Monday 14 November 2016

ಗ್ರಾಮಾಭಿವೃದ್ಧಿ ತುಡಿತದ ಬ್ಯಾಂಕ್ ಅಧಿಕಾರಿ 
ಎನ್. ಟಿ. ಯರ‌್ರಿಸ್ವಾಮಿ


ಬ್ಯಾಂಕ್ ಅಧಿಕಾರಿಗಳೆಂದರೆ ಸಾಮಾನ್ಯವಾಗಿ ಜನರ ಬಳಿ ಹೋಗದಿರುವವರು, ಜನರ ಸಂಕಷ್ಟಕ್ಕೆ ಸ್ಪಂದಿಸದಿರುವವರು, ಸಾಮಾಜಿಕ ಚಿಂತನೆ ಇಲ್ಲದಿರುವವರು ಎಂದೇ ತಿಳಿಯಲಾಗುತ್ತಿದೆ. ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡು ತಾನೂ ಸಹ ಸಮಾಜಜೀವಿ, ಸಮಾಜದಿಂದ ಬೇರೆಯಲ್ಲ, ಸಮಾಜದೊಂದಿಗೆ ಸಮರಸವಾಗಿ ಬೆರೆಯಬೇಕೆನ್ನುವ ಮನೋಭಾವದ ಅಧಿಕಾರಿಗಳು ತೀರ ವಿರಳವೆಂದೇ ಹೇಳಬೇಕು. ಆದರೆ ಇದಕ್ಕೆ ಅಪವಾದವೆನ್ನುವಂತೆ ಸುಂದರವಾದ, ಸುಭದ್ರವಾದ, ಸಶಕ್ತವಾದ ಸಮಾಜವನ್ನು ತಾನು ತನ್ನ ಅಧಿಕಾರದ ಪರಿಧಿಯಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಪರಿಕಲ್ಪನೆ ಹೊತ್ತ, ಜನಸಾಮಾನ್ಯರಲ್ಲಿ ತಾನೂ ಒಬ್ಬ ಎಂದು ತಿಳಿದಿರುವ ಸರಳಾತಿಸರಳ ಬ್ಯಾಂಕ್ ಅಧಿಕಾರಿಯೊಬ್ಬರು ನಮ್ಮ ನಡುವೆ ಇದ್ದಾರೆ. ಅವರೇ ಎನ್. ಟಿ. ಯರ‌್ರಿಸ್ವಾಮಿ.
ಶಿವಮೊಗ್ಗದ ನೆಹರೂ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಿರಿಯ ಪ್ರಬಂಧಕರಾಗಿ ಸುಮಾರು ಒಂದು ವರ್ಷದಿಂದ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಜನರ ಸೇವೆ ಮತ್ತು ಗ್ರಾಮೀಣಾಭಿವೃದ್ಧಿಯೇ ಇವರ ತಾರಕಮಂತ್ರ. ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಹಲವಾರು ಕೃತಿಗಳನ್ನು ಬರೆದು, ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯವಲಯದಲ್ಲೂ ಚಿರಪರಿಚಿತರಾಗಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆ ಜಗಳೂರಿನ ಹಾಲೇಹಳ್ಳಿಯವರಾದ ಯರ‌್ರಿಸ್ವಾಮಿ, 36 ವರ್ಷಗಳಿಂದ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡಿದಲ್ಲೆಲ್ಲ ತನ್ನ ಸರಳ-ಸಜ್ಜನಿಕೆಯಿಂದ ಜನಮಾನಸದಲ್ಲಿ ಉಳಿದುಬಂದಿರುವುದು ನಿಜಕ್ಕೂ ವಿಶೇಷ. ಬ್ಯಾಂಕಿನ ಹಲವಾರು ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ (ರುಡ್‌ಸೆಟ್, ಆದರ್ಶ ಗ್ರಾಮ ಯೋಜನೆ, ಸ್ವಸಹಾಯ ಸಂಘ ರಚನೆ,  ಗ್ರಾಮೀಣ ಜನರಲ್ಲಿ ಬ್ಯಾಂಕಿಂಗ್ ಅರಿವು ಮೂಡಿಸುವುದು, ಉದ್ಯೊಗ ತರಬೇತಿ ನೀಡುವುದು, ಮಹಿಳಾ ಸಬಲೀಕರಣ ಇತ್ಯಾದಿ) ಹೆಚ್ಚಿನ ಸೇವೆಯನ್ನು ಕಳೆದಿದ್ದಾರೆ. ಬ್ಯಾಂಕಿನ  ಈ ಯೋಜನೆಗಳ ಮೂಲಕ ಸಾಕಷ್ಟು ಜನರಿಗೆ ಸ್ವಯಂ ಉದ್ಯೋಗಕ್ಕೆ ನೆರವಾಗಿದ್ದಾರೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಆ ಮೂಲಕ ಅವರು ಸ್ವಾವಲಂಬಿ ಜೀವನ ನಡೆಸುವಲ್ಲಿ ನೆರವಾಗಿದ್ದಾರೆ.
