Saturday 12 November 2016

 ಸದ್ದು ಮಾಡದೆ ಕಲಾಸೇವಾನಿರತ 
ರಾಜಲಕ್ಷ್ಮೀ  ಇಂದುಶೇಖರ್ 


ಪ್ರಕಟಿತ ದಿನಾಂಕ ಅಕ್ಟೋಬರ್ 3, 2015

 ಬೆಂಗಳೂರನ್ನು  ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಇರುವಷ್ಟು ನೃತ್ಯ, ಸಂಗೀತ ಮತ್ತಿತರ  ಕಲಾವಿದರು ಕರ್ನಾಟಕದ ಬೇರೆ ಯಾವ ಜಿಲ್ಲೆಯಲ್ಲೂ  ಇಲ್ಲ. ಸಾಂಸ್ಕೃತಿಕ ನಗರಿಯೆಂದೇ ಕರೆಯಲ್ಪಡುವ ಇಲ್ಲಿ ಎಲ್ಲ ಕಲಾಪ್ರಕಾರದ ಕಲಾವಿದರಿದ್ದಾರೆ; ಅನೇಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಖ್ಯಾತರಾಗಿದ್ದಾರೆ. ಮತ್ತೆ ಕೆಲವರು ವನಸುಮದಂತೆ ತಮ್ಮ ಪಾಡಿಗೆ ತಾವು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆ ಸದ್ದು ಮಾಡದೆ ಕಲಾಸೇವೆ ಮಾಡುತ್ತಿರುವ ಮಲೆನಾಡಿನ ಅಪ್ಪಟ ಪ್ರತಿಭೆ ರಾಜಲಕ್ಷ್ಮೀ  ಇಂದುಶೇಖರ್ ಅವರು. ಹೌದು, ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡು, ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಸುಧೆ ಊಡಿಸುತ್ತಿರುವ ರಾಜಲಕ್ಷ್ಮೀ ಇಂದುಶೇಖರ್ ನಗರದ ಹಿರಿಯ ಸಂಗೀತ ಕಲಾವಿದೆ. ವಿನೋಬನಗರದಲ್ಲಿರುವ ತಮ್ಮ ಮನೆಯಲ್ಲೇ ’ಶ್ರೀಮಾತಾ ಸಂಗೀತ ಸಭಾ’ ದ ಮೂಲಕ ಪ್ರತಿನಿತ್ಯ ವಿದ್ಯಾರ್ಥಿನಿಯರಿಗೆ ಸಂಗೀತದ ಧಾರೆ ಎರೆಯುತ್ತಿದ್ದಾರೆ.
ಮೂಲತಃ ಕೂಡ್ಲಿಯವರಾದ ರಾಜಲಕ್ಷ್ಮೀ ಅವರ ತಂದೆ ಶಿಕ್ಷಕರಾದ ಕಾರಣ ಶಿವಮೊಗ್ಗದಲ್ಲಿ ನೆಲೆನಿಂತಾಗ ಹಾಡುಗಾರಿಕೆಯ ನಂಟು ಬೆಳೆಯಿತು.  ದಾಸರ ಪದಗಳನ್ನು ಮೊದಲು ರಾಗಬದ್ಧವಾಗಿ ಕಲಿತದ್ದನ್ನು ಇಂದಿಗೂ ಅವರು ನೆನಪಿಸುತ್ತಾರೆ. ಹಾಡುಗಾರರೂ ಆಗಿದ್ದ ಅವರಿಗೆ ವಿದ್ವಾನ್ ಚಂದ್ರಶೇಖರ್  ಭಟ್ ಅವರು ಮೊದಲ ಗುರುಗಳು. ಅನಂತರ ಚಂದ್ರಶೇಖರ್ ಗುಪ್ತಾ ಅವರಲ್ಲಿ ಸಂಗೀತಾಭ್ಯಾಸ. ಶಾಲಾ- ಕಾಲೇಜು ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಾಡಿ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದ್ದು. ಇದರಿಂದ ಇನ್ನಷ್ಟು ಸ್ಫೂರ್ತಿಗೊಂಡು, ಹಾಡುಗಾರಿಕೆಯಲ್ಲೇ ಮುಂದುವರೆಯಲು ನಿರ್ಧರಿಸಿದರು.  ಕಾಲೇಜು ಶಿಕ್ಷಣ ಮುಗಿದ ನಂತರ ಪೂರ್ಣಪ್ರಮಾಣದಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲೇ ತಮ್ಮನ್ನು ತೊಡಗಿಸಿಕೊಂಡು, ಸುಮಾರು 8 ವರ್ಷ ವಿಕಾಸ ವಿದ್ಯಾಂಸ್ಥೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅನಂತರ ಹಾಡುಗಾರಿಕೆ ಅರಸಿ ಬರುವವರು ಅಧಿಕವಾದ್ದರಿಂದ ಅವರಿಗೆ ಸಂಗೀತ ಕಲಿಸಲು ಮುಂದಾದರು.
