Saturday 17 December 2016

ಸಾಹಿತ್ಯ,  ಕೃಷಿ ಬದುಕಿನ ಸಮನ್ವಯದ
 ಡಿ ಬಿ ಶಂಕರಪ್ಪ 


ಕೆಲವೊಂದು ಕಾರ್ಯಕ್ಷೇತ್ರದ  ಪ್ರವೇಶಕ್ಕೆ ಮೂಲಭೂತವಾದ ಅರ್ಹತೆ ಬೇಕಾಗುತ್ತದೆ. ಈ ಅರ್ಹತೆ ಹೆಚ್ಚುತ್ತ ಹೋಗುವುದು ನಮ್ಮ ಸಾಧನೆಯಿಂದ, ಶೋಧನೆಯಿಂದ. ಕಲಿತುದಕ್ಕಿಂತ ಕಲಿಯಬೇಕಾದುದು, ತಿಳಿಯಬೇಕಾದುದು ಹೆಚ್ಚು. ಮಾಡಿದ್ದಕ್ಕಿಂತ ಮಾಡಬೇಕಾದದ್ದು ಹೆಚ್ಚು. ಈ ಅರಿವು ಇದ್ದಾಗ ಮಾತ್ರ ಅವರವರ ಕಾರ್ಯಕ್ಷೇತ್ರದಲ್ಲಿ ಅವರವವರ ಅರ್ಹತೆ ಹೆಚ್ಚುತ್ತದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ನೂತನ ಸಾರಥಿಯ ಆಗಮನವಾಗಿದೆ. ಅವರೇ ಡಿ.ಬಿ. ಶಂಕರಪ್ಪ. ಶಂಕರಪ್ಪ ಸಾಹಿತಿ, ನಾಟಕಕಾರ, ನಿವೃತ್ತ ಅಧ್ಯಾಪಕ. ಜೊತೆಗೆ ಉತ್ತಮ ಕೃಷಿಕ.
ಶಂಕರಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರು. ನಾಟಕಕಾರಾಗಿ, ಕಾದಂಬರಿಕಾರರಾಗಿ, ಅಂಕಣ ಬರೆಹಗಾರರಾಗಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕಸಾಪದಲ್ಲೂ ಕೆಲಸ ಮಾಡಿದ ಅನುಭವ ಜೊತೆಗಿದೆ.
ಹೊನ್ನಾಳಿ ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ  ಶಾಲಾ ಶಿಕ್ಷಕ ಬಸಪ್ಪ- ವೀರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು, ತಂದೆಯಂತೆಯೇ ಶಿಕ್ಷಕ ವೃತ್ತಿಗೆ ಸೇರಿದರು. ನ್ಯಾಮತಿ, ಚನ್ನಗಿರಿಯಲ್ಲಿ ಓದು ಆರಂಭಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎ ಪದವಿ ಪಡೆದು, ನ್ಯಾಶನಲ್ ಕಾಲೇಜ್ ಆಫ್ ಎಜುಕೇಶನ್‌ನಲ್ಲಿ ಬಿಇಡಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ ಮುಗಿಸಿದ ಶಂಕರಪ್ಪ ನಂತರ ಹೈಸ್ಕೂಲು ಅಧ್ಯಾಪಕರಾಗಿ ಆನವಟ್ಟಿ, ಹಿತ್ತಲ, ಜಿನಹಳ್ಳಿ, ನ್ಯಾಮತಿಯಲ್ಲಿ ಕೆಲಸ ಮಾಡಿದರು. ವಿಷಯ ಪರೀಕ್ಷಕರಾಗಿ ಹೊನ್ನಾಳಿಯಲ್ಲಿ ಕೆಲಸ ಮಾಡಿದ ನಂತರ ಭಡ್ತಿ ಪಡೆದು ನ್ಯಾಮತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾದರು. ಇದೇ ವೇಳೆ ಕನ್ನಡ ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ. ನಾಟಕರ ಂಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಕುರುಕ್ಷೇತ್ರ ನಾಟಕದಲ್ಲಿ ಭೀಮ ಮತ್ತು ದೇವದಾಸಿ ನಾಟಕದಲ್ಲಿ ವಸಂತಶೇಖರ ಪಾತ್ರ ಮಾಡಿ ಜನಮನ ಗೆದ್ದಿದ್ದಾರೆ. ಉತ್ತಮ ಶಿಕ್ಷಕರೆಂದು ಗುರುತಿಸಲ್ಪಟ್ಟ ಇವರಿಗೆ 1992ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪಿ. ಲಂಕೇಶ್ ಶಿಷ್ಯರಾದ ಶಂಕರಪ್ಪ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರಾಗಿಯೂ ಕೆಲಸ ಮಾಡಿದ್ದಾರೆ. ಇದೇ ವೇಳೆ ‘ಗಿಡ್ಡಜ್ಜಿಯ ಬಯಲು’ ಕಾದಂಬರಿ ಬರೆದಿದ್ದಾರೆ. 