Saturday 17 December 2016

ವಾಮನಮೂರ್ತಿಯ ತ್ರಿವಿಕ್ರಮ ಸಾಧನೆ 
ಎಂ. ಕೆ. ಶ್ರೀಧರ ಶೆಟ್ಟಿ. 


ಸಂಗೀತ, ನೃತ್ಯ ಇಂದು ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಭಾಗವಾಗಿದೆ. ಬಹುತೇಕ ವಿದ್ಯಾರ್ಥಿಗಳು ತಮ್ಮ  ಪಠ್ಯದ ಜೊತೆ  ಈ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಕೆಲವೆಡೆ ಶಾಲೆಗಳಲ್ಲಿ ಇವುಗಳನ್ನು ಕಲಿಯುವ ಅವಕಾಶವಿದ್ದರೆ, ಇನ್ನು ಕೆಲವೆಡೆ ಖಾಸಗಿಯಾಗಿ ಹೇಳಿಕೊಡುತ್ತಿದ್ದಾರೆ. ನೃತ್ಯ ಎಂದಾಕ್ಷಣ ಕೇವಲ ಭರತನಾಟ್ಯ ಒಂದೇ ಅಲ್ಲ, ಇದರಲ್ಲಿ ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ ಸಹ ಸೇರುತ್ತದೆ. ಪಾಶ್ಚಾತ್ಯ ಡಾನ್ಸ್ ಅಥವಾ ರ‌್ಯಾಪ್ ಬೀಟ್ಸ್ ಹೇಳಿಕೊಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಶಿವಮೊಗ್ಗ ನಗರದಲ್ಲಿದ್ದಾರೆ. ಸುಮಾರು 27 ವರ್ಷಗಳಿಂದ ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಯ ಕೆಲವೆಡೆ ರ‌್ಯಾಪ್ ಡಾನ್ಸ್  ಮತ್ತು ಜಾನಪದ ಡಾನ್ಸ್ ಹೇಳಿಕೊಡುತ್ತ  ಸದ್ದಿಲ್ಲದೆ ಕಾಯಕನಿರತರಾಗಿ ತ್ರಿವಿಕ್ರಮ ಸಾಧನೆ ಮಾಡಿದ ಮಹನೀಯರೊಬ್ಬರಿದ್ದಾರೆ. ಅವರೇ ಎಂ. ಕೆ. ಶ್ರೀಧರ ಶೆಟ್ಟಿ.
’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತೊಂದಿದೆ. ಇದಕ್ಕೆ ಶ್ರೀಧರ್ ಶೆಟ್ಟಿ ಉತ್ತಮ  ಉದಾಹರಣೆಯಾಗಿ ನಿಲ್ಲುತ್ತಾರೆ. ಸುಮಾರು 50ರ ಹರೆಯದ ಇವರು, ವಿನಯವಂತ, ಸೌಜನ್ಯಶೀಲ ವ್ಯಕ್ತಿ. ಇವರದ್ದು ಮಾತು ಕಡಿಮೆ ಸಾಧನೆ ಹೆಚ್ಚು ಎಂಬ ವ್ಯಕ್ತಿತ್ವ. ಬೆಳಗ್ಗೆಯಿಂದ ಸಂಜೆಯವರೆಗೆ ಕೆಇಬಿ ಸರ್ಕಲ್‌ನಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುವ ಇವರು, ಸಂಜೆಯಾದೊಡನೆ ಮನೆಯಲ್ಲೇ ಡಾನ್ಸ್ ಕ್ಲಾಸ್ ನಡೆಸುತ್ತಾರೆ. ಅಂದ ಹಾಗೆ ಇವರಲ್ಲಿ ಹಾಲಿ ನೂರಕ್ಕೂ ಹೆಚ್ಚು  ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.  
ತಿಲಕ್‌ನಗರದ 4ನೆಯ ತಿರುವಿನಲ್ಲಿ ದೊಡ್ಡ ಬಾಡಿಗೆ  ಮನೆಯೊಂದನ್ನು ಪಡೆದು,  ಅಲ್ಲಿಯೇ ಪ್ರತಿದಿನ ಎರಡು ಗಂಟೆ ಕ್ಲಾಸ್ ನಡೆಸುತ್ತಿದ್ದಾರೆ. ತಮ್ಮ ಡಾನ್ಸ್ ಶಾಲೆಗೆ ಪ್ರತ್ಯಕ್ಷ  ಇನ್ಸ್‌ಟಿಟ್ಯೂಟ್ ಆಫ್ ಡಾನ್ಸ್ ಎಂದು ಹೆಸರಿಟ್ಟಿದ್ದಾರೆ. ಭಾನುವಾರ ಮಾತ್ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತರಗತಿ ಹೇಳಿಕೊಡುತ್ತಾರೆ. ಶ್ರೀಧರ್ ಶೆಟ್ಟಿ ಮೂಲತಃ ಕುಂದಾಪುರ ತಾಲೂಕು ಬೆಳ್ವೆ ಗ್ರಾಮದವರು. 