Friday 11 November 2016


ಅಳಿಲ ಮೇಲಣ ಅಳ್ತಿ
NARAYANA

Published on: Aug 22, 2015


ಶಿವಮೊಗ್ಗ ಜಿಪಂ ಕಚೇರಿಗೆ ಕಾಲಿಟ್ಟರೆ ಸಾಕು- ನೀಳಕಾಯದ, ಕಟ್ಟುಮಸ್ತಾದ, ಬಿಳಿ ಪ್ಯಾಂಟು, ಬಿಳಿ ಶರ್ಟು ಧರಿಸಿರುವ, ಹಣೆಯ ಮೇಲೆ ಗಂಧದ ಉದ್ದನೆಯ ಪಟ್ಟಿ, ಅದರ ಮೇಲೊಂದು ಕುಂಕುಮದ ಸ್ವಲ್ಪ ದೊಡ್ಡದಾದ ಬೊಟ್ಟು, ಬಿಳಿ ಬಣ್ಣದ ಹುರಿ ಮೀಸೆ, ಹೆಗಲ ಮೇಲೊಂದು ಸಣ್ಣ ಟವೆಲ್ ಹೊಂದಿರುವ ವ್ಯಕ್ತಿಯೊಬ್ಬರು ಎದುರಾಗುತ್ತಾರೆ. ಈತ ಸ್ವಲ್ಪ ’ಖಡಕ್’ ಮನುಷ್ಯನೇ ಇರಬೇಕು ಎನ್ನುವುದು ಮೇಲ್ನೋಟದ ಅನಿಸಿಕೆಯಾದರೂ, ಮಾತಿಗಿಳಿದಾಗ ಮಾತ್ರ ಅವರ ಸರಳತೆ, ಮೃದುತ್ವ, ಹೃದಯವಂತಿಕೆ ಏನೆನ್ನುವುದರ ಪರಿಚಯವಾಗುತ್ತದೆ.
ಹೀಗೆ ಪರಿಚಯವಾಗುವವರೇ ನಾರಾಯಣ ಮೊದಲಿಯಾರ್. ಇವರು ಜಿಪಂನಲ್ಲಿ ಡಿ ದರ್ಜೆ ನೌಕರರಾಗಿದ್ದುಕೊಂಡು, ಸಾಮಾಜಿಕ ಸೇವೆ ಮತ್ತು ಪ್ರ್ರಾಣಿದಯೆಯ ಮೂಲಕ ಪರಿಚಿತರು. ನಾರಾಯಣ ಎನ್ನುವುದಕ್ಕಿಂತ ’ಅಳಿಲು ನಾರಾಯಣ’ ಎಂದೇ ಖ್ಯಾತರು. ಏಕೆಂದರೆ ಜಿಪಂ ಆವರಣದಲ್ಲಿರುವ ಅಳಿಲುಗಳಿಗೂ, ಇವರಿಗೂ ಅವಿನಾಭಾವ ಸಂಬಂಧ..  ನಾರಾಯಣ್ ಪಾದರಸದಂತಹ ಚಟುವಟಿಕೆಯ ವ್ಯಕ್ತಿ. ಕಚೇರಿಗೆ ಯಾರೇ ಬಂದರೂ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಕೆಲಸ ಆಗುವಲ್ಲಿ ಸಹಕರಿಸುತ್ತಾರೆ. ಪ್ರತಿ ಅಧಿಕಾರಿ, ನೌಕರರು, ಪತ್ರಕರ್ತರಿಗೆ ಇವರು ಚಿರಪರಿಚಿತರು. ಯಾವತ್ತೂ ಇವರು ತನ್ನ ಕೆಲಸಕಾರ್ಯಗಳ ಕುರಿತು ಯಾರಿಂದಲೂ ಹೇಳಿಸಿಕೊಂಡವರಲ್ಲ; ಇನ್ನೊಬ್ಬರನ್ನು ನೋಯಿಸಿದವರೂ ಅಲ್ಲ. ಸರಕಾರಿ ಸೇವೆಯಲ್ಲಿದ್ದುಕೊಂಡೂ ಜನಸಾಮಾನ್ಯರಾಗಿದ್ದಾರೆ; ಅಸಾಮಾನ್ಯರಾಗಿದ್ದಾರೆ. ಇವರು ಎಷ್ಟರಮಟ್ಟಿಗೆ  ಚಿರಪರಿಚಿತರೆಂದರೆ, ಜಿಪಂ ಕಚೇರಿಗೆ ಹೋದವರು ನಾರಾಯಣ್‌ನನ್ನು ಕಂಡು ಮಾತನಾಡಿಸಿಯೇ ಬರುತ್ತಾರೆ.
