Saturday 17 December 2016


ಸ್ಕೇಟಿಂಗ್‌ನ ಚಿನ್ನದ ಹುಡುಗ 
ಆತೀಶ್



ಮನುಷ್ಯನಲ್ಲಿ ನಾನು ಇನ್ನೊಬ್ಬ ಸಾಧಕನಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಇರುತ್ತದೆ. ಆದರೆ, ನಾನು ನಾನಾಗಿ ಎದ್ದು ನಿಲ್ಲಬೇಕು, ಕಾಣಿಸಿಕೊಳ್ಳಬೇಕೆಂಬ  ಛಲ ಇರುವುದು ಕೆಲವರಲ್ಲಿ ಮಾತ್ರ. ಮಹತ್ವಾಕಾಂಕ್ಷೆ ಇಲ್ಲದೆ ಯಾರೂ ಏನನ್ನೂ ಸಾಧಿಸಲಾರರು ಎಂಬ ಮಾತಿದೆ. ಮಹತ್ತಾದುದನ್ನು ಸಾಧಿಸಲು ಯಾರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕಿಲ್ಲ. ಪ್ರಬಲ ಇಚ್ಛಾಶಕ್ತಿ, ಮನೋಬಲ ಮತ್ತು ಆತ್ಮವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು.
ಚುಮುಚುಮು ಬೆಳಕಿರುವಾಗಲೇ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ (ರೋಲರ್ ಸ್ಕೇಟಿಂಗ್)  ಯುವಕನೊಬ್ಬನನ್ನು  ನೀವು ಗಮನಿಸಿರಬಹುದು. ಕಾಲಿಗೆ ಕ್ವಾಡ್ ಅಥವಾ ಇನ್‌ಲೈನ್ ಧರಿಸಿ ರಸ್ತೆಯನ್ನೇ ಸ್ಕೇಟಿಂಗ್ ರಿಂಕ್ ಮಾಡಿಕೊಂಡು ಹೆಲಿಪ್ಯಾಡ್ ವೃತ್ತದಿಂದ ತ್ಯಾವರೆಕೊಪ್ಪದ ಹುಲಿ,ಸಿಂಹಧಾಮದವರೆಗೆ  ದಿನನಿತ್ಯ ಹೋಗಿಬರುತ್ತಾನೆ. ಇಷ್ಟೇ ಏಕೆ, ಭಾರತದ ಅತ್ಯಂತ ವೇಗದ ಸ್ಕೇಟರ್ ಎಂಬ ಪ್ರಸಿದ್ಧಿಯನ್ನು ಈತ ಪಡೆದಿದ್ದಾನೆ.
ಇಲ್ಲಿನ ನ್ಯಾಶನಲ್ ಜೂನಿಯರ್ ಕಾಲೇಜಿನಲ್ಲಿ ದ್ವಿತಿಯ ಪಿಯು ಓದುತ್ತಿರುವ ಆರ್. ಆತೀಶ್ ಈ ಯುವಕ. ಮೊದಲಿನಿಂದಲೂ ಸಾಹಸಿ ಬುದ್ಧಿಯನ್ನು ಹೊಂದಿರುವ ಈತ, ಒಮ್ಮೆ ಮೈಸೂರಿಗೆ ಹೋಗಿದ್ದ ವೇಳೆ ಅಲ್ಲಿ ಸ್ಕೇಟಿಂಗ್ ಮಾಡುತ್ತಿರುವವರನ್ನು ಕಂಡಿದ್ದೇ ತಡ, ಈತನಿಗೂ ಅದನ್ನು ಅಭ್ಯಾಸ ಮಾಡಬೇಕೆಂಬ ಬಯಕೆ ಹುಟ್ಟಿತು. ತಂದೆ-ತಾಯಿಯನ್ನು ಕಾಡಿ-ಬೇಡಿ ಸ್ಕೇಟಿಂಗ್ ಖರೀದಿಸಿ ತಾನೇ ಯತ್ನ ಆರಂಭಿಸಿದ. ನಂತರ ಮೈಸೂರಿಗೆ ಮತ್ತೆ ತೆರಳಿ ಸುಮಾರು 2 ವರ್ಷಗಳ ಕಾಲ ಸ್ಕೇಟಿಂಗ್‌ನಲ್ಲಿ ಏಕಲವ್ಯ ಪ್ರಶಸ್ತಿ ಪಡೆದಿರುವ ಶ್ರೀಕಾಂತ್‌ರಾವ್ ಎನ್ನುವವರಲ್ಲಿ ತರಬೇತಿ ಪಡೆದ. ಈತನಲ್ಲಿರುವ ಅಸಾಧಾರಣ ಸಾಧನೆಯ ಶಕ್ತಿಯನ್ನು ಗಮನಿಸಿದ ರಾವ್, ಸರಿಯಾಗಿ ತಿದ್ದಿ, ತೀಡಿ ಬೆಳೆಸಿದರು. ಪರಿಣಾಮವಾಗಿ, ಈತ ಈಗ 52ನೆಯ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ (16 ವರ್ಷ ಮೇಲ್ಪಟ್ಟವರ ವಿಭಾಗ) ದಲ್ಲಿ ಚಿನ್ನವನ್ನು ಗೆದ್ದುಕೊಂಡು ಬಂದಿದ್ದಾನೆ. ಜೊತೆಗೆ ರಿಂಕ್-2 ಎ ವಿಭಾಗದಲ್ಲಿ ಬೆಳ್ಳಿಯನ್ನೂ ತನ್ನದಾಗಿಸಿಕೊಂಡಿದ್ದಾನೆ.
