Saturday 17 December 2016

ಕೃಷಿ ಯಂತ್ರಗಳ ಯುವ ಸಂಶೋಧಕ
ನಿತಿನ್ ಹೇರಳೆ
..............................


ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ- ನೆಸೆಸಿಟಿ ಈಸ್ ದ ಮದರ್ ಆಫ್ ಇನ್ವೆನ್ಶನ್ ಎಂದು. ಮನುಷ್ಯನಿಗೆ ಯಾವುದರ ಅನಿವಾರ್ಯತೆ ಇರುತ್ತದೆಯೋ ಆ ವಸ್ತುವನ್ನು ಪಡೆಯಲು ಹೆಚ್ಚು ಗಮನ ಕೊಡುತ್ತಾನೆ. ಅದಕ್ಕಾಗಿ ಯೋಚಿಸುಸುತ್ತಾನೆ, ಯತ್ನಿಸುತ್ತಾನೆ, ಸಂಶೋಧಿಸುತ್ತಾನೆ.
 ಇಲ್ಲೊಬ್ಬ ಯುವಕನಿದ್ದಾನೆ. ವಯಸ್ಸು ಸುಮಾರು 24ರ ಆಸುಪಾಸು. ತನ್ನ ಅಡಿಕೆ ತೋಟದಲ್ಲಿ ಮರಗಳಿಗೆ  ಔಷಧಿ ಸಿಂಪಡಿಸಲು ಜನರು ಸಿಗದಿದ್ದಾಗ ಆತನೇ ಸ್ವತಃ ಮರ ಹತ್ತಿ ಇಳಿಯುವ ಮಾನವ ಚಾಲಿತ ಯಂತ್ರ (ಅರೆಕಾ ಟ್ರೀ ಕ್ಲೈಂಬರ್)ವೊಂದನ್ನು ಕಂಡುಹಿಡಿದ. ಇದಾದ ಬಳಿಕ ಹುಲ್ಲನ್ನು ಮತ್ತು ಬೇಡವಾದ ವಸ್ತುಗಳನ್ನು ಕತ್ತರಿಸಿ ಗೊಬ್ಬರಕ್ಕೆ ಹಾಕಲು ಚಾಪ್ ಕಟರ್ ಎನ್ನುವ ಇನ್ನೊಂದು ಯಂತ್ರ ತಯಾರಿಸಿದ. ಬಳಿಕ ಅಡಿಕೆ ಗೊನೆಯಿಂದ ಅಡಿಕೆಯನ್ನು ಬೇರ್ಪಡಿಸಲು ಮತ್ತೊಂದು ಯಂತ್ರ, ಇದಾದ ಮೇಲೆ ಚಾಲಿ ಸುಲಿದು, ಸಿಪ್ಪೆ ಮತ್ತು ಅಡಿಕೆ ಬೇರೆಯಾಗುವಂತಹ ಮತ್ತೊಂದು ಯಂತ್ರ ತಯಾರಿಸಿದ. ಹಾಗಂತ ಈತನೇನು ಇಂಜಿನಿಯರಿಂಗ್ ಓದಿದವನಲ್ಲ; ವಿಜ್ಞಾನವನ್ನೂ ಓದಿಲ್ಲ,  ಸೂಕ್ಷ್ಮಮತಿ ಮತ್ತು ಸಂಶೋಧನಾ ಬುದ್ಧಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಈತ ತೋರಿಸಿಕೊಟ್ಟಿದ್ದಾನೆ. ಈ ಯುವಕ ಬೇರಾರೂ ಅಲ್ಲ, ನಿತಿನ್ ಹೇರಳೆ.
ಸಿವಿಲ್ ಡಿಪ್ಲೋಮಾ ಓದಿರುವ ಈತ ಶಿವಮೊಗ್ಗ ಸಮೀಪದ ಗಾಜನೂರಿನವನು. ಈಗ ತನ್ನೆಲ್ಲ ಯಂತ್ರ ಮಾದರಿಗಳಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿದ್ದಾನೆ. ಹಲವೆಡೆ ಯಂತ್ರಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ನೀಡಿದ್ದಾನೆ. ತಾನೇ ಸ್ವತಃ ಯಂತ್ರವನ್ನು ತಯಾರಿಸುವ ಘಟಕವನ್ನು ಗಾಜನೂರಿನಲ್ಲಿ ಸ್ಥಾಪಿಸಿ ಸುಮಾರು 15 ಜನರಿಗೆ ಉದ್ಯೋಗ ಕಲ್ಪಿಸಿದ್ದಾನೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಕಾಸರಗೋಡು, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ತನ್ನ ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. ಜನರು ಇದನ್ನು ಖರೀದಿಸಿ, ಈತನ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಅಡಿಕೆ ಮರ ಏರುವವರು, ಅಡಿಕೆ ಸುಲಿಯುವವರು