Wednesday 14 December 2016

ಕರಾಟೆವೀರ, ಪದಕಗಳ ಸರದಾರ
ಚಂದ್ರಕಾಂತ್ ಭಟ್



"ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದು ಒಂದು ಸುಭಾಷಿತ. ಕರಾಟೆ ಕಲಿಗಳ ಮಟ್ಟಿಗಂತೂ ಇದು ಹೆಚ್ಚು ಒಪ್ಪುವಂತಿದೆ. ಈಗಲೂ ನಮ್ಮಲ್ಲಿ ಅನೇಕರ ಮನಸ್ಸಿನಲ್ಲಿ ಕರಾಟೆಯೆಂದರೆ ಹೊಡೆದಾಟ-ಬಡಿದಾಟಗಳ ಕಲೆ ಎಂಬ ತಪ್ಪುಗ್ರಹಿಕೆಯೊಂದಿದೆ; ಶಕ್ತಿಪ್ರದರ್ಶನದ ಕಲೆ ಎನ್ನುವ ಭಾವನೆಯೂ ಇದೆ. ನಿಜವಾಗಿ ನೋಡಿದರೆ ಇದು ಆತ್ಮರಕ್ಷಣೆಯ ಸಾಹಸಕಲೆ; ದೈಹಿಕ ಕಸರತ್ತಿನ ಕಲೆ; ಮಾನಸಿಕ ದೃಢತೆಯನ್ನು ತಂದೀಯುವ ಕಲೆ; ಆರೋಗ್ಯವರ್ಧನೆಯ ಕಲೆ ಎಂದರೆ ತಪ್ಪಾಗಲಾರದು.
ಸಾಹಸ ಕಲೆಗಳು ಇತ್ತೀಚಿನ ವರ್ಷಗಳಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಕಾರಣ ಅವುಗಳನ್ನು ಕಲಿಸುವವರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯರಿರುವುದೇ ಇದಕ್ಕೆ ಕಾರಣ.  ಅಂತಹ ಸಾಹಸ ಕಲೆಗಳಲ್ಲಿ ಕರಾಟೆಯೂ ಒಂದು. ಶಿವಮೊಗ್ಗ ನಗರದಲ್ಲಿ ಕಳೆದ 24 ವರ್ಷಗಳಿಂದ  ಕರಾಟೆಯನ್ನು ಕಲಿಯುತ್ತ, ಕಳೆದ 17 ವರ್ಷಗಳಿಂದ ಕರಾಟೆ ತರಬೇತಿ ತರಗತಿಗಳನ್ನು ನಡೆಸುತ್ತಿರುವ ಚಂದ್ರಕಾಂತ್ ಭಟ್ ಬಹುತೇಕ ನಗರದ ಎಲ್ಲಜನತೆಗೂ ಚಿರಪರಿಚಿತರು. ಕಳೆದ ವಾರ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ ಅವರು ಚಿನ್ನದ ಪದಕ ಗಳಿಸಿ ಬರುವಂತೆ ಮಾಡಿದ್ದಾರೆ.
ಇಂಟರ್‌ನ್ಯಾಶನಲ್ ಶೊಟೊಕಾಯ್ ಕರಾಟೆ-ಡೊ ಫೆಡರೇಶನ್‌ನ ಶಿವಮೊಗ್ಗ ಜಿಲ್ಲಾ ಘಟಕದ ಮುಖ್ಯಸ್ಥರಾಗಿರುವ ಭಟ್,  ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಸ್ವತಃ ಭಾಗವಹಿಸಿ ಸಾಕಷ್ಟು ಪದಕಗಳ ಸರಮಾಲೆಯನ್ನೇ ಧರಿಸಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಟ್ ಶಿವಮೊಗ್ಗಕ್ಕೆ ಬಂದು ನೆಲೆನಿಂತವರು. ಇಲ್ಲಿಯೇ ಓದಿ ಎನ್‌ಇಎಸ್ ಸಂಸ್ಥೆಯ ಲಾ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದಾರೆ. ಅನಂತರ, ಮುಕ್ತ ವಿವಿಯಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಆದರೆ ವಕೀಲಿ ವೃತ್ತಿಗೆ ಮುಂದಾಗದೆ, ಕರಾಟೆಯಲ್ಲೇ ತಮ್ಮ ಜೀವನ ಮುಂದುವರೆಸಿದ್ದಾರೆ.
