Thursday 15 December 2016

ರಸಪೂರ್ಣ ಕಲೆಯ ಉಪಾಸಕ
ರಾಕೇಶ್


ಈ ಸೃಷ್ಟಿಯೇ ಆನಂದಮಯ. ಅದನ್ನು ಕಾಣುವ ಕಣ್ಣು ಎಲ್ಲರಲ್ಲೂ ಇರುವುದಿಲ್ಲ, ಅನುಭವಿಸುವ ಹೃದಯ ಬೇಕು. ಆಗ ಅದು ಸುಂದರವಾಗಿ ಕಾಣುತ್ತದೆ. ಕಲೆಯನ್ನು ಉಪಾಸನೆಯ ಮಾಧ್ಯಮವನ್ನಾಗಿ ಸ್ವೀಕರಿಸಿ, ಅದರಲ್ಲಿ ಪಾವಿತ್ರ್ಯತೆಯನ್ನು ಕಂಡಾಗ ಚೆಲುವಷ್ಟೇ ಅಲ್ಲ, ಅದು ಆತ್ಮದ ಒಳಗಿನ ಹಸಿರು ಕಾಣುತ್ತದೆ. ಅದು ರಸಪೂರ್ಣವಾಗಿದ್ದಾಗ ಬಹುಕಾಲ ಮರೆಯದೆ ಉಳಿಯುತ್ತದೆ. ಇಂತಹ ರಸಪೂರ್ಣ ವಿದ್ಯಾರ್ಥಿ ಕಲಾವಿದನೊಬ್ಬ ನಗರದಲ್ಲಿ ಈಗ ಹೆಸರು ಮಾಡುತ್ತಿದ್ದಾನೆ.
ಸದಾ ಏನಾದರೊಂದನ್ನು ಮಾಡಬೇಕೆಂಬ ಹುಮ್ಮಸ್ಸು, ತುಡಿತ, ಛಲ ಇದ್ದರೆ ಸಾಧನೆ ಸಾಧ್ಯ. ಆರಂಭಿಸಿದ ಕೆಲಸವನ್ನು ಏಕಾಗ್ರತೆಯಿಂದ ಮುನ್ನಡೆಸಿಕೊಂಡು ಹೋದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ನಗರದ ವಿದ್ಯಾರ್ಥಿ ಕೆ. ರಾಕೇಶ್  ಉತ್ತಮ ಉದಾಹರಣೆ. ಈತ ಈ ವರ್ಷ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯವರು ನಡೆಸಿದ ರಾಜ್ಯಮಟ್ಟದ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಚಿತ್ರಕಲೆಯಲ್ಲಿ ಮೊದಲ ಸ್ಥಾನಿಯಾಗಿ ಜಿಲ್ಲೆಯ ಹೆಸರನ್ನು ಮೆರೆಸಿದ್ದಾನೆ.
ರಾಕೇಶ್ ನಗರದ ಪೇಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಾನೆ. ಎರಡನೆಯ ತರಗತಿಯಿಂದಲೇ ಚಿತ್ರಕಲೆ ಆರಂಭಿಸಿ ಇಂದಿಗೂ ಅದರಲ್ಲಿ ಮುಂದುವರೆದು ರಾಜ್ಯಮಟ್ಟದಲ್ಲಿ ಸಾಧನೆ ಮುಂದುವರೆಸಿದ್ದಾನೆ. ತನ್ನ ಅಕ್ಕಪಕ್ಕದ ಮನೆಯ ಹುಡುಗರು, ಗೆಳೆಯರು ಚಿತ್ರ ಬಿಡಿಸುತ್ತಿದ್ದುದನ್ನು ಗಮನಿಸಿ ತಾನೂ ಸಹ ಚಿತ್ರಕಲೆಯನ್ನು ಏಕೆ ಕಲಿಯಬಾರದೆಂದು ನಿರ್ಧರಿಸಿ, ಪಾಲಕರ  ಒಪ್ಪಿಗೆ ಪಡೆದು ನಗರದ ರವಿವರ್ಮ ಚಿತ್ರಕಲಾ ಸಂಸ್ಥೆಯಲ್ಲಿ ಕಲಿಕೆ ಆರಂಭಿಸಿ, 10 ವರ್ಷ ಪೂರೈಸಿದ್ದಾನೆ. ಈತ ಇಲ್ಲಿಯವರೆಗೆ ಪಡೆದಿರುವ ಪ್ರಶಸ್ತಿಗಳ ಸಂಖ್ಯೆ ಅಗಣಿತ. ಮನೆ ತುಂಬಾ ಪ್ರಶಸ್ತ್ತಿಗಳೇ ತುಂಬಿವೆ.
ಈತ ಭಾಗವಹಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಖಚಿತ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾನೆ. ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಸಂದಿವೆ. ಓದಿನಲ್ಲೂ ಮುಂದಿರುವ ಈತ ಮುಂದೆ ಇಂಜಿನೀಯರಿಂಗ್ ಮಾಡುವ ಬಯಕೆ ಹೊಂದಿದ್ದು, ಅದರಲ್ಲಿ ವಾಸ್ತುಶಿಲ್ಪವನ್ನು ಆಯ್ಕೆ ಮಾಡಿಕೊಂಡು ಚಿತ್ರಕಲೆಯ ಲಾಭ ಪಡೆಯಲು ಯೋಚಿಸಿದ್ದಾನೆ.