ಬ್ಯಾಂಕಿನ ತಮ್ಮ ಕಚೇರಿಯಲ್ಲೂ ಸಹ ಗ್ರಾಹಕರೊಂದಿಗೆ ಅಂತಸ್ತು ನೋಡದೆ ಮುಕ್ತವಾಗಿ ವ್ಯವಹರಿಸುತ್ತಾರೆ. ಬಿಡುವಿಲ್ಲದ ಕೆಲಸದ ನಡುವೆಯೂ ನಗುಮೊಗದಿಂದಲೇ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾರೆ. ಸಿಟ್ಟು. ಅಸಹನೆಯಿಂದ ಗಾವುದ ದೂರವಿರುವ ಇವರು ಗ್ರಾಹಕರೊಂದಿಗೆ ವಿಶ್ವಾಸ ಕಾಪಾಡಿಕೊಂಡಿದ್ದಾರೆ. ತಾವು ಮಾಡಿದ ಕೆಲಸದ ಕುರಿತು, ತಮ್ಮ ಸಾಧನೆಯ ಕುರಿತು ಎಂದೂ ಹೇಳಿಕೊಂಡವರಲ್ಲ. ಹೀಗಾಗಿಯೇ  ಎಲೆಮರೆಯ  ಕಾಯಿಯಂತೆ ಕಾರ್ಯತತ್ಪರರಾಗಿದ್ದಾರೆ.  "ಸೇವೆಗಾಗಿ ಬದುಕನ್ನು ಮುಡಿಪಾಗಿಡಬೇಕು. ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ಕರ್ಮಶುದ್ಧಿ. ಕರ್ತವ್ಯವೇ ಪೂಜೆ, ಸಂತೃಪ್ತಿಯೇ ಪ್ರಸಾದ ಎಂದು ಅರಿತು ಕೆಲಸ ಮಾಡಬೇಕು. ಮನವಚನ ಕಾಯದಲಿ ಶುದ್ಧಿಯೊಂದಿರೆ ಸಾಕು, ತನಗೆ ತಾನೇ ಬರಲಿಹುದು ಸಿದ್ಧಿ" ಎನ್ನುತ್ತಾರೆ ಅವರು.
ಕಾಯಕಯೋಗಿಯಾದ ಯರ‌್ರಿಸ್ವಾಮಿಯವರ ಬ್ಯಾಂಕಿಂಗ್ ಸೇವೆ ಎಷ್ಟು ಅನುಪಮವೋ,  ಸಾಹಿತ್ಯ ಸೇವೆ ಕೂಡ ಅಷ್ಟೇ ಅಮೋಘವಾದುದು. ಕನ್ನಡದಲ್ಲಿ 14 ಕೃತಿಗಳಲ್ಲಿನ್ನು ಈಗಾಗಲೇ ರಚಿಸಿದ್ದಾರೆ. ಇದರಲ್ಲಿ ಕಥೆ, ಕವನ, ಕಾದಂಬರಿಗಳು  ಸೇರಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಕುರಿತಾಗಿಯೇ 6 ಕೃತಿಗಳನ್ನು ರಚಿಸಿದ ಹಿರಿಮೆ ಇವರದ್ದು.
ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ದಾವಣಗೆರೆ ಜಿಲ್ಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೆನರಾ ಬ್ಯಾಂಕ್ ಮಾಸಿಕ ಶ್ರೇಯಸ್ ನೀಡುವ ಬ್ಯಾಂಕರ್ ಪ್ರಶಸ್ತಿ-1998, ಬೆಂಗಳೂರಿನ ಗೊರೂರು ಸಾಹಿತ್ಯ ಪ್ರಶಸ್ತಿ  ಮೊದಲಾದವು ಇವರ ಸಾಧನಿಗೆ ಸಂದ ಗೌರವದ ಗರಿಗಳು.
ಪ್ರಸ್ತುತ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಹಿತ್ಯದ ಕಂಪನ್ನು ಇಲ್ಲಿಯೂ ಪಸರಿಸುತ್ತಿದ್ದಾರೆ.   published on nov 7, 2015

...............................................
  

No comments:

Post a Comment