Saturday 17 December 2016

ದರ್ಪವಿಲ್ಲದ ದಕ್ಷ ಪೊಲೀಸ್ ಅಧಿಕಾರಿಯ ಮುಡಿಗೆ
ರಾಷ್ಟ್ರಪತಿ ಪ್ರಶಸ್ತಿ


ಬಳಿಗೆ ಬಾರದು ಕೋಪ: ಸುಳಿಯಲಾರದು ತಾಪ
ಸಿಗದು ಮೋಹ ಕಲಾಪ: ತಾಗದು ಆಸೆಯ ಲೇಪ
ಭಯ, ಭ್ರಾಂತಿ, ವಿದ್ವೇಷ ಲವಲೇಶವಿನಿತಿಲ್ಲ: ನೋಡಿದರೆ ಶಾಂತಚಿತ್ತ
ಈ ರೀತಿ ಗುಣ ಹೊಂದಿದವರು ಎಲ್ಲಿ ಕಾಣಸಿಗುತ್ತಾರೆ? ಉತ್ತಮ ಬದುಕು, ಪ್ರಾಮಾಣಿಕತೆ, ಸತ್ಸಂಗ, ಸದಾಚಾರ ಸಂಪನ್ನರಾಗಿರುವವರು ತೀರಾ ವಿರಳ. ಇಂದಿನ ದಿನಗಳಲ್ಲಿ ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇಂತಹ ವ್ಯಕ್ತಿಯೊಬ್ಬರು ಇದ್ದಾರೆನ್ನುವುದೇ ನಂಬಲಸಾಧ್ಯವಾದ ಸತ್ಯ. ಇಂತಹ ಸಿದ್ಧಿ-ಸಾಧನೆಯ ಫಲದಿಂದಾಗಿ ಇದೇ ಕಳೆದ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾದ ಅಪೂರ್ವ ಪೊಲೀಸ್ ಅಧಿಕಾರಿಯೊಬ್ಬರಿದ್ದಾರೆ. ಅವರೇ ತೀರ್ಥಹಳ್ಳಿಯ ಸಿಪಿಐ ಕಚೇರಿಯಲ್ಲಿ ಎಎಸ್‌ಐ ಆಗಿರುವ ಎಚ್. ಬಿ. ಜ್ಞಾನೇಂದ್ರ.
ಜ್ಞಾನೇಂದ್ರ ಎಂದ ಕೂಡಲೇ ನೆನೆಪಾಗುವುದು ಅವರ  ಸದಾಚಾರ, ಸಂಪನ್ನತೆಯ ವ್ಯಕ್ತಿತ್ವ.  ಆ ಇಲಾಖೆಯವರಷ್ಟೇ ಅಲ್ಲ, ಅವರ ಆತ್ಮಿಯರೂ ಸಹ ಇದನ್ನು ಹೇಳುತ್ತಾರೆ. 58ರ ಹರೆಯದ ಇವರು, ಪೊಲೀಸ್ ಇಲಾಖೆಗೇ ಮಾದರಿ ಎಂದರೆ ತಪ್ಪೇನಿಲ್ಲ. ಸದಾ ಕೆಲಸದ ಒತ್ತಡದಿಂದ ಬಳಲುತ್ತಿದ್ದರೂ, ಯಾವುದೇ ನೋವಿದ್ದರೂ ಅದನ್ನು ತೋರಗೊಡದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಜ್ಞಾನೇಂದ್ರ. ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್‌ಗಳಿಗೂ ಇವರನ್ನು ಕಂಡರೆ ವಿಶೇಷ ಪ್ರೀತಿ, ಮಮಕಾರ. ತಮ್ಮ ಕೆಳಗಿನ ನೌಕರರನ್ನು ಎಂದೂ ನೋಯಿಸಿದೆ, ಗೋಳುಹೊಯ್ದುಕೊಳ್ಳದೆ, ಗೌರವದಿಂದಲೇ ಕಾಣುವುದು ಇವರ ವಿಶೇಷ ಗುಣವೇ ಸರಿ.
ಮೂಲತಃ ಕೃಷಿಕ ಕುಟುಂಬದಿಂದ ಬಂದ ಇವರು, ತೀರ್ಥಹಳ್ಳಿ ತಾಲೂಕಿನ ಸಾಲೂರು-ಬಾಳಗೋಡು ಗ್ರಾಮದವರು. ಕೋಣಂದೂರಿನಲ್ಲಿ ಪಿಯುವರೆಗೆ ಶಿಕ್ಷಣ ಪಡೆದು  ಪೊಲೀಸ್ ಕೆಲಸವನ್ನು ಆಯ್ಕೆ ಮಾಡಿಕೊಂಡರು. ಚನ್ನಪಟ್ಟಣದಲ್ಲಿ ತರಬೇತಿಯನ್ನು ಪಡೆದು ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯಲ್ಲಿ 1979ರಲ್ಲಿ ಕೆಲಸಕ್ಕೆ ಪಾದಾರ್ಪಣೆ ಮಾಡಿದರು. ಅನಂತರ ನ್ಯಾಮತಿ, ಚನ್ನಗಿರಿ, ಹೊನ್ನಾಳಿ, ಮಾಳೂರು, ತೀರ್ಥಹಳ್ಳಿಯಲ್ಲಿ ಸೇವೆ.  ನಿವೃತ್ತಿ ಅಂಚಿನಲ್ಲಿರುವ ಇವರು, ಯಾವತ್ತೂ ತನ್ನ ವೃತ್ತಿಗೆ ಅಪಚಾರ ಮಾಡಿದವರಲ್ಲ; ಹೆಸರು ಕೆಡಿಸಿಕೊಂಡವರಲ್ಲ.
