Saturday 17 December 2016

 ಹೋರಾಟಕೆ ಮಾದರಿಯಾದ
ದಿ. ಕಡ್ಲೆಕಾಯಿ ಮಂಜುನಾಥ



ಹೆಸರಿಗಾಗಿ ಹೋರಾಟ ಮಾಡುವವರಿದ್ದಾರೆ, ಹಣಗಳಿಸಲು ಹೋರಾಟ ಮಾಡುವವರಿದ್ದಾರೆ. ತೀಟೆಗಾಗಿ ಪ್ರತಿಭಟಿಸುವವರಿದ್ದಾರೆ. ಆದರೆ, ನಿಜಕ್ಕೂ ಸಮಸ್ಯೆಗಳಿಗೆ ಅಥವಾ ಜನಸಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಹೋರಾಡುವವರು ತೀರಾ ವಿರಳ. ಅಂತಹವರಲ್ಲಿ ಒಬ್ಬರಾಗಿದ್ದವರು ದಿವಂಗತ ಕಡ್ಲೆಕಾಯಿ ಮಂಜುನಾಥ.
ಕಡ್ಲೆಕಾಯಿ ಮಂಜುನಾಥ ಹೆಸರೇ ವಿಶಿಷ್ಟವಾದುದು. ಶಿವಮೊಗ್ಗದಲ್ಲಿ ಬಹುತೇಕ ಜನರಿಗೆ ಇವರು ಪರಿಚಿತರು. ಯಾರೇ ಎದುರು ಸಿಕ್ಕರೂ ಅಣ್ಣಾ, ಸಾರ್ ಎಂದು ಕೈ ಮುಗಿದೇ ಸಂಬೋಧಿಸುವ ಸೌಮ್ಯ ಸ್ವಭಾವದ, ನಿಸ್ವಾರ್ಥ ಮನೋಭಾವದ, ಯಾರೊಡನೆಯೂ ಜಗಳ ಮಾಡದ, ಸಮಸ್ಯೆ ಇರುವವರನ್ನು ಕಟ್ಟಿಕೊಂಡು ಕಚೇರಿಯಿಂದ ಕಚೇರಿಗೆ ಅಲೆದು ಅಧಿಕಾರಿಗಳಿಗೂ ಗೌರವ ಕೊಟ್ಟು ಕೆಲಸ ಮಾಡಿಸಿಕೊಡುವ ಮಂಜುನಾಥ ಕಾಲವಾಗಿದ್ದಾರೆ. ಮಾ 18ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಎಷ್ಟೋ ಜನರು ಮಂಜುನಾಥಗೆ ಈ ಸಾವು ಬರಬಾರದಿತ್ತು. ಇಂತಹ ಪ್ರಾಮಾಣಿಕ, ನಿಗರ್ವಿ, ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು ಎಂದು ಮರುಗಿದವರು ಬಹಳ ಜನ.
ಕೆಲವರು ಸತ್ತರೂ ಸುದ್ದಿಯಾಗುವುದಿಲ್ಲ, ಕೆಲವರು ಇದ್ದರೂ ಸುದ್ದಿಯಾಗುವುದಿಲ್ಲ. ಆದರೆ ಮಂಜುನಾಥ ಜೀವವಿದ್ದಾಗಲೂ, ಸತ್ತ ನಂತರವೂ ಜನರ ಪ್ರಶಂಸೆ, ಅಭಿಮಾನ ಪಡೆದವರು.
ಕಾಯಕವೇ ಕೈಲಾಸ ಎನ್ನುವುದ್ಕಕೆ ಉತ್ತಮ ಉದಾಹರಣೆ ಇವರು. ನಡೆದಾಡಿಕೊಂಡೇ ನಗರ ಸುತ್ತುತ್ತಿದ್ದರು. ದುರ್ಗಿಗುಡಿಯಲ್ಲಿ ರೂಮು ಮಾಡಿಕೊಂಡು ವಾಸವಾಗಿದ್ದ ಮಂಜುನಾಥ ಬಳಿ ಯಾರಾದರೂ ರೇಶನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ ಇನ್ನಿತರ ಸಮಸ್ಯೆ ಹೇಳಿಕೊಂಡು ಹೋದರೆ ಸಾಕು, ಅವರನ್ನು ಕರೆದುಕೊಂಡು ನೇರವಾಗಿ ಸಂಬಂಧಿತ ಅಧಿಕಾರಿಗಳ ಕಚೇರಿಗೆ ತೆರಳುತ್ತಿದ್ದರು. ಅಧಿಕಾರಿಗಳಿಗೂ ಕಡ್ಲೆಕಾಯ ಸ್ವಭಾವ ಗೊತ್ತಿದ್ದರಿಂದ ಸುಲಭದಲ್ಲಿ ಕೆಲಸವಾಗುತ್ತಿತ್ತು. ಕೆಲಸವಾದ ನಂತರ ಯಾರಿಂದಲೂ ಒಂದು ಪೈಸೆಯನ್ನೂ ಯಾಚಿಸದ ಕೈ ಅವರದ್ದಾಗಿತ್ತು. ಅಷ್ಟೊಂದು ಶುದ್ಧ ಕಚ್ಚೆ- ಕೈ- ಬಾಯಿ ಅವರದ್ದಾಗಿತ್ತು. ಅನ್ಯಾಯವನ್ನು ಸಹಿಸದ,ಸುಳ್ಳು ಹೇಳದ, ಹೆಸರಿಗಾಗಿ,  ಪಟ್ಟಕ್ಕಾಗಿ ಎಂದೂ ಹಂಬಲಿಸದ ಅಪರೂಪದ ವ್ಯಕ್ತಿ ಅವರಾಗಿದ್ದರು.
