Saturday 12 November 2016

ಕಷ್ಟಕ್ಕೆ ಅಂಜದ ಛಲಗಾರ್ತಿ 
ಶಾರದಾ ಭಟ್


ಜೀವನದಲ್ಲಿ ಕಷ್ಟಗಳು ಬಂದಾಗ ಅದಕ್ಕೆ ಎದೆಗುಂದದೆ ಧೈರ್ಯದಿಂದ ಏನನ್ನಾದರೂ ಸಾಧನೆ ಮಾಡಿ ಆ ಮೂಲಕ ಬಡತನಕ್ಕೆ ಸವಾಲೊಡ್ಡಿ ನಿಲ್ಲುವವರು ವಿರಳ. ಬಡತನ ಬಂತೆಂದರೆ ಅದಕ್ಕೆ ಹೆದರುವವರೇ ಅಧಿಕ. ಅದರ ವಿರುದ್ದ ಸೆಟೆದು ನಿಲ್ಲುವವರು ತೀರಾ ವಿರಳ. ಆದರೆ ಇಲ್ಲೊಬ್ಬ ಧೀರ ಮಹಿಳೆ  ಚಹಾ ಮಾರುವ ಮೂಲಕ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸವನ್ನೂ ಮಾಡಿಸುತ್ತ ಗೌರವಯುತ ಮತ್ತು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.  
ಇಲ್ಲಿನ ವಿನೋಬನಗರದ ಭಗವತಿ ಶಾಲೆಯ ಬಳಿ ವಾಸವಾಗಿರುವ ಶಾರದಾ ಭಟ್ ಎನ್ನುವವರೇ  ಸ್ವಂತ ದುಡಿಮೆ ಮೂಲಕ ಬದುಕನ್ನು ಕಟ್ಟಿಕೊಂಡವರು. ತೀರಾ ಬಡತನದ ಇವರ ಕುಟುಂಬದ ಜೀವನಾಧಾರಕ್ಕೆ ಏನೂ ಇಲ್ಲದ ಸ್ಥಿತಿಯಲ್ಲಿ ಇವರು ಕಂಡುಕೊಂಡ ದಾರಿ ಇದು. ಇಂದು ಇವರು ದಿನಕ್ಕೆ 7ರಿಂದ  10 ಲೀಟರ್‌ನಷ್ಟು ಹಾಲಿನಿಂದ ಚಹಾ ಮಾಡಿ ಶಿವಮೊಗ್ಗದ ಬಹುತೇಕ ಸರ್ಕಾರಿ ಮತ್ತು ಕೆಲವು ಖಾಸಗಿ ಕಚೇರಿಗಳಿಗೆ ವೇಳೆಗನುಗುಣವಾಗಿ  ಚಹಾ ಪೂರೈಸುತ್ತಿದ್ದಾರೆ. ಈ ಹಿಂದೆ  ಗಾಂಧಿಬಜಾರ್ ಮತ್ತು ಕೆಲವು ಕಾರ್ಖಾನೆಗಳಿಗೆ ಮಜ್ಜಿಗೆ ಪೂರೈಸುತ್ತಿದ್ದ ಇವರು, ಚಹಾಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಅರಿತು ಅದರ ತಯಾರಿಕೆ ಮೂಲಕ ಈಗ ಬದುಕು ಸಾಗಿಸುತ್ತಿದ್ದಾರೆ.
ಚಹಾ ತಯಾರಿಸಿ, ಮಾರಾಟ ಮಾಡಿ ಗ್ರಾಹಕರಿಂದ ಹಣ ಪಡೆಯುವುದು ಸುಲಭದ ಕೆಲಸವಲ್ಲ. ಇದನ್ನು ಕಂಡ ಕೆಲವು ಮಹಿಳೆಯರು ಇವರನ್ನು ವ್ಯಂಗ್ಯ ಮಾಡಿದ್ದ್ದೂ ಇದೆ. ಆದರೆ ಅವರ ದಿಟ್ಟ ನಿರ್ಧಾರ ಇದು. ನನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೋ ಅದಕ್ಕೆ ಮಾರ್ಗವನ್ನು ನಾನು ರೂಪಿಸಿಕೊಳ್ಳುತ್ತಿದ್ದೇನೆ. ನಾನು ಚಹ ಮಾರಿದರೆ ನಿಮಗೇನು ನಷ್ಟ, ಅಥವಾ ಅವಮಾನವೇ. ನನ್ನ ಜೀವನ ನಿರ್ವಹಣೆಗೆ ಇದು ದಾರಿ ಮಾಡಿಕೊಟ್ಟಿದೆ ಎಂದು ಹೇಳುವ ಮೂಲಕ  ಅವರ ಬಾಯ್ಮುಚ್ಚಿಸುತ್ತಾರೆ. ಹೀಗೆ ಎಲ್ಲ ರೀತಿಯ  ಕಷ್ಟಗಳನ್ನುಂಡ ಅವರು ಈಗ ‘ಈಸಬೇಕು ಇದ್ದು ಜೈಸಬೇಕು. ಕಷ್ಟಕ್ಕೆ ಹೆದರಿ ಓಡಿಹೋಗಬಾರದು. ಸತ್ತರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಜೀವನ ಮುಗಿಯದು. ಇದ್ದು ಸಾಧಿಸಿ ತೋರಿಸಬೇಕೆನ್ನುವ ಛಲ ತೊಡಬೇಕು’ ಎನ್ನುತ್ತಾರೆ. ಅದೇ ರೀತಿ ತಮ್ಮ ಕಾಯಕ ಮುಂದುವರೆಸಿದ್ದಾರೆ.