ಜಿಪಂ ಸದಸ್ಯರಾದಿಯಾಗಿ ಎಲ್ಲ, ಅಧಿಕಾರಿ, ನೌಕರರು ನಾರಾಯಣ್ ಡಿ ದರ್ಜೆ ನೌಕರ ಎಂದು ಪರಿಗಣಿಸಿಲ್ಲ. ಅಷ್ಟೊಂದು ಆತ್ಮೀಯತೆ, ಸ್ನೇಹ. ಯಾರೇ ಎದುರಾದರೂ, ಮೊದಲು ವಿಧೇಯತೆಯಿಂದ ’ನಮಸ್ಕಾರ’ ಎಂದು ಹೇಳಿಯೇ ಮಾತಿಗಿಳಿಯುತ್ತಾರೆ.
ಪರಿಚಯ:
ಮೂಲತಃ ಭದ್ರಾವತಿಯವರಾದ ನಾರಾಯಣ್ ದಿನನಿತ್ಯ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದು ಹೋಗುತ್ತಾರೆ. ಇವರ ತಂದೆ ಶ್ರೀರಾಮುಲು ಮೊದಲಿಯಾರ್. ವಿಐಎಸ್ಸೆಲ್ ನೌಕರರಾಗಿದ್ದರು. ತಾಯಿ ರಾಜೇಶ್ವರಿ. ಈ ದಂಪತಿಗಳ ಮೂವರು ಪುತ್ರದಲ್ಲಿ ನಾರಾಯಣ ಎರಡನೆಯವರು.  ನಾರಾಯಣ ಅವರ ಚಿಕ್ಕಪ್ಪ ಲಕ್ಷ್ಮಣ ಅವರಿಗೆ ಮಕ್ಕಳಿಲ್ಲದ ಕಾರಣ ಅವರು ನಾರಾಯಣ ಅವರನ್ನು ದತ್ತು ಪಡೆದು ಸಾಕಿದ್ದರು. ತಂದೆಯಂತೆಯೇ ಇಂದಿಗೂ ಅವರನ್ನು ನಾರಾಯಣ ಕಾಣುತ್ತಾರೆ.  ಇವರ ತಾಯಿ ರಾಜೇಶ್ವರಿ ಮಗನನ್ನು ಕಾಣಲು  ಶಿವಮೊಗ್ಗಕ್ಕೆ ಬಂದಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಆದರೆ ಈ ಸುದ್ದಿ ಯಾರಿಗೂ ಗೊತ್ತಾಗಲಿಲ್ಲ. ಪೊಲೀಸರು ಅನಾಥ ಶವವೆಂದು ಮಣ್ಣು ಮಾಡಿದ್ದರು. ಇದಾದ ವಾರದ ನಂತರ ತಾಯಿ ಸಾವಿನ ವಿಚಾರ ತಿಳಿಯಿತು. ಕೊನೆಗಾಲದಲ್ಲಿ ತಾಯಿಯನ್ನು ಕಾಣಲು ಬಂದರೂ  ಭೇಟಿ ಸಾಧ್ಯವಾಗದ ಬಗ್ಗೆ ಇಂದಿಗೂ ನೊಂದು ಬೇಸರ ಮಾಡಿಕೊಳ್ಳುತ್ತಾರೆ ನಾರಾಯಣ. ಇವರ ಪತ್ನಿ ಕಲ್ಯಾಣಿ, ಮಗ ಮೂರ್ತಿ, ಮಗಳು ಶಾರದಾ. ಮಗ ಭದ್ರಾವತಿಯಲ್ಲಿ ಕಂಪ್ಯೂಟರ್ ಕೇಂದ್ರ ಹೊಂದಿದ್ದರೆ,  ಅಳಿಯ ಶರವಣ ಕುವೆಂಪು ವಿವಿಯಲ್ಲಿ ಕ್ಲರ್ಕ್ ಆಗಿದ್ದಾರೆ.
