Monday 14 November 2016

ಸಮರಕಲಾ ಸಾಧಕಿ
ಸಬಾ ತಸ್ಕಿನ್


ಇತಿಹಾಸ ಕಾಲದಲ್ಲಿ ಸಮರಕಲೆ (ವುಶು) ಅಭ್ಯಾಸ ಮತ್ತು ಪ್ರದರ್ಶನ ಮಾಡುತ್ತಿದ್ದ ಬಗ್ಗೆ ಕೇಳಿದ್ದೇವೆ. ಆದರೆ ನಂತರದ ದಿನಗಳಲ್ಲಿ ಅದು ಕಣ್ಮರೆಯಾಗಿತ್ತು. ಮೂಲತಃ ಚೀನಾದ ಈ ಕಲೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಮತ್ತೆ ಮನೆಮಾತಾಗುತ್ತಿದೆ. ಶಿವಮೊಗ್ಗದಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಲವು ಯುವಕ-ಯುವತಿಯರು ಮುಂದಾಗಿದ್ದಾರೆ. ಅಷ್ಟೇ ಏಕೆ, ರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ತರುವ ಮೂಲಕ ಸಬಾ ತಸ್ಕಿನ್ ಎಂಬ ವಿದ್ಯಾರ್ಥಿನಿ ರಾಷ್ಟ್ರದಲ್ಲೇ ಶಿವಮೊಗ್ಗದ ಕೀರ್ತಿಯನ್ನು ಮೆರೆಸಿದ್ದಾರೆ.
ಸಬಾ ಗೋಪಿಶೆಟ್ಟಿಕೊಪ್ಪ ಬಡಾವಣೆ ವಾಸಿ ಶಬ್ಬೀರ್ ಅಹಮದ್ ಅವರ ಪುತ್ರಿ. ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೆಯ ತರಗತಿಯಲ್ಲಿ ಓದುತ್ತಿರುವ ಈಕೆ, ವುಶುವಿನಷ್ಟೇ ಓದಿನಲ್ಲೂ ಮುಂದೆ.  ತಂದೆ ಶಬ್ಬೀರ್ ಅಹಮದ್ ಜಿಲ್ಲಾ ವುಶು ಅಸೋಸಿಯೇಶನ್ ಅಧ್ಯಕ್ಷರಾಗಿ ಸಾವಿರಾರು ಮಕ್ಕಳಿಗೆ ಇದನ್ನು ಕಲಿಸಿದ್ದಾರೆ; ಕಲಿಸುತ್ತಿದ್ದಾರೆ. ತಂದೆಯಿಂದ ಬಳುವಳಿಯೆಂಬಂತೆ ಈಕೆಗೂ ಈ ಕಲೆ ಕರಗತವಾಗಿದೆ. ತಂದೆಯ ಪ್ರದರ್ಶನವನ್ನು ನೋಡಿಯೇ ಹೆಚ್ಚುಕಡಿಮೆ ಈಕೆಯೂ ಇದನ್ನು ಕಲಿತಿದ್ದಾಳೆ. ಇತ್ತೀಚಿನ ದಿನಗಳವರೆಗೆ ವುಶು ಕೆಲವೇ ಜನರಿಗೆ ಮಾತ್ರ ತಿಳಿದಿತ್ತು. ಯಾರೂ ಅದಕ್ಕೆ ಅಷ್ಟೊಂದು ಮಹತ್ವ ಕೊಟ್ಟಿರಲಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಪ್ರಸಿದ್ಧವಾಗಿರುವ ಈ ಕಲೆ ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಲಿಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ.
ಕಳೆದ ಆರು ವರ್ಷಗಳಿಂದ ತಂದೆಯ  ಮಾರ್ಗದರ್ಶನದಲ್ಲಿ ವುಶು ಕಲಿತ ಸಬಾ, ಶಿವಮೊಗ್ಗಕ್ಕೆ ಮೊತ್ತಮೊದಲ ಪದಕ ತಂದಿದ್ದಾಳೆ. ಜೊತೆಗೆ ಅಂತಾರಾಷ್ಟ್ರಿಯ ಚಾಂಪಿಯನ್‌ಶಿಪ್‌ಗೂ ಆಯ್ಕೆಯಾಗಿದ್ದಾಳೆ. ಸೌಮ್ಯ ಸ್ವಭಾವದ, ಅಷ್ಟೇ ಪ್ರತಿಭಾನ್ವಿತೆಯಾದ ಈಕೆ, ಈಗಾಗಲೇ 2010, 2012ರ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಳು. 2015ರಲ್ಲಿ ಕೇರಳದಲ್ಲಿ ನಡೆದ ನ್ಯಾಶನಲ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಈಕೆ, 2015ರ ಅಕ್ಟೋಬರ್‌ನಲ್ಲಿ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದ 14ನೆಯ  ಜೂನಿಯರ್ ರಾಷ್ಟ್ರಿಯ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾಳೆ.
