Friday, 11 November 2016




ಭಾರದ್ವಾಜ್ ಮಲೆನಾಡಿನ ಅಪ್ಪಟ ಪ್ರತಿಭೆ 
ಸಹನಾ ಭಾರದ್ವಾಜ್ 


 ನೃತ್ಯ, ಸಾಹಿತ್ಯ, ಸಂಗಿತ, ಶೈಕ್ಷಣಿಕ ಮುಂತಾದ ಹಲವಾರು ಪ್ರಾಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಶ್ರದ್ಧೆ , ಆಸಕ್ತಿಯಿಂದ ಅಭ್ಯಾಸ ಮಾಡುತ್ತಿರುವ ಕುಮಾರಿ ಸಹನಾ ಎಸ್. ಭಾರದ್ವಾಜ್ ಮಲೆನಾಡಿನ ಅಪ್ಪಟ ಪ್ರತಿಭೆ.
ಇತ್ತೀಚೆಗೆ  ಭುವನೇಶ್ವರದಲ್ಲಿ ನಡೆದ ಬಿಎಸ್‌ಎನ್‌ಎಲ್ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂರನೆಯ ಸ್ಥಾನವನ್ನು ಗಳಿಸುವ ಮೂಲಕ ಶಿವಮೊಗ್ಗಕ್ಕೆ ಕೀರ್ತಿ ತಂದಿರುವ ಈಕೆ, ಏಳನೆಯ ವಯಸ್ಸಿನಲ್ಲಿ ಶಿವಮೊಗ್ಗದ ವಿದುಷಿ ಪುಷ್ಪಾ ಕೃಷ್ಣಮೂರ್ತಿ ಅವರಲ್ಲಿ  ಶಾಸ್ತ್ರೀಯ ಭರತನಾಟ್ಯ ಕಲಿಕೆ ಆರಂಭಿಸಿ, ಜ್ಯೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ. ಈಗ ವಿದ್ವತ್ ಮಾಡುತ್ತಿದ್ದು, ರಂಗಪ್ರವೇಶವನ್ನೂ 2013ರಲ್ಲೇ ಮಾಡಿದ್ದಾಳೆ. ಈಕೆಯದು ಬಹುಮುಖ ಪ್ರತಿಭೆ. ತನ್ನ ತಾಯಿ ರಮಾ ಸುಬ್ರಹ್ಮಣ್ಯ ಅವರ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಆರಂಭಿಸಿ,  ಜ್ಯೂನಿಯರ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ. ಶಿವಮೊಗ್ಗದ ಹಿಂದುಸ್ತಾನಿ ಸಂಗೀತದ ಹಿರಿಯ ಗುರು ಉಸ್ತಾದ್ ಹುಮಾಯೂನ್ ಹರ್ಲಾಪುರ ಅವರಲ್ಲಿ ಹಿಂದೂಸ್ತಾನಿ ಸಂಗೀತ ಕಲಿಕೆ ಆರಂಭಿಸಿ ಅಲ್ಲಿಯೂ ಜ್ಯೂನಿಯರ್, ಸೀನಿಯರ್ ಪಾಸು ಮಾಡಿದ್ದಾಳೆ. ನಗರದವರೇ ಆದ ಶುಭಾ ಅವರಲ್ಲಿ ವೀಣೆಯನ್ನೂ ಕಲಿಯುತ್ತಿದ್ದಾಳೆ. ರಂಗೋಲಿ, ಚಿತ್ರಕಲೆ ಮತ್ತು ಆ್ಯಂಕರಿಂಗ್‌ನಲ್ಲೂ ಅತೀವ ಆಸಕ್ತಿ. ಈಗಾಗಲೇ ತನ್ನ ಸಹೋದರಿ ಮಾನಸಾ ಅವರೊಂದಿಗೆ ಸೇರಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ರಾಜ್ಯದ ಹಲವೆಡೆ ನೀಡಿದ್ದಾಳೆ.
ಈ ಟಿವಿಯಲ್ಲಿ ಜನಪ್ರಿಯವಾದ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಸೆಮಿಫೈನಲ್‌ವರೆಗೆ ಭಾಗವಹಿಸಿದ್ದಳು. ಇದರ ನಿರೂಪಕ, ಹಾಡುಗಾರ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಪ್ರಶಂಸೆಗೊಳಗಾಗಿದ್ದಾರೆ.  