Thursday 25 January 2018


ಚಿನ್ನದ ಹುಡುಗಿ
ಎಸ್. ರಜಿನಿ


 ಮನುಷ್ಯ ಸತತ ಪ್ರಯತ್ನ ಮತ್ತು ಹೋರಾಟ ಮಾಡಿದರೆ ಮಾತ್ರ ಆತನಲ್ಲಿ ಸಾಮರ್ಥ್ಯ ಹೆಚ್ಚಳ ಮತ್ತು ಬೆಳವಣಿಗೆ ಸಾಧ್ಯ ಎನ್ನುವುದು ನೆಪೋಲಿಯನ್‌ನ ಮಾತು. ನಾವು ಏನನ್ನಾದರೂ ಸಾಧಿಸಬೇಕೆಂದರೆ ಅದಕ್ಕೆ ಮೊದಲು ಮನಸ್ಸನ್ನು ಸಜ್ಜುಗೊಳಿಸಬೇಕು. ಆಗ ದೇಹ ತನ್ನಿಂತಾನೆ ಸಾಧನೆಗೆ ಮುಂದಾಗುತ್ತದೆ, ನಮ್ಮಿಂದ ಸಾಧನೆಯೂ ಸಾಧ್ಯವಾಗುತ್ತದೆ.
ನಗರದ ವಿದ್ಯಾರ್ಥಿನಿ ಎಸ್. ರಜಿನಿ ಪವರ್ ಲಿಫ್ಟಿಂಗ್‌ನಲ್ಲಿ ಏಶಿಯನ್ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನದ ಪದಕ ಗಳಿಸಿದ್ದಾರೆ. ಜೊತೆಗೆ ಇನ್ನೂ ಹತ್ತಾರು ಟೂರ್ನಿಗಳಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಮೂಲಕ  ಜಿಲ್ಲೆಯಲ್ಲಿ ಯಾವ ಮಹಿಳೆಯೂ ಮಾಡದ ಸಾಧನೆ ಮಾಡಿದ್ದಾರೆ. ನೋಡಲು ದೈಹಿಕವಾಗಿ ಅಷ್ಟೇನೂ ಸಬಲವಿಲ್ಲದಂತೆ ಕಂಡುಬಂದರೂ ಪವರ್ ಲಿಫ್ಟಿಂಗ್‌ನಲ್ಲಿ ಮಾತ್ರ ತನ್ನ ಶಕ್ತಿ ಏನೆನ್ನುವುದನ್ನು ತೋರಿಸಿ ಬೆಸ್ಟ್ ಲಿಫ್ಟರ್ ಆಫ್ ಏಶ್ಯಾ ಎಂಬ ಬಿರುದಿಗೆ ಭಾಜನಳಾಗಿದ್ದಾರೆ.   
ರಜಿನಿ ಶಂಕರಘಟ್ಟದವರು. ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಬಿಕಾಂ ಮುಗಿಸಿ, ಎಲ್‌ಎಲ್‌ಬಿ ಓದಲು ಸಿದ್ಧತೆ ನಡೆಸಿದ್ದಾರೆ. ಬಾಲ್ಯದಿಂದಲೂ ಅಥ್ಲೆಟಿಕ್ಸ್‌ನಲ್ಲಿ  ಮುಂದಿದ್ದ ಇವರಿಗೆ ಉತ್ತಮ ದೈಹಿಕ ಸಾಮರ್ಥ್ಯ ಇದ್ದುದದರಿಂದಲೋ ಏನೋ,  ಪವರ್ ಲಿಫ್ಟಿಂಗ್‌ನತ್ತ ಆಸಕ್ತಿ ಹರಿಯಿತು. ಇದರಲ್ಲೇಕೆ ಹೆಜ್ಜೆ ಗುರುತು ಮೂಡಿಸಬಾರದೆನ್ನುವ ಆಲೋಚನೆ ಮೂಡಿದ್ದರಿಂದ  ಆ ಕಡೆ ಗಮನ ಹರಿಸಿದಾಗ ಇದಕ್ಕೆ ಅನುವು ಮಾಡಿಕೊಟ್ಟಿದ್ದು ನ್ಯಾಶನಲ್ ಲಾ ಕಾಲೇಜಿನ ಜಿಮ್. ಮೂರು ವರ್ಷದಿಂದ ಅಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ. 
ಅಲ್ಲಿನ ದೈಹಿಕ ನಿರ್ದೇಶಕ ಕಾಂತರಾಜ್ ಅವರಲ್ಲಿ ಆರಂಭದಲ್ಲಿ ತರಬೇತಿ ಪಡೆದು, ಉನ್ನತ ತರಬೇತಿಯ ಅವಶ್ಯಕತೆ ಇದ್ದುದರಿಂದ ಕೋಚ್ ಆಗಿ ಆರ್. ಹರ್ಷ ಅವರನ್ನು ನೇಮಿಸಿಕೊಂಡು ಪ್ರತಿನಿತ್ಯ  4 ಗಂಟೆ ಸತತ ಬೆವರಿಳಿಸುವ ಮೂಲಕ ಮುಂದಿನ ಚಾಂಪಿಯನ್‌ಶಿಪ್‌ಗಳಿಗೆ ತಯಾರಾಗುತ್ತಿದ್ದಾರೆ.
 2015ರಲ್ಲಿ ಕುಂದಾಪುರದಲ್ಲಿ ನಡೆದ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಮೊದಲ ಬಾರಿ ಪ್ರವೇಶಿಸಿ ಬೆಳ್ಳಿ ಪದಕ ಪಡೆದಿದ್ದೇ ಸಾಧನೆಯ ಹಾದಿಯ ಬಾಗಿಲನ್ನು ತೆರೆಯಿತು. ಆನಂತರ ಹಿಂದಿರುಗಿ ನೋಡಲೇ ಇಲ್ಲ. ಪ್ರತಿ ಚಾಂಪಿಯನ್‌ಶಿಪ್‌ನಲ್ಲೂ ಒಂದಲ್ಲ, ಒಂದು ಪದಕ ಇವರ ಪಾಲಾಗುತ್ತಲೇ ಬಂದಿತು. 2016 ಮತ್ತು 17ರಲ್ಲಿ ರಲ್ಲಿ ಸ್ಟ್ರಾಂಗ್ ವುಮನ್ ಅಫ್ ಕರ್ನಾಟಕ ಎಂಬ ಖ್ಯಾತಿ ಪಡೆದರು. ಕಳೆದ ವಾರ ಕೇರಳದಲ್ಲಿ ಜರುಗಿದ ಏಶ್ಯನ್ ಪವರ್ ಲಿಫ್ಟಿಂಗ್‌ನಲ್ಲಿ 4 ಚಿನ್ನದ ಪದಕದ ಜೊತೆಗ ಬೆಸ್ಟ್ ಲಿಪ್ಟರ್ ಎಂಬ ಬಿರುದನ್ನು ಮುಡಿದಿದ್ದಾರೆ.  ಜನವರಿಯಲ್ಲಿ ಕೊಯಮತ್ತೂರಿನಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್ ನಡೆಯಲಿದ್ದು ಇದರಲ್ಲಿ  ಪಾಲ್ಗೊಳ್ಳುವ ಸಂಬಂಧ ತರಬೇತಿ ಪಡೆಯುತ್ತಿದ್ದಾರೆ.
 ಈವರೆಗೆ ಮಂಗಳೂರು, ಜೆಮ್‌ಶೆಡ್‌ಪುರ, ಕೊಯಮತ್ತೂರು, ಪಂಜಾಬ್, ಜಮ್ಮು- ಕಾಶ್ಮೀರ, ಕೇರಳ ಸೇರಿದಂತೆ  ವಿವಿಧೆಡೆ 15 ಟೂರ್ನಿಗಳಲ್ಲಿ ಪಾಲ್ಗೊಂಡು 9 ಚಿನ್ನ ಮತ್ತು 5 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ಬಿರುದುಗಳೂ ಮುಡಿಗೇರಿವೆ.
ನಿಯಮಿತ ಆಹಾರ, ಉತ್ತಮ ಆರೋಗ್ಯ, ಸ್ಥಿರ ಮನಸ್ಸು ಕಾಪಾಡಿಕೊಳ್ಳುವುದರ ಮೂಲಕ ಇಲ್ಲಿಯವರೆಗೆ ಸಾಧನೆಯ  ಮೆಟ್ಟಿಲನ್ನೇರುತ್ತಿರುವ ರಂಜಿನಿ, ದಿನನಿತ್ಯ ಕಠಿಣ ತರಬೇತಿಯಲ್ಲಿದ್ದಾರೆ. ಇಷ್ಟೆಲ್ಲಾ ಸಾಧನೆಗೆ ತನ್ನ ಪಾಲಕರಾದ ಶಿವಾನಂದಮೂರ್ತಿ- ಸುಧಾ ಹಾಗೂ ಸಹೋದರಿಯರು ಮತ್ತು ಕೋಚ್ ಸಹಕಾರವನ್ನು ಸ್ಮರಿಸುತ್ತಾರೆ.
 ನಿಶ್ಚಿತ ಗುರಿ, ಜೊತೆಗೆ ಸಾಧಿಸುವ ಹಠ, ಅಚಲವಾದ ನಂಬಿಕೆಯೊಂದಿದ್ದರೆ ಸಾಧನೆ ಸಾಧ್ಯ. ವಿವಿ ಮಟ್ಟದಿಂದ ಹಿಡಿದು ಏಶ್ಯಾ ಚಾಂಪಿಯನ್‌ಶಿಪ್‌ವರೆಗೆ ಸ್ಪರ್ಧಿಸಿದ್ದರಿಂದ ಕಠಿಣ ಸ್ಪರ್ಧೆಯ ಅರಿವಾಗಿದೆ. ಅತಿ ಹೆಚ್ಚು ಖರ್ಚು ಪ್ರತಿ ಪ್ರವಾಸದಲ್ಲಿ ಬರುತ್ತಿದ್ದರೂ ನಿಭಾಯಿಸಿ ಸಾಧನೆ ಮಾಡುತ್ತಿದ್ದೇನೆ ಎನ್ನುತ್ತ್ತಾರೆ ರಜಿನಿ.
30.12.17
ಅಕಾಡೆಮಿ ಗೌರವಕ್ಕೆ ಭಾಜನ
 ಮಾಹಿಗಯ್ಯ



ಜಿಲ್ಲೆಯಲ್ಲಿ ರಂಗಭೂಮಿ ಕಂಪನ್ನು ಹರಡಿ, ಬೆಳೆಸಿದವರು ಸಾಕಷ್ಟು ಕಲಾವಿದರಿದ್ದಾರೆ. ವೃತ್ತಿ ರಂಗಭೂಮಿಯನ್ನು ಇವರು ಗಟ್ಟಿಗೊಳಿಸಿದ್ದಾರೆ. ಜಾನಪದ ಮತ್ತು ಆಧುನಿಕ ರಂಗಭೂಮಿಯೂ ಬೆಳೆಯಲು ಇವರು ಕಾರಣರಾಗಿದ್ದಾರೆ. ಅಂತಹವರಲ್ಲಿ ಬಹುತೇಕರ ಹೆಸರು ಇಂದಿನ ತಲೆಮಾರಿನವರಿಗೆ ಗೊತ್ತಿಲ್ಲ. ಆದರೆ ಅವರ ಸಾಧನೆ ಅವರನ್ನು ಈಗ ಬೆಳಕಿಗೆ ತರುತ್ತಿದೆ. ಪ್ರಶಸಿ, ಸನ್ಮಾನದೊಂದಿಗೆ ಅವರನ್ನು ಗೌರವಿಸುತ್ತಿದೆ. ಅಂತಹವರಲ್ಲೊಬ್ಬರು ಭದ್ರಾವತಿಯ ಮಾಯಿಗಯ್ಯ.
 ಕೈಗಾರಿಕೆಗಳೊಂದಿಗೆ ಬದುಕು ಕಟ್ಟಿಕೊಂಡು ರಂಗಸೇವೆಗೆ ಇಳಿದ ನಿವೃತ್ತ ಕಾರ್ಮಿಕ, ಹಿರಿಯ ರಂಗ ಕಲಾವಿದ ಭದ್ರಾವತಿಯ ಮಾಯಿಗಯ್ಯ ಅವರಿಗೆ ಈ ಬಾರಿಯ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಮಾಯಿಗಯ್ಯ ಅವರ ರಂಗಸೇವೆಯನ್ನು ಗುರುತಿಸಿ ಕೆ. ರಾಮಚಂದ್ರಯ್ಯ ದತ್ತಿನಿಧಿ ಪ್ರಶಸ್ತಿಯನ್ನು ಅಕಾಡೆಮಿ ನೀಡಿ ಗೌರವಿಸಿದೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ಸೇವೆಗೆ ಸೇರ್ಪಡೆಗೊಂಡ ಮಾಯಿಗ, 1973ರಿಂದ ರಂಗ ಚಟುವಟಿಕೆಗಳನ್ನು ಆರಂಭಿಸಿದವರು. ಆರಂಭದಲ್ಲಿ ಪಾತ್ರಧಾರಿಯಾಗಿ ಸುಮಾರು 100ಕ್ಕೂ ಅಧಿಕ ಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಸುಮಾರು 7 ವರ್ಷಗಳಿಂದ ನಿರ್ದೇಶಕರಾಗಿ ರಂಗ ಸೇವೆ ಸಲ್ಲಿಸುತ್ತಿದ್ದಾರೆ.
  ಭದ್ರಾವತಿಯಲ್ಲಿಯೇ ಮಾಯಿಗಯ್ಯ ಹುಟ್ಟಿಬೆಳೆದದ್ದು. ತಂದೆ ಕೆಂಪಯ್ಯ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು. ತಾಯಿ ನಾಚೀರಮ್ಮ. ತಂದೆಯಂತೆ ಇವರು ಸಹ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಿಗೆ ಸೇವೆಗೆ ಸೇರ್ಪಡೆಗೊಂಡು ನಿವೃತ್ತಿ ಹೊಂದಿದ್ದಾರೆ.
1973ರಲ್ಲಿ ರಂಗ ಚಟುವಟಿಕೆ ಆರಂಭಿಸಿದ ಮಾಯಿಗಯ್ಯ ಕಾರ್ಖಾನೆಯ ಸಹಪಾಠಿಗಳು ಕಟ್ಟಿಕೊಂಡ ನವೋದಯ ಕಲಾ ಸಂಘ ಹಾಗೂ ಮಿತ್ರ ಕಲಾ ಸಂಘ ಇವುಗಳಲ್ಲಿ ರಂಗ ತರಬೇತಿ ಪಡೆದರು. ಕಲಾಶ್ರೀ ದಿವಂಗತ ಶಾಮಮೂರ್ತಿ ಹಾಗೂ ಲಕ್ಷ್ಮೀಪತಿ ಅವರ ಮಾರ್ಗದರ್ಶನದಲ್ಲಿ  ‘ದುರ್ಗದ ದುರಂತ’ದಲ್ಲಿ ಭರಮಣ್ಣ ನಾಯಕ, ‘ತ್ಯಾಗವೀರ ಎಚ್ಚಮನಾಯಕ’ದಲ್ಲಿ ಸಿಂಗ ಭೂಪತಿ, ‘ಕರಿಭಂಟ’ದಲ್ಲಿ ಕೊತ್ವಾಲ, ‘ಬೆತ್ತಲೆ ಸೇವೆ’ ಮಲ್ಲಪ್ಪ, ‘ರಕ್ತರಾತ್ರಿ’ಯಲ್ಲಿ ಭೀಮಸೇನ, ‘ಸೂರ್ಯ ಶಿಕಾರಿ’ಯಲ್ಲಿ ಸೂರ್ಯವರ್ಮ, ‘ಒಂದು ದಂಗೆ ಪ್ರಕರಣ’ದಲ್ಲಿ ಹಣುಮ, ‘ಕೇಳು ಜನಮೇ ಜಯ’ದಲ್ಲಿ ಸಾಮಾನ್ಯಪ್ಪ, ‘ಸಾಯೋ ಆಟ’ದಲ್ಲಿ ಮಂತ್ರಿ, ‘ಬೆನಕನಕೆರೆ’ಯಲ್ಲಿ ಸಖ-2, ‘ಸೆಸ್ಟಿ’ಯಲ್ಲಿ ಒಬ್ಬ, ‘ಸೀತಾಪಹರಣ’ದಲ್ಲಿ ಹನುಮಂತ ಮತ್ತು ‘ಅಂಗುಲಿ ಮಾಲ’ದಲ್ಲಿ ಶಿಷ್ಯ, ‘ಯಮಲೋಕಕ್ಕೆ ಸ್ವಾಗತ’ದಲ್ಲಿ ಕಿರಾತಕ ಪಾತ್ರಧಾರಿಯಾಗಿ ಹೀಗೆ ಹಲವು ಪೌರಾಣಿಕ ಹಾಗೂ ಜಾನಪದ ನಾಟಕಗಳಲ್ಲಿ ಅಭಿನಯಿಸಿ ಅಂದಿನ ಕಾಲದಲ್ಲಿ ಜನಮೆಚ್ಚಿಗೆಗೆ ಪಾತ್ರರಾಗಿದ್ದರು.
ಮಾಯಿಗಯ್ಯ ಪಾತ್ರಧಾರಿಯಾಗಿ ಮಾತ್ರವಲ್ಲದೆ ನಿರ್ದೇಶಕರಾಗಿ, ವಸ್ತ್ರ ವಿನ್ಯಾಸಕರಾಗಿ, ರಂಗಮಂಟಪ, ರಂಗಪರಿಕರಗಳ ರೂಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಹಲವೆಡೆ ಮಾತ್ರವಲ್ಲದೆ ದೆಹಲಿ, ಮುಂಬೈ ಸೇರಿದಂತೆ ಅನೇಕ ಭಾಗದಲ್ಲಿ ನಾಟಕ ಪ್ರದರ್ಶನ ನೀಡಿರುವುದು ಇವರ ಹೆಗ್ಗಳಿಕೆಯಾಗಿದೆ. ಸುಮಾರು 20ಕ್ಕೂ ಅಧಿಕ ನಾಟಕಗಳನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ.
ನವೋದಯ ಕಲಾ ಸಂಘ, ಛಲವಾದಿಗಳ ಸಮಾಜ, ಕನ್ನಡ ಸಾಹಿತ್ಯ ಪರಿಷತ್  ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ರಂಗಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ-ಸನ್ಮಾನಗಳನ್ನು ನೀಡಿ ಗೌರವಿಸಿವೆ.
ಅಂದು ಯಾವುದೇ ಆರ್ಥಿಕ ನೆರವು ಇಲ್ಲದಿದ್ದರೂ ರಂಗ ಕಲೆಯನ್ನು ಪ್ರೀತಿಸುವವರು, ವೀಕ್ಷಿಸುವವರು, ಪ್ರೋತ್ಸಾಹಿಸುವವರು ಹೆಚ್ಚಾಗಿದ್ದರು. ಆದರೆ ಇಂದು ಯಾರೂ ಇಲ್ಲ. ಅಂದಿನ ಬಹಳಷ್ಟು ರಂಗಕಲಾವಿದರು ಇಂದು ಕಣ್ಮರೆಯಾಗಿದ್ದಾರೆ. ಪ್ರಸ್ತುತ ರಂಗಕಲೆಗೆ ಬರಲು ಯಾರೂ ಇಚ್ಛಿಸುವುದಿಲ್ಲ. ಆದರೂ ಸಹ ಹೇಗಾದರೂ ಮಾಡಿ ರಂಗಕಲೆಯನ್ನು ನಗರದಲ್ಲಿ ಜೀವಂತವಾಗಿ ಉಳಿಸಬೇಕೆಂಬುದು ತನ್ನ ಬಯಕೆ ಎನ್ನುತ್ತಾರೆ ಮಾಯಿಗಯ್ಯ.
23,12,17
.......................................

ನಟನಾಗಿ ಮಿಂಚಿದ
ರಂಗಕರ್ಮಿ ಹರಿಶರ್ವಾ  

ಇತ್ತೀಚೆಗೆ ಬಿಡುಗಡೆಯದ ಕಹಿ ಕನ್ನಡ ಸಿನಿಮಾವವನ್ನು ನೀವು ನೋಡಿರಬಹುದು. ಅದರಲ್ಲಿ ಕವಿಯಾಗಿ, ಪ್ರೇಮಿಯಾಗಿ, ಮಾದಕವಸ್ತುದಾಸನಾಗಿ ಮನತಟ್ಟುವ ಅಭಿನಯದ ಪಾತ್ರ ಮನಸೆಳೆಯುತ್ತದೆ. ಈ ಪಾತ್ರವನ್ನು ನಿರ್ವಹಿಸಿದವರು ನಗರದ ಯುವಕ ಹರಿಶರ್ವಾ ಶಾಸ್ತ್ರಿ. ಕಹಿ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿರುವ ಇವರು, ಸಿನಿಮಾದ ಪ್ರಧಾನ ಪಾತ್ರಧಾರಿ. ಈ ಮೂಲಕ ಸಾಕಷ್ಟು ಭರವಸೆಯನ್ನು ಚಿತ್ರರಂಗದಲ್ಲಿ ಮೂಡಿಸಿದ್ದಾರೆ.
ಜನರಲ್ಲಿ ವೈಚಾರಿಕ ಪ್ರಜ್ಞೆ ಬಿತ್ತುವಲ್ಲಿ ನಾಟಕಗಳ ಪಾತ್ರ ಪ್ರಮುಖವಾಗಿದೆ. ಜನರ ಮನಸ್ಸುಗಳನ್ನು ಬೆಸೆಯುವುದಕ್ಕೆ ನಾಟಕ ಅತ್ಯುತ್ತಮ ಮಾಧ್ಯಮ. ಅದೇ ರೀತಿ ಸಿನಿಮಾಗಳೂ ಸಹ ಉತ್ತಮ ಸಂದೇಶವನ್ನು ಸಾರುವಂತಿದ್ದರೆ ಅವುಗಳಿಂದಲೂ ಸಮಾಜ ಸುಧಾರಣೆ ಸಾಧ್ಯ. ಆದ್ದರಿಂದಲೇ ಈ ಕ್ಷೇತ್ರ ವ್ಯಕ್ತಿಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.   
ನಾವು ಅಂಟಿಸಿಕೊಂಡ ಕಲೆಯ ಗೀಳು ನಮ್ಮನ್ನು ಎಂದಿಗೂ ಬಿಡುವುದಿಲ್ಲ. ಮನದಲ್ಲಿ ಅದು ಹೊಸತನಕ್ಕೆ ಹಾತೊರೆಯುತ್ತಲೇ ಇರುತ್ತದೆ. ನಗರದ ಹರಿಶರ್ವಾ ಶಾಸ್ತ್ರಿ ವಿದ್ಯಾರ್ಥಿ ದೆಸೆಯಲ್ಲೇ ಏಕಪಾತ್ರಾಭಿನಯ, ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಇಂಜಿನಿಯರಿಂಗ್ ಮುಗಿಸಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕರೂ ಇದರ ಗುಂಗಿನಿಂದ ಅವರಿಗೆ ಹೊರಬರಲಾಗಲೇ ಇಲ್ಲ. ಇದರಿದಂಆಗಿ ಆಕ್ಷೇತ್ರವನ್ನೇ ಬಿಟ್ಟು ಇಂದು ಸಂಪೂರ್ಣವಾಗಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಟನಾಗಿದ್ದಾರೆ.
ನಗರದ ರವೀಂದ್ರನಗರ ವಾಸಿಯಾಗಿರುವ ಹರಿಶರ್ವಾ, ಇತ್ತೀಚೆಗೆ ಬಿಡುಗಡೆಯಾದ ಕಹಿ ಕನ್ನಡ ಚಿತ್ರದಲ್ಲಿ ನಟನಾಗಿ ಅಭಿನಯಿಸಿದ್ದಾರೆ. ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಕೆಲವು ತಿಂಗಳು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಕನಸು ಬೇರೆಯದ್ದೇ ಆಗಿದ್ದರಿಂದ ಬಹುಕಾಲ ಆ ಕೆಲಸದಲ್ಲಿ ಮುಂದುವರೆಯಲು ಅವರಿಗೆ ಸಾದ್ಯವಾಗಲಿಲ್ಲ. ಇದೇ ವೇಳೆ ಕೆಲವು ನಿರ್ದೇಶಕರ ಸಲಹೆಯ ಮೇರೆಗೆ ರಂಗಭೂಮಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಬಳಿಕ ಸುಮಾರು 7 ವರ್ಷದಿಂದ ರಂಗಭೂಮಿ ಜೊತೆ ನಂಟು ಹೊಂದಿದರು. 14ಕ್ಕೂ ಹೆಚ್ಚು ನಾಟಕದಲ್ಲಿ ನಟಿಸಿದರು. ಈ ನಾಟಕಗಳು ಬೆಂಗಳೂರು, ಕೊಲ್ಕೊತ್ತಾ, ಮೈಸೂರು ಸಹಿತ ರಾಜ್ಯದ ಹಲವೆಡೆ ಪ್ರದರ್ಶನಗೊಂಡಿವೆ.
 ಅವರು ಅಭಿನಯಿಸಿದ ನಾಟಕಗಳೆಂದರೆ, ರಾಜಕೋಟೆ ನಿರ್ದೇಶನದ ಒಂದಾನೊಂದು ಕಾಲದಲ್ಲಿ, ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಸಂಕ್ರಾಂತಿ ಪ್ರಕಾಶ್ ಬೆಳವಾಡಿ ನಿರ್ದೇಶನದ ಗೋರಾ, ನಾಗರಾಜ್ ನಿರ್ದೇಶನದ ಮೌನ, ಮಂಜುನಾಥ್ ಬಡಿಗೇರ್  ನಿರ್ದೇಶನದ ಪಂಚರಾತ್ರ ಮೊದಲಾದವು. ಭೃಂಗದ ಬೆನ್ನೇರಿ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ರಾಜ್ಯ ಮಟ್ಟದ ನಾಟಕ ಪ್ರದರ್ಶನದಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದಿದೆ. ನಟನೆಗಾಗಿ ಹರಿಶರ್ವಾ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಲವು ನಿರ್ದೇಶಕರು ನಟನಾ ಕೌಶಲ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಖ್ಯಾತ ಗಾಯಕ ರಘು ದೀಕ್ಷಿತ್ ನಿರ್ಮಾಣದ, ಅರ್ಜುನ್, ಅಣತಿ ರವಿಕುಮಾರ್ ನಿರ್ದೇಶಿಸುತ್ತಿರುವ ಪ್ರದೇಶ ಸಮಾಚಾರ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೆರಡು ಸಿನಿಮಾಗಳಲ್ಲಿ ಅಭಿನಯಿಸಲು ಆಹ್ವಾನ ಬಂದಿದೆ. 2018ರಲ್ಲಿ ಇನ್ನೆರಡು ಸಿಮಿನಾಮಗಳು ಸೆಟ್ಟೇರಲಿವೆ.
ಮಲೆನಾಡಿನ ಕಲೆ, ಕವಿಮನಸುಗಳ ಹಿನ್ನೆಲೆ  ಮೂಲಕ ನಟನಾ ಕ್ಷೆತ್ರಕ್ಕೆ ನೆನೆಪಿನಲ್ಲಿ ಉಳಿಯುವಂತಹ ಕೊಡುಗೆ ನೀಡಲು ಪ್ರೇರೇಪಿಸಿದೆ. ನಟನೆಯನ್ನೇ ಉಸಿರನ್ನಾಗಿ ಮಾಡಿಕೊಂಡು ಬದುಕಬೇಕು. ಕಲಿಕೆಯ ಹಸಿವು ಇನ್ನೂ ಇದೆ. ಆದ್ದರಿಂದ ಹಲವು ಕಾರ್ಯಾಗಾರ, ತರಬೇತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿನ ಅನುಭವಗಳ ಮೂಲಕ ಸಶಕ್ತ ನಟ ಮತ್ತು ನಿರ್ದೇಶಕನಾಗಬಲ್ಲೆ ಎನ್ನುವ ವಿಶ್ವಾಸವಿದೆ. ಆದರೆ ಎಂದಿಗೂ ಅಹಂ ಮತ್ತು ತಾರತಮ್ಯ ಭಾವವನ್ನು ಬೆಳೆಸಿಕೊಳ್ಳುವುದಿಲ್ಲ ಎನ್ನುತ್ತಾರೆ ಹರಿಶರ್ವಾ.
16,12,17
...........................
ಪತ್ರಕರ್ತ, ಹೋರಾಟಗಾರ
ದಿ. ಕೆ.ಎನ್. ಭಟ್


 ವ್ಯಕ್ತಿ ಬಯಸುವುದೇ ಒಂದು, ಆಗುವುದೇ ಇನ್ನೊಂದು. ಆದರೆ ಕೈಹಿಡಿದ ಯಾವುದೇ ವೃತ್ತಿಗೆ ತನ್ನನ್ನು ಸಮರ್ಪಿಸಿಕೊಂಡರೆ, ಅದರಲ್ಲಿ ನಿಷ್ಠೆ, ಆಸಕ್ತಿ ತೋರಿದರೆ ಅದು ಆತನನ್ನು ಉನ್ನತಕ್ಕೇರಿಸುತ್ತದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ನಮ್ಮನ್ನಗಲಿದ ಸಾಗರದ ಪತ್ರಕರ್ತ ಕೆ.ಎನ್. ಭಟ್ ಅವರು.
ಭಟ್ ಅವರ ಸಾಧನೆಯ ಕ್ಷೇತ್ರ ಒಂದೆರಡಲ್ಲ, ಸಜ್ಜನರಾಗಿ, ಎಲ್ಲರೊಳಗೊಂದಾಗುವ ಗುಣ ಹೊಂದಿ, ಸಾಮಾಜಿಕ ಕಳಕಳಿಯೊಂದಿಗೆ ಅನೇಕ ಜನಪರ ಕೆಲಸ ಮಾಡಿದರು. ಇದರ ಜೊತೆಗೆ ಪತ್ರಕರ್ತರಾಗಿಯೂ ಆ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾರೆ. 61ರ ಹರಯದ ಅವರಲ್ಲಿ ಇನ್ನೂ ಸಾಧನೆಯ ಛಲವಿತ್ತು, ಹಂಬಲವಿತ್ತು. ಯಾರನ್ನೂ ನೋಯಿಸದ, ತೊಂದರೆ ಕೊಡದ ಅವರು, ಸಾಗರದಲ್ಲಿ ಅಷ್ಟೇ ಏಕೆ, ಶಿವಮೊಗ್ಗ ಜಿಲ್ಲೆಯಲ್ಲೇ ಹೆಸರುಗಳಿಸಿದ್ದರು. ಪತ್ರಕರ್ತರಾದರೂ ವಿಶೇಷವಾಗಿ ಅನೇಕ ಹೋರಾಟಗಳ ಮೂಲಕ ಜನಮನ ಸೆಳೆದವರು.
 ಕೆ.ಎನ್. ಭಟ್ ಅವರ ಪೂರ್ಣ ಹೆಸರು ಕೃಷ್ಣ ನಾರಾಯಣ ಭಟ್. ಮೂಲತ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ತಂದೆ ನಾರಾಯಣ ಭಟ್. ತಾಯಿ ಮನೋರಮಾ. ಬಡ ಕುಟುಂಬದಲ್ಲಿ ಜನಿಸಿದ ಭಟ್ಟರು ಊರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಆನಂತರ ಬದುಕು ಕಟ್ಟಿಕೊಳ್ಳಲು ಹೊರಟಿದ್ದು ಹೈದರಾಬಾದ್‌ಗೆ. ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು 1980 ರ ಸುಮಾರಿಗೆ ಶಿವಮೊಗ್ಗಕ್ಕೆ ವಾಪಸಾದರು. ಶಿವಮೊಗ್ಗದಲ್ಲಿ ಪೇಪರ್ ಬಾಬುರಾವ್ ಎಂದೇ ಖ್ಯಾತರಾಗಿದ್ದ ಬಾಬುರಾವ್ ಅವರ ಪುತ್ರ ಅಶೋಕ್ ಅವರ ಜೊತೆ ಹಿಂದು, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಏಜೆನ್ಸಿ ನಡೆಸುತ್ತಿದ್ದರು. ಕೆಲವು ವರ್ಷದ ನಂತರ ಸಾಗರಕ್ಕೆ ಹೋಗಿ ನೆಲೆಯೂರಿ, ಅಲ್ಲಿ ಇದೇ ಪತ್ರಿಕೆಗಳ ಸಬ್ ಏಜೆನ್ಸಿ ಮಾಡಿದರು. ಇವುಗಳ ಜೊತೆಗೆ ಇನ್ನಿತರೆ ವಾರ, ಮಾಸಿಕ ಪತ್ರಿಕೆಗಳ ಏಜೆನ್ಸಿ ಪಡೆದುಕೊಂಡರು.
ಇದೇ ವೇಳೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಏಜೆನ್ಸಿ ಪಡೆದುಕೊಂಡರಲ್ಲದೇ ಅದರ ವರದಿಗಾರರೂ ಆಗಿ ನೇಮಕಗೊಂಡರು. ಪತ್ರಕರ್ತರಾಗಿ ಸಾಗರ ತಾಲೂಕು ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದವರು. ಇದರಿಂದಾಗಿಯೇ ಭಟ್ಟ ಅವರು ಪ್ರಸಿದ್ಧರಾದರು. ಸಾಗರದಲ್ಲಂತೂ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಪತ್ರಕರ್ತರ ತಾಲೂಕು ಸಂಘದ ಅಧ್ಯಕ್ಷರಾಗಿ, ರಾಜ್ಯ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಕಲೆ, ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಭಟ್ಟರು, ಯಕ್ಷಗಾನ ಸಂಘಟಕರಾಗಿ ಸಾಗರದಲ್ಲಿ ಅನೇಕ ಯಕ್ಷಗಾನ ಪ್ರದರ್ಶನ ನಡೆಸಿದ್ದಲ್ಲದೆ, ಮಹಾನ್ ಕಲಾವಿದರನ್ನು ಕರೆಯಿಸಿ ತಾಳಮದ್ದಲೆಯನ್ನೂ ಏರ್ಪಡಿಸುತ್ತಿದ್ದರು. ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದರು. ತಮ್ಮ ವೃತ್ತಿಯ ಜೊತೆಗೆ ಯಕ್ಷಗಾನ ಸಂಘಟನೆ, ರೈಲ್ವೆ ಬ್ರಾಡ್‌ಗೇಜ್ ಹೋರಾಟದಲ್ಲೂ ಕೆಲಸ ಮಾಡಿದ್ದರು. ಅಶಕ್ತ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ವಿದ್ಯಾ ಪೋಷಕ್ ಸಂಸ್ಥೆಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಅನೇಕ ಬಡ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಧನ ಸಹಾಯ ಪಡೆದು ಶಿಕ್ಷಣ ಪೂರೈಸಲು ಭಟ್ ನೆರವು ನೀಡಿದ್ದರು.
. ಭಟ್ ಅವರಿಗೆ ಅರ್ಪಣಾ ಮತ್ತು ಅಪೂರ್ವಾ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಬ್ಬರಿಗೂ ಉತ್ತಮ ಶಿಕ್ಷಣ ಒದಗಿಸಿಕೊಟ್ಟು ಉನ್ನತ ಹುದ್ದೆ ಸಿಗುವಂತೆ ಮಾಡಿದ್ದಾರೆ. ಸ್ಥಳೀಯ ಕೆಲವು ಪತ್ರಿಕೆಗಳಿಗೂ ಅಂಕಣ ಬರೆಯುತ್ತಿದ್ದರು. ಅವರ ಬರಹದಲ್ಲಿ ಹೊಸ ಹೊಳಹು ಕಾಣಬಹುದಿತ್ತು. ಅವರ ಸರಳತೆ, ಸಹೃದಯತೆ ಮತು ಮಾನವ ಸಹಜ ಪ್ರೀತಿ ಎಂದೂ ಮರೆಯಲಾಗದ್ದು.
9.2.17
 .......................................