7ನೆಯ ತರಗತಿಯವರೆಗೆ ಮಾತ್ರ ಓದಿರುವ ಇವರು, ಶಾಲೆ ಬಿಟ್ಟು ಮುಂಬೈಗೆ ತೆರಳಿ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಬಾಲಿವುಡ್ ಸಿನಿಮಾ ನೋಡುತ್ತಿದ್ದ ಅವರಿಗೆ ಖ್ಯಾತ ನಟರ ಡಾನ್ಸ್‌ಗಳು ಪ್ರೇರಣೆಯಾದವು. ನಟರಾದ ಮಿಥುನ್ ಚಕ್ರವರ್ತಿ, ಗೋವಿಂದ ಅವರ ಡಾನ್ಸ್‌ಗೆ ಮಾರುಹೋಗಿ ಅದೇ ರೀತಿ ಡಾನ್ಸ್ ಮಾಡಲಾರಂಭಿಸಿದ್ದರು. ಬರಬರುತ್ತ ಅದಕ್ಕೇ ಆದ್ಯತೆ ಕೊಟ್ಟು ಪರಿಣತಿ ಹೊಂದಿದರು. ಮುಂಬೈಯಿಂದ ಸುಮಾರು 35 ವರ್ಷಗಳ ಹಿಂದೆ  ಶಿವಮೊಗ್ಗಕ್ಕೆ ಬಂದಾಗ, ಇಲ್ಲಿಯೂ ಅದರ ಗುಂಗಿನಲ್ಲೇ ಕಾಲಕಳೆಯುತ್ತಿರುವಾಗ ಗಾಂಧಿಬಜಾರ್‌ನಲ್ಲಿ  ರವಿಕುಮಾರ್ ಎನ್ನುವವರು ರ‌್ಯಾಪ್ ಡಾನ್ಸ್ ಹೇಳಿಕೊಡುತ್ತಿರುವ ವಿಚಾರ ತಿಳಿಯಿತು. ಅವರಲ್ಲಿ ಮತ್ತೆ ಕಲಿಕೆಗೆ ತೊಡಗಿ ಸುಮಾರು 5 ವರ್ಷಗಳಲ್ಲಿ ಆ ಕಲೆಯನ್ನು ಸಿದ್ಧಿಸಿಕೊಂಡರು. ಇದಾದ ಬಳಿಕ ತಾವಿರುವ ಬಾಡಿಗೆ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಾ ಬೆಳೆದುಬಂದಿದ್ದಾರೆ.
 ವಿನೋಬನಗರದ ನೇತಾಜಿ ಶಾಲೆಯ ಮಕ್ಕಳಿಗೆ ಒಮ್ಮೆ ಡಾನ್ಸ್ ಕಲಿಸಲು ಹೋದಾಗ ಅಲ್ಲಿಯೇ ಕಲಿಕಾ ಕೇಂದ್ರ ತೆರೆಯಲು ಅವರು ಅನುಮತಿ ಕೊಟ್ಟಿದ್ದರಿಂದ ಸುಮಾರು 10 ವರ್ಷ ಅಲ್ಲಿಯೇ ಕ್ಲಾಸ್ ನಡೆಸಿದರು. ಅನಂತರ ರವೀಂದ್ರನಗರದ ಸರ್ಕಾರಿ ಶಾಲೆಯಲ್ಲಿ  ಡಾನ್ಸ್ ಶಾಲೆ ನಡೆಸಿದರು. ಇವರಡಿಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಶೆಟ್ಟಿ ಅವರೂ ಸಹ ಹಲವಾರು ರಾಜ್ಯ, ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿ, ಅಂತಾರಾಜ್ಯದಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಜಾನಪದ, ಕಂಸಾಳೆ ಡಾನ್ಸ್ ಹೇಳಿಕೊಡುವುದರಲ್ಲಿ ಶೆಟ್ಟಿ ಸಿದ್ದಹಸ್ತರು. ಕಳೆದ ವಾರ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ರ‌್ಯಾಪ್ ಬೀಟ್ಸ್ ಸ್ಪರ್ಧೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಂತಹ ಸ್ಪರ್ಧೆಯನ್ನು ಅವರು ನಡೆಸುವ ಮೂಲಕ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ; ಪ್ರೋತ್ಸಾಹಿಸುತ್ತಿದ್ದಾರೆ.
ಎರಡು ಧಾರಾವಾಹಿಯಲ್ಲಿ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಶೆಟ್ಟಿ ಅವರು ಕಲಾವಿದರಾಗಿಯೂ  ಮಿಂಚಿದ್ದಾರೆ.
Published on Feb 27, 2016
 .......................................

No comments:

Post a Comment