ಸಿಗದ ಕಾರಣ ಈ ಯಂತ್ರಗಳನ್ನು ಸಂಶೋಧಿಸಿದ ನಿತಿನ್, ಗ್ರಾಹಕರ ಕೈಗೆಟುಕುವ ಬೆಲೆಗೆ  ನೀಡುತ್ತಿದ್ದಾನೆ. ಗ್ರಾಹಕರಿಗೂ ಖರೀದಿ ಅನಿವಾರ್ಯ ಎನ್ನುವಂತಾಗಿರುವುದರಿದಂ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ, ತೆಂಗು, ಭತ್ತ ಮೊದಲಾದವುಗಳಿಗೆ ಸಂಬಂಧಿಸಿದ ಇನ್ನಷ್ಟು ಹೊಸ ಯಂತ್ರಗಳನ್ನು ತಯಾರಿಸುವ ಉತ್ಸಾಹದಲ್ಲಿದ್ದಾರೆ.
ಈಗ ತೆಂಗಿನಕಾಯಿ ತುರಿಯುವುದು, ಗೋಡಂಬಿ ಸಿಪ್ಪೆ ತೆಗೆಯುವುದು, ನಿಂಬೆ ರಸ ತೆಗೆಯುವುದು ಮೊದಲಾದ ಸಣ್ಣ ಪ್ರಮಾಣದ ಯಂತ್ರಗಳನ್ನು ತಯಾರಿಸುತ್ತಿದ್ದಾನೆ. ಶಿರಸಿಯ ತೋಟಗಾರ್ಸ್ ಕೊ- ಆಪರೇಟಿವ್ ಸೇಲ್ಸ್ ಸೊಸೈಟಿಯವರು ಇವರನ್ನು ಕರೆಯಿಸಿ ಪ್ರಾತ್ಯಕ್ಷಿಕೆ ಕೊಡಿಸಿ ಸನ್ಮಾನಿಸಿದ್ದಾರೆ. ಪುತ್ತೂರಿನಲ್ಲಿರುವ ಕ್ಯಾಂಪ್ಕೋದವರೂ ಸಹ ಕಳೆದ ವರ್ಷ ನಡೆಸಿದ ಯಂತ್ರೋಪಕರಣಗಳ ಮೇಳದಲ್ಲಿ ಈತನ ಸಂಶೋಧನೆಗಳನ್ನು ಪ್ರದರ್ಶಿಸಿ ಗೌರವಿಸಿದ್ದಾರೆ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯವರು ಪ್ರತಿ ವರ್ಷ ನಡೆಸುವ ಕೃಷಿ ಮೇಳಗಳಲ್ಲೂ ಈತನ ಸಂಶೋಧನೆ ಪ್ರದರ್ಶಿತವಾಗಿದೆ. ಇಲ್ಲಿಯೂ ಹಲವು ಸಂಶೋಧಕರು, ಕೃಷಿ ವಿಜ್ಞಾನಿಗಳು ಇದನ್ನು ಗಮನಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
  ನಿತಿನ್  ಸಂಶೋಧನೆಯನ್ನು ಮುಂದುವರೆಸಿ, ಅದರಲ್ಲಿ ಹೊಸತನವನ್ನು ಸಾಧಿಸುತ್ತಿದ್ದಾನೆ. ಈ ವರ್ಷದ ಜನವರಿಯಲ್ಲಿ ಮೈಸೂರಿನಲ್ಲಿ ಜರುಗಿದ 103ನೆಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಈತ ಪ್ರದರ್ಶಿಸಿದ ಮಾದರಿಗೆ ಬಹುಮಾನ ದಕ್ಕಿದೆ.
 ಡಿಪ್ಲೊಮಾ ಮಾಡಿದರೂ ಸಂಶೋಧನೆಗೆ  ನೆರವಿನ ದಾರಿಯೇ ಕಾಣುತ್ತಿಲ್ಲ. ಸರ್ಕಾರಗಳು ಬಜೆಟ್‌ನಲ್ಲಿ ಕೃಷಿ ಯಂತ್ರೋಪಕರಣಗಳ  ಸಂಶೋಧನೆಗೆ ನೂರಾರು ಕೋಟಿ ರೂ. ಮೀಸಲಿಡುತ್ತವೆಯಾದರೂ ಅದು ಯಾರಿಗೆ ತಲುಪುತ್ತದೆ, ಎಲ್ಲಿಗೆ ಹೋಗುತ್ತದೆ, ಅದನ್ನು ಪಡೆಯುವುದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾನೆ ನಿತಿನ್.
ಈಗ ಸ್ವತಃ ಕೃಷಿಕನಾಗಿ ಸಂಶೋಧನಾ ಪ್ರವೃತ್ತಿಯನ್ನು ಮುಂದುವರೆಸಿದ್ದರ ಫಲವಾಗಿ ಅನೇಕ ಉಪಯುಕ್ತ ಯಂತ್ರಗಳನ್ನು ಕಂಡುಹಿಡಿದಿರುವ ಈತ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಷಿನ ಯಶಸ್ಸು ಕಾಣಲಿ.
Published on Feb 13, 2016
..............................................

No comments:

Post a Comment