Monday 14 November 2016

ಅನಾಥ ಮಕ್ಕಳ ಪಾಲಿನ ’ಅಮ್ಮ
’ ಸಹನಾರಾವ್ 



ಅನಾಥರಿಗೆ, ನಿರ್ಗತಿಕರಿಗೆ ಬೇಕಾಗಿರುವುದು ಅನುಕಂಪವಲ್ಲ; ಪ್ರೀತಿಯ ಸಿಂಚನ - ಎಂದು ಬಲವಾಗಿ ನಂಬಿ, ಹಾಗೆಯೇ ಬದುಕಿ, ಸಾರ್ಥಕ ಜೀವನ ನಡೆಸುತ್ತಿರುವ ಅಪೂರ್ವ ಚೇತನ ಸಹನಾರಾವ್.  ನಿರ್ಗತಿಕ ಮಕ್ಕಳನ್ನು ಅನಾಥಾಶ್ರಮದಲ್ಲಿ ಸಾಕಿ ಸಲಹುತ್ತ, ಅದಕ್ಕೆ ಸಮಾಜಸೇವೆಯ ಲೇಪಹಚ್ಚಿ, ಪ್ರಚಾರಗಿಟ್ಟಿಸುವ ಲಾಭಕೋರರೇ ತುಂಬಿರುವ ಈ ಸಮಾಜದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಗೆ ಹಪಹಪಿಸದೆ, ಅನಾಥ ಮಕ್ಕಳಿಗೆ ’ಅಮ್ಮನ ಪ್ರೀತಿ’ಯ ಸುಧೆ ಉಣಿಸುತ್ತಿದ್ದಾರೆ. ಇಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗೆಲ್ಲ ಸಹನಾರಾವ್ ಅವರೇ ಪ್ರೀತಿಯ ಒಡಲು; ಮಮತೆಯ ಕಡಲು. ನಿಜಕ್ಕೂ ಈ ಅನಾಥಾಲಯಕ್ಕೆ ’ಮಾತೃಛಾಯಾ’ ಎನ್ನುವ ಹೆಸರು ಸಾರ್ಥಕ; ಅನ್ವರ್ಥಕ!
  ಗೋಪಾಳದಲ್ಲಿರುವ ಈ ’ಮಾತೃಛಾಯಾ’ ಅನಾಥಾಶ್ರಮ 18 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಆರಂಭದಲ್ಲೇ  40 ಅನಾಥ ಮಕ್ಕಳಿಗೆ ಇದು ’ಅಮ್ಮನ ಮನೆ’ ಆದದ್ದು ಉಲ್ಲೇಖನೀಯ.  ಸುಮಾರು 18 ಜನ ಮಕ್ಕಳಿರುವ ಈ ಅನಾಥಾಲಯ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗೀಕಾರಗೊಂಡಿದೆ. 5ರಿಂದ 18ರ ವಯೋಮಾನದವರಿಗೆ ಮಾತ್ರ ಇಲ್ಲಿ ಅವಕಾಶವಿದೆ. ಇಲಾಖೆಯವರೇ ಇಲ್ಲಿಗೆ ಮಕ್ಕಳನ್ನು ಕಳುಹಿಸುತ್ತಾರೆ.  ಈ ಅನಾಥಾಲಯದ ಮೇಲ್ವಿಚಾರಣೆಗೆಂದು ಸಮಿತಿಯೊಂದನ್ನು ರಚಿಸಲಾಗಿದ್ದು, 9 ನಿರ್ದೇಶಕರನ್ನು ಇದು ಒಳಗೊಂಡಿದೆ.
ಇಲ್ಲಿಯ ಮಕ್ಕಳು ನಗರದ ವಿವಿಧ ಶಾಲೆಗಳಲ್ಲಿ  ಶಿಕ್ಷಣ ಪಡೆಯುತ್ತಿದ್ದಾರೆೆ. ಕೆಲವೆಡೆ ಉಚಿತ ಶಿಕ್ಷಣ ಲಭ್ಯವಿದ್ದರೆ,  ಇನ್ನೂ ಕೆಲವೆಡೆ, ನಿರ್ದಿಷ್ಟ ಶುಲ್ಕವನ್ನು ಅನಾಥಾಲಯವೇ ಭರಿಸುತ್ತಿದೆ. ಎಷ್ಟೇ ಕಷ್ಟ ಎದುರಾದರೂ ಈ ಆಶ್ರಮದ ಮುಖ್ಯಸ್ಥೆಯಾಗಿರುವ ಸಹನಾರಾವ್ ಅವರೇ ಸ್ವತಃ ಮುಂದೆ ನಿಂತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಅನಾಥಾಲಯದಲ್ಲಿ ಜತನದಿಂದ ನೋಡಿಕೊಳ್ಳುವ ಅವರು, ಇಲ್ಲಿ ಸಿಸಿ ಕ್ಯಾಮರಾ ಕೂಡ ಹಾಕಿಸಿದ್ದಾರೆ. ಇಷ್ಟೂ ಸಾಲದೆಂಬಂತೆ ದಿನಕ್ಕೆ 6-8 ಬಾರಿ ಭೇಟಿ ನೀಡುತ್ತಾರೆ. ಆದಿಚುಂಚನಗಿರಿ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿ ತಮ್ಮ ವಿದ್ಯಾಸಂಸ್ಥೆಗೆ ಇಲ್ಲಿನ ಹಲವು ಮಕ್ಕಳನ್ನು ಸೇರಿಸಿಕೊಂಡು ಉಚಿತ ಶಿಕ್ಷಣ, ಸಮವಸ್ತ್ರ ನೀಡಿ ಶಿಕ್ಷಣ ನೀಡುತ್ತಿರುವುದನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಇಲ್ಲಿಯ ಕೆಲವು ಮಕ್ಕಳು ಸರಕಾರಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾರೆ. ವಿಶೇಷವೆಂದರೆ, ಇಲ್ಲಿ ಮಕ್ಕಳೇ ಅಡುಗೆ ಮಾಡಿಕೊಂಡು ತಮ್ಮೆಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ಸ್ವಂತ ಮಕ್ಕಳಂತೆ ಈ ಅನಾಥ ಮಕ್ಕಳನ್ನು ಕಾಣುವ ಸಹನಾ ಅವರು, ತಮ್ಮ ದಿನದ ಬಹುತೇಕ ಸಮಯವನ್ನು ಅಲ್ಲಿಯ ಮಕ್ಕಳೊಂದಿಗೇ ಕಳೆಯುತ್ತಾರೆ. ಇವರ ಪತಿ ಜಗದೀಶರಾವ್  ಮತ್ತು ಮಕ್ಕಳೂ ಸಹ ಇದಕ್ಕೆ ನೆರವಾಗುತ್ತಿದ್ದಾರೆ. ಹಲವು ದಾನಿಗಳು ಮಕ್ಕಳಿಗೆ ವಿಶೇಷ ದಿನದಂದು ಊಟ, ತಿಂಡಿಯ ನೆರವನ್ನು ನೀಡುತ್ತಾರೆ. ಇನ್ನೂ ಹಲವರು ಜನ್ಮದಿನದ ನೆನಪಿಗಾಗಿ ಒಂದು ದಿನದ ಖರ್ಚನ್ನು (ಒಂದು ಸಾವಿರ ರೂ.) ನೀಡಿ ಮಕ್ಕಳಿಗೆ ನೆರವಾಗುತ್ತಿದ್ದಾರೆ.  
 ಹಲವಾರು ಜಿಲ್ಲಾ ಮಟ್ಟದ ಅಧಿಕಾರಿಗಳು ಇಲ್ಲಿನ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಂತ ಅಪ್ಪ- ಅಮ್ಮ ಇಲ್ಲದಿದ್ದರೂ ಅವರನ್ನು ಮಕ್ಕಳು ಸಹನಾ ಅವರಲ್ಲಿ ಕಾಣುತ್ತಿದ್ದಾರೆ. ಮಕ್ಕಳು ತಮ್ಮ ತಾಯಿಯ ನೆರಳನ್ನು ಇಲ್ಲಿ ಕಾಣುತ್ತಿರುವುದರಿಂದ ಮಾತೃಛಾಯಾ ಎಂಬ ಹೆಸರನ್ನು ಇಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿನಿಗೆ ತಾವೇ ಮುಂದಾಗಿ ಉಚಿತ ನರ್ಸಿಂಗ್ ತರಬೇತಿ ಕೊಡಿಸಿ ಮದುವೆಯನ್ನೂ ಮಾಡಿಸಿದ್ದಾರೆ. ಜೊತೆಗೆ ಮಕ್ಕಳ ಆರೋಗ್ಯ ತಪಾಸಣೆಯನ್ನು ಡಾ. ಶ್ರೀನಿವಾಸರೆಡ್ಡಿ ಎನ್ನುವವರು ಉಚಿತವಾಗಿ ನಡೆಸಿಕೊಡುತ್ತ್ತಿದ್ದಾರೆ.
 ಸದ್ಯ ಬಾಡಿಗೆ ಕಟ್ಟಡದಲ್ಲಿ ಇದು ನಡೆಯುತ್ತಿದ್ದು, ಗೋಪಾಲಗೌಡ ಬಡಾವಣೆಯ ನ್ಯಾಯಾಧೀಶರ ವಸತಿಗೃಹದ ಪಕ್ಕದಲ್ಲೇ ನಿವೇಶನ ಪಡೆದು ಸ್ವಂತ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಸಾರ್ವಜನಿಕರಿಂದ ಧನಸಹಾಯ ಪಡೆಯುತ್ತಿದ್ದಾರೆ. ದಾನಿಗಳು (9448857102 -ಸಹನಾರಾವ್) ಇಲ್ಲಿಗೆ ಸಂಪರ್ಕಿಸಿ ನೆರವು ನೀಡಬಹುದಾಗಿದೆ. ಇದಕ್ಕೆ ತೆರಿಗೆ ವಿನಾಯಿತಿ ಸಹ ಇದೆ.
published on-5-12-2015

.......................................

No comments:

Post a Comment