ ಒಬ್ಬರು.
ಭಾವನಾ ನಟನಂ ನೃತ್ಯ ಕೇಂದ್ರದ ಕೇಶವಕುಮಾರ್ ಪಿಳ್ಳೈ ಅವರ ಶಿಷ್ಯೆ. ವಿದ್ವತ್ ಮುಗಿಸಿ ಮೊನ್ನೆಯಷ್ಟೇ ರಂಗಪ್ರವೇಶ ಮಾಡಿದ್ದಾರೆ. ನಟನಂನಲ್ಲಿ ಹಲವು ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ. ತನ್ನ 8ನೆಯ ವಯಸ್ಸಿನಿಂದ ಕೇಶವಕುಮಾರ್ ಬಳಿ ಭರತನಾಟ್ಯ ಅಭ್ಯಾಸ ಮಾಡಿ ಜೂನಿಯರ್, ಸೀನಿಯರ್ ವಿದ್ವತ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಡಿವಿಎಸ್‌ನಲ್ಲಿ ಬಿಸಿಎ ಮುಗಿಸಿ ಜೆಎನ್‌ನ್‌ಸಿಇಯಲ್ಲಿ ಎಂಸಿ ಪದವಿ ಪಡೆದು ಕುವೆಂಪು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಮೈಸೂರಿನ ಅಲ್ಲಮಪ್ರಭು ವಿವಿಯಲ್ಲಿ ಎಂ. ಡಾನ್ಸ್ ಪದವಿಯನ್ನು ಪಡೆದಿದ್ದಾರೆ. ಇದರೊಟ್ಟಿಗೆ ಕರ್ನಾಟಕ ಸಂಗೀತ ಶಿಕ್ಷಣವನ್ನೂ ವಿದುಷಿ ಮಂಜುಳಾ ಅವರಲ್ಲಿ ಅಭ್ಯಸಿಸಿ, ಪ್ರಸ್ತುತ ಸೀನಿಯರ್ ಸಂಗೀತ ಶಿಕ್ಷಣವನ್ನು ವಿದುಷಿ ಪೂರ್ಣಿಮಾ ಅವರಲ್ಲಿ ಕಲಿಯುತ್ತಿದ್ದಾರೆ.
ಕಾಲೇಜು ದಿನದಲ್ಲೇ ಭರತನಾಟ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿರುವ ಭಾವನಾ, ಕುವೆಂಪು ವಿವಿಯ ಸಹ್ಯದ್ರಿ ಉತ್ಸವದಲ್ಲಿ ಸತತ ಮೂರು ವರ್ಷ ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಕರ್ನಾಟಕ ಪರಿಕ್ಷಾ ಮಂಡಳಿಯವರು ನಡೆಸುವ ಭರತನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ಸಹಿತ ಇತರೇ ರಾಜ್ಯಗಳಲ್ಲಿ ನೃತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಲ್ಲದೆ, ಸ್ವತಃ ಕಾರ್ಯಾಗಾರವನ್ನೂ ನಡೆಸಿಕೊಟ್ಟಿದ್ದಾರೆ. ಪಕ್ಕದ ಮನೆಯ ಗೆಳತಿ ನೃತ್ಯ ಕಲಿಯುವುದನ್ನು ಗಮನಿಸಿ ಪಾಲಕರಲ್ಲಿ ಹಠ ಮಾಡಿ ಕಲಿಕೆಗೆ ಹೆಜ್ಜೆ ಇಟ್ಟ ಭಾವನಾ, ಈಗ ಶಿವಮೊಗ್ಗಕ್ಕೆ ಹೆಸರು ತರುವ ಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ.
ಶಿವಮೊಗ್ಗದ ಸಹ್ಯಾದ್ರಿ ಉತ್ಸವ, ಕೊಡಚಾದ್ರಿ ಉತ್ಸವ, ದಸರಾ, 73ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಇಕ್ಕೇರಿ ಉತ್ಸವ, ಇತರೆ ಜಿಲ್ಲೆಗಳ ಹಾನಗಲ್ ಉತ್ಸವ, ಬಾಗಲಕೋಟೆ ಉತ್ಸವ, ದಾಸ ಸಾಹಿತ್ಯೋತ್ಸವ, ಕರ್ನಾಟಕ ಕಲಾ ವೈಭವ, ವಿಪ್ರ ಸಮಾವೇಶಗಳಲ್ಲಿ, ಕನ್ನಡ ವಾಹಿನಿಯೊಂದರ ಹೆಜ್ಜೆಗೊಂದು ಹೆಜ್ಜೆ ಕಾರ್ಯಕ್ರಮದಲ್ಲಿ, ಶಂಕರ ಮತ್ತು ಚಂದನ ವಾಹಿನಿಯಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಹೊರತಾಗಿ ದೆಹಲಿ, ಗೋವಾ, ಬೆಂಗಳೂರು, ಮೈಸೂರು  ಸಹಿತ ಕರ್ನಾಟಕದೆಲ್ಲೆಡೆ ಕಲೆ ಪ್ರದರ್ಶಿಸಿದ್ದಾರೆ. ತನ್ನೆಲ್ಲ ಸಾಧನೆಗಳಿಗೆ ತಂದೆ ದತ್ತರಾಜ್ ಮತ್ತು ತಾಯಿ ಕುಸುಮಾ, ಗುರು ವಿದ್ವಾನ್ ಕೇಶವಕುಮಾರ್ ಪಿಳ್ಳೈ ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಸದಾ ನೆನೆಯುವ ಭಾವನಾ. ಭರತನಾಟ್ಯ ವಿಷಯದಲ್ಲೇ ಪಿಎಚ್‌ಡಿ ಮಾಡಲು ತಯಾರಿ ನಡೆಸಿದ್ದಾರೆ. ಜೊತೆಗೆ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುವಂತಹ ಸಾಧನೆ ಮಾಡುವ ಇಚ್ಛೆಯನ್ನು ಅವರು ಹೊಂದಿದ್ದಾರೆ.
ಭಾವನಾ ನಡೆ-ನುಡಿಯಲ್ಲಿ ವಿನಯವಂತೆ. ಕಲಿಕಾ ಶೃದ್ಧೆ ಉಳ್ಳವಳು. ಆರಂಭದಿಂದಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾಳೆ. ಸತತ ಆಸಕ್ತಿ ಹೊಂದಿರುವುದರಿಂದ ಈಗ ವಿದ್ವತ್ ಪೂರೈಸಿ ರಂಗಪ್ರವೇಶ ಮಾಡಿದ್ದಾಳೆ. ನಟನಂನಲ್ಲಿ ನೂರಾರು ಮಕ್ಕಳಿಗೆ ಶಿಕ್ಷಕಿಯಾಗಿದ್ದಾಳೆ. ಭರತನಾಟ್ಯದಲ್ಲಿ ಇಷ್ಟೊಂದು ಸಾಧನೆ ಮಾಡುವ ಮೂಲಕ ತಮಗೂ, ತಮ್ಮ ಸಂಸ್ಥೆಗೂ ಕೀರ್ತಿ ತಂದಿದ್ದಾಳೆ ಎನ್ನುತ್ತಾರೆ ನಟನಂ ಕೇಂದ್ರದ ಗುರು ಕೇಶವಕುಮಾರ್ ಅವರು.
Published on Feb 20. 2016
.........................................

No comments:

Post a Comment