ಯುವ ರಂಗನಿರ್ದೇಶಕ
ಪ್ರಮೋದ್ ಹಂಚಿನಮನಿ



ಶಿವಮೊಗ್ಗದ ರಂಗಭೂಮಿಗೆ ಹೊಸ ನಿರ್ದೇಶಕರು ಬರುತ್ತಲೇ ಇದ್ದಾರೆ. ಇತ್ತೀಚೆಗೆಗೆ ಸಾಕಷ್ಟು ಯುವಕ-ಯುವತಿಯರು ಹೆಸರಾಂತ ರಂಗಕರ್ಮಿಗಳ ಸಂಸ್ಥೆಯಿಂದ ತರಬೇತಿ ಪಡೆದು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೃಜನಾತ್ಮಕ ರಂಗಭೂಮಿಯ ಸೃಷ್ಟಿ ಸಾಧ್ಯವಾಗಿದೆ. ಪ್ರಮೋದ್ ಡಿ. ಹಂಚಿನಮನಿ ಇಂತಹ ಯುವ ನಿರ್ದೇಶಕರಲ್ಲಿ ಒಬ್ಬ. ಇನ್ನೂ ವಿದ್ಯಾರ್ತಿಯಾಗಿದ್ದರೂ ಅಪಾರ ಅನುಭವವನ್ನು ಪಡೆಯುತ್ತ, ರಂಗತಂಡಗಳಿಂದ ತರಬೇತಿ ಪಡೆದು ಇತ್ತೀಚೆಗೆ ತನ್ನ ಮೊದಲನೆಯ ನಾಟಕವನ್ನು ನಿರ್ದೇಶಿಸಿದ್ದಾನೆ. 
ಬೆಂಗಳೂರಿನ ರಂಗಶಂಕರದವರು ಇತ್ತೀಚೆಗೆ ಮೇಕಿಂಗ್ ಥಿಯೇಟರ್ ಎಂಬ ಕಾರ್ಯಕ್ರಮ ನಡೆಸಿದ್ದರು. ಇದರಲ್ಲಿ ಯುವ ನಿರ್ದೇಶಕರಿಗೆ ಒಂದು ತಿಂಗಳ ಕಾರ್ಯಾಗಾರ ನಡೆಸಲಾಗಿತ್ತು. ಅದರಲ್ಲಿ ಸಹ್ಯಾದ್ರಿ ರಂಗತರಂಗದ ಪ್ರಮೋದ್ ಭಾಗಿಯಾಗಿ ರಂಗಭೂಮಿಯ ಕೆಲವು ವಿಷಯಗಳನ್ನು ಮನನ ಮಾಡಿಕೊಂಡಿದ್ದಾನೆ.  ತಾನು ಕಲಿತದ್ದನ್ನು ತನ್ನ ತಂಡದವರಿಗೆ ತಿಳಿಸಲು ಮತ್ತು ಕಲಿಸಲು ಶ್ರಮಿಸಿದ್ದಾನೆ. ಆತನ ಶ್ರಮದ ಫಲವಾಗಿ ಶ್ರೀರಂಗರ ನಾಟಕ ಶೋಕ ಚಕ್ರ ಮೊನ್ನೆಯಷ್ಟೇ ಪ್ರದರ್ಶಿಸಲ್ಪಟ್ಟಿದೆ.
ಪ್ರಮೋದ್ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದಾನೆ. ನಗರದ ಜಯದೇವ ಬಡಾವಣೆಯ ವಾಸಿಯಾದ ಈತ, ರಂಗಭೂಮಿಯಲ್ಲಿ ತೊಡಗಿಸಿಕೊಂಡು ಕೆಲವೇ ವರ್ಷಗಳು ಕಳೆದಿವೆ. ಸ್ಟೇಜ್ ವರ್ಕ್, ನಟನೆ, ಸೆಟ್ ವರ್ಕ್ ಮಾಡಿದ್ದಾನೆ, ಜಲಗಾರ, ಸಿಂಗಾರೆವ್ವದಲ್ಲಿ ನಟಿಸಿದ್ದಾನೆ. ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾದ ಯವಕ್ರೀತ ನಾಟಕದಲ್ಲೂ ಪಾತ್ರ ವಹಿಸಿದ್ದನು. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾನೆ, ಇಷ್ಟೆಲ್ಲಾ ಅನುಭವ ಪಡೆದು ನಿರ್ದೇಶಕನಾಗುತ್ತಿದ್ದಾನೆ. ಇದಕ್ಕೆ ಅವಕಾಶ ದೊರೆತಿದ್ದು ರಂಗಶಂಕರದಲ್ಲಿ. ಸಹ್ಯಾದ್ರಿ ರಂಗತರಂಗದ ಕಾಂತೇಶ್ ಕದರಮಂಡಲಗಿ ಪ್ರಮೋದ್‌ನಲ್ಲಿರುವ ಜಾಣ್ಮೆಯನ್ನು ಗಮನಿಸಿ ಆತ ಉತ್ತಮ ನಿರ್ದೇಶಕನಾಗಬಲ್ಲ ಎನ್ನುವುದನ್ನು ಯೋಚಿಸಿ ರಂಗಶಂಕರದ ತರಬೇತಿಗೆ ಕಳುಹಿಸಿಕೊಟ್ಟಿದ್ದರು.
ಅಲ್ಲಿಂದ ಬಂದ ನಂತರ ನಾಟಕ ನಿದೇಸನ ಅಮಡಿ ಭರವಸೆಯ, ಯಶಸ್ವಿ ನಿರ್ದೇಶಕನಾಗಬಲ್ಲ ಎಂಬ ಆಶಾವಾದ ಮೂಡಿಸಿದ್ದಾನೆ. ಶಿವಮೊಗ್ಗದಿಂದ ತರಬೇತಿಗೆ ಆಯ್ಕೆಯಾದ ಏಕೈಕ ಯುವಕ ಈತ. ಮೊನ್ನೆಯ ಶೋಕ ಚಕ್ರ ನಾಟಕದ ಆನಂತರ ಈತನಿಗೂ ಹುರುಪು ಬಂದಿದೆ. ಈ ನಾಟಕದ ಯಶಸ್ಸು ಇನ್ನಷ್ಟು ಉತ್ತೇಜನ ನೀಡಿದೆ. ನೀನಾಸಂ ಮೂಲಕ ಇನ್ನೂ ಹೆಚ್ಚಿನ ತರಬೆತಿ ಪಡೆಯಲು ನಿರ್ಧರಿಸಿದ್ದಾನೆ.
ನಗರದ ಅದಿಚುಂಚನಗಿರಿ ಹೈಸ್ಕೂಲು ಮತ್ತು ನ್ಯಾಶನಲ್ ಪಿಯು ಕಾಲೇಜಿನಲ್ಲಿ ಓದಿರುವ ಈತ, ಆ ಸಮಯದಲ್ಲ್ಲೇ ಏಕಪಾತ್ರಾಭಿನಯ, ಸಿನಿಮಾಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು. ಇದು ಆತನಿಗೆ ರಂಗಭೂಮಿಗೆ ಪದಾರ್ಪಣೆ ಮಾಡಲು ಮೆಟ್ಟಿಲಾಯಿತು. ಸಾಕಷ್ಟು ಏಕಪಾತ್ರಾಭಿನಯ ಮಾಡಿ ಬಹುಮಾನ ಗಳಿಸಿರುವ ಪ್ರಮೋದ್, ಡಾನ್ಸ್‌ನಲ್ಲೂ ಪರಿಣಿತ. ಕವಿತೆಯನ್ನು ರಚಿಸುವಲ್ಲಿ ಆಸಕ್ತಿ ಹೊಂದಿದ್ದಾನೆ. ಇನ್ನೂ ವಿಶೇಷವೆಂದರೆ, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳಿಗೆ ಏರ್ಪಡಿಸುವ ರಂಗಶಿಬಿರದಲ್ಲಿ ಈತ ಕಾಂತೇಶ್ ಕದರಮಂಡಲಗಿ ಜೊತೆ ಕೆಲಸ ಮಾಡಿ ಸಾಕಷ್ಟು ಅನುಭವ ಹೊಂದಿದ್ದಾನೆ.
ಈ ಕ್ಷೇತ್ರದಲ್ಲಿ ಕಲಿಯುವುದು ಇನ್ನೂ ಸಆಕಷ್ಟಿದೆ. ಕಲಿಯಬೇಕೆಂಬ ಉತ್ಕಟೇಚ್ಛೆ ಇದೆ. ರಂಗನಿರ್ದೇಶಕನಾಗಿ ಸಾಧನೆ ಮಾಡಬಲ್ಲೆ ಎನ್ನುವುದು  ಇತ್ತೀಚೇಗೆ ಪ್ರದರ್ಶನವಾದ ಶೋಕ ಚಕ್ರದಿದಮ ಅರಿವಾಗಿದೆ. ಆ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ, ತರಬೇತಿ ಪಡೆಯುತ್ತೇನೆ. ಮುಂದಿನ ದಿನಗಳಲ್ಲಿ ಸಾದ್ಯವಾದಷ್ಟು ಹೆಚ್ಚೆಚ್ಚು ನಟಕಗಳನ್ನು ನೊಡುವ ಮುಲಕ, ನಿದೇಶ್ಕರನ್ನು ಭೇಟಿ ಮಡುವದುರಿದಮ ಸೂಕ್ಷ್ಮ ಅಂಶಗಳನ್ನು ತಿಳಿದುಕೊಳ್ಳುತ್ತೇನೆ. ಆ ಮೂಲಕ ರಂಗಭೂಮಿಯಲ್ಲಿ ಛಾಪನ್ನು ಮೂಡಿಸುತ್ತೇನೆಂಬ ಆಶಾವಾದ ಪ್ರಮೋದ್‌ನದ್ದು.   
 ಈತನಿಂದ ನಾಡಿಗೆ ಇನ್ನಷ್ಟು ರಂಗಸೇವೆ ದೊರಕಬೇಕಿದೆ. ಶಿವಮೊಗ್ಗದ ರಂಗಭೂಮಿ ತನ್ನದೇ ಆದ ಹೆಸರನ್ನು ಹೊಂದಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಇದರ ಹೆಸರನ್ನು ಎತ್ತಿಹಿಡಿದ ನಿರ್ದೇಶಕರು, ಕಲಾವಿದರು ಇಲ್ಲಿದ್ದಾರೆ. ಅವರ ಸಾಲಿನಲ್ಲಿ ಪ್ರಮೋದ್ ನಿಲ್ಲುವಂತಾಗಬೇಕು.
2,12,17
...................................................

ಅನನ್ಯ ಸಮಾಜಸೇವಕ 
ಜಫ್ರುಲ್ಲಾ ಖಾನ್



ಸಮಾಜ ಸೇವೆ ಮಾಡುವವರು ಆತ್ಮಸಾಕ್ಷಿಗನುಗುಣವಾಗಿ ಮುನ್ನುಗ್ಗಬೇಕು, ಇನ್ನೊಬ್ಬರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಆಗ ಮಾತ್ರ ಸಾಕಷ್ಟು ಬದಲಾವಣೆ ತರಲು ಸಾಧ್ಯ ಎನ್ನುವುದು ಮಾರ್ಟಿನ್ ಲೂಥರ್‌ನ ಪ್ರಸಿದ್ಧ ಉಕ್ತಿ.
  ನಿಜವಾದ ಸಮಾಜ ಸುಧಾರಕನಾದವನು ಏನನ್ನೂ ಬಯಸುವುದಿಲ್ಲ. ತಾನು ಪಡೆದುದಕ್ಕಿಂತ ಹೆಚ್ಚಿನದನ್ನು ಕೊಡುತ್ತಾನೆ, ಯಾವ ಪ್ರಚಾರ, ಪ್ರಶಸ್ತಿಯನ್ನೂ ಬಯಸಿ ಈ ಕೆಲಸಕ್ಕಿಳಿಯುವುದಿಲ್ಲ. ಇಂತಹವನನ್ನು ಹೆಸರು ಮತ್ತು ಗೌರವ ಅರಸಿ ಬರುತ್ತದೆ. ಶಿವಮೊಗ್ಗದಲ್ಲಿ ಲೆಕ್ಕ ಪರಿಶೋಧನೆ ಮತ್ತು  ತೆರಿಗೆ ಸಲಹೆಗಾರರಾಗಿರುವ ಜಫ್ರುಲ್ಲಾ ಖಾನ್ ಸದ್ದಿಲ್ಲದೆ ಸಮಾಜ ಸೇವೆ ಮಾಡಿ ಈಗ ಒಳ್ಳೆಯ ಸುದ್ದಿಯಾಗಿದ್ದಾರೆ.
ಮಾಹಿತಿ ಹಕ್ಕು ಮೂಲಕ  ದಾಖಲಾತಿಗಳನ್ನು ಕಲೆ ಹಾಕಿ,  ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದು ಅದರ ವಿರುದ್ದ ಮೇಲ್ಮನವಿ ಸಲ್ಲಿಸುವ ಕೆಲಸವನ್ನು ಮಾಡುತ್ತಿರುವ ಇವರು, ಈ ವರ್ಷದ ನ್ಯಾಶನಲ್ ಆರ್‌ಟಿಐ ಜಾಗೃತಿ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಎರಡೂವರೆ ವರ್ಷದಲ್ಲಿ ಸುಮಾರು 184 ಆರ್‌ಟಿಐ ಮಾಹಿತಿಗೆ ಅರ್ಜಿ ಹಾಕಿದ್ದಾರೆ. ಇದರಲ್ಲಿ ಕೆಲವಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಛಲ ಬಿಡದೆ ಹೋರಾಡುತ್ತ ಸುಮಾರು 23 ಕೇಸುಗಳನ್ನು ಹಲವರ ವಿರುದ್ಧ ದಾಖಲಿಸಿದ್ದಾರೆ. ಅವೆಲ್ಲವೂ ಈಗ ವಿಚಾರಣಾ ಹಂತದಲ್ಲಿವೆ. 
ಸರಳ ವ್ಯಕ್ತಿತ್ವದ, ಸಮಜಮುಖಿ ವ್ಯಕ್ತಿಯಾಗಿರುವ ಜಫ್ರುಲ್ಲಾ ನಗರದ ಮಾರ್ನಮಿಬೈಲ್ ವಾಸಿ. ವಿದ್ಯಾಭ್ಯಾಸದ ಕಾಲದಲ್ಲೇ ಸಮಾಜಸೇವೆಯ ಕನಸನ್ನು ಕಂಡವರು. ಎಲ್ಲರೊಂದಿಗೆ ಒಡನಾಟ, ಆತ್ಮೀಯತೆಯನ್ನು ಸಾದಿಸಿರುವ ಇವರು,. ಪ್ರಾಥಮಿಕ ಶಿಕ್ಷಣವನ್ನು ಎನ್.ಟಿ. ರಸ್ತೆಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಡಿವಿಎಸ್‌ನಲ್ಲಿ ಎಸ್ಸೆಸೆಲ್ಸಿಯವರೆಗೆ ಓದಿ ಗೋವಾದ ಡೆಂಪುವಿನಲ್ಲಿರುವ ವಿವಿ ಕಾಲೇಜಿನಲ್ಲಿ  ಉನ್ನತ ಶಿಕ್ಷಣ ಪಡೆದಿದ್ದಾರೆ. ಆನಂತರ ಇಂಡಿಯನ್ ಟೆಕ್ನಿಕಲ್ ಇನ್ಸ್‌ಟಿಟ್ಯೂಶನ್‌ನಿಂದ  ಡಿಪ್ಲೋಮ ಇನ್ ಅಟೊಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದು, 2001ರಲ್ಲಿ ಸಿಎ ತೇರ್ಗಡೆಯಾಗಿ ನಗರದಲ್ಲೇ ವೃತಿ ಜೀವನ ಆರಂಭಿಸಿದ್ದಾರೆ.
ಸನ್ಮಾರ್ಗ ವೆಲ್ಫೇರ್ ಸೊಸೈಟಿ ಸ್ಥಾಪಿಸಿ ಸಾಕಷ್ಟು ಬಡವರಿಗೆ ನೆರವಾಗಿದ್ದಾರೆ. 7 ವರ್ಷದಿಂದ ಇದರ ಮೂಲಕವೇ ಸೇವೆ ಸಲ್ಲಿಸಿ ಈಗ ಅದರ ಕಾರ್ಯಾಧ್ಯಕ್ಷರಾಗಿದ್ದಾರೆ.  ಆನಂತರ ಅಲ್‌ಹಿಂದ್ ವೆಲ್ಫೇರ್ ಸೊಸೈಟಿ ಉಪಾಧ್ಯಕ್ಷರಾಗಿ ರಕ್ತದಾನ ಸಹಿತ ಹತ್ತಾರು ಮಹತ್ಕಾರ್ಯಗಳನ್ನು ಮಾಡುತ್ತ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಮುಸ್ಲಿಂ ವೆಲ್ಫೇರ್ ಕಮಿಟಿಯ ಸಹ ಕಾರ್ಯರ್ಶಿಯಾಗಿ ಉಚಿತವಾಗಿ ಬಡ ಮುಸ್ಲಿಮರಿಗೆ ಹೆಣ ಸಾಗಿಸುವ ವಾಹನ ಕೊಡುಗೆಯಾಗಿ ನೀಡಿದ್ದಾರೆ.  ಸನ್ಮಾರ್ಗ ವೆಲ್ಫೇರ್ ಟ್ರಸ್ಟ್ ಮೂಲಕ ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ವಿತರಣೆ, ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ವಿದ್ಯಾರ್ಥಿ ವೇತನ,  ಪಠ್ಯಪುಸ್ತಕ ವಿತರಣೆಯನ್ನು ಪ್ರತಿವರ್ಷ ನಡೆಸಿಕೊಂಡು ಬಂದಿದ್ದಾರೆ.
ವೃತ್ತಿಯ ಜೊತೆ ಸಮಾಜ ಸೇವೆಯನ್ನೇ ಉಸಿರನ್ನಾಗಿಸಿ ಅದಕ್ಕಾಗಿಯೇ ದುಡಿ ಹಣವನ್ನು ವಿನಿಯೋಗಿಸುತ್ತಿದ್ದಾರೆ. ತಾನು ಪಡೆದುದನ್ನು ಬಡಜನರ ಸೇವೆಗೆ ನೀಡುತ್ತಿದ್ದಾರೆ. ಇಂತಹ ಮಾನವೀಯ ಗುಣದ ಜಫ್ರುಲ್ಲಾಗೆ 2012ರಲ್ಲಿ ಭಾರತ ವಿಕಾಸ್ ರತ್ನ ಪ್ರಶಸ್ತಿಯನ್ನು ದೆಹಲಿಯ ದಿ ಇಕನಾಮಿಕ್ ಫಾರ್ ಹೆಲ್ತ್ ಎಂಡ್ ಗ್ರೌಥ್ ಸೊಸೈಟಿ ನೀಡಿ ಗೌರವಿಸಿದೆ. ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ಮತ್ತು ಚೇಂಬರ್ ಆಫ್ ಕಾಮರ್ಸ್‌ನ ಸದಸ್ಯರೂ ಆಗಿರುವ ಇವರು, ತಾನು ವಿದ್ಯಾರ್ಥಿ ದಿಸೆಯಲ್ಲಿ ಕಂಡ ಕನಸನ್ನು ನನಸಾಗಿಸುತ್ತಿದ್ದಾರೆ.
ಇನ್ನೊಬ್ಬರ ಜೀವನದಲ್ಲಿ ಮೂಲಭೂತ ಬದಲಾವಣೆ ತಂದಾಗ ಸಿಗುವ ಸಂತೋಷವನ್ನು ಯಾವ ಪ್ರಶಸ್ತಿಯೂ ತಂದುಕೊಡುವುದಿಲ್ಲ. ನಮ್ಮ ಶ್ರೀಮಂತಿಕೆಗಿಂತ ಮಾನವೀಯ ನೆಲೆಯಲ್ಲಿ ಸೇವೆ ಮಾಡಬೇಕು. ಆಗ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಂತು ಮುಂದಡಿ ಇಡಬೇಕು ಎನ್ನುತ್ತಾರೆ ಜಫ್ರುಲ್ಲಾ ಖಾನ್.
25.11.17
..................................
 


  

Wednesday 24 January 2018

ಅಂಧರ ಬಾಳಿಕೆ ಬೆಳಕು
ಸಂಪತ್‌ರಾಜ್


 ಕಣ್ಣಿಗೆ ಸಾವಿಲ್ಲ ಎಂಬುದನ್ನು ಇಂದಿನ ಆಧುನಿಕ ವಿಜ್ಞಾನ ಸಾಬೀತುಮಾಡಿದೆ. ಸತ್ಯ. ವ್ಯಕ್ತಿಯ ಮರಣದ ನಂತರ  ಮಣ್ಣಲ್ಲಿ ಮಣ್ಣಾಗಿ ಹೋಗಬಹುದಾದ ಕಣ್ಣುಗಳನ್ನು ಕಳಚಿ ತಂದು ಅಂಧರಿಗೆ ಯಶಸ್ವಿಯಾಗಿ ಆಳವಡಿಸಬಹುದು.  ಇದರಿಂದ ನಾವುಗಳು ಸತ್ತ ಮೇಲೂ ಬೇರೆಯವರ ಬಾಳಿಗೆ ಬೆಳಕಾಗುವುದರ ಮೂಲಕ ಜಗತ್ತನ್ನು ನೋಡಬಹುದು. ಇಂತಹ ಸುಮಾರು 300 ವ್ಯಕ್ತಿಗಳ ಕಣ್ಣುಗಳನ್ನು ಸಂಗ್ರಹಿಸಿ ಅಂಧರ ಬಾಳಿಗೆ ಬೆಳಕಾಗುವಂತಹ ಮಾನವೀಯ ಕಾರ್ಯಗಳನ್ನು ಸದ್ದಿಲ್ಲದೆ ಮಾಡುವವರೊಬ್ಬರು ಭದ್ರಾವತಿಯಲ್ಲಿದ್ದಾರೆ. ಅವರೇ ಸಂಪತ್‌ರಾಜ್ ಬಾಂಟಿಯಾ.
1986 ರಲ್ಲಿ ಕನ್ನಡ ವಾರ ಪತ್ರಿಕೆಯೊಂದರಲ್ಲಿ  ಕಣ್ಣುಗಳನ್ನು ಕೊಡಿ ಎಂಬ  ಬೆಂಗಳೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಯ ಲೇಖನವನ್ನು ಓದಿ ಇದರಿಂದ ಸ್ಫೂರ್ತಿಗೊಂಡವರು ಇವರು ಬಿ ಕಾಂ ಪದವಿ ಹಾಗೂ ಡಿ ಫಾರ್ಮ್ ಪದವೀಧರರು. ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಬೇಕೆಂದುಕೊಂಡಿದ್ದ ಸಮಯದಲ್ಲಿ ಈ ಲೇಖನ  ಅವರ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿತು. ಅದರ ಫಲವಾಗಿ  ಜಿಲ್ಲೆಯ ಪ್ರಪ್ರಥಮ ಐ ಡೊನೇಷನ್ ಸೊಸೈಟಿ ಭದ್ರಾವತಿಯಲ್ಲಿ ಸಾಕಾರಗೊಂಡಿತು.
ಸ್ನೇಹಿತ ಹಾಗೂ ಎಬಿವಿಪಿಯ ಇಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಘುನಂದನ್ ಜೊತೆಗೂಡಿ ಪ್ರಾರಂಭ ಮಾಡಲಾದ ಈ ಕಾರ್ಯಕ್ಕೆ ಡಾ.ಪ್ರಶಾಂತ ಇಸ್ಲೂರು, ಡಾ.ಟಿ.ನರೇಂದ್ರ ಭಟ್ ಸಹಕಾರದೊಂದಿಗೆ ಡಾ.ಸುರೇಶ್ ಇಸ್ಲೂರು 1987 ರ ಸೆಪ್ಟಂಬರ್ 5 ರಂದು ಐ ಡೊನೇಷನ್ ಸೊಸೈಟಿಯನ್ನು ಉದ್ಘಾಟಿಸಿದರು.
ಈ ಮೂಲಕ ನೇತ್ರದಾನದ ಬಗ್ಗೆ ಅರಿವು ಮೂಡಿಸಲು ಶಾಲಾ ಕಾಲೇಜುಗಳಲ್ಲಿ ನೇತ್ರದಾನದ ಬಗ್ಗೆ ಉಪನ್ಯಾಸಗಳನ್ನು ಆರಂಭಿಸಿದರು. ನೇತ್ರದಾನದ ಬೃಹತ್ ಆಂದೋಲನದ ಮೂಲಕ ವ್ಯಕ್ತಿ ಮೃತ ನಂತರ ಅವರ ಕಣ್ಣುಗಳನ್ನು ದಾನ ಮಾಡುವ ನೇತ್ರದಾನಕ್ಕೆ ಬೃಹತ್ ನೊಂದಣಿ ಕಾರ್ಯವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ಅದ್ಭುತ. ಸುಮಾರು ಇದರಿಂದ 300 ಕಣ್ಣುಗಳನ್ನು ಸಂಗ್ರಹಿಸಿ ಅಂಧರಿಗೆ ಅಳವಡಿಸಲು ಸಾಧ್ಯವಾಯಿತು. ಈ ಮಹಾನ್ ಕಾರ್ಯ ಬಹುಶಃ ರಾಜ್ಯದಲ್ಲೇ ಪ್ರಪ್ರಥಮ ಹಾಗೂ ದಾಖಲೆಯ ಸಂಗತಿ.
ನೇತ್ರ ಸಂಗ್ರಹ ಕಾರ್ಯಕ್ಕೆ ದಿನದ 24 ಗಂಟೆಯೂ ಇವರೊಂದಿಗೆ ಡಾ.ಕುಮಾರಸ್ವಾಮಿ, ಡಾ.ಅನುರಾಧಾ  ಸಹಕರಿಸುತ್ತಿದ್ದಾರೆ. ಸಂಗ್ರಹಿಸಿದ ಕಣ್ಣುಗಳನ್ನು ಪ್ರಾರಂಭದಲ್ಲಿ ಶಿವಮೊಗ್ಗದ ಡಾ.ಸುರೇಶ್ ಇಸ್ಲೂರು, ರೋಟರಿ ನೇತ್ರ ಭಂಡಾರ, ಬೆಂಗಳೂರಿನ ಲಯನ್ಸ್ ನೇತ್ರ ಭಂಡಾರ, ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಹಾಗು ಈಗ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿ ಕೊಡುತ್ತಿದ್ದಾರೆ.
  ಜನ ಸಾಮಾನ್ಯರಲ್ಲಿ ನೇತ್ರದಾನದ ಬಗ್ಗೆ ಅಜ್ಞಾನವಿದೆ. ಇನ್ನೊಂದೆಡೆ, ಮೂಢನಂಬಿಕೆ ಅರೆ ತಿಳಿವಳಿಕೆಗಳು ತೊಡಕುಂಟು ಮಾಡುತ್ತಿವೆ. ಯುವಕ- ಮಹಿಳಾ ಸಂಘಗಳು ನೇತ್ರದಾನಕ್ಕೆ ಜನರನ್ನು ಪ್ರೇರೇಪಿಸಬೇಕಿದೆ. ನೇತ್ರದಾನಕ್ಕೆ ಹೆಸರನ್ನು ನೊಂದಾಯಿಸಿ, ಬಂಧುಗಳನ್ನು, ಸ್ನೇಹಿತರನ್ನು ಹುರಿದುಂಬಿಸಬೇಕಿದೆ. ಇದರಿಂದ ಅಂಧರ ಬಾಳಿಗೆ ಆಶಾಕಿರಣವಾಗುತ್ತದೆ ಎನ್ನುತ್ತಾರೆ ಸಂಪತ್‌ರಾಜ್.
ಸದ್ಯ ಇಲ್ಲಿನ ಚನ್ನಗಿರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಎದುರು ಲೇವಾದೇವಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ನಾಮನಿರ್ದೇಶನ ಸದಸ್ಯರಾಗಿ, ಬಿಜೆಪಿ ನಗರ ಘಟಕದ ಕೋಶಾಧ್ಯಕ್ಷರಾಗಿ, ತರುಣ ಭಾರತಿ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆ ಮೂಕ ಪ್ರಾಣಿಗಳ ಬಗ್ಗೆ ತಮ್ಮ ವಿಶೇಷ ಕಾಳಜಿಯನ್ನು ಸಹ ಹೊಂದಿದ್ದು ಹೊಸ ದೆಹಲಿಯ ಪೀಪಲ್ಸ್ ಫಾರ್ ಅನಿಮಲ್ಸ್‌ನ ಅಜೀವ ಸದಸ್ಯರೂ ಹೌದು. ಪ್ರಾಣಿ ಹತ್ಯೆ ಹಾಗೂ ಪ್ರಾಣಿ ಬಲಿ ಕೊಡುವ ಬಗ್ಗೆ ಸಹ ಜನರಲ್ಲಿ ಜಾಗೃತಿಯನ್ನು ಉಂಟು ಮಾಡುತ್ತಿದ್ದಾರೆ. 
         2013 ರ ಸ್ವಾತಂತ್ರ ದಿನಾಚರಣೆಯ ಸಮಯದಲ್ಲಿ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಹಬ್ಬಗಳ ಸಮಿತಿ ಯವತಿಯಿಂದ ಸನ್ಮಾನಿಸಲಾಗಿದೆ.
ಜೀವದಾತ ಬಾಲಕ  
ಕೃಷ್ಣ ಡಿ. ನಾಯ್ಕ್



