Monday 14 November 2016

ನಗರದ ಏಕೈಕ ಮಹಿಳಾ ಕಂಡಕ್ಟರ್ 
ಪವಿತ್ರಾ 



ಸಿಕ್ಕ ಕೆಲಸದಲ್ಲಿ ಆತ್ಮತೃಪ್ತಿ ಪಟ್ಟುಕೊಳ್ಳುವವರ ಸಂಖ್ಯೆ ತೀರಾ ಕಡಿಮೆ. ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ದುಡಿದರೆ ಯಾವ ವೃತ್ತಿಯಾದರೂ ಕೈಹಿಡಿಯುತ್ತದೆ. ವ್ಯಕ್ತಿಗೆ ಗೌರವವೂ ಸಿಗುತ್ತದೆ. ಆತನ ಅನುಭವದ ಆಳವೂ ಹೆಚ್ಚಾಗುತ್ತದೆ, ಜನಪ್ರಿಯತೆಯೂ ಬೆಳೆಯುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಶಿವಮೊಗ್ಗದ ಸಿಟಿಬಸ್‌ನಲ್ಲಿ ಏಕೈಕ ಮಹಿಳಾ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಪವಿತ್ರಾ (ಪೂರ್ಣಿಮಾ).
 ಇತ್ತೀಚಿನ ಅನೇಕ ವರ್ಷಗಳಿಂದ ಸರ್ಕಾರಿ ಬಸ್‌ಗಳಲ್ಲಿ  ಮಹಿಳಾ ಕಂಡಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾರಿಗೆ ಇಲಾಖೆಯಲ್ಲೂ ಮಹಿಳಾ ಮೀಸಲಾತಿ ನೀಡಲಾಗಿದೆ. ಆದರೆ ಖಾಸಗಿ  ಬಸ್‌ಗಳಲ್ಲಿ ಇದಕ್ಕೆ ಅವಕಾಶ ಕಡಿಮೆ ಎಂದೇ ಹೇಳಬಹುದು. ಶಿವಮೊಗ್ಗ ನಗರದಲ್ಲಿ ನೂರಾರು ಸಿಟಿಬಸ್‌ಗಳಿವೆ. ಆದರೆ ಮಹಿಳಾ ಕಂಡಕ್ಟರ್ ಇರುವುದು ಇವರೊಬ್ಬರೇ.  ಪ್ರಾಯಶಃ ಹೆಣ್ಣುಮಕ್ಕಳ ಅಧೈರ್ಯದ ಜೊತೆಗೆ ’ರಿಸ್ಕ್ ಯಾಕೆ’ ಎನ್ನುವ ಖಾಸಗಿ ಬಸ್ ಮಾಲಕರ ಧೋರಣೆ ಕೂಡ ಇದಕ್ಕೆ ಕಾರಣವಾಗಿರಬಹುದು. ನಗರದ ಬಹುತೇಕ ಬಸ್ ಪ್ರಯಾಣಿಕರಿಗೆ ಈ ಮಹಿಳಾ ಕಂಡಕ್ಟರ್ ಚಿರಪರಿಚಿತರು. ತಮ್ಮ ಸೌಜನ್ಯದಿಂದ, ಗಟ್ಟಿತನದಿಂದ, ಸ್ಥಿರ-ಶಾಂತ ವರ್ತನೆಗಳಿಂದ ಪವಿತ್ರಾ ಹೆಸರುವಾಸಿ.
ಮೂಲತಃ ತೀರ್ಥಹಳ್ಳಿ ತಾಲೂಕು ಕೆಂದಾಳಬೈಲ್ ಗ್ರಾಮದವರಾದ ಪವಿತ್ರಾ, ಪದವಿಯವರೆಗೆ ಓದಿದ ನಂತರ ಸ್ವಂತ ಕಾಲ ಮೇಲೆ ನಿಲ್ಲಲು ನಿರ್ಧರಿಸಿ ಕೆಲಸ ಹುಡುಕಲು ಆರಂಭಿಸಿದರು. ಈ ಸಂದರ್ಭದಲ್ಲಿ ಅವರ ತಂದೆ  ಕೃಷ್ಣಪ್ಪ ಗೌಡರು ಸಂಬಂಧಿಯೂ, ಬಸ್ ಮಾಲಕರೂ ಆದ ಟೀಕಪ್ಪ ಗೌಡರಲ್ಲಿ ಕಂಡಕ್ಟರ್ ಕೆಲಸಕ್ಕೆ ಮನವಿ ಮಾಡಿದರು. ಅವರು ಪರಿಚಿತರಲ್ಲಿ ಈ ಬಗ್ಗೆ ಕೇಳಿ ಕೆಲಸ ಕೊಡಿಸಿದರು. ಇದಕ್ಕೆ ಇನ್ನಷ್ಟು ಸಹಕಾರ ನೀಡಿದವರು ಎಸ್‌ವಿಟಿ ಸಿಟಿ ಬಸ್‌ನಲ್ಲಿ ಕಂಡಕ್ಟರ್ ಆಗಿರುವ ಕುಂಸಿ ನಾಗರಾಜ್ ಅವರು. ಇವರೆಲ್ಲರ ಸಹಕಾರದಿಂದ ಎಸ್‌ವಿಟಿ ಬಸ್ ಮಾಲಕ ಸುರೇಶ್ ಅವರನ್ನು ಭೇಟಿ ಮಾಡಿ ಕಂಡಕ್ಟರ್ ಕೆಲಸ ಪಡೆದುಕೊಂಡರು.