ರಾಜೇಂದ್ರನಗರದ  ವಾಸಿ ಕೆ.ಸಿ.ರವಿಕುಮಾರ್ ಮತ್ತು ಶೋಭಾ ಅವರ ಪುತ್ರನಾಗಿರುವ ರಾಕೇಶ್  ಸಾಧನೆಯಲ್ಲಿ ಪಾಲಕರ ಪಾತ್ರ ಎಷ್ಟಿದೆಯೋ ಅಷ್ಟೇ ಆತನ ಚಿತ್ರಕಲಾ ಶಾಲೆಯ ಗುರು ಶ್ರೀಧರ್ ಕಂಬಾರ್ ಪಾತ್ರವೂ ಇದೆ. ಸದಾ ಆತನನ್ನು ತಿದ್ದಿ, ತೀಡಿ, ಸಾಧನೆಗೆ ನೀರೆರೆದಿದ್ದಾರೆ. ರಾಕೇಶ್ ಸಾಧನೆ ಬಗ್ಗೆ ಅವರು ಅಪಾರ ಹೆಮ್ಮೆಪಡುತ್ತಾರೆ.
ಚಿತ್ರಕಲೆ ಹೊರತಾಗಿ ಈತ, 2006-07ರಲ್ಲಿ ರಾಜ್ಯ ಮಟ್ಟದ ನವೋದಯ ಸಮಾಜ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಮತ್ತು ಚಿನ್ನದ ಪದಕ ಗಳಿಸಿದ್ದಾನೆ. ಚಿತ್ರಕಲೆಯಲ್ಲಿ 2011ರಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಭಾ  ಪುರಸ್ಕಾರ ಮತ್ತು ಚಿನ್ನದ ಪದಕ, ಚಿತ್ರಕಲಾ ಅಕಾಡೆಮಿಯವರು ನಡೆಸಿದ ಸ್ಪರ್ಧೆಯಲ್ಲಿ 2010 ಮತ್ತು 11ರಲ್ಲಿ ಎರಡು ಬಾರಿ ಚಿನ್ನದ ಪದಕ, ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ಸ್‌ನವರು ನಡೆಸಿದ ಸ್ಪರ್ಧೆಯಲ್ಲಿ ಚಿನ್ನ, ತುಮಕೂರಿನ ಕಲರ್ಸ್ ಗ್ರೂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಇದರೊಟ್ಟಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ಇನ್ನೂ ಹಲವಾರು ಸ್ಪರ್ಧೆಗಳಲ್ಲಿ ಮೊದಲಿಗನಾಗಿ ಮೆರೆದಿದ್ದಾನೆ. ಘನತ್ಯಾಜ್ಯ ವಿಲೇವಾರಿ, ಪರಿಸರ ದಿನಾಚರಣೆ, ಇನಶೂರೆನ್ಸ್ ವೀಕ್, ವನ್ಯ ಜೀವಿ ಸಪ್ತಾಹ, ವಿಶ್ವ ಪರ್ಯಟನ ದಿನ ನಿಮಿತ್ತ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲೂ ಈತನಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.
 ಇಲ್ಲಿಯವರೆಗೆ ಆತ ಮಾಡಿದ ಸಾಧನೆಯ ಜೊತೆ ಇನ್ನೊಂದು ಬೃಹತ್ ಗರಿ ಈಗ ಮೂಡಿದಂತಾಗಿದೆ. ಚಿತ್ರಕಲೆಯಲ್ಲಿ ಸಾಧನೆ ಮಾಡಲು ಏಕಾಗ್ರತೆ ಮತ್ತು ತಾಳ್ಮೆ ಅವಶ್ಯ. ನಮ್ಮಲ್ಲಿರುವ ಪ್ರತಿಭೆ ಹೊರಬರಲು ಚಿತ್ರಕಲೆ ಪ್ರಮುಖ ವೇದಿಕೆಯಾಗಿದೆ. ಚಿತ್ರಕಲೆಯಿಂದಲೇ ತನಗೆ ಅಪಾರ ಗೌರವ ಲಭಿಸಿದೆ. ಇನ್ನು ಮುಂದೆಯೂ ಇದರಲ್ಲೇ ಸಾಧನೆ ಮಾಡುವ ವಿಚಾರವಿದೆ ಎನ್ನುತ್ತಾನೆ ರಾಕೇಶ್.

published on 23, 1, 2016

No comments:

Post a Comment