ಚಂದನ ಚಾನೆಲ್‌ನ ‘ಮಧುರ ಮಧುರವೀ ಮಂಜುಳಗಾನ’ ಹಾಗೂ ‘ಚಂದನೋತ್ಸವ’ದಲ್ಲಿ, ಜಿ ಕನ್ನಡದ ‘ಸರಿಗಮಪ’ ಕಾರ್ಯಕ್ರಮದಲ್ಲೂ ಹಾಡಿದ್ದಾಳೆ. ಸುವರ್ಣಾ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ  ‘ಸಿಂಧೂರ’ ಧಾರಾವಾಹಿಯ ಶೀರ್ಷಿಕೆ ಗೀತೆಯ ಟ್ರ್ಯಾಕ್ ಹಾಡಿದ್ದಾಳೆ. ಓದಿನಲ್ಲೂ ಪ್ರತಿಭಾನ್ವಿತೆಯಾದ ಈಕೆ, ಕಮಲಾ ನೆಹರೂ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾಳೆ. ಈ ಕಲಿಕೆಯ ವೇಳೆಯಲ್ಲೂ ಕಾಲೇಜು ಹಂತದ ಬಹುತೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾಳೆ. ಸದ್ಯ ಎಂಕಾಂ ಅಧ್ಯಯನ ಮಾಡುತ್ತಿರುವ ಈಕೆಯ ಪ್ರತಿಭೆಯನ್ನು ಪಸರಿಸಲು ತಂದೆ, ಬಿಎಸ್ಸೆನ್ನೆಲ್ ಉದ್ಯೋಗಿ ಕೆ.ಎಸ್. ಸುಬ್ರಹ್ಮಣ್ಯ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪಾರು ವೈಫ್ ಆಫ್ ದೇವದಾಸ್ ಕನ್ನಡ ಚಲನಚಿತ್ರದ ಶೀರ್ಷಿಕೆ ಗೀತೆಯಲ್ಲಿ ಈಕೆಯ ಕಂಠವಿದೆ. ವಾಯ್ಸ್ ಆಫ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಭದ್ರಾವತಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿ 2010ರಲ್ಲಿ ಆಯ್ಕೆಯಾಗಿದ್ದಾಳೆ. ವಾಯ್ಸ್ ಆಫ್ ಶಿವಮೊಗ್ಗ ಮತ್ತು ವಾಯ್ಸ್ ಆಫ್ ಮಲ್ನಾಡ್ ಎಂಬ ಬಿರುದನ್ನೂ ಈಕೆ ಪಡೆದಿದ್ದಾಳೆ. ಚನ್ನಗಿರಿ, ಭದ್ರಾವತಿ, ಧರ್ಮಸ್ಥಳದ ರಾಮಕ್ಷೇತ್ರದಲ್ಲಿ, ಶಿವಮೊಗ್ಗದ ಕೊಡಚಾದ್ರಿ ಉತ್ಸವದಲ್ಲಿ, ಬೆಂಗಳೂರಿನಲ್ಲಿ ಜಿ. ವಿ. ಅತ್ರಿ ಅವರ ಸಂಗೀತ ಗಂಗಾ ಶಾಲೆಯಲ್ಲಿ ನಡೆದ ಋತುಗಾನ ಕಾರ್ಯಕ್ರಮದಲ್ಲಿ ಮಿಂಚಿದ್ದಾಳೆ.
ಶಿವಮೊಗ್ಗ ಮತ್ತು ಜಿಲ್ಲೆಯಲ್ಲಿ ಸಹನಾ ಅವರ ಹೆಸರು ಕೇಳದವರು ವಿರಳ. ಬಹುತೇಕ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಈಕೆಯ ಭಾಗವಹಿಸುವಿಕೆ ಇದ್ದೇ ಇರುತ್ತದೆ. ಪದವಿ ಹಂತದಲ್ಲಿ ಓದುವಾಗಲೇ ಸಾಕಷ್ಟು ಪ್ರಶಸ್ತಿಯನ್ನು ಜಿಲ್ಲಾ, ರಾಜ್ಯಮಟ್ಟದಲ್ಲಿ ಗಳಿಸಿರುವ ಈಕೆ ತಾನು ಕಲಿತ ಕಮಲಾ ನೆಹರು ಕಾಲೇಜಿಗೂ ಹೆಸರು ಗಳಿಸಿಕೊಟ್ಟಿದ್ದಾಳೆ. ಜಿಲ್ಲಾ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾಳೆ. ಈಕೆಕೆಯ ಮುಂದಿನ ಗುರು ತಾನು ಅಭ್ಯಸ ಮಾಡುತ್ತಿರುವ ಎಲ್ಲಾ ಸಂಗೀತ ಪ್ರಕಾರದಲ್ಲೂ ಯಶಸ್ಸು ಸಾಧಿಸುವುದಾಗಿದೆ. ಅಸಾಧ್ಯವಾದ ಸಾಧನೆ ಯಾವುದೂ ಇಲ್ಲ. ಆದರೆ ಸಾದಿಸುವ ಛಲ ಬೇಕು ಎನ್ನುತ್ತಾಳೆ ಸಹನಾ.  
ಈಗಾಗಲೇ ರಾಷ್ಟ್ರಮಟ್ಟದಲ್ಲೂ ಮಿಂಚುತ್ತಿರುವ ಸಹನಾ ಇನ್ನಷ್ಟು ಬೆಳೆಯಲಿ, ಅವಳ ಪ್ರತಿಭೆಗೆ ಎಲ್ಲೆಡೆ ಪ್ರೋತ್ಸಾಹ ಸಿಗಲಿ.
ಪ್ರkaಟಿತ ದಿನಾಂಕ- 12.9.2015

...........................................

  

No comments:

Post a Comment