ಕಚೇರಿಯಲ್ಲೂ ಸಹ ಇವರದು ಶಿಸ್ತು-ಸಂಯಮದ ಕೆಲಸ. ಸಾರ್ವಜನಿಕರು ಬಂದರೆ ಗೌರವ ಕೊಟ್ಟು ಅವರ ಅಹವಾಲು ಕೇಳಿ ಅಷ್ಟೇ ವಿನಯದಿಂದ ಮಾತನಾಡಿಸುತ್ತಾರೆ. ಹಾಗಾಗಿಯೇ, ಇವರಿರುವ ಸಂದರ್ಭ ನೋಡಿಯೇ ಕಚೇರಿಗೆ ಸಾರ್ವಜನಿಕರು ಹೆಚ್ಚು ಪ್ರಮಾಣದಲ್ಲಿ ಬರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮದೇ ಆದ ಮಾರ್ಗೋಪಾಯಗಳನ್ನು ಇವರು ಅರಿತಿದ್ದಾರೆ. ವಿಶೇಷವಾಗಿ, ತನಿಖಾ ಕಾರ್ಯದಲ್ಲಿ ಪರಿಣತಿ ಹೊಂದಿರುವ ಜ್ಞಾನೇಂದ್ರ, ಹಲವಾರು ಮಹತ್ವದ ತನಿಖೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವಂತೆ ಮಾಡುವ ಮೂಲಕ ಹೆಸರು ಗಳಿಸಿದ್ದಾರೆ.  ತಮ್ಮ 37 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆಯನ್ನು ಇವರು ಹೊಂದಿಲ್ಲ. ಹಾಗಾಗಿಯೇ ಇವರನ್ನು ತೀರ್ಥಹಳ್ಳಿ ಸಿಪಿಐ ಕಚೇರಿಯಲ್ಲಿ ಪ್ರಕರಣಗಳ ವಿಶೇಷ ತನಿಖೆಗಾಗಿ ನೇಮಿಸಲಾಗಿದೆ. ಇವರ ವೃತ್ತಿಪರತೆ ಮತ್ತು ಕಾರ್ಯನಿಷ್ಠೆ ಪ್ರಶ್ನಾತೀತವಾದುದು. ಇದನ್ನೆಲ್ಲ ಗಮನಿಸಿಯೇ ಜಿಲ್ಲಾ ಪೊಲೀಸ್ ವರಿಷ್ಠರು ಇವರನ್ನು ರಾಷ್ಟ್ರಪತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದರು.
 ‘ಇಲಾಖೆ ತನ್ನನ್ನು ಬೆಳೆಸಿದೆ. ಪ್ರೋತ್ಸಾಹಿಸಿದೆ. ನಿಷ್ಠೆ, ಪ್ರಾಮಾಣಿಕತೆ ನಮ್ಮಲ್ಲಿದ್ದರೆ ಎಲ್ಲರೂ ಗುರುತಿಸುತ್ತಾರೆ. ಮೊದಲು ನಮ್ಮ ಬಗ್ಗೆ ನಾವು ಗೌರವ ಬೆಳೆಸಿಕೊಳ್ಳಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎನ್ನುವ ಇವರಿಗೆ ಇದೇ ಕಾರಣಕ್ಕೇ ರಾಷ್ಟ್ರಪತಿ ಪ್ರಶಸ್ತಿ  ಬಂದಿದೆ ಎಂದರೆ ತಪ್ಪಾಗಲಾರದು. ಇವರ ಮಗ-ಮಗಳು ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.  ದರ್ಪ, ಸಿಟ್ಟು, ಅಹಂಕಾರ ಇವರ ಬಳಿ ಎಂದೂ ಸುಳಿದಿಲ್ಲ. ಸದಾ ನಗುಮೊಗದ ಸೇವೆ, ಸಂಸ್ಕಾರಯುತ ಗುಣದ ಜೊತೆ ಉತ್ತಮ ಆರೋಗ್ಯವನ್ನು ಇವರು ಹೊಂದಿ, ಇಲಾಖೆಯಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಭಾಜನರಾಗಿದ್ದಾರೆ.
ಪೊಲೀಸರೆಂದರೆ ಸಾಕು-ಒಂದು ರೀತಿ ಸಂಶಯದಿಂದಲೇ ನೋಡುವ ಈ ಕಾಲದಲ್ಲಿ ಜ್ಙಾನೇಂದ್ರ ಅವರು ನಿಜಕ್ಕೂ ಅನುಕರಣೀಯರು; ಅನುಸರಣೀಯರು.
published on Feb, 9, 2016
..................................   

No comments:

Post a Comment