 ಶೌರ್ಯ ಶಬ್ದ ಕೇಳಿದಾಕ್ಷಣವೇ ಮೈ ರೋಮಾಂಚನವಾಗುತ್ತದೆ. ಅದರಲ್ಲೂ ಆಪತ್ತಿನಲ್ಲಿ ಸಿಲುಕಿರುವವರನ್ನು ಜೀವದ ಹಂಗು ತೊರೆದು ರಕ್ಷಿಸುವವರನ್ನು ಕಂಡರೆ ಅವರ ಬಗ್ಗೆ ಇನ್ನೂ ಗೌರವ ಅಧಿಕವಾಗುತ್ತದೆ. ನಗರದ ಬಾಲಕನೊಬ್ಬ ತನ್ನ ಜೀವದ ಹಂಗು ತೊರೆದು ನೀರಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಕ್ಕೆ ರಾಜ್ಯ ಸರ್ಕಾರದ ಈ ವರ್ಷದ ಶೌರ್ಯ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಆತನೇ ಕೃಷ್ಣ ಡಿ. ನಾಯ್ಕ್.
ಕೃಷ್ಣ ನಾಯ್ಕ್ ಸೇವಾಲಾಲ್ ನಗರದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದವನು. ಸದ್ಯ ದುರ್ಗಿಗುಡಿ ಸರ್ಕಾರಿ ಕನ್ನಡ ಮಾಧ್ಯಮದ ಪ್ರೌಢಶಾಲೆಯಲ್ಲಿ 8ನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಸೆಪ್ಟೆಂಬರ್ 23ರಂದು ಥರ್ಮೊಕೋಲ್ ಸಹಾಯದಿಂದ ಈಜಾಡುತ್ತಿದ್ದ ಪಕ್ಕದ ತ್ರಿಮೂರ್ತಿನಗರದ 10 ವರ್ಷದ ಬಾಲಕರಿಬ್ಬರು ಥರ್ಮೊಕೋಲ್ ಮುರಿದು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ಆ ಸಂದರ್ಭದಲ್ಲಿ ಜನರು ಇದನ್ನು ಕಂಡು ಬೊಬ್ಬೆಹಾಕುತ್ತಿದ್ದಾಗ ಅದೇ ಮಾರ್ಗವಾಗಿ ಸೈಕಲ್‌ನಲ್ಲಿ ಬರುತ್ತಿದ್ದ ಕೃಷ್ಣ ನಾಯ್ಕ್ ಹಿಂದೆ- ಮುಂದೆ ಯೋಚಿಸದೆ ನೀರಿಗೆ ಹಾರಿ ಒಬ್ಬನನ್ನು ಎಳೆದು ತಂದು ದಡಕ್ಕೆ ಸೇರಿಸುವಷ್ಟರಲ್ಲಿ ಮತ್ತೊಬ್ಬ ಕೊಚ್ಚಿಕೊಗಿದ್ದ. ಚೆನ್ನಾಗಿ ಈಜುಬಲ್ಲ ಕೃಷ್ಣ ನಾಯ್ಕ್ ತನ್ನ ಸಮಯ ಪ್ರಜ್ಞೆ ಮತ್ತು  ಶೌರ್ಯವನ್ನು ಅಲ್ಲಿ ಪ್ರದರ್ಶಿಸದಿದ್ದರೆ ಇನ್ನೊಬ್ಬ ಬಾಲಕನೂ ನೀರು ಪಾಲಾಗುತ್ತಿದ್ದ.
ಅಂದೇ ಸಾರ್ವಜನಿಕರಿಂದ ಪ್ರಶಂಸೆಗಳ ಸುರಿಮಳೆ ಈತನಿಗೆ ವ್ಯಕ್ತವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಈತನ ಹೆಸರನ್ನು ಹೊಯ್ಸಳನ ಹೆಸರಲ್ಲಿ ಕೊಡಮಾಡುವ ರಾಜ್ಯ ಮಕ್ಕಳ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು. ಆ ಪ್ರಕಾರ ಸರ್ಕಾರ ಈತನಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ಆದರೆ ಈ ಪ್ರಶಂಸೆ ಹೊಟ್ಟೆಯನ್ನೇನೂ ತುಂಬಿಸುವುದಿಲ್ಲವಲ್ಲ.
 ಕೃಷ್ಣ ನಾಯ್ಕ್‌ಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಈತನ ತಂದೆ ದೇವ್ಲಾ ನಾಯ್ಕ್ ಮತ್ತು ತಾಯಿ ವೀಣಾಬಾಯಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟದಲ್ಲಿ ಕೂಲಿ ಮಾಡುತ್ತಿದ್ದಾರೆ. ಅವರಿಗೆ ಮಗ ಮಾಡಿದ ಸಾಹಸಕ್ಕಿಂತ ಆತ ನೀರಿಗೆ ಹಾರಿದ್ದೇ ಹೆದರಿಕೆಯನ್ನು ಹುಟ್ಟಿಸಿದೆ. ಆಗಾಗ ಈಜುವ ಹವ್ಯಾಸವಿರುವುದರಿಂದ ಎಲ್ಲಿ ಅನಾಹುತ ಮಾಡಿಕೊಳ್ಳು ತ್ತಾನೋ ಎಂಬ ಆತಂಕ ಅವರಲ್ಲಿದೆ. ಅದಕ್ಕಾಗಿ ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ದರು. ಆದರೆ ಪಾಲಕರಿಗೆ ಬುದ್ಧಿ ಹೇಳಿ ಶಾಲೆಗೆ ಕಳುಹಿಸುವುದಾಗಿ ಆತನ ಅಕ್ಕ ಮಾಲಾ ಮತ್ತು ಬಾವ ಮಾಲತೇಶ ನಾಯ್ಕ್ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ.
ಬಾವ ಮಾಲತೇಶ್ ಸಹ ಕೂಲಿ ಮಾಡಿಯೇ ಜೀವನ ನಡೆಸುವವರು. ತನ್ನ ಕೂಲಿಯಿಂದಲೇ ಮನೆಯಲ್ಲಿ ಆರು ಜನರನ್ನು ಸಲುಹುವ ಜವಾಬ್ದಾರಿ ಇವರ ಹೆಗಲಮೇಲಿದೆ. ಆದರೂ  ಕೃಷ್ಣನಿಗೆ ಎಸ್ಸೆಸ್ಸೆಲ್ಸಿಯವರೆಗೆ ಶಿಕ್ಷಣ ಕೊಡಿಸುವುದಾಗಿ ಹೇಳುತ್ತಾರೆ. 
 ಶೌರ್ಯ ನಾನಂದುಕೊಂಡಿದ್ದಕ್ಕಿಂತ, ನನ್ನಲ್ಲಿರುವ ಶಕ್ತಿಗಿಂತ ಹೆಚ್ಚಿನ ಗೌರವವನ್ನು ತಂದುಕೊಟ್ಟಿದೆ. ಅಂಜದೆ, ಅಳುಕದೆ ನೀರಿಗೆ ಜಿಗಿದರೆ ಮಾತ್ರ ಅನಾಹುತದ ಸಂದರ್ಭದಲ್ಲಿ ನೀರಿಗೆ ಬಿದ್ದವರನ್ನು ಕಾಪಾಡಲು ಸಾಧ್ಯ. ಯೋಚಿಸುತ್ತ ಕಾಲಕಳೆದರೆ ಧೈರ್ಯ ಹೊರಟುಹೋಗುತ್ತದೆ. ದೈಹಿಕ ಶಕ್ತಿಗಿಂತ ಇಲ್ಲಿ ಮಾನಸಿಕ ಶಕ್ತಿಗೆ ಹೆಚ್ಚು ಮಹತ್ವ ಕೊಡಬೇಕು ಎನ್ನುತ್ತಾನೆ ಕೃಷ್ಣ. 
ಪ್ರಶಸ್ತಿ ಬಂದ ಸುದ್ದಿ ಕೇಳಿ ಹಲವರು ಗೌರವಿಸಿ ಹೋಗಿದ್ದಾರೆ. ಊರಿನ ಜನ ಈತನ ಶೌರ್ಯವನ್ನು ಕೊಂಡಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಕುಟುಂಬದೊಂದಿಗೆ ಬೆಂಗಳೂರಿಗೆ ಹೋಗಿ ಬರಲು ಅಷ್ಟೊಂದು ಹಣವಿಲ್ಲದ್ದರಿಂದ ಮಾ ಡೆವಲಪರ್ಸ್ ಮತ್ತು ಕೆಲವು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ಬೆಂಗಳೂರಿನ ಮೆಗಾವತ್ ಚಾರಿಟೆಬಲ್ ಟ್ರಸ್ಟ್ ಆತನ ಮುಂದಿನ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಹೇಳಿದೆ. ಈ ಸಾಧನೆಯ ಮೂಲಕ ಕೃಷ್ಣನ ಬದುಕು ಹಸನಾಗಲಿ. 
18.11.17
......................................
ಸಾಮಾಜಿಕ ಕಳಕಳಿಯ
ಡಾ. ರವೀಂದ್ರನಾಥ ಕೋಟಿ


ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ಮಾನವೀಯ ನೆಲೆಯ ಜೊತೆಗೆ ಅವರ ವೃತ್ತಿಯಾಗಿಯೂ ರೋಗಿಯನ್ನು ಗುಣಪಡಿಸುವ ಜವಾಬ್ದಾರಿ ವೈದ್ಯರದ್ದು. ಕೆಲವು ವೈದ್ಯರು ತಮ್ಮ ಸೇವಾಮನೋಭಾವದಿಂದ ಹೆಸರುಗಳಿಸಿ ರೋಗಿಗಳ ಮತ್ತು ಸಾರ್ವಜನಿಕರ ಮನಸ್ಸಿನಲ್ಲಿ ನೆಲೆಸುತ್ತಾರೆ. ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ, ಅಶಕ್ತರಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ. ಇಂತಹ ಮಾನವ ಕಾಳಜಿಯ, ಸೇವೆಯಿಂದಲೇ ಹೆಸರಾಗಿರುವ ಭದ್ರಾವತಿಯ ಡಾ. ರವೀಂದ್ರನಾಥ ಕೋಟಿ ಅವರಿಗೆ ಈ ಬಾರಿಯ ಜೀವಮಾನ ಸಾಧನೆಯ ಪ್ರಶಸ್ತಿ ದೊರೆತಿದೆ.
ಡಾ. ರವೀಂದ್ರನಾಥ ಭದ್ರಾವತಿಯಷ್ಟೇ ಅಲ್ಲ, ಜಿಲ್ಲೆಯಲ್ಲೇ ಹಿರಿಯ ವೈದ್ಯರು. ತಮ್ಮ ಪ್ರಾಥಮಿಕ ವಿದ್ಯಾಭಾಢ್ಯೆಸವನ್ನು ಭದ್ರಾವತಿ ಮತ್ತು ಮೈಸೂರಿನಲ್ಲಿ ಮುಗಿಸಿದ ಬಳಿಕ ಬಳ್ಳಾರಿಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಓದು ಮುಗಿಸಿ ತವರಿನಲ್ಲೇ ಜನರ ಆರೋಗ್ಯ ಸೇವೆ ಆರಂಭಿಸಿದವರು. 1974ರಲ್ಲೇ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿ ಕೋಟಿ ಕ್ಲಿನಿಕ್‌ನ್ನು ತೆರೆದು, ಆನಂತರ ಅದನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು. ಇಲ್ಲಿಂದ ಆರಂಭವಾದ ಅವರ ವೈದ್ಯಜೀವನ ಯಾತ್ರೆ ಇನ್ನೂ ಮುಂದುವರೆದಿದೆ.
 ಭದ್ರಾವತಿಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಯನ್ನು ಸ್ಥಾಪಿಸಿದ ಕೀರ್ತಿ ಇವರದ್ದು. ಇದರ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೇಂದ್ರೀಯ ಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. 68ರ ಹರಯದಲ್ಲೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಕನಿಷ್ಠ 100 ರೋಗಿಗಳನ್ನು ತಪಾಸಿಸುತ್ತಿದ್ದಾರೆ. 
ಉಚಿತ ನೇತ್ರ ಶಿಬಿರ ಮತ್ತು ಆರೋಗ್ಯ ಶಿಬಿರವನ್ನು  ಹಲವು ಬಾರಿ ಏರ್ಪಡಿಸಿ ಸಾವಿರಾರು ಜನರಿಗೆ ನೆರವಾಗುವಂತೆ ಮಾಡಿದ್ದಾರೆ. ಪ್ರತಿವರ್ಷ ಉಚಿತ ಹೃದಯ ತಪಾಸಣೆ ಶಿಬಿರವನ್ನು  ಏರ್ಪಡಿಸುತ್ತಿದ್ದಾರೆ. ಭದ್ರಾವತಿ ಲಯನ್ಸ್ ಕ್ಲಬ್ ಮೂಲಕ ಹತ್ತು ಹಲವು ಸೇವೆಯನ್ನು ಮಾಡಿರುವ ಇವರು ನೇತ್ರದಾನಿ ಡಾ. ಎಂ. ಸಿ. ಮೋದಿ ಮತ್ತು ಅವರ ಮಗ ಡಾ. ಸಿ ಎಂ ಮೋದಿ ಅವರಿಂದ ಶಿಬಿರವನ್ನು ಏರ್ಪಡಿಸಿದ್ದರು. ಸುಮಾರು 500ಕ್ಕೂ ಹೆಚ್ಚು ನೇತ್ರ ಶಸ್ತ್ರಚಿಕಿತ್ಸೆ ಈ ಶಿಬಿರದಲ್ಲಿ ನಡೆದಿತ್ತು. ಈಗ ಬೆಂಗಳೂರಿನ ಮಹಾವೀರ ನೇತ್ರ ಆಸ್ಪತ್ರೆಯವರಿಂದ ಪ್ರತಿವರ್ಷ ಉಚಿತ ಶಿಬಿರ ನಡೆಸುತ್ತಿದ್ದಾರೆ. ರಕ್ತದಾನ ಶಿಬಿರವನ್ನೂ ಸಾಕಷು ಬಾರಿ ಏರ್ಪಡಿಸಿದ್ದಾರೆ.   
ಹೋಮ್ ಗಾರ್ಡ್ಸ್  ಕಮಾಂಡಿಂಗ್ ಆಫೀಸರ್ ಆಗಿಯೂ ಡಾ. ಕೋಟಿ 9 ವರ್ಷ ಕೆಲಸ ನಿರ್ವಹಿಸಿದ್ದಾರೆ. ಇವರ ಕಾಲದಲ್ಲೇ ಮಹಿಳಾ ಹೋಮ್ ಗಾರ್ಡ್ಸ್ ನೇಮಕಾತಿಗೂ ಚಾಲನೆ ಸಿಗುವಂತೆ ಮಾಡಿದ್ದಾರೆ. ಈ ಗಾರ್ಡ್ಸ್‌ಗಳಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ ತರಬೇತಿ,  ತುರ್ತುಪರಿಸ್ಥಿಯನ್ನು ಎದುರಿಸುವ ಬಗ್ಗೆ ತರಬೇತಿ ಕೊಡಿಸಿದ್ದಾರೆ. ಇವರ ಈ ಸೇವೆ ಗಮನಿಸಿ ಭದ್ರಾವತಿ ಹೋಮ್ ಗಾರ್ಡ್ಸ್ ಘಟಕಕ್ಕೆ ಚಿನ್ನದ ಪದಕ ಸಹಿತ ಹಲವು ಪ್ರಶಸ್ತಿ ಲಭಿಸಿದೆ.
ಕಾಲೇಜು ದಿನದಲ್ಲಿಯೇ ಸ್ಕೌಟ್ಸ್, ಗೈಡ್ಸ್, ರೆಡ್ ಕ್ರಾಸ್‌ನಲ್ಲಿ ಕೆಲಸ ಮಾಡಿದ್ದರಿಂದ ಸಮಾಜಸೇವೆಯತ್ತ ಅವರ ಮನಸ್ಸು ತುಡಿಯುತ್ತಿತ್ತು. ವೈದ್ಯರಾದ ಮೇಲಂತೂ ಇದು ಇನ್ನಷ್ಟು ಜಾಸ್ತಿಯಾಗಿ ಸೂಕ್ತ ಅವಕಾಶವೂ ದೊರೆತಿದ್ದರಿಂದ ಉತ್ತಮ ಕೆಲಸ ಮಾಡಲು ಅವಕಾಶವಾಯಿತು ಎನ್ನುತ್ತಾರೆ ಅವರು. 
ಭದ್ರಾವತಿಯಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಆರಂಭಿಸಿದವರು ಡಾ. ಕೋಟಿ. ಈ ಸಂಸ್ಥೆಯ ಮೂಲಕ ಸುತ್ತಮುತ್ತಲ ಮತ್ತು ಪಟ್ಟಣದ ಪುರುಷ, ಮಹಿಳೆಯರಿಗೆ ಬಂದೂಕು ತರಬೇತಿಯನ್ನು ಕೊಡಲಾಗುತ್ತಿದೆ ಇವರ ಇಷ್ಟೆಲ್ಲಾ ಮಹೋನ್ನತ ಸೇವೆ ಗಮನಿಸಿ ದೆಹಲಿ ಮೆಡಿಕಲ್ ಅಸೋಸಿಯೇಶನ್ 2006ರಲ್ಲಿ ಗೌರವಿಸಿದೆ. ಈ ಬಾರಿ ರಾಜ್ಯ ವೈದ್ಯರ ಸಂಘ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
...................................................

ಸಾವಯವ ಕೃಷಿ ಸಾಧಕ
ದುರ್ಗಪ್ಪ ಅಂಗಡಿ



ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದ ರೈತನೊಬ್ಬ ಇಂದು ಸಾವಯವ ಕೃಷಿಯ ಮೂಲಕ ಜಿಲ್ಲೆಯಲ್ಲಿ ಅತ್ಯುತ್ತಮ ಕೃಷಿಕ ಎನಿಸಿಕೊಂಡಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ. ಆತ್ಮವಿಶ್ವಾಸವೊಂದೇ ಮನುಷ್ಯನನ್ನು ಉನ್ನತಕ್ಕೇರಿಸಬಲ್ಲದು, ಸಾಧನೆಗೆ ದಾರಿಯಾಗಬಲ್ಲದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಅವರೇ ದುರ್ಗಪ್ಪ ಅಂಗಡಿ.
ದುರ್ಗಪ್ಪ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬೇಕೆಂದು ಕನಸು ಕಂಡಿದ್ದರು. ಆದರೆ ಮನೆಯಲ್ಲಿ ಇದಕ್ಕೆ ವಿರೋಧ ಬಂದಿತು. ಜೊತೆಗೆ ಮನೆಯನ್ನೇ ಬಿಡಬೇಕಾಯಿತು. ಸುಮಾರು 1.45 ಲಕ್ಷ ರೂ. ಸಾಲವನ್ನು ಇವರಿಗೆ ಹೊರಿಸಿ ಉಟ್ಟ ಬಟ್ಟೆಯಲ್ಲೇ ಪತ್ನಿಯೊಂದಿಗೆ ಮನೆಯಿಂದ ಹೊರಹಾಕಲಾಯಿತು. ಆನಂತರ ಉಳಿಯಲು ಮನೆ, ಸಾಮಗ್ರಿ ಖರೀದಿಸಿ ಸುಮಾರು 3 ಲಕ್ಷ ರೂ. ವನ್ನು ಖಾಸಗಿಯವರಿಂದ ಸಾಲವಾಗಿ ಪಡೆದರು. ಅದು ಬಡ್ಡಿ ಸಹಿತ ಸುಮಾರು 4.50 ಲಕ್ಷ ದಷ್ಟಾಗಿತ್ತು. ಅದನ್ನು ಮರಳಿಸಲಾಗದೆ ನಿರಾಶರಾದರು. ಆತ್ಮಹತ್ಯೆಯೇ ದಾರಿ ಎಂದು ತೀರ್ಮಾನಿಸಿದ್ದರು.
ಈ ವೇಳೆ ಚಂದನ ಕನ್ನಡವಾಹಿನಿಯಲ್ಲಿ ಬಂದ ಕೃಷಿ ಕಾರ್ಯಕ್ರಮದಲ್ಲಿ ರೈತನೊಬ್ಬ ತನಗಿದ್ದ 2 ಎಕ್ರೆ ಜಮೀನಿನಲ್ಲಿ 9 ಲಕ್ಷ ರೂ. ಆದಾಯ ಗಳಿಸಿರುವ ಕಾರ್ಯಕ್ರಮ ನೋಡಿ ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮರುಚಿಂತನೆ ನಡೆಸಿದರು. ಇದಕ್ಕೆ ಇನ್ನಿಬ್ಬರು ಮಿತ್ರರೂ ಸಹ ಸಲಹೆ ನೀಡಿದರು. 
ಆ ಪ್ರಕಾರ ತಮ್ಮ ಪತ್ನಿಯನ್ನು ಧರ್ಮಸ್ಥಳ ಸ್ವಸಹಾಯ ಸಂಘಕ್ಕೆ ಸೇರಿಸಿ ಒಂದು ಲಕ್ಷ ರೂ. ಸಾಲ ಪಡೆದರು. ಇದರಲ್ಲಿ 25 ಸಾವಿರ ರೂ. ನಲ್ಲಿ ಅಂಗಡಿ ತೆರೆದರು. ಉಳಿದ ಹಣದಲ್ಲಿ ಸಾಲದ ಬಡ್ಡಿ ಕಟ್ಟತೊಡಗಿದರು. ಇನ್ನೊಂದೆಡೆ, ತೊಂಡೆ ಕೃಷಿ ಆರಂಭಿಸಿದರು. ಇದರಲ್ಲಿ ಒಂದು ವಾರಕ್ಕೆ 10 ಕ್ವಿಂಟಾಲ್ ಬೆಳೆ ಬರತೊಡಗಿತು. 8 ತಿಂಗಳಲ್ಲಿ ಈ ಬೇಳೆಯಲ್ಲಿ  ಬರೋಬ್ಬರಿ  4 ಲಕ್ಷ ರೂ. ಆದಾಯ ಬಂದಾಗ ದುರ್ಗಪ್ಪ ಅವರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಎಲ್ಲಾ ಸಾಲ ತೀರಿಸಿದರು. ಈಗ ಅವರ ಬಳಿ 7.5 ಎಕರೆ ಜಮೀನಿದೆ. ಇದರಲ್ಲಿ 5 ಎಕರೆಯಲ್ಲಿ ಭತ್ತ, ಉಳಿದವುಗಳಲ್ಲಿ ವಿವಿಧ ತರಕಾರಿ ಬೆಳೆಯುತ್ತಾರೆ. ಕೇವಲ ತರಕಾರಿಯಿಂದಲೇ ಇವರ ವಾರ್ಷಿಕ ಆದಾಯ ಕನಿಷ್ಟ 5 ಲಕ್ಷ ರೂ. ಇದೆ.
 ಯಾವುದೇ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಬಾರದು. ರಾಸಾಯನಿಕ ಬಳಸದೆ ಸಾವಯವದ ಮೂಲಕವೇ ಕೃಷಿ ಮಾಡಿದರೆ ಹೆಚ್ಚಿನ ಆದಾಯ ಸಾಧ್ಯ ಎನ್ನುವ ಅವರು, ತನ್ನ ಸಾಧನೆಗೆ ಶಿವಮೊಗ್ಗ ಕೃಷಿ, ತೋಟಗಾರಿಕೆ ವಿವಿಯವರು, ಕೃಷಿ, ತೋಟಗಾರಿಕೆ ಇಲಾಖೆಯವರು ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ. 
ಎಸ್ಸೆಸೆಲ್ಸಿಯವರೆಗೆ ಓದಿರುವ ದುರ್ಗಪ್ಪ ಅವರಿಗೆ ಈಗ 43ರ ಹರಯ. ಶಿಕಾರಿಪುರ ತಾಲೂಕು ಸಾಸರವಳ್ಳಿ ಗ್ರಾಮದವರಾದ ಇವರು ತಮ್ಮ ಹೊಲದಲ್ಲಿ ಅವರು ತೊಂಡೆ, ಡಬಲ್ ಬೀನ್ಸ್, ಭತ್ತ, ಮೆಕ್ಕೆ ಜೋಳ, ಅಡಕೆ, ನಾಟಿ ಕೋಳಿ ಮತ್ತು ಜೇನು ಸಾಕಾಣಿಕೆ, ಮೇವಿನ ಹುಲ್ಲು, ಇತರೆ ಮಿಶ್ರಬೆಳೆಯನ್ನು ಬೆಳೆಯುತ್ತಿದ್ದಾರೆ. ದಿನವಿಡಿ ಹೊಲದಲ್ಲೇ ಕಾಯಕ ಮಾಡುತ್ತಾ ಕೃಷಿಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಇವರ ಸಾಧನೆ ಗಮನಿಸಿ ಈ ಬಾರಿ ಬೆಂಗಳೂರು ಕೃಷಿ ವಿವಿ ಡಾ. ಜಿ. ಕೆ. ವೀರೇಶ್ ಎಂಡೊಮೆಂಟ್ ಅವಾರ್ಡ್ ನೀಡಿ ಗೌರವಿಸಿದೆ. ಇದು ರಾಜ್ಯದ ಸಾವಯವ  ಕೃಷಿ ಸಾಧಕನಿಗೆ ಕೊಡುವ ಉನ್ನತ ಪ್ರಶಸ್ತಿ. ಇದರೊಟ್ಟಿಗೆ ಧರ್ಮಸ್ಥಳ ಸಂಘದಿಂದ ಉತ್ತಮ ಕೃಷಿಕ ಪ್ರಶಸ್ತಿ, ಶಿವಮೊಗ್ಗ ಕೃಷಿ, ತೋಟಗಾರಿಕೆ ವಿವಿಯಿಂದ  ಜಿಲ್ಲಾ ಪ್ರಗತಿಪರ ರೈತ ಪುರಸ್ಕಾರ ದೊರೆತಿದೆ. ಇತರೆ ಸಂಘ, ಸಂಸ್ಥೆಗಳೂ ಸಹ ಗೌರವಿಸಿವೆ. ಸುಮಾರು 9 ಪ್ರಶಸ್ತಿಗಳನ್ನು ಈವರೆಗೆ ಅವರು ಧರಿಸಿದ್ದಾರೆ.
4.11.17
   ..............................................
ಭರತನಾಟ್ಯ ಸಾಧಕ 
ನಟನಂ ಕೇಶವಕುಮಾರ್

ದೂರವಾಗುತ್ತಿರುವ ಭಾರತೀಯ ಸಂಸಕ್ರತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಇಂದಿನ ಗುರಿಯಾಗಿದೆ. ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ  ಭರತನಾಟ್ಯ ಅಮೂಲ್ಯ ಕಾಣಿಕೆ ನೀಡುವ ಮೂಲಕ ಜನಪ್ರಿಯವಾಗಿದೆ. ಶಿವಮೊಗ್ಗದಲ್ಲಿ  ಭರತನಾಟ್ಯ ಕೇಂದ್ರವನ್ನು ಆರಂಭಿಸಿ, ನೂರಾರು ಮಕ್ಕಳಿಗೆ ತರಬೇತಿ ನೀಡುತ್ತಿರುವ ವಿದ್ವಾನ್ ಎಸ್. ಕೇಶವಕುಮಾರ್ ಅವರಿಗೆ ಈ ಬಾರಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ  ಘೋಷಿಸಲಾಗಿದೆ.
ಶಿವಮೊಗ್ಗದಲ್ಲಿ ಭರತನಾಟ್ಯ ಕಲಿತ ಪುರುಷರು ನಾಲ್ಕಾರು ಜನ ಇರಬಹುದು. ಆದರೆ ಅವರಾರೂ ಇದನ್ನು ವೃತ್ತಿಯಾಗಿರಿಸಿಕೊಂಡಿಲ್ಲ. ಕೇಶವಕುಮಾರ್ ಮಾತ್ರ ತಾನು ಕಲಿತ ವಿದ್ಯೆ ಇತರಿಗೂ ಸಿಗಬೇಕೆನ್ನುವ ದೃಷ್ಟಿಯಿಂದ ನಟನಂ ಬಾಲ ನಾಟ್ಯ ಕೇಂದ್ರ ಸಂಸ್ಥೆಯನ್ನು 28 ವರ್ಷದ ಹಿಂದೆ ಆರಂಭಿಸಿ, ಅದರ ಮೂಲಕ ಸಹಸ್ರಾರು ನೃತ್ಯಪಟುಗಳನ್ನು ಬೆಳೆಸಿದ್ದಾರೆ, ಬೆಳೆಸುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದ ಹಲವೆಡೆ ತಮ್ಮದೇ ಆದ ನೃತ್ಯ ಕೇಂದ್ರ ನಡೆಸುತ್ತಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್, ಕರ್ನಾಟಕ ಸಂಗೀತದಲ್ಲಿ ಸೀನಿಯರ್, ಮೈಸೂರು ವಿವಿಯಿಂದ  ಮಾಸ್ಟರ್ ಆಫ್ ಡಾನ್ಸ್ ಮತ್ತು ಕುವೆಂಪು ವಿವಿಯಿಂದ  ಕನ್ನಡ ಎಂಎ ಪದವಿ ಪಡೆದಿರುವ ಇವರು, ಭರತನಾಟ್ಯ ಉದ್ದೇಶ ಮೂಲವಾಗಿದ್ದರೂ  ಅದರೊಟ್ಟಿಗೆ ರಾಜ್ಯದ ಪ್ರಸಿದ್ಧ ಜಾನಪದ, ಸುಗ್ಗಿ ಕುಣಿತ, ಲಂಬಾಣಿ, ಕೊರವಂಜಿ ನೃತ್ಯ, ಕೋಲಾಟದ ವೈಭವವೂ ಅಳಿಯದಂತೆ ಮಾಡುತ್ತಿದ್ದಾರೆ. ಯೋಗ ಶಿಬಿರವನ್ನೂ ನಡೆಸುತ್ತಿದ್ದಾರೆ.
ಮಕ್ಕಳಿಗಾಗಿಯೇ ಇರುವ ಈ ಕೇಂದ್ರದ ಸಾಧನೆ ಗಮನಿಸಿ 1993 ರಲ್ಲಿ ನವದೆಹಲಿಯ ರಾಷ್ಟ್ರೀಯ ಬಾಲಭವನ ಮಾನ್ಯತೆ ನೀಡಿದೆ. ಶಿವಮೊಗ್ಗ, ಭದ್ರಾವತಿ, ಕಡೂರು ಸಹಿತ ಒಟ್ಟೂ 8 ಶಾಖೆಗಳ ಮೂಲಕ  ಸುಮಾರು 400 ಮಕ್ಕಳಿಗೆ  ನೃತ್ಯ ಕಲಿಸುತ್ತಿದ್ದಾರೆ. ಭಾರತ ಮಾತ್ರಲ್ಲದೆ, ರಶ್ಯಾ, ನೇಪಾಳ, ಜರ್ಮನಿ. ಕುವೈತ್, ಶ್ರೀಲಂಕಾ, ಜಪಾನ್, ಉಜ್ಬೆಕಿಸ್ಥಾನ್, ಮಂಗೋಲಿಯಾ, ಮಾರಿಶಸ್‌ನಲ್ಲೂ ತಮ್ಮ ಭರತನಾಟ್ಯ ಪ್ರದರ್ಶನ ನೀಡಿ ದೇಶದ ಹೆಮ್ಮೆಯ ಕಲೆಯ ಕಂಪನ್ನು ಪಸರಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ. ದೇವೇಗೌಡ,  ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ,  ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ್ ಜೋಶಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಕೇಶವಕುಮಾರ್ ನಾಟ್ಯ ಪ್ರದರ್ಶನವನ್ನು  ವೀಕ್ಷಿಸಿದ ಪ್ರಮುಖರು. ಇವರ ನೃತ್ಯ ಚಂದನ ವಾಹಿನಿ, ಶಂಕರ ಚಾನೆಲ್‌ನಲ್ಲಿ ಹಲವು ಬಾರಿ ಪ್ರಸಾರವಾಗಿದೆ.
    ನಗರದ ರಿಮಾಂಡ್ ಹೋಮ್‌ನಲ್ಲಿ, ಸರ್ಕಾರಿ ಬಾಲಕಿಯರ ನಿಲಯದಲ್ಲಿ  ಉಚಿತ ನೃತ್ಯ, ಸಂಗೀತ ಶಿಬಿರ ಏರ್ಪಡಿಸುತ್ತಾರೆ. ಕಿವುಡ, ಮೂಗ, ಅಂಧರ ಶಾಲಾ ಮಕ್ಕಳಿಗೆ ಉಚಿತ ಶಿಬಿರ ನಡೆಸಿದ ಖ್ಯಾತಿ ಇವರದ್ದು. ಆರ್ಟ್ ಆಫ್ ಲಿವಿಂಗ್ ನವದೆಹಲಿಯಲ್ಲಿ ಕಳೆದ ವರ್ಷ ನಡೆಸಿದ ಜಾಗತಿಕ ಸಾಂಸಕ್ರತಿಕ ಉತ್ಸವದಲ್ಲಿ, ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರ  ಕಚೇರಿಯಲ್ಲೂ  ಭರತನಾಟ್ಯ ಪ್ರದರ್ಶಿಸಿ ಸಾವಿರಾರು ಕಲಾಪ್ರಿಯರ ಮನಗೆದ್ದಿದ್ದಾರೆ. 
ಸುಮಾರು 17 ಯುವತಿಯರು ಇವರಿಂದ ನೃತ್ಯ ಕಲಿತು ರಂಗಪ್ರವೇಶ ಮಾಡಿರುವುದು ಇವರ ಬಹುದೊಡ್ಡ ಸಾಧನೆಯಾಗಿದೆ. ಗದಗದ ಕಲಾ ವಿಕಾಸ ಪರಿಷತ್ ರಾಷ್ಟ್ರೀಯ ಯುವ ಪ್ರಶಸ್ತ್ತಿಯನ್ನು ಇವರಿಗೆ 2006ರಲ್ಲಿ ನೀಡಿ ಗೌರವಿಸಿದೆ. ಇದರೊಟ್ಟಿಗೆ ರಾಜಕುಮಾರ್ ಸಾಧನ ರತ್ನ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ವಿಶಾಖಪಟ್ಟಣಂನ ಸ್ಕೂಲ್ ಅಫ್ ಥಿಯೇಟರನ ಕಲಾಜೀವ ಪುರಸ್ಕಾರ, ನಾಟ್ಯ ಕಲಾನಿಧಿ,  ನೃತ್ಯ ನಿಪುಣ ಮೊದಲಾದ ನೂರಾರು ಪ್ರಶಸ್ತಿ, ಸನ್ಮಾನಗಳು ಇವರ ಮುಡಿಗೇರಿವೆ. 
....................................  