2014ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಪದಕ, ಬಳ್ಳಾರಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನದ ಪದಕ, ರಿಂಕ್ -2 ಎ ವಿಭಾಗದಲ್ಲೂ ಚಿನ್ನದ ಪದಕ, ಬೆಂಗಳೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾನೆ. ಆತೀಶ್ ಇಲ್ಲಿನ ಎಎನ್‌ಕೆ ರಸ್ತೆ ವಾಸಿ ರವಿ ಅವರ ಪುತ್ರ. ರವಿ ತಿಲಕ್‌ನಗರದಲ್ಲಿ ಕಾರ್ ಬಿಡಿಭಾಗಗಳ ವ್ಯಾಪಾರ ನಡೆಸುತ್ತಿದ್ದಾರೆ. ಮಗನ ಎಲ್ಲ ಕನಸನ್ನು ಈಡೇರಿಸುವಲ್ಲಿ ತಂದೆ-ತಾಯಿ ತಮ್ಮ ಸಮಯ ವ್ಯಯಿಸುತ್ತಿದ್ದಾರೆ. ತನಗಂತೂ ಆಸೆ ಇದ್ದರೂ ಸ್ಕೇಟರ್ ಆಗಲು ಸಾಧ್ಯವಾಗಲಿಲ್ಲ. ಆದರೆ ಮಗನ ಮೂಲಕವಾದರೂ ಅದು ಈಡೇರುತ್ತಿದೆ ಎಂಬ ಸಂತಸ ಅವರಲ್ಲಿದೆ.
ಆತೀಶ್ ದಿನನಿತ್ಯ ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಸಂಜೆ ಒಂದುವರೆ ಗಂಟೆ  ಸುಮಾರು 40 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾನೆ. ಜೊತೆಗೆ ಬೇಸಿಗೆ ರಜೆಯಲ್ಲಿ ನೂರಾರು ಮಕ್ಕಳಿಗೆ ವಿಶೇಷ ತರಬೇತಿಯನ್ನು ಸ್ಕೇಟಿಂಗ್ ನಲ್ಲಿ ನೀಡುತ್ತಿದ್ದಾನೆ. 2014ರಲ್ಲಿ ಆಂದ್ರದ ಕಾಕಿನಾಡಿನ ಈಶ್ವರ್ ಅವರು ಸ್ಥಾಪಿಸಿದ್ದ ವೇಗದ ಸ್ಕೇಟಿಂಗ್  ದಾಖಲೆಯನ್ನು ಈತ ಅಳಿಸಿ ಹಾಕಿದ್ದಾನೆ. ಅವರಿಗಿಂತ 18 ಮೈಕ್ರೊ ಸೆಕೆಂಡ್ ಮುಂಚೆ  ಸ್ಕೇಟಿಂಗ್ ಮಾಡಿ ದಾಖಲೆ ಮಾಡಿದ್ದಾನೆ.
ನನಗಾಗಿ ತಂದೆ-ತಾಯಿ ಸಾವಿರಾರು ರೂ. ವ್ಯಯಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸ್ಕೇಟರ್ ಆಗಬೇಕೆಂಬ ಆಸೆ ಇದೆ ಎನ್ನುತ್ತಾನೆ ಆತೀಶ್. ಈತನ ಅಣ್ಣ ವಿಶ್ವಾಸ್ ಸಹ 2013ರಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದನು. ಏನೂ ಸೌಲಭ್ಯ ಇಲ್ಲದ ಶಿವಮೊಗ್ಗದಲ್ಲಿ ರೋಲರ್ ಸ್ಕೇಟಿಂಗ್‌ಗೆ ಸ್ಥಾನ ಸಿಗುವಂತೆ ಆತೀಶ್ ಮಾಡಿದ್ದಾನೆ.  ತನ್ನಂತೆ ನೂರಾರು ಸ್ಕೇಟರ್‌ಗಳನ್ನು ಬೆಳೆಸುತ್ತಿದ್ದಾನೆ.
.........................................

No comments:

Post a Comment