ಇಬ್ಬರು ಮಕ್ಕಳಲ್ಲಿ ಹಿರಿಯವನಾದ ಮಗ 8ನೆಯ ತರಗತಿಯಲ್ಲಿ, ಮಗಳು 6ನೆಯ ತರಗತಿಯಲ್ಲಿ   ಓದುತ್ತಿದ್ದಾಳೆ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂಬ ಹಂಬಲ ಇವರದ್ದು. ಇದಕ್ಕಾಗಿ ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಇವರ ಪತಿ ರಾಘವೇಂದ್ರ ಭಟ್ ಶುಭಮಂಗಳ ಕಲ್ಯಾಣಮಂಟಪದ ಶನೈಶ್ಚರ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಬೆಳಗಿನ ಉಪಹಾರವನ್ನು ಒದಗಿರುವ ಮೊಬೈಲ್ ವಾಹನವನ್ನು ಖರೀದಿಸಿ ಅವಶ್ಯವಿರುವವರಿಗೆ ಪೂರೈಸುವ ಗುರಿಯನ್ನು ಶಾರದಾ ಭಟ್ ಹೊಂದಿದ್ದಾರೆ. ಮಳೆ, ಗಾಳಿ, ಚಲಿ ಎನ್ನದೆ ತಮ್ಮ ಸ್ಕೂಟಿಯಲ್ಲಿ ಬೆಳಿಗ್ಗೆಯೇ ಚಹಾ ಮಾಡಿಕೊಂಡು ಫ್ಲಾಸ್ಕ್‌ನಲ್ಲಿ ತೆಗೆದುಕೊಂಡು ಕಚೇರಿಗಳಿಗೆ ಧಾವಿಸುತ್ತಾರೆ. ಈಗ ಅವರಿಗೆ ಚಹಾ ಕುಡಿಯುುವ ಖಾಯಂ ಗ್ರಾಹಕರಿದ್ದಾರೆ. ಹಾಗಾಗಿ ಸ್ವಲ್ಪ ನಿರಾಳರಾಗಿದ್ದಾರೆ. ಜೊತೆಗೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಬೇಡಿಕೆ ಬಂದರೂ ಸಹ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಬಡತನ ಎನ್ನುುತ್ತಾ ಕಂಡವರಲ್ಲಿ ಬೇಡುವ ಪ್ರವೃತ್ತಿಯನ್ನು ಇವರು ಬೆಳೆಸಿಕೊಂಡಿಲ್ಲ. ಗೌರವಯುತವಾಗಿ ಚಹಾ ಪೂರೈಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.  ಇದರಿಂದಾಗಿ ತೃಪ್ತಿ ಇದೆ. ಆದ್ದರಿಂದ, ಟೀಕೆ ವ್ಯಂಗ್ಯ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಾನಾಯಿತು, ತನ್ನ  ದುಡಿಮೆಯಾಯಿತು. ಮಗನನ್ನು ವೇದಾಗಮ ಪಂಡಿತನನ್ನಾಗಿ ಮಾಡುವ ಇಚ್ಛೆ ಇವರದ್ದು. ಅದಕ್ಕಾಗಿ ಶೃಂಗೇರಿಯಯಲ್ಲಿ  ಈತನಿಗೆ ಮುಂದೆನ  ಶಿಕ್ಷಣ ಕೊಡಿಸಲು ತೀರ್ಮಾನಿಸಿದ್ದಾರೆ. ಮಗಳಿಗೆ ಐಎಎಸ್ ಮಾಡಿಸುವ ಬಯಕೆ ಹೊಂದಿದ್ದಾರೆ. ತನಗಂತೂ ಓದುವ ಭಾಗ್ಯ ಸಿಗಲಿಲ್ಲ್ಲ. ಬುದ್ದಿವಂತೆಯಾಗಿರುವ ಮತ್ತು ಭರತನಾಟ್ಯ ಕಲಿಯುತ್ತಿರುವ ಮಗಳಾದರೂ ಅವಳ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲಿ. ಅದಕ್ಕೆ ಎಲ್ಲಾ ರೀತಿಯ ಸಹಾಯ ಮಾಡುತ್ತೇನೆ ಎನ್ನುತ್ತಾರೆ ಶಾರದಾ ಭಟ್.
published on sep19, 2015
..............................................

No comments:

Post a Comment