Friday 11 November 2016

ಬಹುಮುಖೀ ಪ್ರತಿಭೆಯ ಶಿಕ್ಷಕನಿಗೆ 
ರಾಷ್ಟ್ರಪ್ರಶಸ್ತಿಯ ಗೌರವ

ನಾವು ಮಾಡುವ ಕೆಲಸದಲ್ಲಿ ಖುಷಿಯನ್ನು ಕಂಡುಕೊಳ್ಳಬೇಕು, ಇಲ್ಲವಾದಲ್ಲಿ ಕಾರ್ಯಕ್ಷೇತ್ರದಲ್ಲಿ ಸಾಧನೆ ಕಷ್ಟ ಎನ್ನುವ ಮಾತಿದೆ. ಈ ಮಾತಿಗೆ ಬದ್ಧರಾಗಿ ಕೆಲಸ ಮಾಡಿ, ಸಾಧನೆ ಮಾಡಿದ ಶಿಕ್ಷಕ ಬಿ. ಗಣೇಶಪ್ಪ  ಈ ಬಾರಿಯ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಾಲೂಕಿನ ಬೇಡರಹೊಸಳ್ಳಿಯವರಾದ ಗಣೇಶಪ್ಪ, ಹಾಲಿ ನಗರಕ್ಕೆ ಹೊಂದಿಕೊಂಡಿರುವ ಹರಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ, ಪಾಲಕರ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಪ್ರೀತಿಪಾತ್ರ ಶಿಕ್ಷಕರಾಗಿರುವ ಇವರು,  ಕೆಲಸ ಮಾಡಿದ ಸ್ಥಳಗಳಲ್ಲೆಲ್ಲಾ ಇನ್ನೂ ಜನಮಾನಸರಾಗಿದ್ದಾರೆ. ಇವರ ಈ ಸಾಧನೆಯಿಂದಲೇ ಅವರಿಗೆ ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿಯೂ ಪ್ರದಾನವಾಗಿದೆ.
ತರಿಕೆರೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ. ಎ. ಪದವಿ ಪಡೆದ ಗಣೇಶಪ್ಪ, ನಂತರ ಟಿಸಿಎಚ್ ಮಾಡಿದವರು. ತಂದೆ ಭೀಮಪ್ಪ, ತಾಯಿ ಅನಸೂಯಮ್ಮ ಅವರು ತಮ್ಮ ಮಗ ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕನಾಗಬೇಕು. ಸಮಾಜದಲ್ಲಿ ಉತ್ತಮ ಶಿಕ್ಷಕನಾಗಿ ಹೆಸರು ಗಳಿಸಬೇಕೆಂಬ ಕನಸುಕಂಡಿದ್ದರು. ಆ ಕನಸನ್ನು ಗಣೇಶಪ್ಪ ಈಗ ನನಸಾಗಿಸಿದ್ದಾರೆ. ಇವರ ಪತ್ನಿ ಜಯಶ್ರೀ ಸಹ ತಾಲೂಕಿನ ಕುಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಈ ಶಿಕ್ಷಕ ದಂಪತಿಗಳ ಏಕಮಾತ್ರ ಪುತ್ರ ನಿತಿನ್ ಎಂಬಿಎ ಓದುತ್ತಿದ್ದಾನೆ.
ಕೇವಲ ಶಿಕ್ಷಕರಾಗಿ ಉಳಿಯದೆ, ಕ್ರೀಡೆ, ಸಾಹಿತ್ಯ ಮತ್ತು ನಾಟಕ ಕ್ಷೇತ್ರದಲ್ಲೂ ಇವರು ಸಾಕಷ್ಟು ಕೈಯಾಡಿಸಿದ್ದಾರೆ. ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಕಾರಂಜಿಯಲ್ಲಿ ಏನಾದರೊಂದು ಹೊಸತನದ ಕಲೆಯನ್ನು ಕಲಿಸಿ ಅವರು ವಿಜೇತರಾಗುವಂತೆ ಮಾಡುತ್ತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಎಲ್ಲ ಮಕ್ಕಳಿಗೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತಿದ್ದಾರೆ. ಮಕ್ಕಳನ್ನು ಕೇವಲ ವಿದ್ಯಾರ್ಥಿಗಳನ್ನಾಗಿ ಕಾಣದೆ, ಅವರವರ ಪ್ರತಿಭೆಯನ್ನು ಗುರುತಿಸಿ  ಅವರ ಬೆಳವಣಿಗೆಗೆ ಸಹಕರಿಸುತ್ತಿರುವ ಗಣೇಶಪ್ಪ,  ಸದಾ ಹೊಸತನಕ್ಕಾಗಿ ಕಾತರಿಸುವವರಾಗಿದ್ದಾರೆ. ಅವರು ಪಾಠ ಮಾಡುವುದೂ ಸಹ  ಇದೇ ರೀತಿಯದ್ದಾಗಿದೆ. ಕೇವಲ ಪಠ್ಯದಲ್ಲಿರುವನ್ನು ಕಲಿಸದೆ, ಅದಕ್ಕೆ ಸಂಬಂಧಿಸಿ ಹಿನ್ನೆಲೆಯನ್ನು ವಿವರಿಸಿ ಮಕ್ಕಳಲ್ಲಿ ಇನ್ನಷ್ಟು ಅರಿವು ಮೂಡಿಸುತ್ತ, ಹೆಚ್ಚಿನ ಜ್ಞಾನಾರ್ಜನೆಗೆ ಬೀಜಬಿತ್ತುತ್ತಿದ್ದಾರೆ.
