Saturday 17 December 2016

ಸಹಕಾರ ಕ್ಷೇತ್ರದ ದಿಟ್ಟೆ
ಪಿ. ವೀರಮ್ಮ

ಸಹಕಾರ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಮಹಿಳೆಯರು ತೀರಾ ವಿರಳ. ಶಿವಮೊಗ್ಗದ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷೆ ಪಿ. ವೀರಮ್ಮ ಈ ಖ್ಯಾತಿಗೆ ಭಾಜನರಾಗಿದ್ದಾರೆ. ಅದಕ್ಕೆ ಕಾರಣ ಅವರ ದಿಟ್ಟ ಹೆಜ್ಜೆ, ನಡೆ-ನುಡಿ. ಮಹಿಳಾ ಸಬಲೀಕರಣಕ್ಕೆ ನಿರಂತರ ಪ್ರಯತ್ನ ಮಾಡುತ್ತಿರುವ ಇವರು, 5ನೆಯ ಬಾರಿಗೆ ಈ ಬ್ಯಾಂಕಿನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ವೀರಮ್ಮ ನೇರ, ದಿಟ್ಟ, ನಿರಂತರ ಎಂಬ ತತ್ವದವರು. ಜೊತೆಗೆ ಖಂಡಿತವಾದಿ, ಇದರಿಂದಾಗಿಯೇ ಸೂಪರ್‌ಸೀಡ್ ಆಗಿ, ರಿಸರ್ವ್ ಬ್ಯಾಂಕ್ ಲೈಸೆನ್ಸನ್ನು ಹಿಂದೆಗೆದುಕೊಳ್ಳಬೇಕೆಂಬ ನಿರ್ಧಾರದಲ್ಲಿರುವಾಗ ಸಹ್ಯಾದ್ರಿ ಬ್ಯಾಂಕ್‌ನ  ಜವಾಬ್ದಾರಿ ಹೊತ್ತ ಇವರು, ಇಂದು ಬ್ಯಾಂಕನ್ನು ತಮ್ಮ ಸತತ ಪರಿಶ್ರಮದಿಂದ ಎ ಗ್ರೇಡ್‌ಗೆ ಏರಿಸಿದ್ದಾರೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇದ್ದರೆ ಮಾತ್ರ ಸಹಕಾರ ಕ್ಷೇತ್ರ ಬೆಳೆಯಬಲ್ಲುದು ಎನ್ನುವುದನ್ನು  ತೋರಿಸಿಕೊಟ್ಟಿದ್ದಾರೆ.  ಬ್ಯಾಂಕ್ ನಷ್ಟದಲ್ಲಿದ್ದುದನ್ನು ಕಂಡು ದಿನನಿತ್ಯ ಠೇವಣಿದಾರರು ತಮ್ಮ ಠೇವಣಿಯನ್ನು ವಾಪಸ್ ಪಡೆಯುತ್ತಿದ್ದ ವೇಳೆ ಹೇಗಾದರೂ ಮಾಡಿ ಮತ್ತೆ ಬ್ಯಾಂಕನ್ನು ಕಟ್ಟಿ ನಿಲ್ಲಿಸಲೇಬೇಕೆಂಬ ಛಲ ತೊಟ್ಟ ಈ ಧೀರೆ, ಅದನ್ನು ಎರಡೇ ವರ್ಷದಲ್ಲಿ ಸಾಧಿಸಿ ಲಾಭದ ಹಾದಿಯಲ್ಲಿ ತಂದು ನಿಲ್ಲಿಸಿದ ನೀರೆ. ಇಂದು ಬ್ಯಾಂಕ್ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುತ್ತಾ ಬೆಳೆದಿದೆ. ಸುಮಾರು 11 ಸಾವಿರ ಮಹಿಳಾ ಸದಸ್ಯರನ್ನು ಹೊಂದಿದೆ.
ವೀರಮ್ಮ ಮೂಲತಃ  ಚಳ್ಳಕೆರೆಯವರು. ಅಷ್ಟೇನೂ ಓದಿರದ ಇವರನ್ನು ಬುಕ್ಕಾಂಬುಧಿಯ ಪರಮೇಶ್ವರಪ್ಪ ಎನ್ನುವವರಿಗೆ ಮದುವೆ ಮಾಡಿಕೊಡಲಾಯಿತು. ನಂತರ ಶಿವಮೊಗ್ಗ ವಾಸಿಯಾದ ಇವರು 1994ರಲ್ಲಿ ಆರಂಭವಾದ ಈ ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದುಕೊಂಡರು. ಆದರೆ 2007ರವರೆಗೆ ಅವರು ಯಾವ ಅಧಿಕಾರದಲ್ಲೂ ಇರಲಿಲ್ಲ. ಅಲ್ಲಿಂದ ಅಧಿಕಾರ ಹಿಡಿದು, ಇಂದು ಈ ಬ್ಯಾಂಕ್ ರಾಜ್ಯದಲ್ಲಿರುವ 24 ಮಹಿಳಾ ಬ್ಯಾಂಕ್‌ಗಳಲ್ಲೇ  ಹೆಸರುವಾಸಿಯಾಗುವಂತೆ  ಮಾಡಿದ್ದಾರೆ. ಇದಕ್ಕಾಗಿ ಅವರು ಸುರಿಸಿದ ಬೆವರು ಅಷ್ಟಿಷ್ಟಲ್ಲ. ಬ್ಯಾಂಕನ್ನು ಹೇಗಾದರೂ ಮೇಲೆತ್ತಿ ಜಿಲ್ಲೆಯ ಮಹಿಳೆಯರ ಗೌರವ ಕಾಪಾಡಬೇಕು, ಒಮ್ಮೆ ಮುಳುಗಿದ ಬ್ಯಾಂಕ್ ಮೇಲೇಳದಿದ್ದರೆ ಅದು ಮಹಿಳೆಯರಿಗೂ, ಜಿಲ್ಲೆಗೂ ಅವಮಾನ ಎಂದರಿತು ಸಾಲ ತೆಗೆದುಕೊಂಡವರ ಮನೆಗೆ ಸ್ವತಃ ಹತ್ತಾರು ಬಾರಿ ತೆರಳಿ ಸಾಧ್ಯವಾದಷ್ಟು ಸಾಲ ವಸೂಲು ಮಾಡಿದರು. ನಂತರ ಸಾಕಷ್ಟು ಸದಸ್ಯತ್ವ ಪಡೆದರು. ಈ ಮೂಲಕ ನಿಧಾನವಾಗಿ ಮತ್ತೆ ಬ್ಯಾಂಕನ್ನು ಕಟ್ಟಿ ಬೆಳೆಸಿ ನಿಲ್ಲಿಸಿದ್ದಾರೆ.
ಈಗ ಬ್ಯಾಂಕಿಗೆ ಸ್ವಂತ ನಿವೇಶನ ಮಾಡಿಟ್ಟಿದ್ದಾರೆ. ಎರಡು ವಿಸ್ತರಣಾ ಶಾಖೆ ಮತ್ತು ಭದ್ರಾವತಿಯಲ್ಲಿ ಒಂದು ಶಾಖೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ನಯ-ವಿನಯತೆ, ಸೌಮ್ಯ ಸ್ವಭಾವ ಇದಕ್ಕೆಲ್ಲ ಕಾರಣ. ಯಾವತ್ತೂ, ಯಾರೊಂದಿಗೂ ವೈಮನಸ್ಸು ಕಟ್ಟಿಕೊಂಡವರಲ್ಲ. ಬ್ಯಾಂಕಿನ ಚುನಾವಣೆ ನಡೆದರೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದರಿತು ಅವಿರೋಧವಾಗಿಯೇ ಆಯ್ಕೆ ಮಾಡಲು ಪ್ರತಿ ಬಾರಿ ಯತ್ನಿಸಿ ಸಫಲರಾದ ವೀರಮ್ಮ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿಯೂ ಹೌದು. ಸರ್ಕಾರದ ಶೇರಿನಿಂದಲೇ 450 ಸದಸ್ಯರನ್ನು ಮಾಡಿಕೊಂಡು ವಚನಶ್ರೀ ಮಹಿಳಾ  ಸಹಕಾರ ಸಂಘವನ್ನು ಆರಂಭಿಸಿದ್ದಾರೆ. ಉತ್ತಮ ಮಹಿಳಾ ಸಹಕಾರಿ ಪ್ರಶಸ್ತಿ ಇವರ ಮುಡಿಗೇರಿದೆ. ಶಿವಮೊಗ್ಗ ನಗರಸಭೆಯು ಉತ್ತಮ ನಾಗರಿಕ ಎಂಬ ಬಿರುದು ನೀಡಿ ಸನ್ಮಾನಿಸಿದೆ. ದುಬೈನಲ್ಲಿ ಅಂತಾರಾಷ್ಟ್ರೀಯ ಗೋಲ್ಡನ್ ಸ್ಟಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ರಾಜೀವ್ ಗಾಂಧಿ ಪ್ರಶಸ್ತಿ ಸಹ ಇವರ ಕಿರೀಟಕ್ಕೆ ಸೇರಿಕೊಂಡಿದೆ.
ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚೆಚ್ಚು ಮುಂದೆ ಬರಬೇಕು. ಸಿಗುವ ಸವಲತ್ತನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಮಹಿಳೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎನ್ನುವ ಇವರು, ಪ್ರಾಮಾಣಿಕ ಪ್ರಯತ್ನ, ಸಾಧಿಸುವ ಛಲ, ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಕೆಲಸ ಮಾಡುವ ಮನೋಭಾವ ಇದ್ದರೆ ಪರಿಶ್ರಮಕ್ಕೆ ಫಲ ಇದ್ದೇ ಇದೆ ಎನ್ನುತ್ತಾರೆ.
Published on March, 12, 2016

No comments:

Post a Comment