86ರ ಅಜ್ಜ ಕ್ರೀಡಾಪಟು 
ರಾಮೇಗೌಡ


ಮನುಷ್ಯನಿಗೆ ವಯಸ್ಸು ಎನ್ನುವುದು ದೇಹಕ್ಕಾಗುತ್ತದೆಯೇ ವಿನಾ ಮನಸ್ಸಿಗಲ್ಲ. ಇದರಿಂದಾಗಿಯೇ ಬಹುತೇಕ ನಿವೃತ್ತರು ಹೆಚ್ಚು ಕ್ರಿಯಾಶೀಲರಾಗುತ್ತಾರೆ. ನಾವು ಹಿರಿಯರಲ್ಲ, ಬದಲಾಗಿ ರೀಸೈಕಲ್ ಆದ ಯುವಕರು ಎಂದು ಇವರು ಹೇಳುತ್ತಾರೆ.  ಇದೇ ವೇಳೆ, ಜೀವನದಲ್ಲಿ ವಯಸ್ಸನ್ನು ಮರೆತು ಸಾಧನೆ ಮಾಡಬೇಕು, ಮುನ್ನುಗ್ಗಬೇಕು ಎನ್ನುವ ಮಾತು ನೆನೆಪಿಗೆ ಬರುತ್ತದೆ.   
 ಕೆಲಸದಿಂದ ನಿವೃತ್ತರಾದ ನಂತರ ಎಷ್ಟೋ ಜನರು  ಮನೆಯಿಂದ ಹೊರಬರುವುದೇ ಇಲ್ಲ. ಇನ್ನೂ ಕೆಲವರಿಗೆ ನಿವೃತ್ತಿಯೇ ಹೊಸ ಜೀವನಕ್ಕೆ, ಸಾಧನೆಗೆ, ಕಾರಣವಾಗುತ್ತದೆ. ಹೊಸತನದ ತುಡಿತಕ್ಕೆ ಕಾತರರಾಗಿರುತ್ತಾರೆ. ಜೀವನದಲ್ಲಿ ಇನ್ನಷ್ಟು ಉತ್ಸಾಹಿಯಾಗಿರಲು, ಹಲವರಿಗೆ ಮಾದರಿಯಾಗಲು ನಿರ್ಧರಿಸುತ್ತಾರೆ. ಇಂತಹವರಲ್ಲಿ  ಈ ಬಾರಿಯ ಹಿರಿಯ ನಾಗರಿಕ ದಿನಾಚರಣೆಯಂದು ಕ್ರೀಡಾ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಗೆ ಪುರಸ್ಕೃತರಾದ ಭದ್ರಾವತಿಯ ಕ್ರೀಡಾಪಟು ರಾಮೇಗೌಡ ಒಬ್ಬರು.
  ಜಿಲ್ಲೆಯಲ್ಲಿ ರಾಮೇಗೌಡರ ಹೆಸರು ಕೇಳದವರಿಲ್ಲ. ಅವರು ತಮ್ಮ ನಿವೃತ್ತಿ ಮೊದಲು ಮಾಡಿದ ಕೆಲಸಕ್ಕಿಂತ ಹೆಚ್ಚಾಗಿ ಕ್ರೀಡಾಪಟುವಾಗಿಯೇ  ಆನಂತರ ಜನಪ್ರಿಯರಾಗಿದ್ದಾರೆ. ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟುವಾದ ಹೆಚ್.ರಾಮೇಗೌಡ ಮೂಲತಃ ತುರುವೇಕೆರೆಯವರು. ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಶಿಫ್ಟ್ ಇಂಜಿನೀಯರ್ ಆಗಿ 39 ವರ್ಷ ಸೇವೆ ಸಲ್ಲಿಸಿ 58 ವರ್ಷಕ್ಕೆ ನಿವೃತ್ತರಾದರು. ತಮ್ಮ ನಿವೃತ್ತಿಯ ನಂತರ ಎರಡು ವರ್ಷಗಳ ಕಾಲ ವೇಗದ ಓಟ, ವೇಗದ ನಡಿಗೆ ಸೇರಿದಂತೆ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ತರಬೇತಿ ಪಡೆದರು. ಇದೇ ಅವರ ಹೊಸ ಜೀವನಕ್ಕೆ, ಸಾಧನೆಗೆ ತಿರುವು ನೀಡಿತು.
 ಆನಂತರ ನಿರಂತರವಾಗಿ ತಾಲೂಕು, ಜಿಲ್ಲೆ, ರಾಜ್ಯ, ಅಂತರರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದು ದಾಖಲೆಯನ್ನು ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ಇವರು ಮಾಡಿರುವಷ್ಟು ದಾಖಲೆಯನ್ನು ದೇಶದಲ್ಲಿ ಯಾವ ಹಿರಿಯ ಕ್ರೀಡಾಪಟುವೂ ಮಾಡಿಲ್ಲ ಎನ್ನುವುದು. ಇದುವರೆಗೂ ಇವರು ಒಟ್ಟು 215 ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅದರಲ್ಲಿ 170 ರಲ್ಲಿಪ್ರಥಮ ಸ್ಥಾನ, 45 ರಲ್ಲಿ ದ್ವಿತಿಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಇವರಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದರೂ ಇನ್ನೂ ಸಾಧಿಸಬೇಕು ಎಂಬ ಛಲವಿದೆ. ಅವರು ನಡೆದಾಡುವಾಗ, ಇನ್ನೂ ಚಿರಯುವಕನಂತೆ ಕಾಣುತ್ತಾರೆ. ನಡೆದಾಡುವ, ಓಡುವ  ಎಲ್ಲಾ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಅಥವಾ ದ್ವಿತಿಯ ಸ್ಥಾನವನ್ನು ಪಡೆದೇ ತೀರುವ ಗುರಿಯನ್ನು ಹೊಂದಿ ಇಂದಿಗೂ ದಿನ ನಿತ್ಯ ನಡಿಗೆ ಹಾಗೂ ಓಟದ ತರಬೇತಿ ಪಡೆಯುತ್ತಿದ್ದಾರೆ. ಇವರ ಈ ಸಾಧನೆ ಇಂದಿನ ಕಿರಿಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.
ಈ ಹಿರಿಯನ ಸಾಧನೆ ಗಮನಿಸಿ ಸಂದ ಪುರಸ್ಕಾರಗಳು ನೂರಾರು. ಇತ್ತೀಚೆಗೆ ಆಚರಿಸಲಾದ ಹಿರಿಯ ನಾಗರಿಕ ದಿನಾಚರಣೆಯಲ್ಲಿ ರಾಜ್ಯ ಸರ್ಕಾರ ಗೌರವಿಸಿ ಒಂದು ಲಕ್ಷ ರೂ. ನಗದು ನೀಡಿದೆ.  ಈ ಹಣವನ್ನು ಅವರು ತಮ್ಮ ಸ್ವಂತಕ್ಕೆ ಬಳಸದೆ ಆರು ಅನಾಥಾಶ್ರಮಗಳಿಗೆ ನೀಡಲು ಮುಂದಾಗಿದ್ದಾರೆ. 86 ರ ಈ ಅಜ್ಜ ಸೋಲಿಲ್ಲದ ಸರದಾರರನಾಗಿ, ಅಷ್ಟೇ ಮಾನವೀಯ ಮತ್ತು ಅಂತಃಕರಣ ಉಳ್ಳವರಾಗಿದ್ದಾರೆ. ಈವರೆಗೆ ಕ್ರೀಡೆಗಾಗಿ ಸ್ವಂತ ಮೂರು ನಿವೇಶನ ಸೇರಿದಂತೆ  ಲಕ್ಷಾಂತರ ರೂ. ವ್ಯಯಿಸಿದ್ದಾರೆ. ಯಾವ ಬಹುಮಾನದ ಹಣವನ್ನೂ ಸ್ವಂತಕ್ಕೆ ಬಳಸಿಲ್ಲ. ದಾನಿಯೂ, ನಿರಂತರ ಕ್ರೀಡಾಸಾಧಕನೂ ಆಗಿ  ತಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದಾರೆ. 
ಪ್ರತಿನಿತ್ಯ 5ರಿಂದ 10 ಕಿ. ಮೀ. ವಾಕಿಂಗ್, ರನ್ನಿಂಗ್ ಮಾಡುತ್ತೇನೆ. ಆದ್ದರಿಂದಲೇ ಇಂದಿಗೂ ಆರೋಗ್ಯವಂತನಾಗಿದ್ದೇನೆ. ಇಂದಿನ ಯುವಕರು ಇದೇ ರೀತಿ ಸಾಧನೆ ಮಾಡಬೇಕು. ಕಷ್ಟಪಟ್ಟು ಮುಂದೆ ಬರಬೇಕು ಎಂದು ಸಲಹೆ ನೀಡುತ್ತಾರೆ. 
..................................

Tuesday 23 January 2018

 
ಶತಮಾನದ ಶಾಲೆಗೆ ಕಾಯಕಲ್ಪ
  ತಸ್ವೀರ್ ಅಹಮದ್ 


ಶಿಕ್ಷಣ ಎನ್ನುವುದು ಬಕೆಟ್ ತುಂಬುವ ವಸ್ತುವಲ್ಲ, ಬದಲಾಗಿ ದೀಪವನ್ನು ಹಚ್ಚುವುದು. ಈ  ಜ್ಯೋತಿ ಬೆಳಗುವ ಕೆಲಸವನ್ನು ಅನೇಕ ಮಹನೀಯರು ಇತ್ತೀಚೆಗೆ ಮಾಡುತ್ತಿದ್ದಾರೆ. ಅದರಲ್ಲೂ ಸಕಾರಿ ಶಾಲೆಗಳು ಅತಿ ಹಳೆಯದಾಗಿದ್ದು, ಅವುಗಳನ್ನು ತಾವು ವಹಿಸಿಕೊಂಡು ಅಥವಾ ದತ್ತು ಪಡೆದುಕೊಂಡು ಮುನ್ನಡೆಸುವ ಜವಾಬ್ದಾರಿಯನ್ನು ಹೊರುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಕೊಡಲಾಗಿದೆ. ಕೆಲವು ಸಂಘಟನೆಗಳು ಇದನ್ನು ದತ್ತು ಪಡೆದರೆ, ಇನ್ನೂ ಕೆಲವರು ವೈಯಕ್ತಿಕವಾಗಿ ದತ್ತು ಪಡೆದುಕೊಂಡಿದ್ದಾರೆ. ಶ್ರೀಮಂತರು ದತ್ತು ಪಡೆದು ಶಾಲೆ ನಡೆಸುವಂತಹುದೂ ಇದೆ. ಇಂತಹವರಲ್ಲಿ ಕೆಲವು ಹೃದಯವಂತ  ಶ್ರೀಮಂತರು ಇದನ್ನು ದತ್ತು ಪಡೆದಿದ್ದೂ ಇದೆ.  ಈ ಮೂಲಕ ಸಾಮಾಜಿಕ ಜವಾಬ್ದಾರಿ ಇದೆ ಎನ್ನುವುದನ್ನು ತೋರಿಸಿಕೊಡುತ್ತಿರುವವರು ಬಲು ಅಪರೂಪ. ಅಂತಹವರಲ್ಲಿ ತಸ್ವೀರ್ ಅಹ್ಮದ್ ಒಬ್ಬರು.
ತಸ್ವೀರ್ ಅವರು ಕುಂಸಿಯಲ್ಲಿರುವ ಶತಮಾನದ ಹಿಂದಿನ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ. ಈಗ ಈ ಶಾಲೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಗಿದೆ. ಆದರೆ ಸೌಲಭ್ಯ ಮತ್ತು ಮಕ್ಕಳಿಲ್ಲದೆ ಸೊರಗುವಂತಾಗಿತ್ತು.  ಆದರೆ ತಸ್ವೀರ್, ಇಂತಹ ಸರ್ಕಾರಿ ಶಾಲೆಯನ್ನು ಅನಾಥಗೊಳಿಸಲು ಬಿಡದೆ ಅಭಿವೃದ್ಧಿಪಡಿಸಿ ಉಳಿಸಲು ಮುಂದಾಗಿದ್ದಾರೆ.
 ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಸದಸ್ಯರಾಗಿರುವ ಎಚ್. ತಸ್ವೀರ್ ಅಹಮದ್, ನಾಲ್ಕು ತಿಂಗಳ ಹಿಂದೆ ಈ ಶಾಲೆಯನ್ನು ಸರ್ಕಾರದಿಂದ ದತ್ತು ಪಡೆದು 19 ಮಕ್ಕಳಿದ್ದಲ್ಲಿ ಈಗ ಅದು 72ಕ್ಕೆ ಏರುವಂತೆ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಮೂವರು ಶಿಕ್ಷಕರು ಹಾಗೂ ಒಬ್ಬ ಸಹಾಯಕಿಯನ್ನು ನೇಮಿಸಿದ್ದಾರೆ.  ಅಕ್ಕಪಕ್ಕದ ಊರುಗಳಿಂದ ಈ ಶಾಲೆಗೆ ಮಕ್ಕಳು ಬರಲು ಅನುಕೂಲವಾಗುವಂತೆ ಮಿನಿ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಇದಕ್ಕೆ ಸ್ವಂತ ಖರ್ಚಿನಲ್ಲಿ ನಿರ್ವಾಹಕ ಹಾಗೂ ಚಾಲಕನನ್ನು ನೇಮಿಸಿದ್ದಾರೆ. ಊರಿನಲ್ಲಿ ಉರ್ದು ಶಾಲೆಯ ಬಗ್ಗೆ ಕಾಳಜಿ ಕಡಿಮೆ ಇರುವುದನ್ನು ಅರಿತು ಇಂಗ್ಲಿಷ್ ಮಾಧ್ಯಮದಲ್ಲಿಯೂ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದ್ದಾರೆ.
ಶಾಲೆಯನ್ನು ದತ್ತು ಪಡೆದ ನಂತರ ಅವರು ಮಾಡಿದ ಮೊದಲ ಕೆಲಸವೆಂದರೆ, ಸುತ್ತಮುತ್ತಲ ಹಳ್ಳಿಗಳಾದ ಚೊರಡಿ, ಗುಂಡೂರು, ಹಳೆಕುಂಸಿ ಗ್ರಾಮಕ್ಕೆ ಶಿಕ್ಷಕರೊಂದಿಗೆ ತೆರಳಿ ಈ ಶಾಲೆಯಲ್ಲಿ ದೊರೆಯುವ ಸೌಲಭ್ಯ ಮತ್ತು ಗುಣಮಟ್ಟದ ವಿದ್ಯಾಭ್ಯಾಸದ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು. ಆಗ ಶಾಲೆಗೆ ಮಕ್ಕಳು ಬರಲು ವಾಹನ ಸೌಲಭ್ಯ ಇಲ್ಲದಿರುವುದು ಮತ್ತು ಶಿಕ್ಷಕರ ಕೊರತೆ ಕೇಳಿಬಂದಿದ್ದರಿಂದ ವಾಹನವನ್ನೂ ಖರೀದಿಸಿದರು, ಶಿಕ್ಷಕರನ್ನು ನೇಮಿಸಿಕೊಂಡರು. ಸುತ್ತಮುತ್ತಲ ಗ್ರಾಮದ ಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು ಎಂಬ ದೃಷಿಯಿಂದ ಇನ್ನೂ ಹತ್ತು ಹಲವು ಯೋಜನೆ ರೂಪಿಸಲು ಸನ್ನದ್ಧರಾಗಿದ್ದಾರೆ.
ಶಾಲೆಗೆ ನೂತನ ಕಟ್ಟಡದ ಅವಶ್ಯಕತೆ ಇರುವುದನ್ನು ಮನಗಂಡು ಅದಕ್ಕೆ ನೀಲಿನಕ್ಷೆ ರೂಪಿಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಹಲವರು ಉತ್ತಮ ಉದ್ಯೋಗದಲ್ಲಿರುವುದರಿಂದ ಅವರೂ ಸಹ ಕೈಲಾದ ನೆರವು ನೀಡುವುದಾಗಿ ಘೋಷಿಸಿರುವುದು ತಸ್ವೀರ್ ಅವರ ಕಾರ್ಯಕ್ಕೆ ಇನ್ನಷ್ಟು ಬಲಬಂದಂತಾಗಿದೆ.  ಒಂದು ಕಾಲದಲ್ಲಿ ಹೆಸರಾಂತ ಶಾಲೆಯಾಗಿದ್ದ ಇದನ್ನು ಮತ್ತೆ ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ತಮ್ಮ ಕುಟುಂಬದ ಅನೇಕರು ಈ ಶಾಲೆಯಲ್ಲಿ ಓದಿದ್ದಾರೆ. ಮೈಸೂರು ಅಬ್ದುಲ್  ರಹೀಮ್ ಸಾಹೇಬರು ಆರಂಭಿಸಿದ ಈ ಶಾಲೆ ಮತ್ತೆ ಜಿಲ್ಲೆಯಲ್ಲಿ ಪ್ರಖ್ಯಾತವಾಗುವಂತೆ ಮಾಡುತ್ತೇನೆ ಎನ್ನುವ ಛಲ ಮತ್ತು ವಿಶ್ವಾಸದೊಂದಿಗೆ ತಸ್ವೀರ್  ಮುಂದಡಿ ಇಟ್ಟಿದ್ದಾರೆ. 
4.10.17
.............................................
ದಾಖಲೆಯ ರಕ್ತದಾನಿ
ಯಜ್ಞನಾರಾಯಣ


18ನೆಯ ವರ್ಷಕ್ಕೆ ಯೌವ್ವನ ಬರುತ್ತದೆ, ವಾಹನ ಚಾಲನೆಗೆ ಅನುಮತಿ ಸಿಗುತ್ತದೆ. ಆ ವರ್ಷದಿಂದಲೇ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವವುಳಿಸುವ ಜವಾಬ್ದಾರಿಯನ್ನು ಆರಂಭಿಸಿ ಎನ್ನುವ ಮಾತಿದೆ. ರಕ್ತದಾನದಿಂದ ನಾವು ಕಳೆದುಕೊಳ್ಳುವಂತದ್ದೇನಿಲ್ಲ. ಬದಲಿಗೆ ಒಂದು ಜೀವವನ್ನು ಉಳಿಸಿದಂತಾಗುತ್ತದೆ. ತಾಯಿಯ ಕಣ್ಣೀರು ಮಗುವಿನ ಜೀವ ಉಳಿಸದೆ ಇರಬಹುದು, ಆದರೆ ನಾವು ದಾನ ಮಾಡುವ ಒಂದು ಹನಿ ರಕ್ತ  ಆ ಜೀವವನ್ನು ಉಳಿಸಬಲ್ಲದು.
ರಕ್ತದಾನ ಮಹಾದಾನ ಎಂದು ತಿಳಿದು ರಕ್ತ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಜಾಗೃತಿ  ಉಂಟಾಗುತ್ತಿದೆ. ಶಿವಮೊಗ್ಗದಲ್ಲಿ ರಕ್ತದಾನ ಮಾಡಿ ದಾಖಲೆ ಮಾಡಿದವರಿದ್ದಾರೆ. ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಎಸ್. ಜಿ. ಯಜ್ಞನಾರಾಯಣ 106 ಬಾರಿ ರಕ್ತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ, ಇತರರಿಗೆ ಮಾದರಿಯಾಗಿದ್ದಾರೆ. ಯಜ್ಞನಾರಾಯಣ ಅವರಿಗೆ ಈಗ 77ರ ಹರಯ. ರಕ್ತದಾನಿಗಳಿಗೆ ಇವರು ಪ್ರೇರಕ ಶಕ್ತಿಯಾಗಿದ್ದಾರೆ.
ಮೂಲತಃ ಹೊಸನಗರ ತಾಲೂಕಿನ ನಗರದವರಾದ ಇವರು ಡಿಪ್ಲೊಮಾ ಇನ್ ಫಾರ್ಮಸಿ ಓದಿ ನಗರದ ಜ್ವರಾರಿ ಕಂಪನಿಯಲ್ಲಿ 18 ವರ್ಷ ಕೆಲಸ ಮಾಡಿ ಅನುಭವ ಗಳಿಸಿ ಆನಂತರ ತಮ್ಮದೇ ಆದ ಮೆಡಿಕಲ್ ಅಂಗಡಿಯನ್ನು ಆರಂಭಿಸಿದರು. ನಗರದ ಜೆಪಿಎನ್ ರಸ್ತೆಯಲ್ಲಿರುವ ರಮ್ಯಾ ಮೆಡಿಕಲ್‌ನ್ನು 37 ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ತಮ್ಮ ಪುತ್ರಿ ರಮ್ಯಾ ಹೆಸರಿನಲ್ಲೇ ಇದನ್ನು ಸ್ಥಾಪಿಸಿದ್ದಾರೆ.
ಎ ಪೊಸಿಟಿವ್ ರಕ್ತದ ಗ್ರುಪ್ ಇವರದ್ದು. 1974ರಲ್ಲಿ ಪ್ರಥಮ ಬಾರಿಗೆ ರಕ್ತ ನೀಡುವ ಅವಕಾಶ ಎದುರಾಯಿತು. ಆಗ ರಕ್ತದಾನ ಎಂದರೇನು ಎನ್ನುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಆದರೂ ರಕ್ತದಾನ ರೋಗಿಗೆ ಇದ್ದ ಅವಶ್ಯಕತೆ ಅರಿತು ಮಾಡಿದರು. ಆಗ ಶಿವಮೊಗ್ಗದಲ್ಲಿ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ರಕ್ತ ಪಡೆಯಲಾಗುತ್ತಿತ್ತು. ಆನಂತರ ರೋಗಿಗಳಿಗೆ ಮತ್ತು ಅಪಘಾತಕ್ಕೀಡಾದವರಿಗೆ ರಕ್ತ ಬೇಕಾದಾಗ ಅಲ್ಲಿನ ಸಿಬ್ಬಂದಿ ಮತ್ತು ವೈದ್ಯರು ಸತತವಾಗಿ ಇವರನ್ನು ಸಂಪರ್ಕಿಸತೊಡಗಿದರು. ಇದರಿಂದ ರಕ್ತದಾನ ಮಾಡುತ್ತ ಬಂದರು.
ಇವರ ರಕ್ತದಾನದದ ಬಗ್ಗೆ ಅರಿತ ಹಲವರು ಕೂಡ ರಕ್ತದಾನಕ್ಕೆ ಮುಂದಾದರು. ಕ್ರಮೇಣ ರಕ್ತದಾನಿಗಳ ಸಂಖ್ಯೆ ಬೆಳೆಯತೊಡಗಿತು. ರಕ್ತದಾನಿಗಳ ಇಚ್ಛೆಯಂತೆ 2009ರಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಶಿವಮೊಗ್ಗದಲ್ಲಿ ಈ ಸಂಸ್ಥೆ ನೂರಾರು ರಕ್ತದಾನಿಗಳನ್ನು ಪ್ರತಿವರ್ಷ ಹುಟ್ಟುಹಾಕುತ್ತಲೇ ಇದೆ. ಯುವಕರಿಗೆ ಮಾರ್ಗದರ್ಶಕರಾಗಿರುವ ಯಜ್ಞನಾರಾಯಣ ಅವರ ರಕ್ತದಾನದ ಯಶೋಗಾಥೆ ಅರಿತು ರಾಜ್ಯಮಟ್ಟದಲ್ಲಿ ಸನ್ಮಾನ, ಗೌರವಗಳು ಸಂದಿವೆ. ಭಾರತೀಯ ಔಷಧ ನಿಯಂತ್ರಕರ ಸಂಘದಿಂದ ರಾಜ್ಯಮಟ್ಟದ ಸನ್ಮಾನ ಇವರಿಗೆ ದೊರೆತಿದೆ. ಬೆಂಗಳೂರಿನ ಇಮ್ಮಡಿ ಪುಲಿಕೇಶಿ ಸಂಸ್ಥೆಯವರು ಅದೇ ಹೆಸರಿನಲ್ಲಿ ಸನ್ಮಾನಿಸಿ ಬಿರುದು ನೀಡಿದ್ದಾರೆ. ಶಿವಮೊಗ್ಗದ ರೋಟರಿ ಕ್ಲಬ್ ಸಹಿತ ಹತ್ತಾರು ಸಂಸ್ಥೆಗಳು ಗೌರವಿಸಿವೆ. 
ಕಳೆದ ವಾರವಷ್ಟೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದವರು ಇವರ ಸಾಧನೆಯನ್ನು ಮನ್ನಿಸಿ ಅದ್ದೂರಿಯ ಗೌರವ ಅರ್ಪಿಸಿದ್ದಾರೆ. ಇವರ ಪತ್ನಿ ವಿಜಯಾ ಭದ್ರಾವತಿ ಆಕಾಶವಾಣಿಯ ಕಲಾವಿದೆಯಾಗಿದ್ದಾರೆ. ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇವರ ಸಹೋದರ ಎನ್ನುವುದು ಇನ್ನೊಂದು ವಿಶೇಷ. ಮರಣಾನಂತರ ತಮ್ಮ ದೇಹ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ ಮತ್ತು ಕಣ್ಣನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ನೀಡುವುದಾಗಿ  ಘೋಷಿಸಿಕೊಂಡಿದ್ದಾರೆ.
ನನ್ನಿಂದ ರಕ್ತ ಪಡೆದು ಬದುಕುಳಿದವರು, ಆರೋಗ್ಯದಿಂದಿರುವವರು ಇಂದಿಗೂ ತಮ್ಮಲ್ಲಿಗೆ ಬಂದು ಸ್ಮರಿಸುತ್ತಾರೆ. ಇಂತಹ ಮಹಾನ್ ಕಾರ್ಯ ಮಾಡಿದ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ ಯಜ್ಞನಾರಾಯಣ.
23.9.2017
.......................... 
       
ವಿಶ್ವ ದಾಖಲೆಯ ಪ್ರಾಧ್ಯಾಪಕ 
 ಅರವಿಂದ ಮಲ್ಲಿಕ್
....................................

