Monday 14 November 2016

ಮಹಿಳಾ ಸಮಷ್ಟಿಯ ಚಿಂತಕಿ
ಶಾಂತಾ ಸುರೇಂದ್ರ


ಪ್ರಕಟಿತ ದಿನಾಂಕ- 17=10-2015

ನಮ್ಮಲ್ಲಿ ಬಹಳ ಜನ ಚಿಂತೆ ಮಾಡುತ್ತಾರೆ. ಎಲ್ಲೋ ಕೆಲವರು ಮಾತ್ರ ಚಿಂತನೆ ಮಾಡುತ್ತಾರೆ. ಅದರಲ್ಲೂ ಕೆಲವರು ಮಾತ್ರ ಚಿಂತನೆ ಮಾಡಿದ್ದನ್ನು ಕಾರ್ಯರೂಪಕ್ಕಿಳಿಸುತ್ತಾರೆ. ಅಂತಹವರಲ್ಲಿ ಶಿವಮೊಗ್ಗ ನಗರದ ಶಾಶ್ವತಿ ಮಹಿಳಾ ವೇದಿಕೆ ಮತ್ತು ಚುಂಚಾದ್ರಿ ಮಹಿಳಾ ವೇದಿಕೆ ಮತ್ತು ಮಲ್ನಾಡ್ ಕ್ರಿಯೇಟಿವ್ ಫೌಂಡೇಶನ್ ಅಧ್ಯಕ್ಷೆ ಶಾಂತಾ ಸುರೇಂದ್ರ ಒಬ್ಬರು.
  ನೆಲೆಯಿಲ್ಲದವರಿಗೆ ನೆಲೆ ಕಲ್ಪಿಸುವುದು, ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದವರಿಗೆ ನ್ಯಾಯ ಒದಗಿಸುವುದು, ವೇಶ್ಯಾವಾಟಿಕೆಯಲ್ಲಿ ಸಿಲುಕಿರುವ ಮಹಿಳೆಯರನ್ನು ಅದರಿಂದ ಪಾರು ಮಾಡಿ ಸ್ವಾವಲಂಬಿ ಜೀವನಕ್ಕೆ ನೆರವಾಗುವುದು, ಅನ್ಯಾಯವಾದ ಮಹಿಳೆಗೆ, ಯುವಕರು ಕೈಕೊಟ್ಟ ಯುವತಿಯರಿಗೆ ನ್ಯಾಯ,  ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ವಿವಿಧ ಕೌಶಲ್ಯ ತರಬೇತಿ ಕೊಡಿಸುವುದು, ಅವರು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು, ಮಹಿಳೆಯರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದು, ಬಡ ಗರ್ಭಿಣಿಯರಿಗೆ ಸೀಮಂತ ಮಾಡುವುದು, ಮಹಿಳಾ  ಆರೋಗ್ಯ ಶಿಬಿರ ಏರ್ಪಡಿಸುವುದು, ಕೊಳಚೆ ಪ್ರದೇಶದ ಮಹಿಳೆಯರಲ್ಲಿ ಉಳಿತಾಯ ಮನೋಭಾವ ಸೃಷ್ಟಿಸಿ ಅವರ ಜೀವನಾಧಾರಕ್ಕೆ ಹಾದಿ ಮಾಡಿಕೊಡುವುದು, ಮಹಿಳಾ ಬ್ಯಾಂಕ್ ಸ್ಥಾಪನೆ... ಹೀಗೆ ಹತ್ತಾರು ಸಮಾಜ ಸೇವಾ ಕೆಲಸದಲ್ಲಿ ಅದರಲ್ಲೂ ಮಹಿಳಾ ಪರ  ಕೆಲಸದಲ್ಲಿ ಸದಾ ಕಾರ್ಯತತ್ಪರರು. ಇಷ್ಟೇ ಅಲ್ಲದೆ, ವಿವಿಧ ಸರಕಾರಿ ಶಾಲೆಗಳಿಲ್ಲಿ ತಮ್ಮ ವೇದಿಕೆ ವತಿಯಿಂದ ಪುಸ್ತಕ, ಪೆನ್ನು, ಶಾಲಾಚೀಲ ವಿತರಣೆ, ವನಮಹೋತ್ಸವ ಮಾಡುತ್ತಾರೆ. ಇದರ ಜೊತೆಗೆ ಸಾಕ್ಷರತೆ ಬಗ್ಗೆ ಗ್ರಾಮಾಂತರ ಶಾಲೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ.
ನಾವು ಸುಖವಾಗಿ ಬದುಕಿದರೆ ಸಾಕು, ಇನ್ನೊಬ್ಬರ ಗೊಡವೆ ನಮಗೇಕೆ ಬೇಕು ಎಂದು ಚಿಂತಿಸುವ ಜನರೇ ಹೆಚ್ಚಿರುವ ಇಂದಿನ ದಿನದಲ್ಲಿ, ಶಾಂತಾ ನೂರಾರು ಮಹಿಳೆಯರ ಪಾಲಿಗೆ ದೇವರಂತಾಗಿದ್ದಾರೆ. ಅವರನ್ನು ಇಂದಿಗೂ ಆ ಮಹಿಳೆಯರು ನೆನಪಿಸಿಕೊಳ್ಳುತ್ತಾರೆ.  