ಅಳಿಲ ಸೇವೆ:
1988ರಿಂದ ಜಿಪಂನಲ್ಲಿ ಕೆಲಸ ಮಾಡುತ್ತಿರುವ ಅವರು ಅದಕ್ಕೂ ಮೊದಲು ಚನ್ನಗಿರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.  ತಮ್ಮ ಪ್ರಾಣಿ, ಪಕ್ಷಿಗಳ ಸೇವೆಯ ಮೂಲಕ ಹೆಸರಾಗಿದ್ದಾರೆ.
ಜಿಪಂ ಕಚೇರಿ ಆವರಣದಲ್ಲಿ  ಅಳಿಲುಗಳು ನೂರಾರು. ಅವು ಕಚೇರಿಯ ಕಟ್ಟಡದ ಮೇಲೆಲ್ಲ ಓಡಾಡುತ್ತ ನಲಿಯುತ್ತಿರುತ್ತವೆ. ಇದನ್ನು ಗಮನಿಸಿದ ನಾರಾಯಣ ಅವರಿಗೆ ಅದೇಕೋ ಅವುಗಳ ಬಗ್ಗೆ ಪ್ರೀತಿ ಉಕ್ಕಿ ಹರಿಯಿತು. ಅವುಗಳನ್ನು ದಿನನಿತ್ಯ ನೋಡುತ್ತ ತಮ್ಮಿಂದಾದ ಸೇವೆ ಮಾಡಲು ನಿರ್ಧರಿಸಿದರು. ಈಗ ಅಳಿಲಿಗಾಗಿ ಅಳಿಲು ಸೇವೆ ಮಾಡುತ್ತಿರುವ ಈ ಹೃದಯವಂತ ಅವುಗಳಿಗೆ ದಿನನಿತ್ಯ ಆಹಾರ  ಉುಣಿಸುವ ಕೆಲಸ ಮಾಡುತ್ತಿದ್ದಾರೆ. ಕಚೇರಿ ಎದುರಿರುವ ಮರವೊಂದಕ್ಕೆ ಎರಡು ತಟ್ಟೆ ಮತ್ತು ಎರಡು ನೀರಿನ ತೆರೆದ ಬಾಟಲ್‌ಗಳನ್ನು ಅಳವಡಿಸಿದ್ದಾರೆ. ಅವುಗಳಿಗ ಬೆಳಿಗ್ಗೆ ಸುಮಾರು 11ರ ವೇಳೆ ಆಹಾರ ಹಾಕುತ್ತಾರೆ. ತಾನು ಮನೆಯಿಂದ ತಂದ ಎಲ್ಲ ರೀತಿಯ ತಿಂಡಿಯನ್ನು ಹಾಕುತ್ತಾರೆ. ಇಡ್ಲಿ, ದೋಸೆ, ಚಿತ್ರಾನ್ನ, ಊಟ, ರೊಟ್ಟಿ ಎಲ್ಲವನ್ನೂ ಪ್ಲೇಟ್ ತುಂಬಾ ಹಾಕುತ್ತಾರೆ. ಹಾಕುತ್ತಿರುವಂತೆಯೇ ಅಳಿಲುಗಳು ಓಡೋಡಿ ಬರುತ್ತವೆ. ಸುತ್ತಮುತ್ತ ಜನರಿದ್ದರೆ ಕೆಳಕ್ಕಿಳಿಯದ ಅಳಿಲುಗಳು, ನಾರಾಯಣ ಒಬ್ಬರೇ ಇದ್ದರೆ ಅವರೆದುರೇ ಹಾಜರಾಗಿ ತಿನ್ನತೊಡಗುತ್ತವೆ. ಸುಮಾರು 150ಕ್ಕ್ಕೂ ಹೆಚ್ಚು ಅಳಿಲು ಅಲ್ಲಿವೆ. ಅದೇ ರೀತಿ ಕಚೇರಿಯ ನೌಕರರು ಊಟ ಮಾಡಿದ್ದು ಮಿಕ್ಕುಳಿದರೆ ಅದನ್ನೂ ಸಹ ಬಿಸಾಡದೆ ಅಳಿಲಿಗೆ ನೀಡುತ್ತಾರೆ. ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀಟಿಂಗ್ ನಡೆಯುತ್ತದೆ. ಆಗಲೂ ಸಹ ಅಲ್ಲುಳಿದ ತಿಂಡಿ, ಊಟವನ್ನೆಲ್ಲ ಅಳಿಲಿಗೆ  ಉಣಬಡಿಸುತ್ತಾರೆ.
ಇಷ್ಟೊಂದು ಮಾನವೀಯ ಗುಣಗಳನ್ನು ಬೆಳೆಸಿಕೊಂಡು, ಎಲ್ಲರ ವಿಶ್ವಾಸಗಳಿಸಿರುವ ನಾರಾಯಣ ಸೆಪ್ಟೆಂಬರ್ ಅಂತ್ಯಕ್ಕೆ ನಿವೃತ್ತರಾಗುತ್ತಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದರೂ ಸ್ವಲ್ಪವೂ ಹಮ್ಮಿಲ್ಲದ ಈ ಜನಸಾಮಾನ್ಯ ವ್ಯಕ್ತಿ ಎಲ್ಲರ ಬಾಯಲ್ಲೂ ತನ್ನ ಹೆಸರಿರುವಂತಹ  ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ  
ಎಲ್ಲವನ್ನೂ ಜನರ ಪ್ರೀತಿಯಿಂದ ಕಲಿತಿದ್ದೇನೆ. ಇದ್ದಷ್ಟು ದಿನ ಜನರ ಸೇವೆ ಜೊತೆಗೆ ಮೂಕಪ್ರಾಣಿಗಳ ಸೇವೆಯನ್ನೂ ಮಾಡುತ್ತೇನೆ. ಜಿಪಂ ಅಧಿಕಾರಿಗಳು ಮತ್ತು ನೌಕರರು ತನ್ನನ್ನು ಆತ್ಮೀಯತೆಯಿಂದ ಕಂಡಿದ್ದಾರೆ. ಯಾರನ್ನೂ ನಿಷ್ಠುರ ಮಾಡಿಕೊಂಡಿಲ್ಲ ಎನ್ನುವ ಅವರು,  ಅಳಿಲುಗಳನ್ನು ನನ್ನ ನಿವೃತ್ತಿ ನಂತರ ಉಳಿದವರು ನೋಡಿಕೊಳ್ಳುತ್ತಾರೆ. ಕೆಲವು ನೌಕರರು ಈಗ ತಾವು ತಂದ ಆಹಾರವನ್ನು ಹಾಕುತ್ತಿದ್ದಾರೆ. ಮಾನವ ಜನ್ಮ ದೊಡ್ಡದು  ಎಂದು ವಿನಮ್ರವಾಗಿ ನುಡಿಯುತ್ತಾರೆ.
..................................

No comments:

Post a Comment