ಉತ್ತಮ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ಹೇಗೆ ಕೊಡಬಲ್ಲೆ ಎನ್ನುವುದರ ಬಗ್ಗೆ ಸದಾ ಯೋಚಿಸುತ್ತಾನೆ. ಇದಕ್ಕಾಗಿ ಶಿಕ್ಷಕನೂ ಕೂಡ ವಿದ್ಯಾರ್ಥಿಗಳಂತೆಯೇ ದಿನನಿತ್ಯ ಹೊಸ ಚಿಂತನೆಗಳಲ್ಲಿ, ಸಂಶೋಧನೆಗಳಲ್ಲಿ ತನ್ನನ್ನು ಅಳವಡಿಸಿಕೊಳ್ಳುತ್ತಾನೆ. 
ಡಿ.ಎಂ ಅರವಿಂದ್ ಮಲ್ಲಿಕ್ ಶಿವಮೊಗ್ಗದ ಪೆಸಿಟ್ ಕಾಲೇಜಿನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ. ಮೊಬೈಲ್ ಮೂಲಕವೇ ವಿದ್ಯಾರ್ಥಿಗಳಿಗೆ ಪಾಠ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಫ್ಲಿಫ್ಟ್ ಕ್ಲಾಸ್ ರೂಪಿಸಿದ ಕೀರ್ತಿ ಇವರದದ್ದು. ಡಿಸೈನ್ ಥಿಂಕಿಂಗ್ ಎಂಬ ಹೊಸ ಪರಿಕಲ್ಪನೆಯನ್ನೂ ಹುಟ್ಟುಹಾಕಿದ್ದಾರೆ. ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂನ್ನು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೇಗೆ ಬಳಸಿಕೊಳ್ಳಬಹುದೆನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಇವುಗಳ ಮೂಲಕವೇ ತಮ್ಮ ಸಂದೇಹವನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಮಾರನೆಯ ದಿನ ಪಾಠ ಮಾಡುವ ಅಧ್ಯಾಯದ ಕೆಲವು ವಿಚಾರಗಳನ್ನು ಮುನ್ನಾದಿನವೇ ಮಕ್ಕಳಿಗೆ ತಿಳಿಸಿ ಅವರಲ್ಲಿ ಕುತೂಹಲ, ಆಸಕ್ತಿ ಹೆಚ್ಚುವಂತೆ ಮಾಡುತ್ತಿದ್ದಾರೆ.
  ಪಾಠ ಮಾಡುವ ವಿಚಾರದಲ್ಲಿ ಏನೆಲ್ಲ ನಾವೀನ್ಯತೆಯನ್ನು ಅಳವಡಿಸಿಕೊಳ್ಳಬಹುದು ಎನ್ನುವುದರ ಬಗ್ಗೆಯೇ ಸದಾ ಚಿಂತಿಸುವ ಅರವಿಂದ್, ಬಿಇ, ಎಂಬಿಎ ಪದವೀಧರರು. ತುಮಕೂರಿನಲ್ಲಿ ಬಿಇ ಮುಗಿಸಿ ಮಣಿಪಾಲದಲ್ಲಿ ಎಂಬಿಎ ಓದಿ, ಮಣಿಪಾಲ್ ಪ್ರೆಸ್‌ನ ಮಾರ್ಕೆಟಿಂಗ್, ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿ 2011ರಿಂದ ಪೆಸಿಟ್‌ನಲ್ಲಿ ಅಧ್ಯಾಪಕರಾಗಿದ್ದಾರೆ.
ಫ್ಲಿಫ್ಟ್ ಕ್ಲಾಸ್ ಎನ್ನುವ ಹೊಸ ಅವಿಷ್ಕಾರವನ್ನು 2011ರಲ್ಲೇ ಇವರು ಮಾಡಿದ್ದಾರೆ. ತಾವು ಮಾಡುವ ಪಾಠವನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ತಮ್ಮದೇ ಆದ ವೆಬ್‌ಸೈಟ್‌ಗೆ ಹಾಕುತ್ತಾರೆ. ಮಕ್ಕಳು ಇದರ ಲಾಭ ಪಡೆಯುತ್ತಾರೆ. ವೆಬ್‌ಸೈಟ್‌ಗೆ ಹೋದರೆ ಪಾಠದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ತರಗತಿಗೆ ಬಾರದ ವಿದ್ಯಾರ್ಥಿಯೂ ಇದರ ಲಾಭಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಆಗಾಗ ಪಾಠ ಮನನ ಮಾಡಿಕೊಳ್ಳಲು ಸಹಾಯಕವಾಗಿದೆ. ಪ್ರಯಾಣದಲ್ಲಿರಲಿ, ಬಂಧು-ಮಿತ್ರರ ಮನೆಯಲ್ಲಿರಲಿ, ಎಲ್ಲಿದ್ದರೂ ಇದನ್ನು ಓದಿಕೊಳ್ಳಬಹುದು, ಕೇಳಿಸಿಕೊಳ್ಳಬಹುದು. ಮಕ್ಕಳು ಪಠ್ಯ ಓದುವುದಕ್ಕಿಂತ ಹೆಚ್ಚು ಇದರಲ್ಲೇ ತೊಡಗಿಸಿಕೊಂಡು ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.
 ಸ್ಟ್ರೆಟೆಜಿಕ್ ಮ್ಯಾನೇಜ್‌ಮೆಂಟ್ ಎಂಬ ವಿಷಯವನ್ನು ಬೋಧಿಸುವ ಅರವಿಂದ್, ಅಮೆರಿಕದಲ್ಲಿ ಕಲಿಸಲ್ಪಡುವ ಫ್ಲಿಫ್ಟ್ ಕ್ಲಾಸನ್ನು ಜಾರಿಗೊಳಿಸಿದ ಪ್ರಪ್ರಥಮ ಭಾರತೀಯ. ಇದಕ್ಕಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಿಸೈನ್ ಥಿಂಕಿಂಗ್ ಎಂಬ ಪರಿಕಲ್ಪನೆಯನ್ನೂ ಜಾರಿಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಕನ್ಸೂಮರ್ ಬಿಹೇವಿಯರ್ ಬಗ್ಗೆ ಪಾಠ ಮಾಡಿದ್ದಾರೆ. ಗ್ರಾಹಕ ಸಾಮಗ್ರಿ ಖರೀದಿಸುತ್ತಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಂಗೆ ಹಾಕಿ ಅದರ ಬಗ್ಗೆ ವಿದ್ಯಾರ್ಥಿಗಳೇ ವಿವರಣೆ ನೀಡುವ ಹೊಸತನಕ್ಕೂ ಕೈಹಾಕಿದ್ದಾರೆ.
 ವೈವ್ ರೆಕಾರ್ಡಿಂಗ್, ಮೈಂಡ್ ಮ್ಯಾಪ್ ಮೂಲಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತರಾಗುವಂತೆ ಮಾಡಿದ ಕೀರ್ತಿ ಇವರದ್ದು. ತಮಿಳುನಾಡು ಸರ್ಕಾರ 2014ರಲ್ಲಿ ಇವರ ಈ ಸಾಧನೆಗೆ ಬೆಸ್ಟ್ ಟ್ರೆಂಡ್ ಸೆಟ್ಟರ್ ಎಂಬ ಪ್ರಶಸ್ತಿ ನೀಡಿದೆ. ಲಿಮ್ಕಾ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದಾರೆ. ಅರವಿಂದ್ ಒಟ್ಟಾರೆ 9 ರಾಷ್ಟ್ರೀಯ, 4 ಅಂತಾರಾಷ್ಟ್ರೀಯ ಮತ್ತು 5 ವಿಶ್ವ ದಾಖಲೆ ಮಾಡಿದ್ದಾರೆ. ವಿಶೇಷವೆಂದರೆ, ಇವ್ಯಾವುದನ್ನೂ ಅವರು ಪ್ರಚಾರ ಮಾಡಿಕೊಳ್ಳಲು ಹೋಗಿಲ್ಲ. ನವದೆಹಲಿಯ 3ಇ ಇನೊವೇಟಿವ್ ಫೌಂಡೇಶನ್ ಮೊನ್ನೆ ಶಿಕ್ಷಕರ ದಿನದಂದು ಇವರಿಗೆ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದೆ. 
ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವ , ಕ್ರಿಯಾಶೀಲತೆ ಹೆಚ್ಚಿಸಬೇಕು. ಇದಕ್ಕಾಗಿ ಶಿಕ್ಷಕ ಸತತ ವಿದಾರ್ಥಿಯಾಗಿರಬೇಕು. ನೋಟ್ಸ್ ಕೊಟ್ಟು ಮತ್ತು ಪಠ್ಯದಲ್ಲಿರುವಷ್ಟನ್ನೇ ಹೇಳಿದರೆ ಅದು ಕೇವಲ ಅಂಕ ಗಳಿಕೆಗೆ ಮಾತ್ರ ಅನುಕೂಲ. ಕಲಿಕೆಯಿಂದ ಹೊಸತನ ಮೂಡಬೇಕು. ಅವರ ಬದುಕು ರೂಪುಗೊಳ್ಳಬೇಕು ಎನ್ನುತ್ತಾರೆ ಅರವಿಂದ್. 
16.9.17
..............................................
  
ಬದುಕು ಬದಲಿಸಿದವರು
ಎ.ಎಸ್. ಶೈಲಜಾ


ಶಿಕ್ಷಕ ವೃತ್ತಿಯು ಅತ್ಯಂತ ಉತ್ಕೃಷ್ಟವಾದುದು. ಇದು ವ್ಯಕ್ತಿಯನ್ನು ರೂಪಿಸುತ್ತದೆ, ಆತನ ಭವಿಷ್ಯವನ್ನು ನಿರ್ಧರಿಸುತ್ತದೆ. ಉತ್ತಮ ಶಿಕ್ಷಕನನ್ನು ವಿದ್ಯಾರ್ಥಿಗಳು ಸದಾ ಸ್ಮರಿಸುತ್ತಾರೆ. ಇದಕ್ಕಿಂತ ದೊಡ್ಡ ಗೌರವ ಶಿಕ್ಷಕನಿಗೆ ಇನ್ನೊಂದಿಲ್ಲ ಎಂದು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಒಂದೆಡೆ ಹೇಳಿದ್ದಾರೆ.
ಎ.ಎಸ್. ಶೈಲಜಾ ಒಬ್ಬ ಮಾತೃಹೃದಯಿ ಶಿಕ್ಷಕಿ. ತನ್ನ ಹವ್ಯಾಸ, ಅಭಿರುಚಿಗಳ ಮೂಲಕ ಮಕ್ಕಳ ಬದುಕನ್ನು ಯಶಸ್ವಿಯಾಗಿ ರೂಪಿಸಿದ್ದಾರೆ. ಶಿಕ್ಷಣದ ಮೂಲಕ ಆ ಮಕ್ಕಳ ಬದುಕಿನ ವಿಧಾನ ಮತ್ತು ಸಾಮಾಜಿಕ ಸ್ಥಾನಮಾನವನ್ನು ಬದಲಿಸಿದ್ದಾರೆ. ಜೊತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ. ಇಂತಹ ಅಪರೂಪದ ಈ ಶಿಕ್ಷಕಿಗೆ ಈ ಬಾರಿ ರಾಜ್ಯ ಪ್ರಶಸ್ತಿ ದಕ್ಕಿದೆ. 
ಜಿಲ್ಲೆಯಲ್ಲಿ ಏಕಮಾತ್ರ ಹಾವಾಡಿಗರ ಕೇರಿ ಇರುವ ಗ್ರಾಮವಿದು. ಇಲ್ಲಿರುವ ಸುಮಾರು 25ರಷ್ಟು ಹಾವಾಡಿಗ ಕುಟುಂಬವಿದೆ. ಇವರು ಹಾವಾಡಿಸುವುದಿಲ್ಲ, ಭಿಕ್ಷೆ ಬೇಡುವುದಿಲ್ಲ. ಬದಲಾಗಿ ನೌಕರಿಯತ್ತ ಮುಖ ಮಾಡಿದ್ದಾರೆ. ಇವರ ಮಕ್ಕಳು ದಿನನಿತ್ಯ ಶಾಲೆಗೆ ಹೋಗುತ್ತಾರೆ. ತರಗತಿಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಈ ರೀತಿ ಊರಿನಲ್ಲಿ ಮತ್ತು ಹಿರಿಯರಲ್ಲಿ ಜಾಗೃತಿ ಮೂಡಿಸಿ, ಮಕ್ಕಳಲ್ಲಿ ಪ್ರೀತಿ ಮೂಡಿಸಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದವರು ಅಲ್ಲಿನ ಶಿಕ್ಷಕಿ  ಶೈಲಜಾ.
 ಸಾಗರ ಮತ್ತು ಹೊಸನಗರ ಗಡಿಭಾಗದಲ್ಲಿರುವ ಗಡಿಕಟ್ಟೆ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರು, ತಾಲೂಕಿನ ಯಾವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ಇಲ್ಲದಷ್ಟು  ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿರುವಂತೆ ಮಾಡಿದ್ದಾರೆ. ಗ್ರಾಮಸ್ಥರ ನೆಚ್ಚಿನ ಶಿಕ್ಷಕಿಯಾಗಿ, ನಾಗರಿಕ ಸಮಾಜದಿಂದ ದೂರವಿದ್ದ, ಕನ್ನಡವೇ ಅರಿಯದ ಈ ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸಿ ಭಾಷಾಜ್ಞಾನ ಮಾಡಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಈಗ ಈ ಮಕ್ಕಳು ಇತರ ಮಕ್ಕಳಂತೆ ಸರಿಸಮವಾಗಿ ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ. ಸಂಸ್ಕೃತ ಶ್ಲೋಕಗಳನ್ನು ಕಲಿತು ಸ್ಪರ್ಧೆಯಲಿ ಭಾಗವಹಿಸುತ್ತಿದ್ದಾರೆ. ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
 ಶಾಲಾ ಮಕ್ಕಳನ್ನು ಈ ರೀತಿ ಸಾಂಸ್ಕೃತಿಕವಾಗಿಯೂ ತಯಾರು ಮಾಡಿದ ಶೈಲಜಾ, ಸಾಧನೆ ಇಷ್ಟಕ್ಕೇ ನಿಂತಿಲ್ಲ. ಅಕ್ಷರ ತುಂಗಾ, ಸಂಪೂರ್ಣ  ಸಾಕ್ಷರತಾ ಆಂದೋಲನದಲ್ಲಿ ಯುವತಿ ಮಂಡಳಿಯನ್ನು ತೊಡಗಿಸಿದ್ದು, ಕಲಿಕಾ ಕೇಂದ್ರ ನಡೆಸುವಂತೆ ಮಾಡಿಸಿದ್ದು, ಅಪ್ನಾ ದೇಶ್ ಮೂಲಕ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು,  ಯುವಜನ ಮೇಳಕ್ಕೆ ಯುವತಿಯರ ತಂಡವನ್ನು ಸಿದ್ಧಗೊಳಿಸಿದ್ದಾರೆ. ಶಾಲೆಗೆ ಅಗತ್ಯ ಪರಿಕರಗಳನ್ನು, ಸಾಧನ, ಮೂಲಸೌಕರ್ಯವನ್ನು ದಾನಿಗಳಿಂದ ಹಣ ಸಂಗ್ರಹಿಸಿ  ಅನುಷ್ಠಾನಗೊಳಿಸಿದ್ದಾರೆ. ಶಾಲಾ ಮೈದಾನ, ವನಕ್ಕಾಗಿ 5.14 ಎಕರೆ ಜಾಗವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೈಲಜಾ ಸ್ವತಃ ನಾಟಕ ಕಲಾವಿದೆ. ಪರಿಸರ ಹೋರಾಟಗಾರ್ತಿ. ನೀನಾಸಂನ ಸಕ್ರಿಯ ಸದಸ್ಯೆ. ಕೆ. ವಿ ಸುಬ್ಬಣ್ಣ ರಂಗಸಮೂಹ, ಜಾನಪದ ಕಣಜ, ಚರಕಾ ಸಂಸ್ಥೆಗಳ ನಾಟಕದಲ್ಲೂ ಅಭಿನಯಿಸಿದ್ದಾರೆ. ಪರಿಸರ ಜಾಗೃತಿ ಆಂದೋಲನದ ಮುಂಚೂಣಿಯಲ್ಲಿ ನಿಂತು ಬೀಜದುಂಡೆ ಅಭಿಯಾನ,  ಗಿಡ ನಡೆಸುವುದನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಪರಿಸರ ಜಾಗೃತಿ ಕಾಲ್ನಡಿಗೆ ಜಾಥಾದಲ್ಲಿಯೂ ಪಾಲ್ಗೊಂಡಿದ್ದರು. ಮದ್ಯವ್ಯಸನಿಗಳ ಕುಟುಂಬಕ್ಕೆ  ಸಂಕಷ್ಟ ಎದುರಿಸುವ ಮತ್ತು ಚಟದಿಂದ ಮುಕ್ತರಾಗುವ  ಮದ್ಯವರ್ಜನೆ ಶಿಬಿರದ ಆಪ್ತ ಸಮಾಲೋಚಕಿಯೂ ಆಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾದರೂ ಪ್ರವೃತ್ತಿಯಲ್ಲಿ ಸಮಾಜ ಮತು ಕಲಾಸೇವಕಿಯಾಗಿ ಜನಜಾಗೃತಿ ಮಾಡುತ್ತ ಮಹತ್ತರ ಸಾಧನೆ ಮಾಡಿದ್ದಾರೆ.
ಈ ಕೆಲಸದಲ್ಲಿ ತನಗೆ ಎಲ್ಲರ ನೆರವಿದೆ. ಸಹಶಿಕ್ಷಕರು, ಸಮುದಾಯದವರು, ಗ್ರಾಮಸ್ಥರು, ಎಸ್‌ಡಿಎಂಸಿಯವರ ನೆರವಿನಿಂದ ಈ ಸಾಧನೆಯಾಗಿದೆ. ಎಲ್ಲರೊಂದಿಗೂ ಚರ್ಚಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವುದರಿಂದ ಸಮುದಾಯದ ಅಭಿವೃದ್ಧಿಯಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ನುಡಿಯುತ್ತಾರೆ ಶೈಲಜಾ
. 9.9.17
........................   

 ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ
 ಯು.ಎಸ್. ಪುಷ್ಪಾ


ಫ್ಯಾಶನ್ ಶೋ ಹೆಚ್ಚು ಜನಪ್ರಿಯವಾಗುತ್ತಿರುವಂತೆಯೇ ಅದರಲ್ಲಿ ಪಾಲ್ಗೊಳ್ಳುವವರೂ ಹೆಚ್ಚುತ್ತಿದ್ದಾರೆ. ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆ ಇಂದು ಜಿಲ್ಲಾ ಕೇಂದ್ರಗಳಿಗೂ ಕಾಲಿಟ್ಟಿದೆ. ಕೆಲವು ಸಂಸ್ಥೆಗಳು ಇಂತಹ ಸ್ಪರ್ಧೆ ಏರ್ಪಡಿಸುವ ಮೂಲಕ ಸ್ಥಳೀಯರಲ್ಲಿರುವ ಸೌಂದರ್ಯದ ಮತ್ತು ಫ್ಯಾಶನ್ ಕಾಳಜಿ ಹಾಗೂ ಆಸಕ್ತಿಯನ್ನು ಗುರುತಿಸಿ ಅವರಿಗೆ ತಮ್ಮ ನೈಜ ಸೌಂದರ್ಯ ಮತ್ತು ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತಿದ್ದಾರೆ. 
ಶಿವಮೊಗ್ಗದ ಪ್ರತಿಭೆ ಯು.ಎಸ್. ಪುಷ್ಪಾ  ಕಳೆದ ವಾರ ಹೈದರಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ರಿಲಾಯನ್ಸ್ ಜ್ಯುವೆಲ್ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂದಿನ ಹಂತ ವರ್ಲ್ಡ್ ಮಿಸ್ ಟೂರಿಸಂ ಅಂಬಾಸಿಡರ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅತಿ ಹೆಚ್ಚು ಸ್ಪರ್ಧಿಗಳಿದ್ದರೂ  ವಿವಿಧ ಹಂತಗಳಲ್ಲಿ ನಡೆಯುವ ಇಂತಹ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯ, ಬುದ್ಧಿಮತ್ತೆ, ಫ್ಯಾಶನ್, ಸೌಂದರ್ಯ ಎಲ್ಲವುಗಳಲ್ಲಿ ಗೆದ್ದು ಆಯ್ಕೆಯಾಗಿದ್ದಾರೆ. 
ಪುಷ್ಪಾ ಈ ಹಿಂದೆ ಶಿವಮೊಗ್ಗದಲ್ಲಿ ಸಾಫ್ರನ್ ಇವೆಂಟ್ಸ್ ಆಯೋಜಿಸಿದ್ದ ಮಿಸ್ ಕರ್ನಾಟಕ ಹಾಗೂ ಚಿಕ್ಕಮಗಳೂರಿನಲ್ಲಿ ಆರ್ಟ್ ಬ್ಯಾಟಲ್ ಹಾಗೂ ಅಕ್ಷಯ ಮಾರ್ಕ್ಸ್ ಆಯೋಜಿಸಿದ್ದ ಕ್ವೀನ್ ಆಫ್ ಕರ್ನಾಟಕದಲ್ಲಿ ಫಸ್ಟ್ ರನ್ನರ್ ಅಪ್ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಸೌಂದರ್ಯ ಸ್ಪರ್ಧೆ ಆಯ್ಕೆಯ ಆಡಿಶನ್‌ನಲ್ಲಿ ಸುಮಾರು 400 ಸ್ಪರ್ಧಿಗಳಿದ್ದರೂ ಪುಷ್ಪಾ ಆಯ್ಕೆಯಾಗಿ ರಿಲೈಯನ್ಸ್  ಜ್ಯುವೆಲ್ ಮಿಸ್ ಇಂಡಿಯಾ ಕ್ಕೆ ಆಯ್ಕೆಯಾಗಿದ್ದರು. ಜೊತೆಗೆ ಮಿಸ್ ಫೋಟೊಜೆನಿಕ್ ಬಿರುದಿಗೂ ಭಾಜನರಾಗಿದ್ದಾರೆ. ಈ ಸ್ಪರ್ಧೆಗೆ ದೇಶದ ವಿವಿಧ ಭಾಗಗಳಿಂದ ಸುಮಾರು 80 ಮಾಡೆಲ್‌ಗಳು ಭಾಗವಹಿಸಿದ್ದರೂ ಪುಷ್ಪಾ ಮೊದಲ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದಾರೆ. 
ಚಿಕ್ಕಂದಿನಿಂದಲೂ ಇವರಿಗೆ  ಸೌಂದರ್ಯ ಸ್ಪರ್ಧೆಯಲ್ಲಿ ಆಸಕ್ತಿ ಇತ್ತು. ಟಿವಿಯಲ್ಲಿ ಬರುತ್ತಿದ್ದ ಇಂತಹ ಕಾರ್ಯಕ್ರಮ ನೋಡಿ ಪುಳಕಗೊಳ್ಳುತ್ತಲೇ ತಾನೂ ಸಹ ಅದನ್ನು ಅನುಕರಿಸುತ್ತಿದ್ದರು. ಕ್ಯಾಟ್‌ವಾಕ್ ರೂಢಿಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಜರುಗಿದ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಇವರ ಪಾಲಾಗಿತ್ತು. ಇದರಿಂದ ಇನ್ನಷ್ಟು ಸಾಧನೆಯನ್ನು ಈ ಕ್ಷೇತ್ರದಲ್ಲಿ ಮಾಡಬೇಕೆಂದು ತೀರ್ಮಾನಿಸಿ, ಅದರತ್ತ ಗಮನಹರಿಸಿದರು. ಪರಿಣಾಮವಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧರಾಗುವ ಮಟ್ಟಕ್ಕೆ ಬೆಳೆದಿದ್ದಾರೆ. 
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ  ಕ್ರಿಯಾತ್ಮಕ ಮತ್ತು ಆವಿಷ್ಕಾರದ ಮಾರ್ಗದಲ್ಲಿ ಇಂತಹ ಸ್ಪರ್ಧೆಗಳು ನಡೆಯುತ್ತಿರುವುದರಿಂದ ಅದಕ್ಕೆ ತಕ್ಕವಾಗಿಯೇ ಸ್ಪರ್ಧಿಗಳು ಸಿದ್ಧಗೊಳ್ಳಬೇಕಿದೆ. ನಾವೀನ್ಯತೆ ಮತ್ತು ನೈಪುಣ್ಯತೆಯೂ ಇದರಲ್ಲಿ ಅಷ್ಟೇ ಮುಖ್ಯ. ಡಿಸೈನರ್ ತನ್ನ ಕಲಾತ್ಮಕ ಕೆಲಸವನ್ನು ಬಟ್ಟೆಯಲ್ಲಿ ಮೂಡಿಸಿದರೆ ಅದನ್ನು ಧರಿಸಿ ಕ್ಯಾಟ್‌ವಾಕ್ ಮಾಡುವುದು, ನೋಡುಗರಿಗೆ ಬಟ್ಟೆ ಇನ್ನಷ್ಟು ಅದ್ಭುತವಾಗಿ ಕಾಣುವಂತೆ ಮಾಡುವ ಕೆಲಸ ಸ್ಪರ್ಧಿಗಳದ್ದು. ಇಂತಹ ಮಹತ್ತರ ಜವಾಬ್ದಾರಿಯೊಂದಿಗೆ ಪುಷ್ಟಾ ಈ ಕ್ಷೇತ್ರದಲ್ಲಿ ಮಿನುಗುತ್ತಿದ್ದಾರೆ.     
ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಸ್ವಂತೆ ಗ್ರಾಮದವರಾದ ಇವರು ಷಣ್ಮುಖ ಮತ್ತು ಗಾಂಧಿಬಜಾರ್‌ನಲ್ಲಿರುವ ಪೂಜಾ ಬ್ಯೂಟಿ ಪಾರ್ಲರ್ ಮಾಲಕಿ ವೇದಾವತಿಯವರ ಪುತ್ರಿ. ಎಸ್ಸೆಸೆಲ್ಸಿಯವರೆಗೆ ಮೈಸೂರಿನಲ್ಲಿ ಓದಿ ಮುಂದಿನ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಂದುವರೆಸಿದ್ದಾರೆ. ಸದ್ಯ ಪೆಸಿಟ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ.
ತನ್ನ ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹ ಕಾರಣ. ತಾಯಿ ಬ್ಯುಟಿಶಿಯನ್ ಆಗಿರುವುದರಿಂದ ಹೆಚ್ಚಿನ ಸಲಹೆ ನೀಡುತ್ತಿದ್ದಾರೆ.  ಕಾಲೇಜು ಅಧ್ಯಾಪಕರು ಕೊಡುತ್ತಿರುವ ಸಹಕಾರ ಅವಿಸ್ಮರಣೀಯ ಎನ್ನುವ ಪುಷ್ಪಾ, ಮುಂದೆ ಓದಿನ ಜೊತೆಗೆ ಫ್ಯಾಶನ್ ಮತು ಸೌಂದರ್ಯ ಸ್ಪರ್ಧೆ ಮತ್ತು ಆ ಕ್ಷೇತ್ರದಲ್ಲಿ ಮುಂದುವರೆಯುವ ನಿರ್ಧಾರ ಮಾಡಿದ್ದಾರೆ. 
....................................

ಬೀಜದುಂಡೆಯ ಕೇಂದ್ರಬಿಂದು 
ಬಾಲಕೃಷ್ಣ ನಾಯ್ಡು


ಜಿಲ್ಲೆಯಲ್ಲಿ ಬೀಜದುಂಡೆ ಅಭಿಯಾನದ ಬಗ್ಗೆ ಕೇಳದವರಿಲ್ಲ. ಆದರೆ ಇದನ್ನು ಜಿಲ್ಲೆಗ ತಂದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಯಶಸ್ವಿಗೊಳಿಸಿದವರಾರು, ಇವರ ಹಿಂದೆ ಯಾರ‌್ಯಾರು ಇದ್ದಾರೆ ಎನ್ನುವುದು ಮಾತ್ರ ಬಹುತೇಕರಿಗೆ ಗೊತ್ತಿಲ್ಲ. ಈ ಅಭಿಯಾನದ ರೂವಾರಿ ಅಥವಾ ಕೇಂದ್ರಬಿಂದು ಬಾಲಕೃಷ್ಣ ನಾಯ್ಡು.
ಇವರು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿಯ ಸ್ಥಾಪಕ, ರಾಘವೇಂದ್ರ ಇಂಜಿನಿಯರಿಂಗ್ಸ್‌ನ ಮಾಲಕ. ಕ್ರಿಕೆಟ್ ಅಕಾಡೆಮಿ ಮೂಲಕ ಅತಿ ಹೆಚ್ಚು ಜನರ ವಿಶ್ವಾಸ ಗಳಿಸಿದ್ದಾರೆ. ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥರಾಗಿರುವ ನೆಲಮಂಗಲ ಸಮೀಪದ ಕಾಸರಘಟ್ಟದ ಜಿ. ಗಂಗಾಧರ ಅವರ ಅವರ ಮೂಲಕ ಜಿಲ್ಲೆಗೆ ಬೀಜದುಂಡೆ ಅಭಿಯಾನವನ್ನು ಪರಿಚಯಿಸಿದ್ದಾರೆ. ನಾಯ್ಡು ಅವರಿಗೆ ಬೆಂಬಲವಾಗಿ ನಿಂತವರು ಉತ್ತಿಷ್ಠ ಭಾರತದ ಸದಸ್ಯರು.
ನಾಯ್ಡು ಅವರು ಫೆಬ್ರುವರಿಯಲ್ಲಿ ಈ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಸಂತೆಕಡೂರಿನ ಪರಿಸರ ಅದ್ಯಯನ ಕೇಂದ್ರದೊಡಗೂಡಿ ಪ್ರತಿ ತಾಲೂಕಿನಲ್ಲೂ ಸಂಚರಿಸಿ ತಾಲೂಕು ಕೇಂದ್ರದಲ್ಲಿ ಶಿಕ್ಷಕರನ್ನು ಸೇರಿಸಿ ಅವರಿಗೆ ಈ ಅಭಿಯಾನದ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ಇದರಿಂದ ಪ್ರೇರಿತರಾದ ಶಿಕ್ಷಕರು ಪ್ರತಿ ಶಾಲೆಯಲ್ಲಿ ಲಕ್ಷಾಂತರ ಬೀಜದುಂಡೆ ತಯಾರಿಸಿದರು. ಮಕ್ಕಳಂತೂ ಸಂತೋಷದಿಂದ ಪಾಲ್ಗೊಂಡಿದ್ದಾರೆ.
ಆಗಸ್ಟ್ ಆರಂಭದವರೆಗೆ ಜಿಲ್ಲೆಯಲ್ಲಿ ಸುಮಾರು 14 ಲಕ್ಷ ಬೀಜದುಂಡೆ ತಯಾರಿಸಿ ಆ ಪೈಕಿ 10 ಲಕ್ಷದಷ್ಟನ್ನು  ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಬಿತ್ತನೆ ಮಾಡಲಾಗಿದೆ. ಪರಿಸರ ರಕ್ಷಣೆಗೆ ಕಂಕಣತೊಟ್ಟು ಈ ಅಭಿಯಾನವನ್ನು ಮಹಾಭಿಯಾನವನ್ನಾಗಿ ಮಾರ್ಪಡಿಸಿ ನಾಯ್ಡು ಅವರು ಹೆಸರು ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಇದಕ್ಕೆ ಕೈಜೋಡಿಸಿದವರು ಸಾವಿರಾರು ಸಂಖ್ಯೆಯ ಮಕ್ಕಳು.
ಎರಡನೆಯ ಹಂತದ ಬೀಜದುಂಡೆ ಅಭಿಯಾನ ಮತ್ತೆ ಆರಂಭವಾಗಿದೆ. ಆದರೆ ಮಳೆ ಕಡಿಮೆ ಇರುವುದರಿಂದ ಬಿತ್ತನೆಯನ್ನು ಸದ್ಯಕ್ಕೆ ತಟಸ್ಥಗೊಳಿಸಲಾಗಿದೆ. ಇಷ್ಟೆಲ್ಲ ಪರಿಸರದ ತುಡಿತವನ್ನಿಟುಕೊಂಡ ನಾಯ್ಡು, ತಮ್ಮ ಬಿಡುವಿಲ್ಲದ ಉದ್ದಿಮೆ, ಅಕಾಡೆಮಿಯ ಕೆಲಸದ ಮಧ್ಯೆಯೂ ಸದಾ ಯಾವುದಾದರೊಂದು ಜನಮುಖಿ ಕೆಲಸದತ್ತಲೇ ಚಿಂತನೆ ಮಾಡುತ್ತಾರೆ.
ಮುಂದಿನ ದಿನಗಳಲ್ಲಿ ಔಷಧಿ ಸಸ್ಯಗಳನ್ನು ಬೀಜದುಂಡೆ ಮಾಡಿ, ಆಯ್ದ ಪ್ರದೇಶಗಳಲ್ಲಿ ಬಿತ್ತನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದೇ ರೀತಿ ಭತ್ತದ ಬೀಜದುಂಡೆಯನ್ನು ಮಾಡಿ ಗದ್ದೆಗಳಲ್ಲಿ ಬಿತ್ತನೆ ಮಾಡುವ ಮಹತ್ತರ ಯೊಜನೆ ಇವರ ಮುಂದಿದೆ. ಇದಕ್ಕೆ ರೈತರನ್ನು ಮತ್ತು ಗ್ರಾಮಾಂತರ ವಾಸಿಗಳನ್ನು ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವವರ ಸಂಖ್ಯೆ ತೀವ್ರ ಇಳಿಮುಖವಾಗುತ್ತಿರುವುದರಿಂದ ಮತ್ತು ಜನರ ಅತಿ ಮುಖ್ಯ ಆಹಾರವಾಗಿರುವುದರಿಂದ ಇದನ್ನು ಇನ್ನಷ್ಟು ಪ್ರಮಾಣದಲ್ಲಿ ಬೆಳೆಯಲು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 
ತಮ್ಮ ಈ ಕಾರ್ಯದಲ್ಲಿ ಅನೇಕ ಅರಣ್ಯಾಧಿಕಾರಿಗಳು ಮತ್ತು ಮಿತ್ರರು ವಿವಿಧ ರೀತಿಯಲ್ಲಿ ನೆರವಾಗಿದ್ದನ್ನು ಅವರು ಸ್ಮರಿಸುತ್ತಾರೆ. ವಿಶೇಷವಾಗಿ ಉತ್ತಿಷ್ಠ ಭಾರತದ ಸದಸ್ಯರಾದ  ಗಜಾನನ ಐತಾಳ್, ಶ್ರೀನಿಧಿ ಹೆಬ್ಬಾರ್, ಜಿ. ಕೆ. ವೆಂಕಟೇಶ್, ಮನೋಜ್ ಉಪಾಧ್ಯಾಯ ಅವರ ಶ್ರಮ  ಮರೆಯಲಾಗದ್ದು ಎನ್ನುತ್ತಾರೆ. ಅದೇ ರೀತಿ ಮಣ್ಣು, ಸೆಗಣಿ, ಬೀಜವನ್ನು ಅನೇಕ ಮಿತ್ರರು ಉಚಿತವಾಗಿ ನೀಡಿದ್ದನ್ನು ನೆನೆಪಿಸುತ್ತಾರೆ.   
ವಿಶ್ವದ ತಾಪಮಾನ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಇನ್ನೊಂದೆಡೆ ಅರಣ್ಯ ನಾಶವೂ ಮುಂದುವರೆದಿದೆ. ಸರ್ಕಾರ ಮತ್ತು ಜನರು ಇದರ ಪರಿವೆಯೇ ಇಲ್ಲದೆ ತಮ್ಮ ವ್ಯವಹಾರ, ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಭವಿಷ್ಯವನ್ನು  ಕಟ್ಟಿಕೊಳ್ಳುವ, ಕೆಲವೇ ಜನರಿಂದ ಪ್ರಾರಂಭವಾದ ಯೋಜನೆ ಬೀಜದುಂಡೆ. ಇದನ್ನು ಜಿಲ್ಲೆಯಲ್ಲಿ ಬಿತ್ತಿದವರು ಬಾಲಕೃಷ್ಣ ನಾಯ್ಡು ಅವರು.
26.8.17
...............................