ಭಟ್ ಅವರು ಕರಾಟೆ ಕಲಿತದ್ದು ನಗರದ ಸತೀಶ್ ಎನ್ನುವವರಲ್ಲಿ. ನಂತರ ಪ್ರವೀಣ್ ರಾಂಕಾ, ಸುಜಯ್, ಪ್ರಸಾದ್, ಸುನಿಲ್‌ಕುಮಾರ್ ಅವರಲ್ಲೂ ತರಬೇತಿಯನ್ನು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪಡೆದಿದ್ದಾರೆ. ಜಪಾನ್‌ಗೆ ತೆರಳಿ ಅಂತಾರಾಷ್ಟ್ರೀಯ ಖ್ಯಾತರಲ್ಲೂ ವಿಶೇಷ ತರಬೇತಿ ಪಡೆದ ನಂತರ ನಗರದಲ್ಲಿ ಹಲವೆಡೆ ತರಬೇತಿ ನೀಡಲು ಪ್ರಾರಂಭಿಸಿದ್ದಾರೆ. ನಗರದ ವಿಪ್ರ ಟ್ರಸ್ಟ್ ಮತ್ತು ಜೆಸಿ ನಗರದ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ  ತರಗತಿಗಳನ್ನು ನಡೆಸುತ್ತಿದ್ದು, ಇಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕರಾಟೆ ಕಲಿಯುತ್ತಿದ್ದಾರೆ. ಆನವಟ್ಟಿಯ ಎವೆರಾನ್ ಸ್ಕೂಲ್‌ನಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ 400 ವಿದ್ಯಾರ್ಥಿಗಳಿಗೆ  ತಲಾ ಒಂದೂವರೆ ಗಂಟೆ  ಕರಾಟೆ ಕಲಿಸುತ್ತಿದ್ದಾರೆ. ಇದರೊಟ್ಟಿಗೆ ಸರ್ವ ಶಿಕ್ಷಾ ಅಭಿಯಾನದಡಿ ಜಿಲ್ಲೆಯ ಹಲವು ಹೈಸ್ಕೂಲ್‌ಗಳಲ್ಲಿ ವರ್ಷದಲ್ಲಿ 3 ತಿಂಗಳು ಕರಾಟೆ ಕಲಿಸುತ್ತಾರೆ.
 ಕರಾಟೆಯಿಂದ ಏಕಾಗ್ರತೆ, ಶಾಂತತೆ ಪಡೆಯಲು ಅನುಕೂಲ. ಶಿವಮೊಗ್ಗದಲ್ಲಿ ಇತ್ತೀಚೆಗೆ ಕರಾಟೆಗೆ ಅಪಾರ ಬೆಂಬಲ ಸಿಗುತ್ತಿದೆ. ಎಲ್ಲ ವಯಸ್ಸಿವರು ಇದನ್ನು ಕಲಿಯಲು ಮುಂದೆ ಬರುತ್ತಿದ್ದಾರೆ. ಒಟ್ಟಿನಲ್ಲಿ ಕಲಿಕೆಗೆ ಆಸಕ್ತಿ ಮುಖ್ಯ ಎನ್ನುತ್ತಾರೆ ಅವರು. 2004ರಲ್ಲಿ ಜಪಾನ್, 2005ರಲ್ಲಿ ದ. ಕೊರಿಯಾ, ಮೆಲ್ಬೋರ್ನ್, ಥೈಲ್ಯಾಂಡ್, ಸಿಂಗಪುರ್ ಮೊದಲಾದೆಡೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿರುವ ಇವರು, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗೆದ್ದ ಪದಕಗಳಿಗೆ ಲೆಕ್ಕವೇ ಇಲ್ಲ. ಇವರಿಂದ ತರಬೇತಿ ಪಡೆದ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪದಕ ಗೆದ್ದಿದ್ದಾರೆ, ಗೆಲ್ಲುತ್ತಿದ್ದಾರೆ.
2007ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಕ್ರೀಡಾ ವಿಭಾಗದಿಂದ ಭಟ್ ಅವರನ್ನು ವಿಶೇಷ ಸಾಧನೆಗಾಗಿ ಗೌರವಿಸಿದ್ದರು. ಕರಾಟೆಯಲ್ಲಿ ಅಪಾರ ಸಾಧನೆ ಮಾಡಿದ ಇವರನ್ನು ರಾಜ್ಯ ಸರಕಾರ ಅಥವಾ ಇನ್ನಿತರ ಸಂಘ-ಸಂಸ್ಥೆಗಳು ಇನ್ನಾದರೂ ಗುರುತಿಸಿ ಗೌರವಿಸಲಿ ಎನ್ನುವುದು ನಮ್ಮೆಲ್ಲರ ಆಶಯ.

Published on Jan 9, 2016
.....................................
.........................................

No comments:

Post a Comment