 ಕಲ್ಲೂರು ಮೇಘರಾಜ್ ಮುಖಂಡತ್ವದ ಶಾಂತವೇರಿ ಗೋಪಾಲಗೌಡ  ಸಮಿತಿಯ ಎಲ್ಲ ಹೋರಾಟಗಳಲ್ಲಿ ಕಡ್ಲೆಕಾಯಿ ಮುಂದು. ಮೇಘರಾಜ್ ಅವರ ಬಲಗೈ ಯಂತಿದ್ದರು. ಎಷ್ಟೋ ಜನ ಮೇಘರಾಜ್ ಜತೆ ಇದ್ದರೂ ನಂತರ ಕೈಬಿಟ್ಟು ಹೋದರು. ಆದರೆ ಕಡ್ಲೆಕಾಯಿ ಮಾತ್ರ ಎಂದೂ ಕೈಕೊಡಲಿಲ್ಲ. ಅಷ್ಟೊಂದು ವಿಶ್ವಾಸಿಗರಾಗಿದ್ದರು. ಯಾವುದೇ ಹೋರಾಟ, ಪತ್ರಿಕಾಗೋಷ್ಠಿ ಪ್ರತಿಭಟನೆ, ಧರಣಿ ಇರಲಿ, ಎಲ್ಲರಿಗಿಂತ ಮೊದಲೇ ಬಂದು ವ್ಯವಸ್ಥೆ ಮಾಡಿ ಪತ್ರಕರ್ತರನ್ನು  ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ದುರ್ಗಿಗುಡಿ ಕನ್ನಡ ಸಂಘದಲ್ಲಿ ಕೆಲಸ ಮಾಡಿದ ಮಂಜಣ್ಣ, ಮಹಾನ್ ದೈವಭಕ್ತರೂ ಆಗಿದ್ದರು. ಇಂತಹ ಮಂಜುನಾಥ ಈಗ ನೆನಪು ಮಾತ್ರ.
ಸದಾ ಕಿತ್ತು ತಿನ್ನುವ ಬಡತನವಿದ್ದರೂ, ಸದಾ ತನ್ನ ಅಳಲನ್ನು ಮರೆತು ನೊಂದವರಿಗೆ ಹೆಗಲು ಕೊಡುತ್ತಿದ್ದರು, ಅವರ ಪರ ಹೋರಾಡುತ್ತಿದ್ದರು. ಭ್ರಷ್ಟರ ಜಾತಕವನ್ನು ಆರ್‌ಟಿಐ ಮೂಲಕ ಪಡೆದು ಹೋರಾಟಕ್ಕೆ ನೆಲೆಗಟ್ಟು ಹಾಕುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಸಂಪಾದಿಸಬಹದಿತ್ತು. ಆದರೆ ಜನಪ್ರಿಯತೆ, ಗೆಳೆತನ ಸಂಪಾದಿಸಿದರು. ನಿಜವಾದ ಹೋರಾಟಗಾರನಿಗೆ ಇದಕ್ಕಿಂತ ಹೆಚ್ಚಿನ ಗೌರವ ಇನ್ನೇನು ಬೇಕು?      
ಮೂಲತಃ ಶಿವಮೊಗ್ಗದವರೇ ಅದ ಮಂಜುನಾಥ ತಂದೆ ಮುನಿಯಪ್ಪ ಗಾಂಧಿ ಪಾರ್ಕಿನಲ್ಲಿ ಕಡ್ಲೆಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಅಲ್ಲಿಂದ ಆ ಹೆಸರೇ ಅಂಟಿಕೊಂಡಿತು. ಮಂಜುನಾಥ ಸಹ ಇದೇ ಹೆಸರನ್ನು ಇಟ್ಟುಕೊಂಡರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆತ್ಮೀಯರಾಗಿದ್ದ ಮುನಿಯಪ್ಪ ‘ಶ್ರಮಜೀವಿ’ ಎಂಬ ಬಿರುದನ್ನು ಅವರಿಂದ ಪಡೆದು ಸನ್ಮಾನಿಸಲ್ಪಟ್ಟಿದ್ದರು. ಅಪ್ಪನಂತೆ ಮಗನೂ ಸಹ ಶ್ರಮಜೀವಿಯಾಗಿ, ಸ್ನೇಹಜೀವಿಯಾಗಿ, ಸಂಘಜೀವಿಯಾಗಿ, ಬಡವರಪರ ಜೀವಿಯಾಗಿ ದುಡಿದು ಅಳಿದಿದಿದ್ದಾರೆ. ಮಂಜಣ್ಣನ  ನೆನೆಪು ಸದಾ ಅಮರ.
Published on Marsch 19, 2016
................................

No comments:

Post a Comment