Monday 22 January 2018

ಬಹುಮುಖ ಪ್ರತಿಭೆ
 ಸಾನಿಧ್ಯಾ 
ಇಂದಿನ ವಿದ್ಯಾರ್ಥಿಗಳು ಪಠ್ಯದ ಹುಳುಗಳಾಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡರೆ ಇಂತಹ ಅಪವಾದದಿಂದ ಮುಕ್ತವಾಗಬಹುದು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಪ್ರತಿಭೆ ತೋರುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಕೆಲವು ಮಕ್ಕಳು ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದನ್ನು  ಅಲ್ಲಲ್ಲಿ ಕಾಣಬಹುದು. ಸಾಗರದ ಸಾನಿಧ್ಯಾ ಇಂತಹವರಲ್ಲಿ ಒಬ್ಬರು.
 ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಮಾತಿದೆ. ಸಾನಿಧ್ಯಾ ಅವರ ಸಾಹಿತ್ಯಿಕ ಬೆಳವಣಿಗೆಯನ್ನು ಗಮನಿಸಿದರೆ ಮುಂದೆ ಬರಹಗಾರ್ತಿ, ಕವಯಿತ್ರಿಯಾಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ. ಈಗಾಗಲೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕೃತಿಗಳನ್ನು ರಚಿಸಿರುವ ಇವಳಿಗೆ ಸದ್ಯವೇ ನಡೆಯಲಿರುವ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಗ್ಯ ಬಂದೊದಗಿದೆ. 
  ಸಾನಿಧ್ಯ ಸಾಗರದ ಗಾಂಧಿನಗರದ ವಾಸಿ, ಉರ್ದು ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕ ಫಾಲಾಕ್ಷಪ್ಪ ಪಿ.ಎನ್. ಮತ್ತು ಯಲಗಳಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸೌಭಾಗ್ಯ ಡಿ. ದಂಪತಿ ಪುತ್ರಿ. ಈಕೆ ಅಮಟೆಕೊಪ್ಪದ ಹೊಂಗಿರಣ ಶಾಲೆಯಲ್ಲಿ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಸಹೋದರ ಸಾತ್ವಿಕ್ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಇವನೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಚಿತ್ರ ಬಿಡಿಸುವುದು, ಕಥೆ, ಕವನ ರಚನೆ, ಗಾಯನ ಸಾನಿಧ್ಯಳ ಹವ್ಯಾಸವಾಗಿದೆ. ಸಂಗೀತ ಶಿಕ್ಷಕಿ ಸೀತಾ ಬಾಪಟ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾಳೆ. ಕರ್ನಾಟಕ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಈಗ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾಳೆ.  ದೆಹಲಿಯ ನ್ಯಾಷನಲ್ ಬಾಲಭವನದ ವತಿಯಿಂದ ನಡೆಸುವ ‘ಬಾಲಶ್ರೀ ಪ್ರಶಸ್ತಿ’ ಆಯ್ಕೆಗೆ ನಡೆದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.  ಕಲಾಶ್ರೀ ಸ್ಪರ್ಧೆಗೆ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
 ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಪ್ರವೇಶ, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪ್ರಸ್ತುತ ಕನ್ನಡ ರತ್ನ ಅಧ್ಯಯನ ಮಾಡುತ್ತಿದ್ದಾಳೆ.  ಮೈಸೂರಿನ ಹಿಂದಿ ಪ್ರಚಾರ ಪರಿಷತ್ ನಡೆಸಿದ ಹಿಂದಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಜಿಲ್ಲಾ ಮಟ್ಟದ ಅಂತರ ಶಾಲೆ ಕ್ರೀಡಾಕೂಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ‘ಸೋಪಾನ್’ ಎಂಬ ಜಿಲ್ಲಾ ಮಟ್ಟದ ಪುರಸ್ಕಾರ ಲಭಿಸಿದೆ.  ದೆಹಲಿ ದರ್ಶನ ಮತ್ತು ಮುಳುಗಡೆ ಪ್ರದೇಶದಲ್ಲಿ ಒಂದು ದಿನ ಕುರಿತು ಪ್ರವಾಸ ಕಥನ ಬರೆದಿದ್ದಾಳೆ. ಶೈಕ್ಷಣಿಕ ಜೀವನದಲ್ಲಿ ಗ್ರಂಥಾಲಯಗಳ ಪಾತ್ರ, ನಮ್ಮ ಹಿರಿಯರ ಬಗ್ಗೆ ನಮ್ಮ ಕಾಳಜಿಗಳು, ರಾಷ್ಟ್ರೀಯ ಭಾವೈಕ್ಯತೆ, ಪುಸ್ತಕ ನಮಗೆ ಮಿತ್ರರಿದ್ದಂತೆ ಕುರಿತು ಪ್ರಬಂಧ ಬರೆದಿದ್ದಾಳೆ.
ಪ್ರಕೃತಿ ಬೇಕು, ಗ್ರಂಥಾಲಯ, ಮಲೆನಾಡ ಬಾಲೆ, ಅನಾಥ, ಗಡಿಯಾರ, ಜೇನುಗೂಡು, ನಿಸರ್ಗ ಮುಂತಾದ ಕವನಗಳನ್ನು ರಚಿಸಿದ್ದಾಳೆ.  ಟ್ರ್ಯೂ ಗಾಡ್, ರೇನಿ ಡೇ, ಮೈ ಫ್ರೆಂಡ್‌ಶಿಪ್ ಮುಂತಾದ ಇಂಗ್ಲೀಷ್ ಕವನಗಳನ್ನೂ ರಚಿಸಿದ್ದಾಳೆ.
ಇಷ್ಟೊಂದು ಪ್ರತಿಭಾವಂತೆಯಾದ ಸಾನಿಧ್ಯಾಳನ್ನು ಸದ್ಯವೇ ಜರುಗಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ತಾಲೂಕು ಕಸಾಪ ಆಯ್ಕೆ ಮಾಡಿದೆ.
 ಶಿಕ್ಷಣ ಎಂದರೆ ಅದು ಕೇವಲ ಪಠ್ಯದ ಅಭ್ಯಾಸವಲ್ಲ. ಪಠ್ಯದ ಹೊರಗೂ ಮನಸ್ಸನ್ನು, ಬುದ್ಧಿಯನ್ನು ಬೆಳೆಸುವ ಒಂದಿಷ್ಟು ಪೂರಕ ಆಯಾಮಗಳಿವೆ. ಅದು ಕಲೆ, ಸಂಗೀತ, ಸಾಹಿತ್ಯ, ನೃತ್ಯ ಯಾವುದಾದರೂ ಇರಬಹುದು ಎನ್ನುತ್ತಾಳೆ ಸಾನಿಧ್ಯಾ.
19.8.17
...........................
ಕತೆಗಾರ ಸುಬ್ಬಣ್ಣ 
 ಹೊಸಹಳ್ಳಿ ಬಾಲಸುಬ್ರಹ್ಮಣ್ಯ.



ಇವರು ಕಥೆಗಾರರು, ನಾಟಕಕಾರರರು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ  ಅನುಪಮ ಸೇವೆ ಸಲ್ಲಿಸುತ್ತಿರುವವರು.  30 ವರ್ಷಗಳಿಂದ ಮಕ್ಕಳಿಗಾಗಿ ಕತೆ, ಕವನ, ನಾಟಕಗಳನ್ನು ರಚಿಸಿಕೊಂಡು ಬಂದಿದ್ದಾರೆ. ನಾಡಿನಲ್ಲಿ ಮಕ್ಕಳ ಕಥೆ ಬರೆಯುವವರು ವಿರಳ. ಇಂತಹವರಲ್ಲೊಬ್ಬರು ನಮ್ಮ ಜಿಲ್ಲೆಯಲ್ಲೇ ಇದ್ದಾರೆ. ಅವರೇ ಹೊಸಹಳ್ಳಿ ಬಾಲಸುಬ್ರಹ್ಮಣ್ಯ.
 ಹೊಸಹಳ್ಳಿ-ಮತ್ತೂರಿನವರಾದ ಬಾಲಸುಬ್ರಹ್ಮಣ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಎಂ.ಇಡಿ. ಪದವಿಗಳನ್ನು ಗಳಿಸಿದ್ದಾರೆ. ‘ಮತ್ತೂರು ಸುಬ್ಬಣ’್ಣ ಎಂದು ಪರಿಚಿತರಾಗಿ ಮಕ್ಕಳಿಗಾಗಿ ಅನೇಕ ಕಥೆ,ಕವನ, ನಾಟಕಗಳನ್ನು ಕಳೆದ ಸುಮಾರು  ಮೂರು ದಶಕಗಳಿಂದ ರಚಿಸುತ್ತಿದ್ದಾರೆ. ಅವರ ಮಕ್ಕಳ ಕಥೆಗಳು ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹತ್ತಾರು ಮಕ್ಕಳ ನಾಟಕಗಳು ಆಕಾಶವಾಣಿಯಿಂದ ಬಿತ್ತರವಾಗಿವೆ. ಇವರ ರಚನೆಯ ಮಕ್ಕಳ ನಾಟಕ, ‘ಮಾಡಿದ್ದುಣ್ಣೊ ಮಾಮಣ್ಣ’ , ರಾಜ್ಯಮಟ್ಟದಲ್ಲಿ ಎರಡನೆಯ ಉತ್ತಮ ನಾಟಕವೆಂದು ಪ್ರಶಸ್ತಿಗಳಿಸಿದೆ. ಇವರ ಇನ್ನೊಂದು ಮಕ್ಕಳ ನಾಟಕ, ‘ಒಂದು ಕುರಿಯ ಕಥೆ’, ಬಾಲಭವನದ ನಾಟಕೋತ್ಸವದಲ್ಲಿ ಪಾಲುಗೊಂಡಿದೆ.
ಇವರ  ಮಕ್ಕಳ ಕಥಾಲೋಕ (ಭಾಗ-1) (2016)- ಶಿವಮೊಗ್ಗದ ಕರ್ನಾಟಕ ಸಂಘದ 2016 ನೇ ಸಾಲಿನ ನಾ. ಡಿಸೋಜಾ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ. ಮೊನ್ನೆಯಷ್ಟೇ ಇದರ ಗೌರವ ಸ್ವೀಕರಿಸಿದ್ದಾರೆ. ‘ಆಕಾಶವಾಣಿ’ ಬೆಂಗಳೂರು ಕೇಂದ್ರಕ್ಕಾಗಿ, ಸುಮಾರು 20 ಮಕ್ಕಳ ನಾಟಕಗಳ ರಚನೆ ಮತ್ತು ಪ್ರಸ್ತುತಿ ಮಾಡಿದ್ದಾರೆ. ಮತ್ತು ಈ ಕೇಂದ್ರದ ನಾಟಕ ವಿಭಾಗದಲ್ಲಿ ಬಿ-ಹೈ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ. 
ದೇಶದ ವಿವಿಧ ಕೇಂದ್ರೀಯ ವಿದ್ಯಾಲಯಗಳಲ್ಲಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿ, ಎರಡು ಬಾರಿ ರಾಷ್ಟ್ರಮಟ್ಟದಲ್ಲಿ  ಪ್ರಶಸ್ತಿ ಪಡೆದಿದ್ದಾರೆ. ಮಕ್ಕಳಿಗೆ ಕಥೆಹೇಳುವುದರಲ್ಲೂ ಸಿದ್ಧಹಸ್ತರು ಇವರು. ಇವರು ನಡೆಸಿಕೊಡುವ ‘ಕಥಾಭಿನಯ’ ಕಾರ್ಯಕ್ರಮಗಳೂ ಜನಪ್ರಿಯ. 1987ರಲ್ಲಿ  ಇವರ  ಜನಪ್ರಿಯ ಮಕ್ಕಳ ಕಥಾಸಂಕಲನ, ‘ಅಂಶು ಮತ್ತು ರೊಬೊಟ್’ ಬಿಡುಗಡೆ ಹೊಂದಿದೆ.‘ಸಮಯಪ್ರಜ್ಞೆ’ ಎನ್ನುವ ಇನ್ನೊಂದು ಕಥಾಸಂಕಲನದ ಹೊತ್ತಿಗೆ, ‘ನವಕರ್ನಾಟಕ ಪ್ರಕಾಶನ’ದಿಂದ ಪ್ರಕಟಗೊಂಡಿದೆ. 
  ಸುಬ್ಬಣ್ಣ ಬೆಂಗಳೂರಿನ ಪ್ರತಿಷ್ಠಿತ ಶ್ರೀ ವಿದ್ಯಾಕೇಂದ್ರ, ಪರಿಕ್ರಮ ಶಾಲೆ ಹಾಗೂ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪ್ರಾಂಶುಪಾಲರಾಗಿ,  ಬೆಂಗಳೂರಿನ ವಾಗ್ದೇವಿ ವಿಲಾಸ ಶಾಲಾ ಸಮೂಹದಲ್ಲಿ ‘ಶೈಕ್ಷಣಿಕ ಸಲಹೆಗಾರ’ರಾಗಿ,  ಗುರುರಾಜ ಕರಜಗಿ ಅವರ ‘ಸೃಜನಶೀಲ ಅಧ್ಯಾಪನ ಸಂಸ್ಥ್ಥೆ’ಯಲ್ಲಿ  ಹಿರಿಯ ಸಹೋದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆೆ. 2006ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ  ಬೆಂಗಳೂರಿನ ನಾಗರಬಾವಿಯಲ್ಲಿರುವ ‘ಹಿಲ್ ರಾಕ್ ನ್ಯಾಶನಲ್ ಪಬ್ಲಿಕ್ ಶಾಲೆ’ಯಲ್ಲಿ ನಿರ್ದೇಶಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ‘ಕಾಡಿನ ಕಥೆಗಳು’ ಮಕ್ಕಳ ಕೃತಿಗೆ ‘ಅತ್ತಿಮಬ್ಬೆ ಸಾಹಿತ್ಯ ಪ್ರಶಸಿ’್ತ ಪಡೆದಿದ್ದಾರೆ.‘ಮಕ್ಕಳ ಕಥಾಲೋಕ ಭಾಗ-1’ ಸೇರಿದಂತೆ, ’ಕುಮಾ’ ,‘ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ’ ,‘ವಿಚಿತ್ರ ಸಲಹೆ’ ಇವರ ಲೇಖನಿಯಿಂದ ಮೂಡಿಬಂದಿರುವ ಇತರ ಜನಪ್ರಿಯ ಮಕ್ಕಳ ಸಾಹಿತ್ಯ ಕೃತಿಗಳು.
‘ಅನು ಪ್ರಕಾಶನ’ದ ಮೂಲಕ ಮತ್ತೂರು ಸುಬ್ಬಣ್ಣ, ಮಕ್ಕಳ ಸಾಹಿತ್ಯದ ಹೊತ್ತಿಗೆಗಳನ್ನು ಪ್ರಕಟಿಸುತ್ತಿದ್ದಾರೆ. ಇವರ ಇತರೆ ಹವ್ಯಾಸಗಳೆಂದರೆ,  ಚಿತ್ರಕಲೆ, ಬರವಣಿಗೆ ಮತ್ತು ಛಾಯಾಗ್ರಹಣ. ‘ಕಾಡಿನ ಕಥೆಗಳು’ ಕೃತಿಗೆ ‘ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಯನ್ನು ಸುಬ್ಬಣ್ಣ ಪಡೆದಿದ್ದಾರೆ. ಇವರು ನಡೆಸುವ ಮಕ್ಕಳ ಕಥಾಶಿಬಿರಗಳು ಬಹು ಜನಪ್ರಿಯವಾಗಿವೆ.                                                                                                              ಮಕ್ಕಳಕಥಾಲೋಕ.ಕಾಮ್’ ಎಂಬ ವೆಬ್ ಸೈಟಿನ ಸಂಪಾದಕತ್ವ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ.  ನವದೆಹಲಿಯ ‘ರಾಷ್ಟ್ರೀಯ ನಾಟಕ ಶಾಲೆ’ಯಿಂದ ನಾಟಕ ಕಲೆಯಲ್ಲಿ ತರಬೇತಿ ಪಡೆದಿರುವ ಇವರು, ಶಿವಮೊಗ್ಗ, ಬೆಂಗಳೂರಿನ  ಅನೇಕ ಶಾಲೆಗಳಲ್ಲಿ ‘ಕಥಾಭಿನಯ’ ಕಾರ್ಯಕ್ರಮದ ಆಯೋಜನೆ ಮಾಡಿ ಮಕ್ಕಳಲ್ಲಿ ನಾಟಕ ಅಭಿರುಚಿ ಬೆಳೆಸುವಲ್ಲಿ ಶ್ರಮ ವಹಿಸುತ್ತಿದ್ದಾರೆ.
12.8.17
..............................


ಕೆಎಎಸ್ ಸಾಧನೆಯ ಶಿಕ್ಷಕಿ
ರೇಣುಕಾದೇವಿ 



ಕಂಡ ಕನಸನ್ನು ಗುರಿಯಾಗಿಸಿಕೊಂಡು, ಅದನ್ನು ಕಾರ್ಯರೂಪಕ್ಕೆ ತರಲು ಸತತ ಪರಿಶ್ರಮಪಟ್ಟರೆ ಅದರಿಂದ ಯಶಸ್ಸು ಗಳಿಸಬಹುದು. ಈ ಹಿನ್ನೆಲೆಯಲ್ಲಿ ಹೆಲೆನ್ ಕೆಲ್ಲರ್ ಹೇಳಿರುವ, ಆಶಾವಾದವನ್ನು ನಂಬಿ ಕೆಲಸ ಮಾಡಿದರೆ ಅದರಿಂದ ಸಾಧನೆಗೈಯ್ಯಲು ಸಾಧ್ಯ. ಭರವಸೆ ಮತ್ತು ಆತ್ಮವಿಶ್ವಾಸ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ.
ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ರೇಣುಕಾದೇವಿ, ಮೊದಲ ಯತ್ನದಲ್ಲೇ ಕೆಎಎಸ್ ಪಾಸುಮಾಡುವ ಮೂಲಕ ಸಾಧಕರಿಗೆ ಮಾದರಿಯಾಗಿದ್ದಾರೆ. 12 ವರ್ಷದಿಂದ ಶಿಕ್ಷಕಿಯಾಗಿದ್ದುಕೊಂಡು ನಿರಂತರ ಅಧ್ಯಯನ ಮತ್ತು ಗಳಿಸಿದ ಅನುಭವವೇ ಇವರಿಗೆ ಕೆಎಎಸ್ ಸಾಧನೆಗೆ ಅನುಕೂಲವಾಯಿತು. ಪಠ್ಯದ ಹೊರತಾದ ಓದು, ಪರಿಶ್ರಮ ಮತ್ತು ಸಾಧನೆ ಮಾಡಬೇಕೆಂಬ ಛಲ ಇವರಲ್ಲಿ ಸದಾ ಕಾಡುತ್ತಿತ್ತು. ಇದಕ್ಕಾಗಿ ಸಮಯವನ್ನೆಲ್ಲ ಸದುಪಯೋಗಪಡಿಸಿಕೊಂಡು, ಅಂಬೇಡ್ಕರ್ ಮತ್ತು ವಿವೇಕಾನಂದರ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಎಡೆಬಿಡದೆ ಶ್ರಮವಹಿಸಿ ಕೆಎಎಸ್ ಬರೆದಿದ್ದರು.
ಪರಿಕ್ಷೆ ತಯಾರಿಗೆಂದು ವರ್ಷಗಟ್ಟಲೆ ಕಾಲ ವ್ಯಯಿಸದೆ, ಯಾವ ಕೋಚಿಂಗ್‌ಗೂ ತೆರಳದೆ, ಯಾರಿಂದಲೂ ಸಹಾಯ ಪಡೆದುಕೊಳ್ಳದೆ ಸ್ವಪ್ರಯತ್ನದಿಂದಲೇ ಮೇಲೆ ಬಂದ ಸಾಧಕಿ ರೇಣುಕಾದೇವಿ. ಇವರಿಗೆ ಈಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆಗೆ ಅವಕಾಶ ದೊರೆತಿದೆ. ಆದರೆ ಇನ್ನೂ ಅಧಿಕ ಸಾಧನೆ ಮಾಡಬೇಕೆಂದು ನಿರ್ಧರಿಸಿ ಮತ್ತೆ ಕೆಎಎಸ್ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಏಕೆಂದರೆ, ಇವರ ಆಸೆ  ಉಪವಿಭಾಗಾಧಿಕಾರಿ ಆಗಬೇಕೆನ್ನುವುದು. ಕೆಎಎಸ್‌ನಲ್ಲಿ ಸಾರ್ವಜನಿಕ ಆಡಳಿತವನ್ನು ಮುಖ್ಯ  ವಿಷಯವನ್ನು ತೆಗೆದುಕೊಂಡು ಶಾಲೆ, ಕುಟುಂಬ, ಇತರೇ ಜಂಜಡಗಳ ಮಧ್ಯೆಯೂ ಸತತ ಓದು ಮುಂದುವರೆಸಿ, ಅನುಭವವನ್ನೇ ಬಳಸಿಕೊಂಡು ಸಾಧನೆ ಮಾಡಿದ್ದಾರೆ.
ಮೂಲತಃ ಭದ್ರಾವತಿಯ ಹೊಸಮನೆಯವರಾದ ರೇಣುಕಾ, ಓದಿದ್ದು ತೀರ್ಥಹಳ್ಳಿ ತಾಲೂಕಿನ ವಿವಿಧ ಶಾಲೆಯಲ್ಲಿ. ಇವರ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಇಲ್ಲಿಯೇ   ಶಿಕ್ಷಣ ಪಡೆದರು. ಆನಂತರ ಮೈಸೂರು ವಿವಿಯಿಂದ ಕನ್ನಡದಲ್ಲಿ ಎಂಎ ಮತ್ತು ಕುವೆಂಪು ವಿವಿಯಿಂದ ಬಿಇಡಿ ಪದವಿ ಪಡೆದಿದ್ದಾರೆ. ಇವರ ಪತಿ ವಿಶ್ವನಾಥ ಕೃಷಿಕರಾಗಿದ್ದು, ಇಬ್ಬರು ಗಂಡುಮಕ್ಳನ್ನು ಹೊಂದಿದ್ದಾರೆ. ಮದುವೆಯಾದ ನಂತರ ಪದವಿ, ಸ್ನಾತಕೋತ್ತರ ಓದಿ ಶಿಕ್ಷಕಿಯಾಗಿರುವ ಇವರು, ಕುಟುಂಬದವರ ನೆರವಿನಿಂದ ಉನ್ನತ ಸಾಧನೆ ಮಾಡಿದವರು. ಇವರಿಗೆ 2014ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ತಾಲೂಕು ಮಟ್ಟದಲ್ಲಿ ಹಲವು, ಸನ್ಮಾನ, ಗೌರವಗಳು ಇವರನ್ನರಸಿ ಬಂದಿವೆ. ಕಳೆದ ವಾರ ತಾಲೂಕು ಸರ್ಕಾರಿ ನೌಕರರ ಸಂಘದವರು ಕೆಎಎಸ್ ಪಾಸು ಮಾಡಿದ ಶಿಕ್ಷಕಿ ಎಂಬ ಹಿನ್ನೆಲೆಯಲ್ಲಿ ಗೌರವಿಸಿದ್ದಾರೆ.
ಪುಸ್ತಕದ ಹೊರತಾಗಿ  ಕಲೆ, ಸಂಸ್ಕೃತಿ, ಸಾಹಿತ್ಯದ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದಕ್ಕೆ ಇವರು ಆದ್ಯತೆ ಕೊಟ್ಟವರು. ಇದರಿಂದಾಗಿಯೇ ಇವರು ಕೆಲಸ ಮಾಡಿದ ಶಿರೂರು ಶಾಲೆ ಪ್ರತಿಭಾ ಕಾರಂಜಿಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿತ್ತು. ರೇಣುಕಾ ಸಹ ಆಶುಭಾಷಣದಲ್ಲಿ ಮೂರು ಬಾರಿ ರಾಜ್ಯ ಮಟ್ಟದಲ್ಲಿ ಮೊದಲ ಪ್ರಶಸ್ತಿ ಪಡೆದಿದ್ದಾರೆ. ಸಾಹಿತ್ಯಾಭಿಮಾನಿಯಾಗಿ, ಕವಿಯೂ ಆಗಿದ್ದಾರೆ. ಕವನ ಸಂಕಲನವೊಂದನ್ನು ಪ್ರಕಟಿಸಿದ್ದಾರೆ. ಕಂಸಾಳೆ ನೃತ್ಯ, ಕಾರ್ಯಕ್ರಮ ನಿರೂಪಣೆಯಲ್ಲೂ ಹೆಸರು ಗಳಿಸಿದ್ದಾರೆ. ಸದ್ಯ ಮೇಗರವಳ್ಳಿಯಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ, ಜೆಸಿಐ, ಸಾಹಿತ್ಯ ಪರಿಷತ್‌ನಲ್ಲೂ ಸಕ್ರಿಯರಾಗಿ ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
 ಸಾಧನೆ ಮಾಡಬೇಕೆಂಬ ಹಂಬಲ, ತುಡಿತವಿತ್ತು. ಇದಕ್ಕೆ ಹಲವು ಬಾರಿ ಅಡ್ಡಿ ಎದುರಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆದರೂ ಎದೆಗುಂದದೆ ಸಾಧಿಸಲೇಬೇಕೆಂಬ ಛಲವಿತ್ತು. ಧೈರ್ಯದಿಂದ ಬಂದ ಪರಿಸ್ಥಿಯನ್ನೆಲ್ಲ ಎದುರಿಸಿ ಸಾಧನೆ ಮಾಡಿದ್ದೇನೆ ಎನ್ನುವ ರೇಣುಕಾ, ಉತ್ತಮ ಮತ್ತು ಜನಮೆಚ್ಚಿದ ಶಿಕ್ಷಕಿಯಾಗಿಯೂ ಮಾದರಿಯಾಗಿದ್ದಾರೆ. 
5.8.17
....................