ಪೊಲೀಸ್ ಠಾಣೆ, ಆಸ್ಪತ್ರೆ, ವಿವಿಧ ಇಲಾಖಾ ಕಚೇರಿಗಳಿಗೆ ಹೋಗಿ ನ್ಯಾಯ ಕೊಡಿಸುವುದು ಇವರ ಕೆಲಸ. ಹಣಕಾಸಿನ ವಿಚಾರವಾಗಿ ಗಂಡಿನ ಕಡೆಯವರು ಮಂಟಪದಲ್ಲಿ ಮದುವೆಯನ್ನು ನಿಲ್ಲಿಸಿದ ವಿಚಾರ ತಿಳಿದು ಅಲ್ಲಿಗೆ ಧಾವಿಸಿ ಸ್ವತಃ ತಾವೇ ಹಣ ನೀಡಿ ಮತ್ತೆ ಅದೇ ವಧು-ವರನಿಗೆ ಮದುವೆ ಮಾಡಿಸಿದ್ದನ್ನು ಎಂದೂ ಮರೆಯುವಂತಿಲ್ಲ. ಮಾಡಿದ ಕೆಲಸಕ್ಕೆ ಒಬ್ಬರಿಂದಲೂ ಒಂದು ರೂಪಾಯಿ ಪಡೆದವರಲ್ಲ. ಪ್ರಚಾರಕ್ಕಾಗಿಯೂ ಕೆಲಸ ಮಾಡಿದವರಲ್ಲ. ಸಮಾಜ ಸೇವೆ ಎಂದರೇನು ಎನ್ನುವುದನ್ನು ಇತರರಿಗೆ ತಮ್ಮ ಕೆಲಸದ ಮೂಲಕವೇ ಇವರು ತೋರಿಸಿಕೊಟ್ಟಿದ್ದಾರೆ.
ಸಾಮಾಜಿಕ ಚಿಂತನೆ ಯಾವತ್ತ್ತೂ ದೀರ್ಘವಾಗಿರುತ್ತದೆ ಎನ್ನುವ ಮಾತಿದೆ. ಅದೇ ದಾರಿಯಲ್ಲಿ ಸಾಗಿರುವ ಶಾಂತಾ ಮಹಿಳೆಯರಿಗಾಗಿ ವರ್ಷದ ಹಿಂದೆ ಚುಂಚಾದ್ರಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವನ್ನು ತಾವೇ ಹಲವು ಮುಂದಾಳು ಮಹಿಳೆಯರೊಡಗೂಡಿ ತೆರೆದಿದ್ದಾರೆ. ಇದರ ಮೂಲಕ ನೂರಾರು ಮಹಿಳೆಯರಿಗೆ ಸ್ವಾವಲಂಬಿಯಾಗಲು  ಸಾಲ ನೀಡಿದ್ದಾರೆ.
 ಸಹಾಯ ಕೇಳಿ ಬಂದವರನ್ನು ಯಾವತ್ತೂ ನೋಯಿಸಿ ಕಳುಹಿಸಿಲ್ಲ, ಅವರಿಗೆ ನೆರವಾಗಿದ್ದೇನೆ. ಸರ್ಕಾರಿ ಕಚೇರಿಯಿಂದಲೂ ಕೆಲಸ ಮಾಡಿಸಿಕೊಟ್ಟಿದ್ದೇನೆ.  ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವುದು ತನ್ನ ಗುರಿ. ನ್ಯಾಯಕ್ಕಾಗಿ ಪ್ರತಿಭಟನೆ, ಹೋರಾಟವನ್ನು ನಡೆಸಿದ್ದೇನೆ. ಅಧಿಕಾರಿಗಳು ಕೆಲಸ ಮಾಡಿಕೊಡದಿದ್ದಾಗ ಅವರಿಗೂ ಧಿಕ್ಕಾರ ಹಾಕಿದ್ದೇನೆ. ತನ್ನೆಲ್ಲ ಕೆಲಸಕ್ಕೆ ವೇದಿಕೆಯ ಸದಸ್ಯರಿದ್ದಾರೆ. ಅವರೆಲ್ಲರ ನೆರವಿನಿಂದ ಇಷ್ಟೆಲ್ಲ ಕಾಂರ್ ಸಾಧ್ಯವಾಯಿತೆನ್ನುತ್ತಾರೆ ಶಾಂತಾ.    
ಶಾಂತಾ ಅವರ ಅಸಾಧಾರಣ ಹೋರಾಟ ಮನೋಭಾವ, ಮಹಿಳೆಯರ ಧ್ವನಿಯಾಗಿ ಅವರ ಹಿತಕ್ಕೆ ಕಟಿಬದ್ಧರಾಗಿರುವುದನ್ನು ಗಮನಿಸಿ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನದಂದು ಕಿತ್ತೂರು ಚೆನ್ನಮ್ಮ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರದಾನ ಮಾಡಿ ಗೌರವಿಸಿದೆ. ಇದರೊಟ್ಟಿಗೆ ಜಿಲ್ಲಾ ಸೇವಾ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಮಹಿಳಾ ಧ್ವನಿ ಪ್ರಶಸ್ತಿ ಸಹ ಇವರ ಪಾಲಾಗಿದೆ.  ರಾಜ್ಯ ಒಕ್ಕಲಿಗ ಮಹಿಳಾ ಸಮಾವೇಶವನ್ನು ಯಶಸ್ವಿಯಾಗಿ ಶಿವಮೊಗ್ಗದಲ್ಲಿ ನಡೆಸಿದ ಕೀರ್ತಿ ಇವರದ್ದು.
..........................................

No comments:

Post a Comment