ಇದಕ್ಕೂ ಮುನ್ನ ಬಾಗಲಕೋಟೆಯಲ್ಲಿ ಜರುಗಿದ ರಾಜ್ಯ ವುಶು ಚಾಂಪಿಯನ್‌ಶಿಪ್‌ನಲಿ ್ಲಎರಡು ಚಿನ್ನದ ಪದಕಗಳನ್ನು ಗೆದ್ದ ಹಿರಿಮೆ ಈಕೆಯದ್ದು.
ಪ್ರತಿನಿತ್ಯ ಒಂದು ಗಂಟೆ ತಾಳ್ಮೆಯಿಂದ ವುಶು ಅಭ್ಯಾಸ ಮಾಡುತ್ತಿದ್ದೇನೆ. ತಂದೆ ಶಬ್ಬೀರ್ ಮತ್ತು ಅಣ್ಣ ಮೊಹಮದ್ ಇಬ್ರಾಹಿಂ (ಈತ ಪಿಯು ವಿದ್ಯಾರ್ಥಿ)ಕಲಿಕೆಗೆ ನೆರವಾಗುತ್ತಿದ್ದಾರೆ. ವುಶು ಕಲಿಯಲು ಕಷ್ಟವೇನಲ್ಲ, ಆದರೆ ಸತತ ತರಬೇತಿ ಅಗತ್ಯ. ತೀರ ವಿರಳವಾದ ಈ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರತಿ ಶಾಲಾ, ಕಾಲೇಜುಗಳಲ್ಲಿ ಕರಾಟೆಯಂತೆ ಇದನ್ನು ಕಲಿಸುವ ವ್ಯವಸ್ಥೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಲ್ಲದೆ, ಏಕಾಗ್ರತೆಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು ಎಂದು ಹೇಳುವ ಈಕೆ,   ಮಹಿಳಾ ಹಾಸ್ಟೆಲ್ ಮತ್ತು  ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಲ್ಲಿ ಈ ವಿದ್ಯೆಯನ್ನು ಕಲಿಸಲು ನಿರ್ಧರಿಸಿದ್ದೇನೆ ಎನ್ನುತ್ತಾಳೆ.  
ವುಶು ರಾಷ್ಟ್ರೀಯ ಪ್ರಮುಖ ಕ್ರೀಡೆಯಾಗಿ ಪರಿಗಣಿತವಾಗಿದೆ. ಇದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಸಿಇಟಿಯಲ್ಲೂ ಚೆನ್ನಾಗಿ ಸ್ಕೋರ್ ಮಾಡಿದರೆ ಅಂತಹವರಿಗೆ ಕ್ರೀಡಾ ವಿಭಾಗದಿಂದ ಇಂಜಿ      ನಿಯರಿಂಗ್, ಮೆಡಿಕಲ್‌ಗೆ ಉಚಿತ ಸೀಟು ಸಿಗಲಿದೆ. ಸಬಾ ಎಂಬಿಬಿಎಸ್ ಮಾಡುವ ಮಹದಾಸೆ ಇಟ್ಟುಕೊಂಡಿದ್ದಾಳೆ. ಈಕೆಯ  ಸಾಧನೆ ಮತ್ತು ಮುಂದಿನ ವರ್ಷಗಳ ಸಾಧನೆ ಉಚಿತ ಸೀಟು ಗಿಟ್ಟಿಸಲು ನೆರವಾಗಲಿದೆ ಎನ್ನುವ ತಂದೆ ಶಬ್ಬೀರ್ ಮಗಳ ಉತ್ತಮ ಸಾಧನೆ ಬಗ್ಗೆ ಅಪಾರ ಹೆಮ್ಮೆಪಡುತ್ತಾರೆ. ಸಬಾ ಇನ್ನಷ್ಟು ಉಜ್ವಲ ಭವಿಷ್ಯವನ್ನು ಈ ಅಪರೂಪದ ವಿದ್ಯೆಯಲ್ಲಿ ಗಳಿಸಲಿ ಎಂಬ ಹಾರೈಕೆ ನಮ್ಮೆಲ್ಲರದು.
published on 14-11-2015
...................................

No comments:

Post a Comment