ವೈವಿಧ್ಯ ಅಡುಗೆಯ ಶಿಕ್ಷಕಿ
ರಂಜು ಜೈನ್ 

.
ಹೊಸತನ ಮತ್ತು ಶುಚಿ- ರುಚಿಯ ಅಡುಗೆ- ತಿಂಡಿಗಳಿಗೆ ಇಂದಿನ ಅವಸರದ ಜಗತ್ತಿನಲ್ಲಿ ಆದ್ಯತೆ ಹೆಚ್ಚು. ಎಷ್ಟೋ ಮನೆಯಲ್ಲಿ ಅಡುಗೆ- ತಿಂಡಿಯನ್ನು ವಾರಕ್ಕೆರಡು ಬಾರಿಯಾದರೂ ಹೊಟೆಲ್‌ಗೆ ಹೋಗಿ ಸವಿಯುತ್ತಾರೆ. ವೀಕೆಂಡ್‌ನಲ್ಲಂತೂ ಹೊಟೆಲ್ ಊಟ ಖಾಯಂ. ಹೊಟೆಲ್‌ಗೆ ತೆರಳಿ ದುಬಾರಿ ಬಿಲ್ ತೆತ್ತು ಬಾಯಿ ಚಪ್ಪರಿಸುವುದಕ್ಕಿಂತ ಅದನ್ನೇ ಕಲಿತು ಮನೆಯಲ್ಲೇಕೆ ಮಾಡಿ ತಿನ್ನಬಾರದೆಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಆದರೆ ಈ ಹೊಸ ರುಚಿಯ, ಬಗೆಬಗೆಯ ಖಾದ್ಯ ತಯಾರಿಸುವುದು ಬರಬೇಕಲ್ಲ, ಈಗ ಇದನ್ನು ನಿಮ್ಮ ಮನೆ ಬಾಗಿಲಿಗೇ ಬಂದು ಕಲಿಸುವವರಿದ್ದಾರೆ. ಆದರೆ ಶುದ್ಧ ಸಸ್ಯಾಹಾರಿಗಳಿಗೆ ಮಾತ್ರ . ಉತ್ತರ ಭಾರತದ ಹೆಸರಾಂತ ತಿಂಡಿ- ತಿನಿಸು, ಊಟಕ್ಕೆ ಮನಸೋಲದವರಿಲ್ಲ. ಜೊತೆಗೆ ಕೇಕ್, ಚಾಕೋಲೇಟ್ ಪ್ರಿಯರೇ ಹೆಚ್ಚುತ್ತಿರುವ ಇಂದಿನ ದಿನಮಾನದಲ್ಲಿ ಅದನ್ನು ಸಹ ಕೇಕ್ ಕಾರ್ನರ್, ಬೇಕರಿಗೆ ಹೋಗಿ ಖರೀದಿಸುವುದು ಹೆಚ್ಚುತ್ತಿದೆ. ಈ ರೀತಿಯ ವಿಭಿನ್ನ ಮಾದರಿಯ ತಿಂಡಿ, ತಿನಿಸನ್ನು ಭದ್ರಾವತಿಯ ರಂಜು ಜೈನ್ ಕಲಿಸಿಕೊಡುತ್ತಿದ್ದಾರೆ. ಆಸಕ್ತ ಹೆಣ್ಣುಮಕ್ಕಳಿಗೆ ಈ ಬಗ್ಗೆ ಕ್ಲಾಸ್ ನಡೆಸಿ ಮಾಹಿತಿ ಕೊಡುವ ಕೆಲಸವನ್ನು ಆರೇಳು ವರ್ಷಗಳಿಂದ ರಂಜು (ಮೊಬೈಲ್ ನಂ-9036693889) ಮಾಡುತ್ತಿದ್ದಾರೆ.
ರಂಜು ಮೂಲತಃ ರಾಜಸ್ಥಾನದವರಾದರೂ ಈಗ ಜಿಲ್ಲೆಯವರೇ ಆಗಿದ್ದಾರೆ. 15 ವರ್ಷಗಳಿಂದ ಭದ್ರಾವತಿ ವಾಸಿಯಾಗಿದ್ದು, ತಾವು ಕಲಿತ ಅಡುಗೆ, ತಿನಿಸಿನ ವಿದ್ಯೆಯನ್ನೆಲ್ಲ ಇಲ್ಲಿನ ಆಸಕ್ತ ಮಹಿಳೆಯರಿಗೆ ಧಾರೆ ಎರೆಯುವ ಮೂಲಕ ಅವರಲ್ಲೂ ವೈವಿಧ್ಯಮಯ ಅಡುಗೆ ಕಲಿಕೆಯ ಆಸಕ್ತಿ ಹುಟ್ಟಿಸುತ್ತಿದ್ದಾರೆ. ಇಷ್ಟೇ ಅಲ್ಲ, ಮಹಿಳಾ ಸಂಘಟನೆಗಳು ಆಹ್ವಾನಿಸಿದಲ್ಲಿ ಬಂದು ಈ ಬಗ್ಗೆ ಕಾರ್ಯಾಗಾರ ಅಥವಾ ಉಪನ್ಯಾಸವನ್ನೂ ಕೊಡುತ್ತಾರೆ. 
ಈವರೆಗೆ ಸುಮಾರು 250ಕ್ಕು ಹೆಚ್ಚು ಮಹಿಳೆಯರಿಗೆ ಅವರು ಪಾಠ ಮಾಡಿದ್ದಾರೆ. ಬಹುತೇಕ ಮಹಿಳೆಯರು ಇದರ ಲಾಭ ಪಡೆದು ವಿಭಿನ್ನ ರುಚಿಯ ಅಡುಗೆ ಮಾಡುತ್ತಿದ್ದರೆ ಕೆಲವರು ಹತ್ತಾರು ನಮೂನೆಯ ಕೇಕ್, ಚಾಕೋಲೇಟ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹೆಚ್ಚುತ್ತಿರುವ ಅಡುಗೆ ವೈವಿಧ್ಯಗಳ ಬೇಡಿಕೆಯನ್ನು ಗಮನಿಸಿ ಕಲಿತ ವಿದ್ಯೆಯನ್ನು ಇಲ್ಲೇಕೆ ಆರಂಭಿಸಬಾರದೆಂಬ ಪ್ರಶ್ನೆ ಮೂಡಿದ್ದರಿಂದ ತರಬೇತಿ ಆರಂಭಿಸಿದರು. ಶಿವಮೊಗ್ಗ, ಭದ್ರಾವತಿಯಲ್ಲಿ ಸದ್ಯ ಶಿಬಿರ ನಡೆಸುತ್ತಿದ್ದಾರೆ. ಅಕ್ಕಪಕ್ಕದ ತಾಲೂಕು, ಜಿಲ್ಲೆಯಿಂದಲೂ  ತರಬೇತಿ ನಡೆಸುವಂತೆ ಅನೇಕ ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಬಳ್ಳಾರಿ, ಹಗರಿಬೊಮ್ಮನಹಳ್ಳಿಯಲ್ಲಿ ತರಬೇತಿ ಕೊಟ್ಟಿದ್ದಾರೆ.
ನಾವು ಇಲ್ಲಿಯವರೆಗೆ ತಿನ್ನದ ಅನೇಕ ಬಗೆಯ ಸಿಹಿ ತಿಂಡಿಯನ್ನೂ ಇವರು ತಯಾರಿಸುತ್ತಿದ್ದಾರೆ. ತಿಂದಿದ್ದರೂ ಸಹ  ಬೇರೆ ರುಚಿಯಲ್ಲಿ ಅದನ್ನು ತಯಾರಿಸಲು ಸಲಹೆ ಕೊಡುತ್ತಾರೆ. ಪ್ರತಿ ತರಗತಿಗೆ ಐವರಂತೆ ಮಹಿಳೆಯರನ್ನು ಆಯ್ದುಕೊಂಡು ತರಬೇತಿ ಕೊಡುತ್ತಾರೆ. ಕಲಿಯುವವರ ಆಸಕ್ತಿಯಂತೆ ಐದು ದಿನದಿಂದ ವಾರದವರೆಗೆ ಇದು ನಡೆಯುತ್ತದೆ. 
ಹಲವು ವಸ್ತುಪ್ರದರ್ಶನ, ಸಮ್ಮೇಳನ, ಸಾಂಸಕ್ರತಿಕ ಕಾರ್ಯಕ್ರಮಗಳ ವೇಳೆ ಮಳಿಗೆ ಹಾಕಿ ಅದರ  ಮೂಲಕ ತಿಂಡಿಗಳ ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಕೇಕ್‌ಗಳ ಬೇಡಿಕೆ ಬಂದಲ್ಲಿ ಮನೆಯಿಂದಲೇ ಅದನ್ನು ತಯಾರಿಸಿಕೊಡುತ್ತಾರೆ. ಇವರ ಕೈಲಿ ವಿವಿಧ ಕಲಾಕೃತಿಯ ಕೇಕ್‌ಗಳು ಸಿದ್ಧಗೊಂಡಿವೆ. ಬರ್ತಡೇ, ವಾರ್ಷಿಕೋತ್ಸವ ಇನ್ನಿತರ ಶುಭ ಸಮಾರಂಭಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಕೇಕ್ ತಯಾರಿಸಿಕೊಡುವ ಬೇಡಿಕೆಯನ್ನು ಸ್ವೀಕರಿಸುತ್ತಾರೆ.
ಅಡುಗೆ ಮತ್ತು ಕೇಕ್ ವೈವಿಧ್ಯತೆ ಅತಿ ಹೆಚ್ಚು ಪ್ರಮಾಣದಲ್ಲಿ ಇದೆ. ದಿನೇ ದಿನೇ ಇನ್ನಷ್ಟು ಹೊಸ ರುಚಿಯಲ್ಲಿ ಬೆಳಕಿಗೆ ಬರುತ್ತಿವೆ. ಇದನ್ನೆಲ್ಲ ಕಲಿತು ಆಸಕ್ತರಿಗೆ ತರಬೇತಿ ಕೊಡುತ್ತೇನೆ ಎನ್ನುವ ರಂಜು, ಸೀರೆಗೆ ಮತ್ತು ಬ್ಲೌಸ್‌ಗೆ ವಿವಿಧ ರೀತಿಯ ಎಂಬ್ರಾಯ್ಡರಿ ಹಾಕುವುದರಲ್ಲೂ ಪಳಗಿದವರು.
................................     
ವೃತ್ತಿ ಬೇರೆ, ಪ್ರವೃತ್ತಿ ಬೇರೆ

ಹನುಮಂತ ಪಾಟೀಲ


 ಪೊಲೀಸ್ ಇಲಾಖೆಗೂ ಸಾಹಿತ್ಯ, ಸಂಗೀತಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಪೊಲೀಸ್ ವೃತ್ತಿಯಲ್ಲಿದ್ದವರಿಗೆ ಇತರೆ ಹವ್ಯಾಸಗಳತ್ತ ತಲೆಹಾಕಲು ಪುರುಸೊತ್ತೇ ಇರುವುದಿಲ್ಲ. ಕೆಲಸದ ಒತ್ತಡದಲ್ಲಿ ಕುಟುಂಬದವರೊಂದಿಗೂ ಸರಿಯಾಗಿ ಬೆರೆಯಲಾಗದೆ, ಹಬ್ಬ-ಹರಿದಿನ ಆಚರಿಸಲಾಗದೆ ಎಲ್ಲೋ ಊಟ, ತಿಂಡಿ, ನಿದ್ದೆ ಮಾಡುವ ಸಂದರ್ಗಳೇ ಹೆಚ್ಚು. ಇಂತಹ ಜಂಜಡದ ಸೇವೆಯ ಮಧ್ಯೆ ಇದ್ದಾಗಲೂ  ಸಾಹಿತ್ಯ, ಸಂಗೀತ, ಬರವಣಿಗೆಯಲ್ಲಿ ತೊಡಗಿಸಿಕೊಂಡವರಿದ್ದಾರೆ.
ರಿಪ್ಪನ್‌ಪೇಟೆ ವಾಸಿ ಹನುಮಂತ ಎ. ಪಾಟೀಲ್ ನಿವೃತ್ತ ಪೊಲೀಸ್. ಈ ಹವ್ಯಾಸಗಳನ್ನು ಅಂಟಿಸಿಕೊಂಡು ಆನಂತರದ ದಿನಗಳಲ್ಲಿ ಇವೇ ಸಾಧನೆಗೆ ಕಾರಣವಾದವು. ಈ ವರ್ಷ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಸಾಹಿತ್ಯದ ಕ್ಷೇತ್ರದವರಲ್ಲದಿದ್ದರೂ ಆ ಕ್ಷೇತ್ರಕ್ಕೆ ಪ್ರವೇಶಿಸಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅಷ್ಟೇ ಅಲ್ಲ, ಇದರಲ್ಲೇ ಬೆಳೆದು ಎಲ್ಲರೂ ಗುರುತಿಸುವಂತಾಗುವುದು ಇನ್ನೂ ಕಷ್ಟದ ಕೆಲಸ. ಇಂತಹ ಮಹತ್ಸಾಧನೆಯನ್ನು ಪಾಟೀಲರು ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ. 
  ಸಾಧನೆ ಮೂಲಕ ಸಾಹಿತ್ಯ ಸರಸ್ವತಿಯನ್ನು ಒಲಿಸಿಕೊಂಡು, ಕನ್ನಡ ಸಾಹಿತ್ಯದ ಪ್ರಮುಖ ಕೃತಿಯನ್ನೆಲ್ಲ ಓದಿ ಅರ್ಥೈಸಿಕೊಂಡವರು. ನಿವೃತ್ತ ನಂತರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಾ ತಮ್ಮಲ್ಲಿ ಇನ್ನೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ಇವೆಲ್ಲ ಅವರ ಬರವಣಿಗೆಗೆ ಇನ್ನಷ್ಟು ಸಾಥ್ ನೀಡಿದವು. ಇದರ ಫಲವಾಗಿ ಅವರಿಂದ  9 ಕೃತಿಗಳು ಈವರೆಗೆ ಪ್ರಕಟಗೊಂಡಿವೆ.
ಹನುಮಂತ ಪಾಟೀಲ್ ಮೂಲತಃ ಹಾವೇರಿ ಜಿಲ್ಲೆ ಕುಂದಗೋಳ ತಾಲೂಕಿನವರು. 1975ರಿಂದೀಚೆ ಶಿವಮೊಗ್ಗ ಜಿಲ್ಲೆಯವರೇ ಅಗಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ನಂತರ ಶಿವಮೊಗ್ಗ, ತೀರ್ಥಹಳ್ಳಿ, ಮಾಳೂರು, ರಿಪ್ಪನ್ಪೇಟೆ, ಸೊರಬ ಮತ್ತು ಕಾರ್ಗಲ್ ಠಾಣೆಗಳಲ್ಲಿ ಕೆಲಸ ಮಾಡಿ ಜನಸ್ನೇಹಿ ಪೊಲೀಸ್ ಮಾಮಾ ಎನಿಸಿಕೊಂಡವರು. ಠಾಣೆಗೆ ಬರುತ್ತಿದ್ದವರ ನೋವನ್ನಾಲಿಸಿ ಅದಕ್ಕೆ ಧ್ವನಿಯಾಗಿ ಅದನ್ನು ಪರಿಹರಿಸಲು ಮುಂದಾಗುತ್ತಿದ್ದರು. ಇಂತಹ ಜನಪರ ಕಾಳಜಿಯ, ಸಮಾಜಮುಖಿ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಅಪರೂಪ. ಹೀಗಾಗಿಯೇ ಅವರು ಜನರಿಗೆ ತೀರ ಹತ್ತಿರವಾಗಿದ್ದರು.     
2006ರಲ್ಲಿ ಮುಖ್ಯ ಪೇದೆಯಾಗಿ ನಿವೃತ್ತಿಯಾದ ನಂತರ ರಿಪ್ಪನ್‌ಪೇಟೆಯ ವಾಸಿಯಾಗಿರುವ ಇವರು, ಹಿಂದುಸ್ತಾನಿ ಸಂಗೀತದ ಆರಾಧಕರಾದರು. ಮೊದಲಿನಿಂದಲೂ ಸಂಗೀತ ಕೇಳುವುದರಲ್ಲಿ ತೀವ್ರ ಆಸಕ್ತಿ ಇದ್ದುದರಿಂದಲೋ ಏನೋ, ಇನ್ನಷ್ಟು ಅದರ ಹತ್ತಿರಕ್ಕೆ ಹೋಗಲು ಅನುವಾಯಿತು. ಗಜಲ್, ಭಾವಗೀತೆಗಳು, ಹಳೆಯ ಕನ್ನಡ ಮತ್ತು
ಹಿಂದಿ ಚಲನಚಿತ್ರ ಗೀತೆಗಳ ಆರಾಧಕರೂ ಹೌದು. ಪ್ರೇಕ್ಷಣೀಯ ಪ್ರಾಕೃತಿಕ ಪಾರಂಪರಿಕ ಮತ್ತು ಐತಿಹಾಸಿಕ ಸ್ಳಳಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇವರು ಹೊಂದಿರುವ ಇವರು, ಇತಿಹಾಸದ ಬಗ್ಗೆಯೂ ವಿಶೇಷ ಒಲವನ್ನು ಹೊಂದಿದ್ದಾರೆ.
ಕೋವಿ ಮತ್ತು ಗುಬ್ಬಚ್ಚಿ ಗೂಡು,  ಕವನ ಬರುವುದಾದರೆ ಬರಲಿ ಎಂಬ ಕವನ ಸಂಕಲನ ಮತ್ತು ಯುಗಾದಿ ಒಂದು ಚಿಂತನೆ ಎಂಬ ಕೃತಿ ಹೊರತಂದಿದ್ದಾರೆ. ಇತರ ವಿಚಾರಗಳ ಕುರಿತಾಗಿ 6 ಕೃತಿ ಬರೆದಿದ್ದಾರೆ. ಇವರ ಸಾಧನೆ ಗಮನಿಸಿ ಅನೇಕ ಸನ್ಮಾನ, ಗೌರವಗಳು ಸಂದಿವೆ. ರಿಪ್ಪನ್‌ಪೇಟೆಯ ಹಲವು ಸಂಘಟನೆಗಳು, ಜಿಲ್ಲಾ ರಾಜ್ಯೋತ್ಸವದಲ್ಲಿ, ಸಾಹಿತ್ಯ ಹುಣ್ಣಿಮೆ, ಕೊಡಗು ಮತ್ತು ಹಾವೇರಿಯಲ್ಲಿ ನಡೆದ ಚುಟುಕು ಸಮ್ಮೇಳನದಲ್ಲಿ  ಸನ್ಮಾನಿತರಾಗಿದ್ದಾರೆ.
70ರ ಹರಯದಲ್ಲೂ ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಉಳಿಸಿಕೊಂಡಿರುವ ಪಾಟೀಲರು, ಸಾಹಿತ್ಯದ ಕಾರ್ಯಕ್ರಮ ಅಕ್ಕಪಕ್ಕದ ತಾಲೂಕಿನಲ್ಲಿ ಎಲ್ಲಿ ಇದ್ದರೂ ಅಲ್ಲಿ ಹಾಜರಿರುತ್ತಾರೆ. ತಾಲೂಕಿನ ಅನೇಕ ವಿದ್ವಾಂಸರ, ಸಾಹಿತಿಗಳ ಜೊತೆ ಉತ್ತಮ ಸಂಬಂಧವಿಟ್ಟುಕೊಂಡು ಸಾಹಿತ್ಯದ ಕೃಷಿ ಮುನ್ನಡೆಸುತ್ತಿದ್ದಾರೆ.  ಇವರ ಸಾಹಿತ್ಯಾರಾಧನೆ ಮನ್ನಿಸಿ ತಾಲೂಕು ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷತೆಯ ಗೌರವ ನೀಡಿದೆ. 

22,7,`17
 ............................

ಪವರ್‌ಲಿಫ್ಟಿಂಗ್ ಸಾಧಕ 
ಡಿ. ಜಿ. ಪರಶುರಾಮ

ಕೆಲವರು ಹುಟ್ಟುತ್ತಲೇ ಬಲಿಷ್ಠರಾಗಿರುತ್ತಾರೆ. ಇನ್ನೂ ಕೆಲವುರು  ಬಲಿಷ್ಠರಾಗಿ ಆನಂತರ ತಯಾರಾಗುತ್ತಾರೆ ಎಂಬ ಮಾತಿದೆ. ಬಲಿಷ್ಠರಾಗಿ ಹುಟ್ಟುವವರಾಗಲಿ, ಆನಂತರ ಬಲಿಷ್ಟರಾಗುವವರಾಗಲಿ ತರಬೇತಿ ಪಡೆದರೆ ಮಾತ್ರ ಸಾಧನೆಯ ಮಾರ್ಗದಲ್ಲಿ ಸಾಗಲು ಸಾಧ್ಯ. ತರಬೇತಿಯೊಂದೇ ಸಾಧನೆಯ ಹಾದಿಯನ್ನು, ತೋರಿಸಬಲ್ಲದು, ಸಾಗುವ ದಾರಿಯನ್ನು ನಿರ್ಧರಿಸಬಲ್ಲದು. ಹೆದರಿಕೆಯನ್ನು ದೂರಮಾಡಿ ಮನೋಬಲ, ಸಾಧನೆಯ ನಿರ್ದಿಷ್ಠ ಗುರಿಯನ್ನಿಟ್ಟುಕೊಂಡರೆ ಕ್ರೀಡೆಯಲ್ಲಿ ಅಥವಾ ಯಾವುದೇ ದೈಹಿಕ ಸ್ಪರ್ಧೆಯಲ್ಲಿ ಗೆಲುವಿನ ಸರದಾರರಾಗಬಹುದು. 
ಸುಮಾರು ಮೂರು ದಶಕಗಳ ಹಿಂದೆ ಶಿವಮೊಗ್ಗದಲ್ಲಿ  ದೇಹದಾರ್ಢ್ಯ ಮನೆಮಾತಾಗಿತ್ತು. ಅನೇಕ ಘಟಾನುಘಟಿಗಳು ಮಲೆನಾಡಿನ ಈ ಜಿಲ್ಲೆಯಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಧಿಸಿ ಹತ್ತಾರು ಪದಕ ಗಳಿಸಿ, ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದರು. ಸುಧಾಕರ ಕಾಮತ್,  ಸಿರಿಲ್ ಡಿಕಾಸ್ಟಾ, ಮಂಜುನಾಥ, ಲಕ್ಷ್ಮೀನಾರಾಯಣ, ಪ್ರಭಾಕರ, ಕೃಷ್ಣಮೂರ್ತಿ ಮೊದಲಾದವರ ಹೆಸರು ಈ ಕ್ಷೇತ್ರದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಇವರ ನಂತರವೂ ದೇಹದಾರ್ಢ್ಯಪಟುಗಳ ಸಂಖ್ಯೆ ಕಡಿಮೆಯಾಗಿಲ್ಲ. ಬೆರಳೆಣಿಕೆಯಷ್ಟಾದರೂ ಸಾಧಕರು ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ಅಂತಹವರಲ್ಲಿ ಡಿ.ಜಿ. ಪರಶುರಾಮ ಒಬ್ಬರು.
ನಗರದ ಹೊಸಮನೆ ಬಡಾವಣೆ ವಾಸಿಯಾದ ಪರಶುರಾಮ ಅವರ ತಂದೆ ಡಿ.ಪಿ. ಗೋಪಾಲರಾವ್ ಹೆಸರಾಂತ ದೇಹದಾರ್ಢ್ಯಪಟು ಮತ್ತು ವೇಟ್ ಲಿಫ್ಟರ್ ಆಗಿದ್ದರು. ತಂದೆಯಂತೆ ಮಗನೂ ಈ ಕ್ಷೇತ್ರಕ್ಕೆ ಕಾಲಿಟ್ಟು 20ನೆಯ ವಯಸ್ಸಿನಲ್ಲೇ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ನಂತರ ರಾಷ್ಟ್ರೀಯ ಸ್ಪರ್ಧೆ ಮಂಗಳೂರು, ಬೆಂಗಳೂರು, ಪಾಟ್ನಾದಲ್ಲಿ ನಡೆದಾಗ ಸ್ಪರ್ಧಿಸಿ ಪದಕ ಸಹಿತ ಮರಳಿದ್ದರು. ಅಂತಾರಾಷ್ಟ್ರಿಯ ಮಟ್ಟಕ್ಕೂ ಆಯ್ಕೆಯಾದರೂ ಹಣಕಾಸಿನ ಅಡಚಣೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಆನಂತರ ಕೆಲವು ವರ್ಷ  ಕೇವಲ ಪ್ರಾಕ್ಟೀಸ್ ಮಾತ್ರ ಮಾಡುತ್ತ ಸ್ಪರ್ಧೆಯಿಂದ ದೂರವಿವುಳಿದಿದ್ದರು. ಈ ವರ್ಷ ಮತ್ತೆ ರಾಷ್ಟ್ರೀಯಮಟ್ಟಕ್ಕೇರಿದ್ದಾರೆ. ಜೈಪುರದಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಮೊನ್ನೆ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಆಯ್ಕೆ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನಗಳಿಸಿದ್ದಾರೆ. ಈ ಹಿಂದೆ ಅವರು 140 ಕೆಜಿ ಭಾರವನ್ನು ಬೆಂಚ್‌ಪ್ರೆಸ್ ವಿಭಾಗದಲ್ಲಿ ಎತ್ತಿ ದಾಖಲೆ ಮಾಡಿದ್ದಾರೆ.   
ರಾಷ್ಟ್ರೀಯ ದೇಹಧಾರ್ಢ್ಯ ಮತ್ತು ವೇಟ್ ಲಿಫ್ಟರ್ ಆಗಿರುವ ಇವರು, ಕುವೆಂಪು ರಸ್ತೆಯಲ್ಲಿರುವ ಪುಲಿಕೇಶಿ ವ್ಯಾಯಾಮ ಶಾಲೆಯ ವಿದ್ಯಾರ್ಥಿ. ಇಂದಿಗೂ ತಪ್ಪದೇ ದೈನಂದಿನ ಅಭ್ಯಾಸ ಮಾಡುತ್ತಿದ್ದಾರೆ. ಕಲಿತ ಶಾಲೆಗೆ ಕೀರ್ತಿ ತರುವ ಮೂಲಕ ಅದರಲ್ಲೇ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ ಮಾಡುತ್ತಿದ್ದಾರೆ. ತಮ್ಮ 52ರ ಹರಯದಲ್ಲೂ ಉತ್ತಮ ಮೈಕಟ್ಟನ್ನು ಹೊಂದಿ, ಅದನ್ನು ಉಳಿಸಿಕೊಂಡಿದ್ದಾರೆ. ಮತ್ತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಪದಗಳನ್ನು ಧರಿಸುವ ಗುರಿ ಹೊಂದಿದ್ದಾರೆ.
 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸರ್ವಸಿದ್ಧತೆ ನಡೆಸಿರುವ ಅವರು, ಮಾನಸಿಕ ಬಲವನ್ನು ಕಾಪಾಡಿಕೊಳ್ಳಬೇಕು. ಅತಿಕಠಿಣವಾಗಿ ತರಬೇತಿ ನಡೆಸಬೇಕು. ಸತತವಾಗಿ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವವರ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಬೇಕು. ಇದು ಸುಲಭದ ಮಾತಲ್ಲ. ಆದರೂ ತನ್ನಲ್ಲಿ ಆತ್ಮವಿಶ್ವಾಸವಿರುವುದರಿಂದ ಮತ್ತೆ ಮರಳಿ ಅಡಿಯಿಟ್ಟಿದ್ದಾಗಿ ಹೇಳುತ್ತಾರೆ. ಸರಕಾರ ಮತ್ತು ಅಸೋಸಿಯೇಶನ್‌ಗಳು ಸ್ಪರ್ಧಿಗಳಿಗೆ ಹಣಕಾಸು ನೆರವು ನೀಡಬೇಕು. ಉತ್ತಮ ಸಾಧಕರನ್ನು ಗುರುತಿಸುವ ಕೆಲಸವಾಗಬೇಕು. ಅವರಿಗೆ ತಕ್ಕ ಪ್ರೋತ್ಸಾಹ, ತರಬೇತಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಆದರೆ ಕರ್ನಾಟಕದಲ್ಲಿ ಪ್ರೋತ್ಸಾಹ ಸಾರ್ವಜನಿಕರಿಂದ ಮಾತ್ರ ಇದೆ. ಹಣ ಖರ್ಚು ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೆಕು. ಆದ್ದರಿಂದ ಬಡತನದಲ್ಲಿರುವ ಸ್ಪರ್ಧಿಗಳೆಲ್ಲ ದೇಶೀಯ, ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದರೂ ಹೋಗಲಾರದ ಸ್ಥಿತಿಯಲ್ಲಿದ್ದಾರೆ ಎಂದು ನುಡಿಯುತ್ತಾರೆ.
15.7.17
.............................

Thursday 18 January 2018

ಸ್ಕೌಟ್ ಸಾಧಕ
ರಾಮ್ ಸಿಂಗ್

ಮಾನಸಿಕ, ದೈಹಿಕ ಮತ್ತು ಅಧ್ಯಾತ್ಮಿಕ ಸಂಸ್ಕೃತಿಯನ್ನು ಕಲಿಸುವ ಸ್ಕೌಟ್ ಮತ್ತು ಗೈಡ್ಸ್, ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ಕೌಟ್ ಎನ್ನುವುದು ಒಂದು ಶಿಕ್ಷಣ, ಆದರೆ ನಿರ್ದೇಶನವಲ್ಲ ಎನ್ನುತ್ತಾರೆ ಸರ್ ರಾಬರ್ಟ್ ಬೇಡೆನ್ ಪೊವೆಲ್.  ಸ್ಕೌಟ್‌ನಿಂದ ಶಿಸ್ತು, ಐಕ್ಯತೆ, ಭ್ರಾತೃತ್ವ ಬೆಳೆಯುತ್ತದೆ. ಇಂತಹ ಅಪೂರ್ವ ಶಿಕ್ಷಣ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿದವರು ಹಲವರಿದ್ದಾರೆ. ವರಲ್ಲೊಬ್ಬರು ರಾಮ್‌ಸಿಂಗ್. ಅವರ ಅಪೂರ್ವ ಸಾಧನೆಯನ್ನು ಗಮನಿಸಿ ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಮ್ ಸಿಂಗ್ ಹೆಸರು ರಾಜ್ಯ ಸ್ಕೌಟ್‌ನಲ್ಲಿ ಹೆಸರುವಾಸಿ. ಸದ್ಯ ಜಿಲ್ಲಾ ಸ್ಥಾನಿಕ ಆಯುಕ್ತರಾಗಿರುವ ಇವರು, ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಲೇ ಈ ಸೇವೆಗೆ ಸೇರಿ ಅಪಾರ ಅನುಭವ ಗಳಿಸಿ, ವಿಶೇಷ ತರಬೇತಿ ಪಡೆದು ನೂರಾರು ಸ್ಕೌಟ್ ಶಿಕ್ಷಕರನ್ನು ಬೆಳೆಸಿದವರು. ತಮ್ಮ 77ರ ಹರೆಯದಲ್ಲೂ ಸ್ಕೌಟ್ ಎಂದರೆ ಅವರ ಕಿವಿ ನಿಮಿರುತ್ತದೆ. ಇಂದಿಗೂ ಅವರಲ್ಲಿನ ಶಿಸ್ತು, ಮಾತುಗಾರಿಕೆ ಮತ್ತು ಕ್ರಿಯಾಶೀಲತೆಗೆ ಸ್ಕೌಟ್ ಕಾರಣ ಎಂದರೆ ತಪ್ಪಾಗಲಾರದು.
ಮೂಲತಃ ಚನ್ನಗಿರಿ ತಾಲೂಕು ವಡ್ನಾಳದವರಾದ ರಾಮ್ ಸಿಂಗ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಕಲಿತು ಶಿವಮೊಗ್ಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯವರೆಗೆ ಓದಿದವರು. ಬೆಂಗಳೂರಿನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರಕ್ ಸಂಸ್ಥೆಯಲ್ಲಿ ಬಿ.ಇಡಿ ಪದವಿ ಪಡೆದು, ಶಿಕ್ಷಕರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರದ ಪ್ರಾಥಮಿಕ ಶಾಲೆಗೆ 1965ರಲ್ಲಿ ನೇಮಕಗೊಂಡರು. ಮಾಜಿ ಸಚಿವ, ಸ್ಕೌಟ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಸಿಂಗ್ ಅವರ ಶಿಷ್ಯರಲ್ಲೊಬ್ಬರು. ಸಿಂಧ್ಯಾಗೆ ಇಂದಿಗೂ ಸಿಂಗ್ ಅವರಲ್ಲಿ ಅಪಾರ ಗುರುಭಕ್ತಿ. ಕನಕಪುರದಿಂದ ಭದ್ರಾವತಿಯ ನ್ಯೂಟೌನ್ ಸರ್ಕಾರಿ ಶಾಲೆಗೆ 1969ರಲ್ಲಿ ವರ್ಗಾವಣೆಗೊಂಡು ಬಂದ ನಂತರ 1971ರಲ್ಲಿ ಕಬ್ ಮಾಸ್ಟರ್ ತರಬೇತಿ ಪಡೆದುಕೊಂಡು ಕೆಲಸ ನಿರ್ವಹಿಸುತ್ತಲೇ 1985ರಲ್ಲಿ  ರಾಜ್ಯದ ಸಹಾಯಕ ಸ್ಕೌಟ್ ಆಯುಕ್ತರಾಗಿ ನೇಮಕಗೊಂಡರು. ಇದು ಇಡೀ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿತ್ತು. ಈ ವೇಳೆಗೆ ಶಿವಮೊಗ್ಗದ ಹೊಸಮನೆ ಶಾಲೆಗೆ ಅವರು ವರ್ಗಾವಣೆಗೊಂಡಿದ್ದರು.
ತಮ್ಮ ಪ್ರಾಥಮಿಕ ಶಿಕ್ಷಣ ಕಲಿಕೆಯ ಹಂತದಲ್ಲೇ ಸ್ಕೌಟ್ ಬಗ್ಗೆ ಅಭಿರುಚಿ ಹೊಂದಿದ್ದರಿಂದಲೋ ಏನೋ, ಸ್ಕೌಟ್ ಎನ್ನುವುದು ಅವರಿಗೆ ಜೀವನದ ಅವಿಭಾಜ್ಯ ಅಂಗವಾಗಿತ್ತು. ಇದರಲ್ಲೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದರು. ಇದರಿಂದ ವಿವಿಧ ಹುದ್ದೆಗಳು ದೊರೆತವು. ಇಷ್ಟಾದರೂ ಸೌಮ್ಯ ಮತ್ತು ಅಷ್ಟೇ ಸಮರ್ಪಣಾಭಾವದ ಸಿಂಗ್ ಅವರ ಸೇವೆಯನ್ನು  ಯಾರೂ ಗುರುತಿಸಲೇ ಇಲ್ಲ. ಆದರೆ ಈ ವರ್ಷ ಜಿಲ್ಲಾ ಸಮಿತಿ ಅವರ  ಹೆಸರನ್ನು ರಾಜ್ಯ ಪ್ರಶಸ್ತಿಗೆ ಕಳುಹಿಸುವ ಮೂಲಕ ಪ್ರಶಸ್ತಿಯ ಗೌರವಕ್ಕೆ ಭಾಜನರಾಗುವಂತೆ ಮಾಡಿದೆ. ಅವರೆಂದೂ ಪ್ರಶಸ್ತಿ, ಸನ್ಮಾನ, ಪ್ರಚಾರ ಬಯಸದೆ ಕೆಲಸ ಮಾಡಿದರು. ಇದರಿಂದಾಗಿ ಅವರು ಬೆಳಕಿಗೆ ಬರಲೇ ಇಲ್ಲ. ಎಲೆಮರೆಯ ಕಾಯಿಯಾಗಿ ಸೇವೆ ಸಲ್ಲಿಸಿದರು. ಇಂತಹ ಸಾಧಕ ನಗರದ ಬಸವನಗುಡಿಯಲ್ಲಿ  ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ. ತನ್ನನರಸಿಕೊಂಡು ಬಂದ ರಾಜ್ಯ ಪ್ರಶಸ್ತಿ ನೆಮ್ಮದಿಯನ್ನು ಅವರಿಗೆ ತಂದಿದೆ. 
ಜಿಲ್ಲಾ ಸಹಾಯಕ ಆಯುಕ್ತರಾಗಿದ್ದಾಗ 3 ರ‌್ಯಾಲಿಗಳನ್ನು ಅವರು ನಡೆದಿದ್ದಾರೆ. ಅನೇಕ ರಾಷ್ಟ್ರೀಯ ತರಬೇತಿ ಮತ್ತು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಶಿಕ್ಷಕರಿಗೆ ತರಬೇತಿ ಕೊಡುವ ವವರಾಗಿದ್ದರು. ಶಿವಮೊಗ್ಗದಲ್ಲಿ ರಾಷ್ಟ್ರೀಯ ಸ್ಕೌಟ್ ರ‌್ಯಾಲಿಯನ್ನು 1984-85ರ ಸಾಲಿನಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಅವರದ್ದು. ತಮ್ಮ ವೃತ್ತಿಯಷ್ಟೇ ಸ್ಕೌಟನ್ನೂ ಅವರು ಪ್ರೀತಿಸಿದವರು. ಜನಪದ ಸಾಹಿತ್ಯದಲ್ಲೂ ವಿಶೇಷ ಆಸಕ್ತಿಯನ್ನು ಇವರು ಹೊಂದಿದವರಾಗಿದ್ದಾರೆ.
7.7.17
...............................         
ಶ್ರೇಷ್ಠ, ಮಾದರಿ ಕೃಷಿಕ 
ಜಗದೀಶ ನಾಯ್ಕ್