ಶಿಕ್ಷಕರಾಗಿ ಸುದೀರ್ಘ 34 ವರ್ಷಗಳಿಂದ ಸೇವೆ ಸಲ್ಲಿಯಲ್ಲಿರುವ ಇವರು, ಸಾಗರ ತಾಲೂಕಿನ ತುಮರಿ, ಕುದರೂರು, ತಾಳಗುಪ್ಪ, ಹುಣಸೂರು, ಚನ್ನಗಿರಿ ತಾಲೂಕಿನ ಭೈರನಹಳ್ಳಿ, ಶಿವಮೊಗ್ಗ ತಾಲೂಕಿನ ಚೋರಡಿ, ಹುಬ್ಬನಹಳ್ಳಿ, ಆಯನೂರು, ಮತ್ತೂರಿನಲ್ಲಿ ಈವರೆಗೆ ಕೆಲಸ ಮಾಡಿದ್ದಾರೆ. ತಾವು ಕೆಲಸ ಮಾಡಿದಲ್ಲೆಲ್ಲ ಶಾಲೆಗೆ ಉತ್ತಮ ಹೆಸರು ಬರುವಂತೆ ಮತ್ತು ಶಾಲೆಯು ಸುಂದರವಾಗಿರುವಂತೆ, ಉತ್ತಮ ಪರಿಸರದಿಂದ ಕೂಡಿರುವಂತೆ ಮಾಡಿದ್ದಾರೆ. ಸರ್ವಶಿಕ್ಷಣ ಅಭಿಯಾನದಡಿ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಕಷ್ಟು ಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಆಟದ ಮೈದಾನ, ಹೂದೋಟ, ಶೌಚಾಲಯ ಮೊದಲಾದವನ್ನು ನಿರ್ಮಿಸಿಕೊಟ್ಟಿದ್ದಾರೆ. ಇವೆಲ್ಲವುಗಳ ಜೊತೆಗೆ ಶಾಲೆಯ ವಾತಾವರಣವನ್ನು ಸೃಷ್ಟಿಸಿರುವುದು ವಿಶೇಷ . ಇಂತಹ ಶಿಕ್ಷಕರಿರುವುದರಿಂದಲೇ ನಮ್ಮೂರ ಶಾಲೆ ಚೆಂದದ ಶಾಲೆ ಎಂದು ಹೆಸರಾಗಿದೆ.
 2003-04 ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ರಾಜ್ಯ ಪ್ರಶಸ್ತಿ, 2012-13ರಲ್ಲಿ ಅಂತಾರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಇವರಿಗೆ ದಕ್ಕಿದೆ. ಭಾರತ ಸೇವಾದಳಲ್ಲಿಯೂ ಇವರು ತಾಲೂಕು ಕಾರ್ಯದರ್ಶಿಯಾಗಿ ಎರಡು ಅವಧಿ ಕೆಲಸ ಮಾಡಿದ್ದಾರೆ. ಮತ್ತ್ತೂರು, ಹುಬ್ಬನಹಳ್ಳಿಯಲ್ಲಿರುವಾಗ ಆ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ ಬರಲು ಕಾರಣಕರ್ತರಾಗಿದ್ದಾರೆ. ಶಿವಮೊಗ್ಗ ದಸರಾ 2014-15ರಲ್ಲಿ, ಮತ್ತು ತಾಲೂಕು ಕಸಾಪ ಸಮ್ಮೇಳನದಲ್ಲಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ.  
ಶಿಕ್ಷಕನೆಂದರೆ ಬಲ್ಬ್ ಇದ್ದಂತೆ, ಆತ ಸಾಕಷ್ಟು ಬೆಳಕನ್ನು ಬೀರುತ್ತಾನೆ. ತನ್ನೆಲ್ಲಾ ಶ್ರಮವನ್ನು ಹಾಕಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾನೆ. ತನ್ನಿಂದ ಕಲಿತವರು ಉತ್ತಮ ಸಾಧನೆ ಮಾಡಿ ಹೆಸರಾಗಲಿ ಎಂದು ಹಾರೈಸುತ್ತಾನೆ. ಇದೇ ಮಾತನ್ನು ಗಣೇಶಪ್ಪ ಸಹ ಹೇಳುತ್ತಾರೆ. ಇಂದಿನ ಮಕ್ಕಳು ಬುದ್ಧಿವಂತರಿದ್ದಾರೆ. ಅವರಲ್ಲಿ ಪ್ರತಿಭೆ ಇದೆ. ಅದನ್ನು ಸದುಪಯೋಗ ಮಾಡಿಕೊಂಡು ಅವರು ಬೆಳೆಯಬೇಕು. ಶಾಲಾ ಹಂತದಲ್ಲೇ ಇದನ್ನು ಬೆಳೆಸಿಕೊಂಡು, ಉತ್ತಮ ಹವ್ಯಾಸಗಳನ್ನು ರೂಪಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಆತ ರೂಪುಗೊಳ್ಳುತ್ತನೆ ಎನ್ನುವುದು ಅವರ ಅಭಿಮತ.
ಪ್ರಕಟಿತ ದಿನಾಂಕ- 5.9.2015
           ,,,,,,,,,,,,,,,,,,,,,,,,,,,,,,,,,,,,,,,,,,,,

No comments:

Post a Comment