 ಕೆಲಸ ಹೊಸತು. ಬಸ್‌ನಲ್ಲಿ ಹುಡುಗರು ಕಿಚಾಯಿಸುತ್ತಾರೆ, ಬೆಳಿಗ್ಗಿನಿಂದ ಸಂಜೆಯವರೆಗೆ ಬಿಡುವಿಲ್ಲದ ಕೆಲಸ, ಸರಿಯಾದ ವೇಳೆಗೆ ಊಟ, ತಿಂಡಿ ಇಲ್ಲ, ಮುಂತಾದ ಸಮಸ್ಯೆಗಳು ಎದುರಾದವಾದರೂ ಅವುಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ಹುಡುಗಿಯರೂ ಸಹ ಧೈರ್ಯವಾಗಿ ಕಂಡಕ್ಟರ್ ಆಗಿ ಕೆಲಸ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಕಳೆದ 9 ವರ್ಷದಿಂದ ಎಸ್‌ವಿಟಿ ಬಸ್‌ನಲ್ಲಿ ಕೆಲಸ ಮಾಡುತ್ತಿರುವ ಪವಿತ್ರಾ, ತಮ್ಮ ಬಸ್ ಮಾಲಕರ ಸಹಕಾರವನ್ನು ಸದಾ ಸ್ಮರಿಸುತ್ತಾರೆ. ಆರಂಭದಲ್ಲಿ ಕೆಲವು ಕಾಲ ತೊಂದರೆ ಎದುರಿಸಿದರೂ ಬರಬರುತ್ತ ಎಲ್ಲರ ಪರಿಚಯವಾಗತೊಡಗಿತು. ಉತ್ತಮ ಸಹಕಾರ ಕೊಡುತ್ತಾರೆ. ಅಕ್ಕ ಎಂದು ಕಿರಿಯರು ಕರೆಯುತ್ತಾರೆ. ಯಾರೂ ಈವರೆಗೆ ತನಗೆ ತೊಂದರೆ ಕೊಟ್ಟಿಲ್ಲ. ತಾನು ಸಹ ಎಲ್ಲರನ್ನೂ ವಿಶ್ವಾಸ, ಗೌರವದಿಂದ ಕಾಣುತ್ತಿದ್ದೇನೆ. ಹಿರಿಯರಿಗೆ ವಿಶೇಷ ಗೌರವ ಕಡುವ ಮುಲಕ ಅವರ ವಿಶ್ವಾಸ ಗಳಿಸಿದ್ದೇನೆ ಎಂದು ಹೇಳುತ್ತಾರೆ.
ಕೆಲಸದಲ್ಲಿ ಸಮಸ್ಯೆ, ತೊಂದರೆ -ತೊಡಕು ಇದ್ದೇ ಇರುತ್ತದೆ. ಆದರೆ ಅವುಗಳನ್ನು ಧೈರ್ಯದಿಂದ ಎದುರಿಸಬೇಕೇ ವಿನಾ ಹೆದರಬಾರದು. ಇಂದಿನ ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಕಂಡಕ್ಟರ್ ಆಗಲು ಮುಂದೆ ಬರಬೇಕು ಎನ್ನುವ ಪವಿತ್ರಾ, ಎಲ್ಲ ಬಸ್‌ನ ಚಾಲಕ-ನಿರ್ವಾಹಕರು ತನಗೆ ಗೌರವ ಕೊಡುತ್ತಾರೆ. ಯಾರೂ ಕೆಟ್ಟದಾಗಿ ವರ್ತಿಸಿಲ್ಲ. ಸಹೋದರಿಯಂತೆ ಕಾಣುತ್ತಿದ್ದಾರೆ. 9 ವರ್ಷದ ಕೆಲಸ ತೃಪ್ತಿ ನೀಡಿದೆ ಎನ್ನುತ್ತಾರೆ.
ಇವರ ಸೇವೆಯನ್ನು ಕಂಡು ಶಾಶ್ವತಿ ಮಹಿಳಾ ವೇದಿಕೆಯವರು, ಸಹ್ಯಾದ್ರಿ ಕಲಾ ಕಾಲೇಜಿನವರು, ಜೂನಿಯರ್ ಚೇಂಬರ್ (ಜೇೀಸಿ), ಕನ್ನಡ ಪರ ಸಂಘಟನೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಭದ್ರಾವತಿ ಆಕಾಶವಾಣಿಯಲ್ಲೂ ಒಮ್ಮೆ ಇವರ ಸಂದರ್ಶನ ಪ್ರಸಾರವಾಗಿದೆ. ಶಿವಮೊಗ್ಗದ ಏಕೈಕ ಮಹಿಳಾ ಕಂಡಕ್ಟರ್ ಆಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಪವಿತ್ರಾ .
published on oct-30, 2015

No comments:

Post a Comment