  ನಮ್ಮ ನಾಗರಿಕತೆ ಮತ್ತು ಸ್ಥಿರ ಆರ್ಥಿಕತೆಯ ಬುನಾದಿಯೇ ಕೃಷಿ ಎಂಬ ಮಾತಿದೆ. ಕೃಷಿಯು ಸಹ್ಯ ಉದ್ಯೋಗವಾಗಬೇಕಾದರೆ ಅದು ಲಾಭದಾಯಕವಾಗಬೇಕು. ಆಧುನಿಕತೆಯನ್ನು ಬಳಸಿಕೊಂಡು,  ಸಾವಯವದ ಮೂಲಕ ಅತ್ಯುನ್ನತ ಸಾಧನೆಯನ್ನು ಹಲವು ಕೃಷಿಕರು ಮಾಡುತ್ತಿದ್ದಾರೆ. ಈ ಮೂಲಕ ಕೃಷಿಯನ್ನು ಉಳಿಸುವತ್ತ, ಸಂಸ್ಕೃತಿಯನ್ನಾಗಿ ಬೆಳೆಸುವತ್ತ ದಾಪುಗಾಲಿಟ್ಟಿದ್ದಾರೆ. ಈ ಮೂಲಕ ಸಾಧನೆ ಮಾಡಿದ, ಶ್ರೇಷ್ಠ ಮತ್ತು ಮಾದರಿ ಕೃಷಿಕರೆಂದರೆ ಜಗದೀಶ ನಾಯ್ಕ್.
 ಜಗದೀಶ  ಅವರು ಶಿವಮೊಗ್ಗ ನಗರ ವ್ಯಾಪ್ತಿಯಲ್ಲೇ ಇರುವ ಮಲವಗೊಪ್ಪದವರು. ಒಟ್ಟು 5 ಎಕರೆ ಜಮೀನನ್ನು ಹೊಂದಿರುವ ಇವರು ಎಕರೆಗೆ 46 ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ಮಾಡಿದ್ದಾರೆ. ಪ್ರತಿ ವರ್ಷ ಸರಾಸರಿ 40 ಕ್ವಿಂಟಾಲ್ ಬೆಳೆಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ವ್ಯವಸಾಯದ ಪದ್ಧತಿ. ಅವರೆಂದೂ ರಾಸಾಯನಿಕ ಗೊಬ್ಬರ ಅಥವಾ ಔಷಧಿಯ ಗೊಡವೆಗೆ ಹೋಗದೆ ಕೊಟ್ಟಿಗೆ ಗೊಬ್ಬರ, ಮತ್ತು ಜೀವಾಮೃತವನ್ನು ಮಾತ್ರ ಬಳಸುತ್ತಿದ್ದಾರೆ. ಇವರ ಪತ್ನಿ ಲಕ್ಷ್ಮೀಬಾಯಿ ಸಾಥ್ ಕೊಡುತ್ತಿದ್ದಾರೆ. ಕೂಲಿಗಳನ್ನೆಂದೂ ಬಳಸದೆ ಏನೇ ಕೆಲಸ ಇದ್ದರೂ ಪತಿ-ಪತ್ನಿಯೇ ನಿರ್ವಹಿಸುತ್ತಾರೆ. ದಿನಿವಿಡೀ ದುಡಿಮೆಯೇ ಇವರ ಸಾಧನೆಯ ಗುಟ್ಟು. ಭತ್ತದ ಹೊರತಾಗಿ ಸುಮಾರು 2 ಎಕ್ರೆಯಲ್ಲಿ  ಸೌತೆಕಾಯಿ, ಬೀನ್ಸ್, ಇತರೆ ತರಕಾರಿ ಬೆಳೆದಿದ್ದಾರೆ. 6 ಗುಂಟೆ ಜಾಗದಲ್ಲಿ 6 ಕ್ವಿಂಟಾಲ್ ಸೌತೆಕಾಯಿ ಬೆಳೆದು ದಾಖಲೆ ಮಾಡಿದ್ದಾರೆ. ತರಕಾರಿಯನ್ನು ಎಪಿಎಂಸಿಯಲ್ಲೇ ಮಾರಾಟ ಮಾಡುವ ಮೂಲಕ ಉತ್ತಮ ದರ ಪಡೆಯುತ್ತಿದ್ದಾರೆ.
ಇವರ ಇನ್ನೊಂದು ಸಾಧನೆ ಎಂದರೆ ಜೀವಸಾರ ಘಟಕವನ್ನು ಆರಂಭಿಸಿದ ಜಿಲ್ಲೆಯ ಪ್ರಪ್ರಥಮ ರೈತ ಎನ್ನುವುದು. ಗೋಮೂತ್ರ, ಮತ್ತಿತರ ವಸ್ತುಗಳನ್ನು ಹಾಕಿ ಜೀವಸಾರ ತಯಾರಿಸಿ ಬೆಳೆಗಳಿಗೆ ನೀಡುವುದರಿಂದ ರೋಗರಹಿತ, ಬಲಿಷ್ಠ ಮತ್ತು ಭರ್ಜರಿ ಬೆಳೆ ಸಾಧ್ಯ ಎನ್ನುವುದನ್ನು ಈ ಮೂಲಕ ಕಂಡುಕೊಂಡಿದ್ದಾರೆ. ಇವರ ಕೃಷಿ ಸಾಧನೆಯನ್ನು ಸಚಿವ ಕೃಷ್ಣ ಬೈರೇಗೌಡ ಸ್ವತಃ ವೀಕ್ಷಿಸಿದ್ದಾರೆ. ಕೃಷಿ, ತೋಟಗಾರಿಕೆ ಮತ್ತು ಕೃಷಿ ವಿವಿಯವರು ಆಗಾಗ ಭೇಟಿ ನೀಡಿ ಸಹಕಾರ, ಮಾರ್ಗದರ್ಶನ ನೀಡುತ್ತಿದ್ದಾರೆ. 
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳು ಇವರ ಹೊಲಕ್ಕೆ ಭೇಟಿ ನೀಡಿ ಆಧ್ಯಯನಕ್ಕೆ ಬೇಕಾದ ಮಾಹಿತಿ ಪಡೆಯುತ್ತಾರೆ. ಇವರ ಸಾಧನೆ ಇಂದು- ನಿನ್ನೆಯದಲ್ಲ. ತಂದೆಯ ಕಾಲದಿಂದಲೂ ಮುನ್ನಡೆಸಿಕೊಂಡು ಬಂದಿದ್ದಾರೆ. ಸ್ವಂತ ಮತ್ತು ಪರಿಶ್ರಮದ ದುಡಿಮೆಯಿಂದಲೇ ಸಾಧನೆ ಸಾಧ್ಯ ಎನ್ನುವ ಗುಟ್ಟನ್ನು ಅವರು ಕಂಡುಕೊಂಡಿದ್ದಾರೆ. ಸುಮಾರು 2 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಅದೂ ಸಹ ಉತ್ತಮ ಫಲ ಕೊಡುತ್ತಿದೆ. ಇದರ ಜೊತೆಗೆ ಒಬ್ಬ ಮಗನನ್ನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್  ಓದಿಸುತ್ತಿದ್ದಾರೆ. ಮಗಳು ಶಿವಮೊಗ್ಗದಲ್ಲಿ ಪದವಿ ಓದುತ್ತಿದ್ದಾಳೆ. ಇವರೂ ಸಹ ರಜಾ ದಿನದಲ್ಲಿ ತಂದೆಗೆ ಕೃಷಿಯಲ್ಲಿ ನೆರವಾಗುತ್ತಾರೆ. ಒಂದರ್ಥದಲ್ಲಿ ಕೃಷಿಯೇ ಇವರ ದಿನಚರಿ, ಮೂಲಮಂತ್ರ.
 ಜಗದಿಶ ಅವರ ಸಾಧನೆ ಗಮನಿಸಿ 2011ರಲ್ಲಿ ತಾಲೂಕಿನ ಎರಡನೆಯ ಅತ್ಯುತ್ತಮ ರೈತ, 2016ರಲ್ಲಿ ಪಾಲಿ ಹೌಸ್‌ನಲ್ಲಿ ಭರ್ಜರಿ ತರಕಾರಿ ಬೆಳೆದಿದ್ದಕ್ಕೆ ಉತ್ತಮ ಕೃಷಿಕ ಪ್ರಶಸ್ತಿ ದಕ್ಕಿದೆ. ಕಳೆದ ವರ್ಷದ ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಮೊನ್ನೆಯಷ್ಟೇ ಮುಖ್ಯಮಂತ್ರಿ ಅವರಿಂದ ಪ್ರದಾನ ಮಾಡಲ್ಪಟ್ಟಿದೆ. ಶಿವಮೊಗ್ಗ ದಸರಾ ಮತ್ತು ಬಂಜಾರಾ ಟ್ರಸ್ಟ್‌ನವರು ಸಹ ಇವರನ್ನು ಗೌರವಿಸಿದ್ದಾರೆ.
ಇಂತಹ ಶ್ರಮಜೀವಿ ಕೃಷಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಕಷ್ಟಪಟ್ಟರೆ ಕೈತುಂಬಾ ಲಾಭವಿದೆ. ಆದರೆ ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ನಮ್ಮ ಸಂಸಕ್ರತಿಯೇ ಕೃಷಿ. ಅದನ್ನು ಉಳಿಸಿ ಬೆಳೆಸಿದರೆ ನಾಡು ಸಮೃದ್ಧಿಯಾಗುತ್ತದೆ ಎನ್ನುತ್ತಾರೆ ಜಗದೀಶ್.
1.7.17
.............................  

ಸೇವೆಯಲ್ಲೇ ಧನ್ಯತೆ ಕಂಡ
ಅನ್ನಪೂರ್ಣಾ
........................

 ಇತರರ ಸೇವೆ ಮಾಡುವ ಮೂಲಕ ನಮ್ಮತನವನ್ನು ನಾವು ಕಂಡುಕೊಳ್ಳಬೇಕು. ಇದರಲ್ಲಿಯೇ ಸಂತಸವನ್ನು ಕಾಣಬೇಕು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಸೇವೆ ಅತ್ಯಂತ ಅವಶ್ಯಕತೆ ಉಳ್ಳವರಿಗೆ ದಕ್ಕಿದಾಗ ಅದು ಶಾಶ್ವತವಾಗುತ್ತದೆ. ಅದರಲ್ಲೂ ವಿಶೇಷವಾಗಿ ರೋಗಿಗಳ ಸೇವೆ ಮರೆಯಲಾಗದ್ದು. ರೋಗಿಗಳ ಸೇವೆಯಲ್ಲೇ ತಮ್ಮನ್ನು ತೊಡಗಿಸಿಕೊಂಡು ಇದಕ್ಕಾಗಿ ಸರ್ಕಾರದಿಂದಲೂ ಗುರುತಿಸಲ್ಪಟ್ಟವರು ಎಚ್.ಟಿ. ಅನ್ನಪೂರ್ಣಾ.
  ಆಸ್ಪತ್ರೆಗೆ ದಾಖಲಾದವರು ಶುಶ್ರೂಷಕರ ಸಮರ್ಪಣಾ ಭಾವದ ಚಿಕಿತ್ಸೆ ಮತ್ತು ಪ್ರೀತಿಯ ಸೇವೆ ಮತ್ತು ಕಾಳಜಿಯಿಂದ ಗುಣಮುಖರಾದಾಗ ಅವರು ವ್ಯಕ್ತಪಡಿಸುವ ಪ್ರೀತಿ, ವಿಶ್ವಾಸ ಬೆಲೆ ಕಟ್ಟಲಾಗದ್ದು, ಇದು ಬೇರೆ ಯಾರಿಗೂ, ಯಾವ ಸಂದರ್ಭದಲ್ಲೂ ಸಿಗದು. ಗುಣಮುಖರಾಗಿ ಮನೆಗೆ ತೆರಳಿದರೂ ಸದಾ ಇಂತಹ ಶುಶ್ರೂಷಕರು ದಿನವೂ ಸ್ಮರಿಸಲ್ಪಡುತ್ತಾರೆ. 
 ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ 25 ವರ್ಷದ ಸೇವಾ ಅನುಭವವನ್ನು ಹೊಂದಿರುವ ಅನ್ನಪೂರ್ಣಾ, ಮೃದು ಹೃದಯಿ. ರೋಗಿಗಳನ್ನು ತಮ್ಮ ಮಕ್ಕಳಂತೆ, ಕುಟುಂಬದವರಂತೆ ಕಾಣುವ ವಾತ್ಸಲ್ಯಮಯಿ. ಬಹುಶಃ ಇದಕ್ಕಾಗಿಯೇ ರೋಗಿಗಳಿಗೆ ಅತ್ಯಂತ ಅಪ್ಯಾಯಮಾನರಾಗಿಬಿಡುತ್ತಾರೆ. ಇನ್ನೊಬ್ಬರ ಕಷ್ಟ, ಸಂಕಷ್ಟಗಳಿಗೆ ಮರುಗುವ ಜೊತೆಗೆ ಅಷ್ಟೇ ಹೃದಯವಂತಿಕೆಯಿಂದ ಸೇವೆ ಮಾಡುವುದು ಎಲ್ಲರಿಗೂ ಕರಗತವಾಗುವುದಿಲ್ಲ.  ಇವರ ಸೇವೆ ಮನಗಂಡು ರಾಜ್ಯ ಸರ್ಕಾರ ಕಳೆದ ವರ್ಷ ನೈಟಿಂಗೇಲ್ ಪ್ರಶಸ್ತಿಯನ್ನು ಪ್ರದಾನ  ಮಾಡಿದೆ.
 ತೀರ್ಥಹಳ್ಳಿ ತಾಲೂಕಿನ ಹರುಮನೆ ಗ್ರಾಮದವರಾದ ಇವರು ಬಡ ಹಾಗೂ ರೈತ ಕುಟುಂಬದಿಂದ ಬಂದವರು. ಪ್ರಾಥಮಿಕ ವಿದ್ಯಾಭ್ಯಾಸದ ನಂತರ ದಾವಣಗೆರೆಯ ಸರ್ಕಾರಿ ಚಿಗಟೇರಿ ಆಸ್ಪತೆಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮತ್ತು ಡಿಪ್ಲೊಮಾ ಇನ್ ಮಿಡ್‌ವೈಫರಿ ಕೋರ್ಸನ್ನು ರ‌್ಯಾಂಕ್ ಸಹ ಪೂರೈಸಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರಿ ಸೇವೆಗೆ ನಿಯುಕ್ತರಾದರು. ಹೊಸನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಆನಂತರ ಮೆಗ್ಗಾನ್‌ಗೆ ವರ್ಗಾವಣೆಗೊಂಡು ಸೇವೆಯಲ್ಲಿದ್ದಾರೆ.
  ಪ್ರೀತಿಯ ಮಾತಿನಿಂದಲೇ ರೋಗಿ ಅರ್ಧದಷ್ಟು ಗುಣಮುಖನಾಗುತ್ತಾನೆ ಎನ್ನುವ ಮಾತಿದೆ. ಈ ಮಾತು ಚಾಲ್ತಿಗೆ ಬರಲು ಅನ್ನಪೂರ್ಣಾ ಅವರಂತಹ ನಿಸ್ವಾರ್ಥ, ಮಾನವೀಯ ಗುಣವುಳ್ಳ ಶುಶ್ರೂಷಕರೇ ಕಾರಣವಿರಬಹುದು. ಅನ್ನಪೂರ್ಣಾ ಸುಮಾರು 200 ನೇತ್ರ ತಪಾಸಣಾ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನೇತ್ರದಾನಿ ಡಾ. ಎಂ. ಸಿ. ಮೋದಿ ಅವರೊಂದಿಗೆ ಸೇವೆ ಸಲ್ಲಿಸಿದ್ದನ್ನು ಇವರು ಮನದುಂಬಿ ನುಡಿಯುತ್ತಾರೆ. ಎಚ್‌ಐವಿ ಏಡ್ಸ್ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಈ ರೋಗಪೀಡಿತರ ಸೇವೆಯನ್ನೂ ಮಾಡಿದ್ದಾರೆ. ತಮ್ಮ ಜ್ಞಾನಮಟ್ಟವನ್ನು ವಿಸ್ತರಿಸಿಕೊಳ್ಳಲು ಹಲವಾರು ಕಾರ್ಯಾಗಾರ ಮತ್ತು ವಿಚಾರಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲೂ ಕಾಲಿಟ್ಟಿರುವ ಇವರು, ಉತ್ತಮ ಹಾಡುಗಾರರೂ ಹೌದು.
ಇವರ ಸೇವೆ ಮನ್ನಿಸಿ 2012-13ರ ಸಾಲಿನಲ್ಲಿ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, 2014-15ರ ಸಾಲಿನಲ್ಲಿ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, ಹೊಸನಗರದ ನಾಗರಿಕ ವೇದಿಕೆ, ಜೋಗ-ಕಾರ್ಗಲ್ ಲಯನ್ಸ್ ಕ್ಲಬ್, ಶಿವಮೊಗ್ಗ ರೋಟರಿ ಕ್ಲಬ್, ಸುವರ್ಣಾ ಲೇಡೀಸ್ ಕ್ಲಬ್, ಸರ್ಕಾರಿ ಮೆಡಿಕಲ್ ಕಾಲೇಜಿನಿಂದ ಉತ್ತಮ ಶುಶ್ರೂಷಕಿ ಪ್ರಶಸ್ತಿ ದಕ್ಕಿದೆ. ಕಳೆದ ಸಾಲಿನ ರಾಜ್ಯ ಮಟ್ಟದ ನೈಟಿಂಗೇಲ್ ಪ್ರಶಸ್ತಿ ಬಂದ ನಂತರ ಇವರನ್ನು ಗುರುತಿಸಿ ಮೆಗ್ಗಾನ್ ಶುಶ್ರ್ರೂಷಕಿಯರ ಸಂಘ ಗೌರವಿಸಿದೆ. ತಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಪತಿ ಎಸ್. ಚಂದ್ರಪ್ಪ ಮತ್ತು ಮಕ್ಕಳು ಎನ್ನುವುದನ್ನು  ಮರೆಯದೆ ಹೇಳುತ್ತ್ತಾರೆ.
ಸೇವೆಯಲ್ಲಿ ಸಕಾರತ್ಮಕ ಮನೋಭಾವವಿರಬೇಕು, ಸ್ವಾರ್ಥವಿರಬಾರದು. ಪ್ರಚಾರಕ್ಕಾಗಿ ಅಥವಾ ತೋರಿಕೆಗಾಗಿ  ಸೇವೆ ಸಲ್ಲದು. ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತುವ, ಜಾಗೃತಿ ಮೂಡಿಸುವ ಮತ್ತು ಧೈರ್ಯ ತುಂಬುವ ಕೆಲಸ ಮಾಡಬೇಕು. ಅನುಕಂಪ ತೋರಿಸುವ ಬದಲು ಅನುಭೂತಿ ಹೊಂದಿರಬೇಕು ಎನ್ನುತ್ತಾರೆ ಅನ್ನಪೂರ್ಣಾ. 
24.6.2017

.............................
 ರಂಗಕರ್ಮಿ, ಶಿಲ್ಪ, ಮೂರ್ತಿ ಕಲಾವಿದ
ಎಸ್.ಜಿ.ನರಸಿಂಹಮೂರ್ತಿ



ನಮ್ಮೊಳಗಿನ ನಮ್ಮತನವನ್ನು ಕಂಡುಕೊಳ್ಳುವ ಕಲೆಯೇ ನಾಟಕ. ಇದನ್ನು ಗಮನಿಸಿಯೇ ಇಂಗ್ಲೀಷ್‌ನಲ್ಲಿ ಒಂದು ಮಾತಿದೆ. ಕಲೆಯೊಂದಿಗೆ ಬದುಕು. ಇದು ನಿನಗೆ ಒಳಿತನ್ನುಂಟು ಮಾಡುತ್ತದೆ ಎಂದು. ಈ ರೀತಿ ಕಲೆಯೊಂದಿಗೆ ಬದುಕುತ್ತಿರುವವರು, ಕಲೆಯನ್ನೇ  ಉಸಿರನ್ನಾಗಿ ಮಾಡಿಕೊಂಡವರು, ನಮ್ಮಲ್ಲಿ ಸಾಕಷ್ಟಿದ್ದಾರೆ.   ಇಂತಹವರಲ್ಲಿ ಒಬ್ಬ ಅಪರೂಪದ ರಂಗ ಕಲಾವಿದ ಭದ್ರಾವತಿಯ ಎಸ್. ಜಿ. ನರಸಿಂಹಮೂರ್ತಿ.
ನರಸಿಂಹಮೂರ್ತಿ ಅವರು ಹೆಸರು ಕೇಳದವರಿಲ್ಲ. ಇವರು ಕೇವಲ ರಂಗಕರ್ಮಿ ಮಾತ್ರವಲ್ಲ, ಶಿಲ್ಪಕಲಾವಿದ, ಮೂರ್ತಿ ಕಲಾವಿದರೂ ಹೌದು. ಭದ್ರಾವತಿಯ ಎಂಪಿಎಂನ ಅರಣ್ಯ ವಿಭಾಗದಲ್ಲಿ ಹಿರಿಯ ಕ್ಷೇತ್ರ ಸಹಾಯಕರಾಗಿ ಸೇವೆ ಸಲ್ಲಿಸುತ್ತಲೇ ನಾಟಕ ಕ್ಷೇತ್ರವನ್ನು ಅಲ್ಲಿನ ಕಾರ್ಮಿಕರೊಂದಿಗೆ ಸೇರಿ ಶ್ರೀಮಂತಗೊಳಿಸಿದವರು. ನವೋದಯ ಕಲಾ ಸಂಘ, ಶಾಂತಲಾ ಕಲಾವೇದಿಕೆಯ ಸ್ಥಾಪಕರಾಗಿ ಆಸಕ್ತ ಜನರಿಗೆಲ್ಲ ನಾಟಕದಲ್ಲಿ ಪಾತ್ರ ಮಾಡಲು ಅವಕಾಶ ಕೊಟ್ಟು, ನಾಟಕದ ಸವಿಯನ್ನು ಹಂಚಿದವರು. 
ಮೂಲತಃ ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿಯವರಾದ ಶಂಕರಮೂರ್ತಿ ಭದ್ರಾವತಿಯಲ್ಲಿ ನೆಲೆಕಂಡುಕೊಂಡಿದ್ದಾರೆ. ಇವರ ತಂದೆ ಮುರಿಗೇಂದ್ರಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿ ಈಸೂರು ದಂಗೆಯ ವೇಳೆ ಜೈಲು ವಾಸ ಅನುಭವಿಸಿದವರು. ತಂದೆಯ ಅನುಭವವನ್ನೇ ವಿಷಯವನ್ನಾಗಿಟ್ಟುಕೊಂಡು ನಾಟಕ ರಂಗಕ್ಕಿಳಿದ ಇವರು 100 ಕ್ಕೂ ಹೆಚ್ಚಿನ ಕಲಾವಿದರನ್ನು ಸೇರಿಸಿಕೊಂಡು ಈಸೂರಿನ ಈ ಶೂರರು ಎಂಬ ನಾಟಕ ಆಡಿಸಿದ್ದಾರೆ. ಭದ್ರಾವತಿಯ ಸಮಸ್ಯೆಯನ್ನು ಇಟ್ಟುಕೊಂಡು ವಂಕಿಪುರ-ಬೆಂಕಿಪುರ ಎಂಬ ನಾಟಕವನ್ನು ರಚಿಸಿ ಆಡಿಸಿದ್ದಾರೆ. ನಟನೆ ಮತ್ತು ನಿರ್ದೇಶನದತ್ತ ಇವರಿಗೆ ವಿಶೇಷ ಆಸಕ್ತಿ. ಅದರಲ್ಲೂ ಮಹಿಳಾ ಪಾತ್ರದಲ್ಲಿ ಇವರು ಎತ್ತಿದ ಕೈ. ವಿವಿಧ ನಾಟಕಗಳಲ್ಲಿ  104 ಬಾರಿ ನಟಿಯ ಪಾತ್ರವನ್ನು ಮಾಡಿದ್ದಾರೆ. ಈ ನಾಟಕ ಒಂದು ಚಿನ್ನ ಮತ್ತು ಒಂದು ಬೆಳ್ಳಿಯ ಪದಕದೊಂದಿಗೆ ರಾಜ್ಯ ಮಟ್ಟದಲ್ಲಿ ಬಹುಮಾನ ಗಳಿಸಲು ಕಾರಣವಾಯಿತು.
ಇವರ ಇತರ ನಾಟಕಗಳೆಂದರೆ ಪತನ, ಪ್ರೇತಗಳು, ಕನಸು-ನನಸು, ಮೀನಿನ ಹೆಜ್ಜೆ, ಆವಾಹನೆ ಮೊದಲಾದವು. 64ರ ಹರಯದ ಶಂಕರಮೂರ್ತಿ, ತಮ್ಮ 19ರ ಹರಯದಲ್ಲೇ ನಾಟಕದ ಗೀಳು ಅಂಟಿಸಿಕೊಂಡವರು. ಇಂದಿಗೆ 45 ವರ್ಷದ ರಂಗಭೂಮಿಯ ಅನುಭವವನ್ನು ಗಳಿಸಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.  ಸೆಟ್ ಡಿಸೈನರ್ ಆಗಿ, ಕಲಾವಿದರಾಗಿ ಇಂದಿಗೂ ರಂಗಭೂಮಿಯಲ್ಲಿ ಹೊಸತನವನ್ನು ಸಾಧಿಸುವ ಛಲವನ್ನು ಹೊಂದಿರುವ ಶಂಕರಮೂರ್ತಿ ಇದೇ ಮೊದಲ ಬಾರಿಗೆ ರಂಗಗೊಂಚಲು ಎಂಬ ಕೃತಿಯನ್ನು ಹೊರತರುತ್ತಿದ್ದಾರೆ. ಸದ್ಯದಲ್ಲೇ ಇದು ಬಿಡುಗಡೆಯಾಗಲಿದೆ.
  ಮೂರ್ತಿ ನಿರ್ಮಾಣದಲ್ಲಿ ಸಿದ್ಧಹಸ್ತರಾದ ಇವರು, ಗಣಪತಿಯ ಅತ್ಯಂತ ದೊಡ್ಡ ಮೂರ್ತಿ ಮಾಡುವುದರಲ್ಲಿ ಸಿದ್ಧಹಸ್ತರು.  ವಿಶೇಷವೆಂದರೆ, ಸುಮಾರು 18 ದಿನ ಕನ್ನಡ ವರನಟ ರಾಜಕುಮಾರ್ ಜೊತೆ ಇದ್ದು, ನಂತರ ಅವರ ಮಣ್ಣಿನ ವಿಗ್ರಹವನ್ನು ತಯಾರಿಸಿ ಭೇಷ್ ಎನಿಸಿಕೊಂಡಿದ್ದಾರೆ. ಣೇಶ ಚೌತಿ ಸಂದರ್ಭದಲ್ಲಿ ಗಣೇಶನ ಸಾಕಷ್ಟು ಮೂರ್ತಿಯನ್ನು ಬೇಡಿಕೆಯ ಮೇರೆಗೆ  ತಯಾರಿಸುತ್ತಾರೆ.
ಜಿಲ್ಲೆಯಲ್ಲಿ ಪಪ್ರಥಮ ಮಹಿಳಾ ಕಲಾ ವೇದಿಕೆ ಶಾಂತಲಾ ಕಲಾ ವೇದಿಕೆಯನ್ನು 1973ರಲ್ಲಿ ಹುಟ್ಟುಹಾಕಿದ ಕೀರ್ತಿ ಇವರದು. ಇದರಡಿಯಲ್ಲಿ ಸುವಿ ಬಾ ಸಂಗ ಎಂಬ ಜಾನಪದ ನಾಟಕವನ್ನು ಕಲಾವಿದರಿಗೆ ತರಬೇತಿ ಕೊಟ್ಟು ಆಡಿಸಿದ್ದಾರೆ. ಇದಕ್ಕೆ ರಾಜ್ಯಮಟ್ಟದಲ್ಲಿ ಮೊದಲ ಬಹುಮಾನ ಲಭಿಸಿದೆ.  ಗಾಂಧಿ ಮತ್ತು ಮೂರು ಮಂಗಗಳು ಎಂಬ ವಿಡಂಬನಾತ್ಮಕ ನಾಟಕವನ್ನು ಇವರು ರಚಿಸಿದ್ದಾರೆ. ಇದು ಮುಂಬೈನಲ್ಲಿ ಪ್ರದರ್ಶಿತವಾಗಿದೆ. ಇತ್ತೀಚಿನ ಬೆಳವಣಿಗೆಯಾದ ನೋಟು ಅಮೌಲ್ಯೆಕರಣವನ್ನು ಇಟ್ಟುಕೊಂಡು ಮೌಲ್ಯ ಎಂಬ ನಾಟಕವನ್ನು ರಚಿಸಿದ್ದಾರೆ. ತಾವಾಡಿಸಿದ ಎಲ್ಲ ನಾಟಕವನ್ನು ಉಚಿತವಾಗಿ ಪ್ರೇಕ್ಷರಿಗೆ ತೋರಿಸಿದ್ದಲ್ಲದೆ ನಾಟಕದ ನಂತರ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಇಂದಿಗೂ ಜನಮಾನಸದಲ್ಲಿ ಶಂಕರಮೂರ್ತಿ ಅವರ ಹೆಸರು ಅಚ್ಚಳಿಯದೆ ನಿಲ್ಲುವಂತಾಗಿದೆ.
17.6.2017
...........................