2014ರ ಕನ್ನಡ ಸಾಹಿತ್ಯ ಪರಿಷತ್  ದತ್ತಿ ಪ್ರಶಸ್ತಿಯಿಂದ ಇದು ಪುರಸ್ಕೃತಗೊಂಡಿದೆ. ಹೊಸ ಕಾದಂಬರಿ ‘ಬೂದಿಬಸಪ್ಪ ನಾಯಕ’ ಬಿಡುಗಡೆಗೆ ಸಿದ್ಧಗೊಂಡಿದೆ. ‘ಬೆಳಗು ಹರಿಯುವ ಮುನ್ನ’ ಎನ್ನುವುದು ಇವರ ಇನ್ನೊಂದು ಕಾದಂಬರಿ. ಹೊನ್ನಾಳಿ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ, ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು 4 ತಾಲೂಕು ಸಮ್ಮೇಳನ ನಡೆಸಿದ್ದಾರೆ. ಗಾಜನೂರಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ್ದು ಇನ್ನೂ ಅಚ್ಚಳಿಯದೆ ಎಲ್ಲರ ನೆನಪಿನಲ್ಲಿದೆ.
ನಿವೃತ್ತಿ ನಂತರ ಹೊನ್ನಾಳಿಯಲ್ಲಿ ಕೃಷಿ ಜಮೀನಿನಲ್ಲಿ ತರಕಾರಿ ಬೆಳೆಯುವ ಮೂಲಕ ಅಲ್ಲಿಯೂ ಉತ್ತಮ ಸಾಧನೆ ಮಾಡಿ ಉತ್ತಮ ತರಕಾರಿ ಕೃಷಿಕ ಎಂಬ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸಾಹಿತ್ಯಿಕ, ಸಾಮಾಜಿಕ,  ಮತ್ತು ಕೃಷಿ ಬದುಕಿನ ಸಮನ್ವಯದ ಶಂಕರಪ್ಪ, ಜಿಲ್ಲೆಯ ಸದಭಿರುಚಿಯ ಸಾಂಸ್ಕೃತಿಕ ಮನಸ್ಸುಗಳು ಬೆಳೆಯುವ ಕೆಲಸ ಮಾಡಬೇಕಿದೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಸಾಗಿ ಬಂದಿರುವ ಇವರಿಗೆ ಲಂಕೇಶ್ ಆದರ್ಶಗಳೇ ಮಾದರಿಯಾಗಿದ್ದು, ಆ ಪ್ರಕಾರ ಸಾಹಿತ್ಯಿಕ ಕೆಲಸ ಮಾಡುವ ಇರಾದೆ ಹೊಂದಿದ್ದಾರೆ. ಇವರ ಸಹೋದರ ಡಿ.ಬಿ. ಗಂಗಪ್ಪ ಹೊನ್ನಾಳಿ ಶಾಸಕರಾಗಿ ಕೆಲಸ ಮಾಡಿದ್ದಾರೆ.  
 ಪರಿಷತ್ತಿನ ಕಾರ್ಯಕ್ರಮಗಳನ್ನು ಮನೆ-ಮನಗಳಿಗೆ ತಲುಪಿಸುವುದು, ಹಿಂದಿನ ಅಧ್ಯಕ್ಷರು ಜಾರಿಗೊಳಿಸಿದ್ದ ಜನಪ್ರಿಯ ಕಾರ್ಯಕ್ರಮ ತಿಂಗಳ ಸಾಹಿತ್ಯ ಹುಣ್ಣಿಮೆ ಮಾದರಿಯಾಗಿದೆ. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಆದ್ಯತೆ ಕೊಡಲಾಗುವುದು. .ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು, ಉತ್ತಮ ಬರಹಗಾರರಿಗೆ ಉತ್ತೇಜನ ನೀಡಲು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು. ಸಾಹಿತ್ಯ ಪರಿಷತ್ತಿನಲ್ಲಿ ಈಗಿರುವ ಸದಸ್ಯತ್ವವನ್ನು 12000ಕ್ಕೆ ಏರಿಸುವ ಗುರಿ ಹೊಂದಿರುವುದಾಗಿ ಅವರು ಹೇಳುತ್ತಾರೆ.
Published on 5 march, 2016
.................................

No comments:

Post a Comment