ಸುದೀರ್ಘ 30 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿನಿಯರಿಗೆ ಸಂಗೀತ ಧಾರೆ ಎರೆಯುತ್ತಿದ್ದಾರೆ. ಇವರ ಹಲವು ಶಿಷ್ಯೆಯರು ಈಗ ಆಕಾಶವಾಣಿ ಮತು ದೂರದರ್ಶನದಲ್ಲಿ ಕಲಾವಿದೆಯರಾಗಿ ಗುರುವಿನ ಹೆಸರನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಹಾಡುಗಾರಿಕೆ ಕಲಿಯಲು ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಗಮನಿಸಿ ಶಾಲೆ ತೆರೆದರು. ಈ ಶಾಲೆಗೆ ಈಗ 14ರ ಹರೆಯ. ತಮ್ಮ ಸಂಗೀತ ಶಾಲೆಯ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಪ್ರತಿ ವರ್ಷ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನೆರವೇರಿಸುವ ಇವರು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಖ್ಯಾತಿವೆತ್ತ ಸಂಗೀತಗಾರರನ್ನು ಕರೆಯಿಸಿ ನಿರಂತರವಾಗಿ ನಗರದ ಸಂಗೀತಾಸಕ್ತರಿಗೆ ಕಲೆಯ ರಸದೌತಣ ನೀಡುತ್ತಿದ್ದಾರೆ.
  ಚೆನ್ನೈನಲ್ಲಿರುವ ಸ್ಯಾಕ್ಸೊಫೋನ್ ವಾದಕ ವಿದ್ವಾನ್ ಕುಮಾರಸ್ವಾಮಿ, ಮ್ಯಾಂಡೊಲಿನ್ ವಾದಕ ವಿದ್ವಾನ್ ಪ್ರಸನ್ನ, ಮಂಗಳೂರಿನ ಸಿತಾರ್ ವಾದಕ ರಫಿಕ್ ಖಾನ್, ಬೆಂಗಳೂರಿನ ಡಾ. ಶ್ರೀಧರ್ ಮತ್ತು ಅನುರಾಧಾ ಶ್ರೀಧರ್ ಅವರ ಭರತನಾಟ್ಯ ಪ್ರದರ್ಶನ, ವಿದ್ಯಾಭೂಷಣರಿಂದ ಹಾಡುಗಾರಿಕೆ, 22 ಕಲಾವಿದರ ನಾದ ಲಹರಿ- ನಾದವೈಭವ-ಹೀಗೆ ಸುಮಾರು 20ಕ್ಕೂ ಹೆಚ್ಚು ಸ್ಮರಣೀಯ ಕಲಾವಿದರ ಪ್ರತಿಭೆಯನ್ನು ನಗರಕ್ಕೆ ಪರಿಚಯಿಸಿದ ಹಿರಿಮೆ ಇವರದ್ದು.
ಪ್ರತಿದಿನ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಂಗೀತ ಕಲಿಸುವ ಇವರು, ಮಧ್ಯಾಹ್ನ 3ರಿಂದ 4ರವರೆಗೆ ಮಹಿಳೆಯರಿಗೆ ದೇವರ ನಾಮ, ಸೌಂದರ್ಯ ಲಹರಿ ಕಲಿಸುತ್ತಾರೆ. 20 ರಿಂದ 70ರ ವಯಸ್ಸಿನ ಸುಮಾರು 35 ಮಹಿಳೆಯರು ಇಲ್ಲಿ ಸಂಗೀತ ಕಲಿಯಲು ಬರುತ್ತಾರೆ.  ಸಂಜೆ ವಿದ್ಯಾರ್ಥಿನಿಯರಿಗೆ ಹಾಡುಗಾರಿಕೆ ಹೇಳಿಕೊಡುತ್ತಿದ್ದಾರೆ. ಇದರ ಜೊತೆಗೆ ವಿದ್ಯಾಲಕ್ಷ್ಮೀ ಭಜನಾ ಮಂಡಳಿಯನ್ನು ಸ್ಥಾಪಿಸಿರುವ ಇವರು ಹಲವಾರು ಕಾಂರ್ಕ್ರಮಗಳಲ್ಲಿ  ತಮ್ಮ ತಂಡದ ಪ್ರತಿಭೆ ಮೆರೆಸಿದ್ದಾರೆ. ಪ್ರತಿ ಶನಿವಾರ ಶುಭಮಂಗಳ ಶನೈಶ್ಚರ ದೇವಾಲಯದಲ್ಲಿ ಇವರ ಭಜನಾ ಮಂಡಳಿಯವರು ಒಂದು ಗಂಟೆ ಕಾಲ ಭಜನಾ ಕಾರ್ಯಕ್ರಮ ನೀಡುತ್ತಾರೆ. ಪ್ರಚಾರದಿಂದ ದೂರವೇ ಉಳಿದಿರುವ ರಾಜಲಕ್ಷ್ಮೀ ಅವರು, ತನ್ನದೇನಿದ್ದರೂ ಸಂಗೀತ ಸೇವೆ. ಕಲೆಗೆ ತನ್ನಿಂದಾದ ಸೇವೆಯನ್ನು ಮಾಡುತ್ತೇನೆ. ಹಲವಾರು ಬಡ ವಿದ್ಯಾರ್ಥಿಯರಿಗೆ ಉಚಿತವಾಗಿ ಕಲಿಸುತ್ತಿದ್ದೇನೆ. ಪ್ರತಿಭೆಗೆ ನೀರೆರೆಯುವ ಕೆಲಸವನ್ನು ಸದಾ ಮಾಡುತ್ತೇನೆ ಎನ್ನುತ್ತಾರೆ ತೃಪ್ತ ಮನಸ್ಸಿನಿಂದ. ಇವರ ಎಲ್ಲ ಕೆಲಸಕ್ಕೆ ಪತಿ ಇಂದುಶೇಖರ್ ಬೆನ್ನೆಲುಬಾಗಿ ನಿಂತಿದ್ದಾರೆ. ಇವರೂ ಸಹ ಸಂಗೀತಾಸಕ್ತರಾಗಿದ್ದು, ಭಜನೆಗಳನ್ನು ಹಾಡುತ್ತಾರೆ.
.........................................

No comments:

Post a Comment